AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಬೇಕಿದೆ ಮತ್ತಷ್ಟು ಪೊಲೀಸ್ ಠಾಣೆ, ಸಿಬ್ಬಂದಿ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದೇ ತಿಂಗಳ ಒಳಗೆ ಇಬ್ಬರು ಯುವತಿಯರು ಬರ್ಬರವಾಗಿ ಕೊಲೆಯಾದರು. ವಿದ್ಯಾನಗರದಲ್ಲಿ ನೇಹಾ ಹಿರೇಮಠ ಮತ್ತು ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ. ಕೊಲೆ ಮಾತ್ರವಲ್ಲದೆ ಮಹಾನಗರದಲ್ಲಿ ವಿವಿಧ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ಅಪರಾಧ ಪ್ರಕರಣ ತಡೆಗಟ್ಟಲು ಅವಳಿ ನಗರದಲ್ಲಿ ಪೊಲೀಸ್​ ಠಾಣೆ ಮತ್ತು ಸಿಬ್ಬಂದಿಗಳ ಕೊರತೆ ಇದೆ. ಈ ಕುರಿತ ವರದಿ ಇಲ್ಲಿದೆ ಓದಿ..

ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಬೇಕಿದೆ ಮತ್ತಷ್ಟು ಪೊಲೀಸ್ ಠಾಣೆ, ಸಿಬ್ಬಂದಿ
ಅಂಜಲಿ ಅಂಬಿಗೇರ, ನೇಹಾ ಹಿರೇಮಠ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:May 22, 2024 | 8:09 AM

Share

ಹುಬ್ಬಳ್ಳಿ, ಮೇ 22: ಹುಬ್ಬಳ್ಳಿ-ಧಾರವಾಡ (Hubballi-Dharwad) ಅವಳಿ ನಗರ ಇತ್ತೀಚೆಗೆ ಕ್ರೈಂ ಸಿಟಿಯಾಗಿ ಬದಲಾಗಿ ಹೋಗಿದೆ. ನೇಹಾ ಹಿರೇಮಠ (Neha Hiremath) ಮತ್ತು ಅಂಜಲಿ ಅಂಬಿಗೇರ (Anjali Ambiger) ಹತ್ಯೆಯ ಬಳಿಕವಂತೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾದ ಹಿರಿಯ ಅಧಿಕಾರಿಗಳ ತಲೆದಂಡವೂ ಆಗಿದೆ. ವೇಗವಾಗಿ ಬೆಳೆಯುತ್ತಿರುವ ಅವಳಿ ನಗರದ ಜನಸಾಂದ್ರತೆಗೆ ತಕ್ಕಂತೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಕೊರತೆ ಇದೆ. ಇದರಿಂದಲೇ ಮಹಾನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ. ಯಾಕಂದರೆ ಇಲ್ಲಿ ಹೆಚ್ಚುವರಿ ಠಾಣೆಗಳನ್ನು ನೀಡುವುದಕ್ಕೆ ಆಗ್ರಹಿಸಿ ಹಲವಾರು ವರ್ಷಗಳಿಂದಲೇ ಹೋರಾಟ ನಡೆದಿದೆ.

ಜನಸಂಖ್ಯೆ, ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ರಾಜ್ಯದಲ್ಲಿ ಹೊಸ ಪೊಲೀಸ್ ಠಾಣೆಗಳು ತೆರದುಕೊಳ್ಳಯತ್ತಿವೆ. ಆದರೆ ಅದ್ಯಾಕೋ ಸರ್ಕಾರಗಳಿಗೆ ದಶಕಗಳಿಂದಲೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಠಾಣೆಗಳನ್ನು ನೀಡಬೇಕೆಂಬ ವಿಚಾರವೇ ಬಂದಿಲ್ಲ. ಇಲ್ಲಿನವರೇ ಇಬ್ಬರು ಮುಖ್ಯಮಂತ್ರಿಗಳು ಆಗಿ ಹೋದರೂ ಅವಳಿ ನಗರಕ್ಕೆ ಬೇಕಿದ್ದ ಮೂರೇ ಮೂರು ಹೊಸ ಠಾಣೆಗಳನ್ನು ಸೃಷ್ಟಿಸಲು ಆಗಲಿಲ್ಲ ಅನ್ನೋದು ದುರಂತ. ಇದೆಲ್ಲ ಕಾರಣಕ್ಕಾಗಿಯೇ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಹತ್ಯೆಯಂತಹ ಪ್ರಕರಣಗಳು ಆಗುತ್ತಿವೆ ಎಂಬುವುದು ಜನರ ಆರೋಪವಾಗಿದೆ.

ಅವ್ಯಾಹತವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸ್ ಠಾಣೆಗಳ ವ್ಯಾಪ್ತಿ ಹೆಚ್ಚಾಗಿರೋ ಕಾರಣಕ್ಕೆ ತಡೆಯಲು ಆಗುತ್ತಿಲ್ಲ ಅನ್ನೋ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಯಾಕಂದರೆ ಧಾರವಾಡ ನಗರದ ಉಪನಗರ ಠಾಣೆ ಮತ್ತು ವಿದ್ಯಾಗಿರಿ ಬಲುವಿಶಾಲವಾದ ವ್ಯಾಪ್ತಿ ಹೊಂದಿದೆ. ಈ ಎರಡೂ ಠಾಣೆಗಳನ್ನು ವಿಭಜಿಸಿ ಹೊಸ ಎರಡು ಠಾಣೆ ನೀಡಬೇಕು. ಜೊತೆಗೆ ಹುಬ್ಬಳ್ಳಿ-ಧಾರವಾಡ ಮಧ್ಯದ ಸತ್ತೂರು-ರಾಯಾಪುರ ಕೇಂದ್ರವಾಗಿಟ್ಟುಕೊಂಡು ಒಂದು ಠಾಣೆ ಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣ ಸೇರಿದಂತೆ ಅನೇಕ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದರೂ ಸರ್ಕಾರಗಳು ಮಾತ್ರ ಸ್ಪಂದಿಸಿಲ್ಲ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣ: ಹುಬ್ಬಳ್ಳಿಯಲ್ಲಿ ಇಬ್ಬರು NIA ವಶಕ್ಕೆ

ಸದ್ಯ ಮಹಿಳಾ, ಸೈಬರ್ ಮತ್ತು ಸಂಚಾರ ಠಾಣೆಗಳನ್ನು ಹೊರತುಪಡಿಸಿ ಹುಬ್ಬಳ್ಳಿಯಲ್ಲಿ 11 ಹಾಗೂ ಧಾರವಾಡದಲ್ಲಿ 3 ಪೊಲೀಸ್ ಠಾಣೆಗಳಿವೆ. ಆದರೆ ಮೂರು ವಿಶ್ವವಿದ್ಯಾಲಯ ಸೇರಿದಂತೆ ಇತ್ತೀಚೆಗೆ ಅವಳಿ ನಗರ ಸಾಕಷ್ಟು ಬೆಳೆದಿದೆ. ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿ 10 ಚದರ ಕಿಮೀ ಆಗಿದ್ದರೆ, ಉಪನಗರ ಠಾಣೆ ವ್ಯಾಪ್ತಿ 15 ಚದರ ಕಿಮಿ ಇದೆ. ಇನ್ನು ಹಳೇಹುಬ್ಬಳ್ಳಿ ಠಾಣೆಯ ವ್ಯಾಪ್ತಿ 18 ಚದರ ಕಿಮೀ. ಇಷ್ಟು ವಿಸ್ತಾರವಾದ ವ್ಯಾಪ್ತಿ ಇಟ್ಟುಕೊಂಡು ಏನಾದರೂ ನಡೆದಾಗ ಶೀಘ್ರವಾಗಿ ಸ್ಪಂದಿಸಲು ಆಗುತ್ತಾ? ಎಂಬ ಉದ್ಭವಿಸಿದೆ.

ಇನ್ನು ಠಾಣೆಗಳಲ್ಲಿ ಸಿಬ್ಬಂದಿ ಕೊರತೆಯೂ ಇದ್ದು, ಠಾಣೆ ವ್ಯಾಪ್ತಿಯಲ್ಲಿ ಗಸ್ತು ನಿಯೋಜನೆಯೂ ಕಷ್ಟವಾಗಿದೆ. ಹೀಗಾಗಿ ಇದನ್ನೆಲ್ಲ ಪರಿಗಣಿಸಿ ಇನ್ನಾದರೂ ಧಾರವಾಡಕ್ಕೆ ಎರಡೂ ಇಲ್ಲವೆ ಮೂರು ಹಾಗೂ ಹುಬ್ಬಳ್ಳಿಗೆ ಇನ್ನೊಂದು ಪೊಲೀಸ್ ಠಾಣೆ ಕೊಡಬೇಕಿದ್ದು, ಈ ಬಗ್ಗೆ ಪರಿಶೀಲಿಸುತ್ತೇವೆ ಅಂತ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಹೇಳಿದ್ದಾರೆ.

ಇನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಹೆಚ್ಚುವರಿ ಠಾಣೆಗಳು ಬೇಕಿರುವ ಬಗ್ಗೆ ಗೃಹ ಸಚಿವರಿಗೂ ಗೊತ್ತಿಲ್ಲ ಅಂತಿಲ್ಲ. ಜಿ. ಪರಮೇಶ್ವರ ಅವರು, ಈ ಹಿಂದೆ ಗೃಹ ಸಚಿವರಾಗಿದ್ದಾಗಲೇ ಈ ಬೇಡಿಕೆ ಇದೆ. ಇನ್ನೂ ಹುಬ್ಬಳ್ಳಿ ನಿವಾಸಿಯಾಗಿರುವ ಬಸವರಾಜ್ ಬೊಮ್ಮಾಯಿ ಅವರು ಗೃಹ ಸಚಿವರಿದ್ದಾಗ ಮಾತ್ರವಲ್ಲ ಮುಖ್ಯಮಂತ್ರಿಗಳಾಗಿದ್ದಾಗಲೂ ಸ್ಥಳೀಯರು ಹೆಚ್ಚುವರಿ ಪೊಲೀಸ್​ ಠಾಣೆ ನೀಡುವಂತೆ ಒತ್ತಡ ಹಾಕಿದ್ದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಸರ್ಕಾರಗಳ ಈ ನಿರ್ಲಕ್ಷ್ಯವೆ ಅವಳಿ ನಗರ ಇವತ್ತು ಕ್ರೈ ಸಿಟಿಯಾಗಿ ಬೆಳೆಯಲು ಕಾರಣವಾಗಿದೆ ಎಂದು ಮಹಾನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಸರ್ಕಾರ ಅವಳಿ ನಗರಕ್ಕೆ ಹೆಚ್ಚುವರಿ ಪೊಲೀಸ್ ಠಾಣೆಗಳನ್ನು ನೀಡುತ್ತಾ? ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:07 am, Wed, 22 May 24