AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ; ವೆಚ್ಚದ ಮಿತಿ ದಾಟದ ಅಭ್ಯರ್ಥಿಗಳು

ಚುನಾವಣಾ ಆಯೋಗವು ಪ್ರತಿ ಅಭ್ಯರ್ಥಿಗೆ ಚುನಾವಣೆಯಲ್ಲಿ 3 ಲಕ್ಷ ರೂಪಾಯಿವರೆಗೆ ಖರ್ಚು ಮಾಡಲು ಅವಕಾಶ ನೀಡಿತ್ತು. ಇಬ್ಬರು ಅಭ್ಯರ್ಥಿಗಳು 2.5 ಲಕ್ಷ ರೂಪಾಯಿ ಮೇಲ್ಪಟ್ಟು, ನಾಲ್ವರು ಅಭ್ಯರ್ಥಿಗಳು 2 ಲಕ್ಷ ರೂಪಾಯಿ ಮೇಲ್ಪಟ್ಟು, 14 ಅಭ್ಯರ್ಥಿಗಳು 1.5 ಲಕ್ಷ ರೂಪಾಯಿ ಮೇಲ್ಪಟ್ಟು ಹಾಗೂ 51 ಅಭ್ಯರ್ಥಿಗಳು 1 ಲಕ್ಷ ರೂಪಾಯಿ ಮೇಲ್ಪಟ್ಟು ಹಣ ಖರ್ಚು ಮಾಡಿರುವುದಾಗಿ ವಿವರ ಸಲ್ಲಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ; ವೆಚ್ಚದ ಮಿತಿ ದಾಟದ ಅಭ್ಯರ್ಥಿಗಳು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
TV9 Web
| Edited By: |

Updated on: Nov 10, 2021 | 9:30 AM

Share

ಧಾರವಾಡ: ಇತ್ತೀಚಿಗಷ್ಟೇ ರಾಜ್ಯದಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳು ನಡೆದಿದ್ದವು. ಅದರಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯೂ ಸೇರಿತ್ತು. ಈ ಪಾಲಿಕೆ ವ್ಯಾಪ್ತಿಯ ಎಲ್ಲ 82 ವಾರ್ಡ್​ಗಳಲ್ಲಿ ಸ್ಪರ್ಧಿಸಿದ 420 ಅಭ್ಯರ್ಥಿಗಳ ಚುನಾವಣೆ ವೆಚ್ಚದ ವಿವರ ಇದೀಗ ಹೊರಗೆ ಬಂದಿದೆ. ಎಲ್ಲ 420 ಅಭ್ಯರ್ಥಿಗಳು ಖರ್ಚು ಮಾಡಿದ ಒಟ್ಟು ಮೊತ್ತ 2,32,59,263 ರೂಪಾಯಿ. ಈ ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ವೆಚ್ಚ ಮಿತಿ ಅಂದರೆ 3 ಲಕ್ಷ ರೂಪಾಯಿ ಗಡಿ ದಾಟಿಲ್ಲ ಎನ್ನುವುದು ವಿಶೇಷ ಸಂಗತಿ.

ಸ್ಪರ್ಧಿಸಿದ 45 ದಿನಗಳೊಳಗಾಗಿ ವಿವರ ಸಲ್ಲಿಸಬೇಕು ಧಾರವಾಡ ಜಿಲ್ಲಾಡಳಿತವು ರಾಜ್ಯ ಚುನಾವಣೆ ಆಯೋಗಕ್ಕೆ ( ಕರ್ನಾಟಕ ) ನಿಗದಿತ ನಮೂನೆಯಲ್ಲಿ ಸಲ್ಲಿಸಿರುವ ಅಭ್ಯರ್ಥಿಗಳ ಚುನಾವಣೆ ವೆಚ್ಚಗಳ ವಿವರದಲ್ಲಿ ಎಲ್ಲಾ ಅಭ್ಯರ್ಥಿಗಳ ವೆಚ್ಚದ ವಿಷಯವನ್ನು ಸ್ಪಷ್ಟಪಡಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲರೂ ಫಲಿತಾಂಶ ಪ್ರಕಟಗೊಂಡ 45 ದಿನಗಳೊಳಗೆ ವೆಚ್ಚ ವಿವರವನ್ನು ಸಲ್ಲಿಸಬೇಕಿತ್ತು. ಅದರಂತೆ ಎಲ್ಲರೂ ಅಂದಿನ ಚುನಾವಣಾಧಿಕಾರಿಗೆ (ಪ್ರತಿ 5-6 ವಾರ್ಡ್‌ಗಳಿಗೆ ಒಬ್ಬರು) ನಿಗದಿತ ಅವಧಿಯೊಳಗೆ ವೆಚ್ಚ ವಿವರ ಸಲ್ಲಿಸಿದ್ದರು. ಅವುಗಳನ್ನು ನೋಡಲ್ ಅಧಿಕಾರಿಗಳು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯ ಚುನಾವಣೆ ಆಯೋಗಕ್ಕೆ ಕಳುಹಿಸಲಾಗಿದೆ.

ಚುನಾವಣಾ ಆಯೋಗವು ಪ್ರತಿ ಅಭ್ಯರ್ಥಿಗೆ ಚುನಾವಣೆಯಲ್ಲಿ 3 ಲಕ್ಷ ರೂಪಾಯಿವರೆಗೆ ಖರ್ಚು ಮಾಡಲು ಅವಕಾಶ ನೀಡಿತ್ತು. ಇಬ್ಬರು ಅಭ್ಯರ್ಥಿಗಳು 2.5 ಲಕ್ಷ ರೂಪಾಯಿ ಮೇಲ್ಪಟ್ಟು, ನಾಲ್ವರು ಅಭ್ಯರ್ಥಿಗಳು 2 ಲಕ್ಷ ರೂಪಾಯಿ ಮೇಲ್ಪಟ್ಟು, 14 ಅಭ್ಯರ್ಥಿಗಳು 1.5 ಲಕ್ಷ ರೂಪಾಯಿ ಮೇಲ್ಪಟ್ಟು ಹಾಗೂ 51 ಅಭ್ಯರ್ಥಿಗಳು 1 ಲಕ್ಷ ರೂಪಾಯಿ ಮೇಲ್ಪಟ್ಟು ಹಣ ಖರ್ಚು ಮಾಡಿರುವುದಾಗಿ ವಿವರ ಸಲ್ಲಿಸಿದ್ದಾರೆ.

28 ನೇ ವಾರ್ಡ್​ನ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮನಗುಂಡಿ ಅತ್ಯಧಿಕ ವೆಚ್ಚ 82 ವಾರ್ಡ್​ಗಳ ಪೈಕಿ 28 ನೇ ವಾರ್ಡ್​ನಿಂದ ಚುನಾಯಿತರಾದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮನಗುಂಡಿ ಅತ್ಯಧಿಕ 2,91,041 ರೂಪಾಯಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ. 39 ನೇ ವಾರ್ಡ್​ನಿಂದ ಆಯ್ಕೆಯಾದ ಬಿಜೆಪಿಯ ಸೀಮಾ ಮೊಗಲಿಶೆಟ್ಟರ್‌ 2,88,899 ರೂಪಾಯಿ, 58 ನೇ ವಾರ್ಡ್ ಸದಸ್ಯೆ ಕಾಂಗ್ರೆಸ್‌ನ ಶ್ರುತಿ ಚಲವಾದಿ 2,30,174 ರೂಪಾಯಿ ಖರ್ಚು ಮಾಡಿರುವುದಾಗಿ ವಿವರ ಸಲ್ಲಿಸಿದ್ದಾರೆ . 2 ಲಕ್ಷ ರೂಪಾಯಿ ಮೇಲ್ಪಟ್ಟು ಖರ್ಚು-ವೆಚ್ಚ ತೋರಿಸಿರುವ ಬಸೀರಾಬಾನು ಕಸ್ ಪಟವೇಗಾರ 2,19,920 ರೂಪಾಯಿ, ಮಲ್ಲಿಕಾರ್ಜುನ ಹೊರಕೇರಿ 2,06,662 ರೂಪಾಯಿ ಹಾಗೂ ಬತುಲ ಕಿಲ್ಲೆದಾರ 2,06,560 ರೂಪಾಯಿ ಖರ್ಚು ಮಾಡಿದ್ದರೂ ಚುನಾವಣೆಯಲ್ಲಿ ಗೆಲುವು ಸಾಧಿಸಲಿಲ್ಲ ಎಂಬುದು ಗಮನಾರ್ಹ ಅಂಶ.

ಬಹಳಷ್ಟು ಅಭ್ಯರ್ಥಿಗಳು 5 ಸಾವಿರ ರೂಪಾಯಿಗಿಂತ ಕಡಿಮೆ ವೆಚ್ಚವನ್ನು ತೋರಿಸಿದ್ದಾರೆ . ಮಾಧುರಿ ಇರಾಣಿ 2500 ರೂಪಾಯಿ, ಖಾದರಸಾಬ ಬಾವಿ 2525 ರೂಪಾಯಿ, ಕಸ್ತೂರಿಬಾಯಿ ಮಾಮರಡಿ 2525 ರೂಪಾಯಿ, ಹೇಮಾವತಿ 2705 ರೂಪಾಯಿ, ಗುರುರಾಜ ಸುಣಗಾರ 3220 ರೂಪಾಯಿ, ನಮ್ರತಾ ನಂದೂರ 3220 ರೂಪಾಯಿ ಹಾಗೂ ಗೀತಾ ರಾವಣಕಿ 3561 ರೂಪಾಯಿ ಇತರರು ಈ ಪಟ್ಟಿಯಲ್ಲಿ ಸೇರಿದ್ದಾರೆ .

ಕಡಿಮೆ ವೆಚ್ಚ ಮಾಡಿ ಗೆದ್ದವರು 56 ನೇ ವಾರ್ಡ್​ನ ಚಂದ್ರಿಕಾ ಮೇಸ್ತ್ರಿ 16,116 ರೂಪಾಯಿ ಖರ್ಚು ಮಾಡಿ ಗೆಲುವು ಸಾಧಿಸಿದ್ದಾರೆ. 53 ನೇ ವಾರ್ಡ್​ನ ಮಹ್ಮದ್ ಇಸ್ಮಾಹಯಿಲ್ ಭದ್ರಾಪುರ 18,022 ರೂಪಾಯಿ ಖರ್ಚು ಮಾಡಿದ್ದರೆ, 45 ನೇ ವಾರ್ಡ್​ನ ಪ್ರಕಾಶ ಕುರಹಟ್ಟಿ 25,848 ಖರ್ಚು ಮಾಡಿ ಗೆಲುವು ಸಾಧಿಸಿದ್ದಾರೆ. 31 ನೇ ವಾರ್ಡ್​ನ ಶಂಕರಪ್ಪ ಹರಿಜನ 25,960 ರೂಪಾಯಿ ಖರ್ಚು ಮಾಡಿದ್ದರೆ, 51 ನೇ ವಾರ್ಡ್​ನ ಸಂದಿಲ್‌ಕುಮಾರ 28,622 ರೂಪಾಯಿ ಖರ್ಚು ಮಾಡಿ ಗೆದ್ದಿದ್ದಾರೆ. ಇದೇ ರೀತಿ 29 ನೇ ವಾರ್ಡ್​ನ ಮಂಜುನಾಥ ಬುರ್ಲಿ 30,085 ರೂಪಾಯಿ, 9 ನೇ ವಾರ್ಡ್​ನ ರತ್ನಾಬಾಯಿ ನಾಝರೆ 34,144 ರೂಪಾಯಿ, 20 ನೇ ವಾರ್ಡ್​ನ ಕವಿತಾ ಕಬ್ಬೇರ 35,567 ರೂಪಾಯಿ, 8 ನೇ ವಾರ್ಡ್​ನ ಶಂಕರ ಶೆಳಕೆ 37,791 ರೂಪಾಯಿ ಹಾಗೂ 50 ನೇ ವಾರ್ಡ್​ನ ಮಂಗಳಮ್ಮ ಹಿರೇಮನಿ 38,134 ರೂಪಾಯಿ ಖರ್ಚು ಮಾಡಿ ಗೆಲುವು ಸಾಧಿಸಿದ್ದಾರೆ.

ಖರ್ಚು ಮಾಡಿದ್ದೇ ಬೇರೆ, ಲೆಕ್ಕವೇ ಬೇರೆ! ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತೋರಿಸಿರುವ ಈ ಖರ್ಚು-ವೆಚ್ಚ ಸರ್ಕಾರಿ ಲೆಕ್ಕಕ್ಕಷ್ಟೇ ಸೀಮಿತ. ಆದರೆ ನಿಜವಾದ ಲೆಕ್ಕ ಬೇರೆಯೇ ಇದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಬಲ ಪೈಪೋಟಿ ಇದ್ದ ವಾರ್ಡ್‌ಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು 20 ರಿಂದ 25 ಲಕ್ಷ ರೂಪಾಯಿ ಖರ್ಚು ಮಾಡಿದ್ದರೆ, ಇನ್ನುಳಿದ ಪಕ್ಷಗಳ ಅಭ್ಯರ್ಥಿಗಳು 15-20 ಲಕ್ಷ ರೂಪಾಯಿ ಹಾಗೂ ಕೆಲ ವಾರ್ಡ್‌ಗಳಲ್ಲಿ ಪಕ್ಷೇತರರು 10 ಲಕ್ಷ ರೂಪಾಯಿ ಮೇಲ್ಪಟ್ಟು ಖರ್ಚು ಮಾಡಿದ್ದಾರೆಂಬ ಅಂದಾಜು ಇದೆ. ಪ್ರಚಾರ ಸಾಮಗ್ರಿ ಮುದ್ರಣ, ಕಾರ್ಯಕರ್ತರು ಹಾಗೂ ಆಪ್ತರ ಊಟ-ಉಪಚಾರ, ಮನೆ ಮನೆಗೆ ತೆರಳಿ ಕರಪತ್ರ ಹಂಚುವವರಿಗೆ ನೀಡುವ ಸಂಭಾವನೆ, ಇತ್ಯಾದಿ ಸಾಮಾನ್ಯ ವೆಚ್ಚಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಒಂದು ಲಕ್ಷ ರೂಪಾಯಿ ದಾಟುತ್ತದೆ. ಹೀಗಿರುವಾಗ ಕೆಲವರು ಇದಕ್ಕೂ ಕಡಿಮೆ ವೆಚ್ಚ ತೋರಿಸಿ ಚುನಾವಣೆಯಲ್ಲಿ ಗೆದ್ದಿರುವುದು ಅಚ್ಚರಿಯೇ ಸರಿ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ತಾವು ಮಾಡಿರುವ ಖರ್ಚಿನ ವಿವರವನ್ನು ನೀಡಿದ್ದಾರೆ. ಆ ಖರ್ಚು-ವೆಚ್ಚದ ವಿವರವನ್ನು ರಾಜ್ಯ ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದೇವೆ . ಯಾರೊಬ್ಬರೂ ಆಯೋಗ ವಿಧಿಸಿದ 3 ಲಕ್ಷ ರೂಪಾಯಿಯ ಮಿತಿಯನ್ನು ಮೀರಿ ಖರ್ಚು ಮಾಡಿಲ್ಲ ಎಂದು ಹೇಳಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ; ಬೆಳಗಾವಿಯಲ್ಲಿ ಶುರುವಾಯಿತು ಟಿಕೆಟ್ ಲಾಬಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ರವಾನಿಸಿದ ಸಂದೇಶವೇನು?

Follow Us
Web contact
Web contact

TV9 Kannada

Read More