ಹೆಗ್ಗಣಗಳ ಕಾಟ ತಪ್ಪಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಬ್ಬಳ್ಳಿಯ ವ್ಯಕ್ತಿ

| Updated By: ವಿವೇಕ ಬಿರಾದಾರ

Updated on: May 29, 2024 | 9:59 AM

ಇತ್ತೀಚಿಗೆ ಚಿತ್ರ-ವಿಚಿತ್ರ ಪ್ರಕರಣಗಳು ಪೊಲೀಸ್​ ಠಾಣೆಯಲ್ಲಿ ದಾಖಲಾಗುತ್ತಿವೆ. ಪಕ್ಕದ ಮನೆಯಲ್ಲಿನ ಹೆಗ್ಗಣಗಳ ಕಾಟದಿಂದ ಮುಕ್ತಿ ನೀಡಿ ಎಂದು ಹುಬ್ಬಳ್ಳಿಯ ಆನಂದನಗರ ನಿವಾಸಿಯೊಬ್ಬರು ಹಳೆ ಹುಬ್ಬಳ್ಳಿಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೆಗ್ಗಣಗಳ ಕಾಟ ತಪ್ಪಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಬ್ಬಳ್ಳಿಯ ವ್ಯಕ್ತಿ
ದೂರುದಾರ ಅನಿಲ್​ ಮುಂಡರಗಿ
Follow us on

ಹುಬ್ಬಳ್ಳಿ, ಮೇ 29: ಇತ್ತೀಚಿಗೆ ಜನರು ವಿಚಿತ್ರ ಕಾರಣಗಳಿಗಾಗಿ ಪೊಲೀಸ್​ ಠಾಣೆ (Police Station) ಮೆಟ್ಟಿಲೇರುತ್ತಿದ್ದಾರೆ. ಹೆಗ್ಗಣಗಳಿಂದ (Bandicoot) ಮುಕ್ತಿ ನೀಡುವಂತೆ ಹಳೆ ಹುಬ್ಬಳ್ಳಿಯ (Old Hubballi) ಆನಂದ ನಗರ ನಿವಾಸಿ ಅನಿಲ್ ಮುಂಡರಗಿ ಎಂಬುವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಅನಿಲ್ ಮುಂಡರಗಿ ಅವರ ಪಕ್ಕದ ಮನೆಯಲ್ಲಿನ ಹಗ್ಗೆಣಗಳಿಂದ ನಮಗೆ ನೆಮ್ಮದಿ ಹಾಳಾಗಿದೆ. ಹೆಗ್ಗಣಗಳು ನಮ್ಮ ಮನೆಯಲ್ಲಿನ ಗ್ಯಾಸ್ ಪೈಪ್ ಲೈನ್, ಸಿಂಕ್ ಪೈಪ್ ಲೈನ್ ಕತ್ತರಿಸಿವೆ. ಎಲ್ಲೆಂದರಲ್ಲಿ ನೆಲ ಅಗೆದು ಮಣ್ಣು ಹೊರ ಹಾಕುತ್ತಿವೆ. ಮನೆಯಲ್ಲಿ ಎಲ್ಲೆಂದರಲ್ಲಿ ರಂಧ್ರಗಳು ಬಿದ್ದಿವೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರತಿದಿನ 15 ರಿಂದ 20 ಹೆಗ್ಗಣಗಳು ಕಾಟ ಕೊಡುತ್ತಿವೆ. ಪಕ್ಕದ ಮನೆಯವರಿಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನೀವೇ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ಸಿಲಿಂಡರ್ ಸೋರಿಕೆಯಾಗಿ ಅನಾಹುತವಾದರೆ ಯಾರು ಹೊಣೆ ಎಂದು ಅನೀಲ್​ ಅವರು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸೋರುತ್ತಿವೆ ಧಾರವಾಡ ಜಿಲ್ಲೆಯ 469 ಸರ್ಕಾರಿ ಶಾಲೆಗಳ ಕೊಠಡಿಗಳು

ದೂರು ಆಧರಿಸಿ ಪೊಲೀಸರು ಅನಿಲ್​ ಅವರ ಪಕ್ಕದ ಮನೆಯ ಮಾಲೀಕ ಸಿದ್ದು ಅಂಗಡಿ ಎಂಬುವರನ್ನು ಕರೆಯಿಸಿ, ನಾಲ್ಕೈದು ದಿನಗಳಲ್ಲಿ ಹೆಗ್ಗಣಗಳ ನಿಯಣಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ, ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ಇನ್ನು ಅನೀಲ್​ ಅವರ ಪಕ್ಕದ ಮನೆಯಲ್ಲಿ ಯಾರೂ ವಾಸಿಸುವುದಿಲ್ಲ.

ಹೀಗಾಗಿ ಅಲ್ಲಿ ಹೆಗ್ಗಣಗಳು ಬೀಡು ಬಿಟ್ಟಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಅನಿಲ ಮುಂಡರಗಿ ನೆರೆಹೊರೆಯವರು ಹೇಳಿದ್ದಾರೆ. ಯಾವುದೇ ಕ್ರಮ ಆಗದೇ ಇದ್ದಲ್ಲಿ ಮತ್ತೆ ಪೊಲೀಸರ ಮೊರೆ ಹೋಗೋದಾಗಿ ಅನಿಲ್ ಮುಂಡರಗಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 am, Wed, 29 May 24