AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್ ಕುಲಕರ್ಣಿ ಮನೆ ಮುಂದೆ ಪಟಾಕಿ ಸಿಡಿಸಿದ ವ್ಯಕ್ತಿ ಪೊಲೀಸ್ ವಶಕ್ಕೆ, ಠಾಣೆ ಮುಂದೆ ಜಮಾಯಿಸಿದ ಮುಸ್ಲಿಂ ಮುಖಂಡರು

ಧಾರವಾಡ ಕೆಎಂಫ್​ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿಗೆ ಸೋಲಾಗಿದೆ. ಇಂದು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಂಕರ ಮುಗ ಅವರು ಗೆದ್ದು ಬೀಗಿದ್ದಾರೆ. ಇದರಿಂದ ವಿನಯ್ ಕುಲಕರ್ಣಿಗೆ ಮುಖಭಂಗವಾಗಿದ್ದು, ಇದೇ ಖುಷಿಯಲ್ಲಿ ಶಂಕರ ಮುಗ ಬೆಂಬಲನೋರ್ವ ವಿನಯ್ ಕುಲಕರ್ಣಿ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪಟಾಕಿ ಸಿಡಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಂದೆಡೆ ಈ ಸುದ್ದಿ ತಿಳಿತ್ತಿದ್ದಂತೆಯೇ ಮುಸ್ಲಿಂ ಸಮುದಾಯದ ಮುಖಂಡರು ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದಾರೆ.

ವಿನಯ್ ಕುಲಕರ್ಣಿ ಮನೆ ಮುಂದೆ ಪಟಾಕಿ ಸಿಡಿಸಿದ ವ್ಯಕ್ತಿ ಪೊಲೀಸ್ ವಶಕ್ಕೆ, ಠಾಣೆ ಮುಂದೆ ಜಮಾಯಿಸಿದ ಮುಸ್ಲಿಂ ಮುಖಂಡರು
ವಿನಯ್ ಕುಲಕರ್ಣಿ ಮನೆ ಮುಂದೆ ಪಟಾಕಿ ಸಿಡಿಸಿದ ವ್ಯಕ್ತಿ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ರಮೇಶ್ ಬಿ. ಜವಳಗೇರಾ|

Updated on: Jul 15, 2024 | 4:39 PM

Share

ಧಾರವಾಡ, (ಜುಲೈ 15) ; ಉತ್ತರ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಶಂಕರ ಮುಗ ಅವರು ಕಾಂಗ್ರೆಸ್​ ಶಾಸಕ ವಿನಯ್ ಕಲಕರ್ಣಿ ಅವರ ಪತ್ನಿ ಶಿವಲೀಲಾ ಅವರನ್ನು ಮಣಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದ್ರೆ, ಗೆದ್ದ ಖುಷಿಯಲ್ಲಿ ಶಂಕರ ಮುಗ ಬೆಂಬಲಿಗರು ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಇದರ ಮಧ್ಯ ವ್ಯಕ್ತಿಯೋರ್ವ, ವಿನಯ್ ಕುಲಕರ್ಣಿ ನಿವಾಸದ ಮುಂದೆ ಪಟಾಕಿ ಹಚ್ಚಿದ್ದಾನೆ. ರಾಜಾಸಾಬ್ ಎನ್ನುವಾತ ಶಿವಲೀಲಾ ಅವರ ನಿವಾಸದ ಬಳಿ ಹೋಗಿ ಪಟಾಕಿ ಸಿಡಿಸಿದ್ದು,, ಇದೀಗ ಈ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಇದೀಗ ಪೊಲೀಸ್​ ಮೆಟ್ಟಿಲೇರಿದೆ. ಸದ್ಯ ರಾಜಾಸಾಬ್ ಎನ್ನುವಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಮುಸ್ಲಿಂ ಸಮುದಾಯದ ಮುಖಂಡರುಗಳು ಧಾರವಾಡ ಉಪನಗರ ಠಾಣೆಗೆ ಆಗಮಿಸಿದ್ದಾರೆ.

ವಿನಯ ಕುಲಕರ್ಣಿ ನಿವಾಸದ ಎದುರು ಪಟಾಕಿ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆಗೆ ಮುಸ್ಲಿಂ ಮುಖಂಡರು ಜಮಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ರಾಜೇಸಾಬ್ ನದಾಫ್ ಅಂತಾ ನಮ್ಮ ಅಂಜುಮನ್ ಸಂಸ್ಥೆಯ ಸದಸ್ಯ. ಈದ್ಗಾ ಕಮಿಟಿಯ ಉಪಾಧ್ಯಕ್ಷ. ಶಂಕರ ಮುಗದ ಅವರ ಆಪ್ತರಾಗಿದ್ದಾರೆ. ಶಂಕರ ಮುಗದ ಕೆಎಂಎಫ್ ಅಧ್ಯಕ್ಷರಾಗಿದ್ದಕ್ಕೆ ಎಲ್ಲ ಕಡೆ ಪಟಾಕಿ ಸಿಡಿಸಿದ್ದಾರೆ. ಬೆಳಗ್ಗೆ ರಾಜೇಸಾಬ್ ಮನೆಗೆ ಹೋಗಿ ವಶಕ್ಕೆ ಪಡೆಯಲಾಗಿದೆ. ಆತಂಕವಾದಿಯನ್ನು ಬಂಧಿಸಿದಂತೆ ಹಿಡಿದುಕೊಂಡು ಬಂದಿದ್ದಾರೆ. ಆತ ಅಂಥದ್ದೇನು ಮಾಡಿದ್ದಾನೆ ಎಂದು ಜನ ಭಯಭೀತ ಆಗಿದ್ದರು. ಹೀಗಾಗಿ ನಮ್ಮ ಬಳಿ ಅವರ ಮನೆ ಕಡೆ ಜನ ಬಂದಿದ್ದರು. ಹೀಗಾಗಿ ನಾವೆಲ್ಲ ಠಾಣೆಗೆ ಬಂದಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಕಡಿಮೆ ಅಂಕ ಬಂದ್ರೂ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ: ಬೆಳಗಾವಿಯಲ್ಲಿ 10 ವಿದ್ಯಾರ್ಥಿಗಳಿಗೆ ವಂಚಿಸಿ ಅರೆಸ್ಟ್​​​

ಪಟಾಕಿ ಎಲ್ಲ ಕಡೆ ಸಿಡಿಸಿದ್ದಾರೆ. ನಮ್ಮ ಮನೆ ಮುಂದೆಯೂ ವಿರೋಧಿಗಳು ಅನೇಕ ಸಲ ಸಿಡಿಸಿದ್ದಾರೆ. ಆದರೆ ಹೀಗೆ ಮಾಡಿದ್ದಕ್ಕೆ ಹಿಡಿದುಕೊಂಡು ಬಂದಿದ್ದು ಎಷ್ಟು ಸರಿ? ಕೈಯಲ್ಲಿ ಪಟಾಕಿ ಹಿಡಿದು ಹಾರಿಸಿದ್ದಕ್ಕೆ ತಂದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಬಳಿಕ ನಾವೂ ರಾಜೇಸಾಬ್‌ಗೆ ತಿಳಿವಳಿಕೆ ಹೇಳಿದ್ದೇವೆ. ಹೀಗೆ ಪಟಾಕಿ ಸಿಡಿಸಿದ್ದಕ್ಕೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರಂತೆ. ಹೀಗಾದರೆ ನಾವೂ ಇನ್ನು ಪಟಾಕಿ ಸಿಡಿಸಿದವರ ವಿರುದ್ಧ ದೂರು ಕೊಡುತ್ತೇವೆ. ಈಗ ವಿಚಾರಣೆ ಮಾಡುತ್ತಿದ್ದಾರೆ. ಆತ ನಮ್ಮ ಯಾವ ಕೇಸ್ ಹಾಕುತ್ತಾರೆ ಎಂದು ನೋಡಲು ಬಂದಿದ್ದೇವೆ. ಇನ್ನು ಮುಂದೆ ನಾವೂ ಅಲ್ಲಲ್ಲಿ ಪಟಾಕಿ ಸಿಡಿಸಿ ತೋರಿಸುತ್ತೇವೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಕೆಎಂಎಫ್​ ಅಧ್ಯಕ್ಷ ಸ್ಥಾನಕ್ಕೆ ಶಂಕರ ಮುಗದ, ಗೀತಾ ಮರಲಿಂಗಣ್ಣವರ ಹಾಗೂ ಸರ್ಕಾರದಿಂದ ನಾಮ ನಿರ್ದೇಶಿತರಾದ ಶಿವಲೀಲಾ ಕುಲಕರ್ಣಿ ನಾಮಪತ್ರ ಸಲ್ಲಿಸಿದ್ದರು. ಶಿವಲೀಲಾ ಕುಲಕರ್ಣಿ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಕ್ರಮವನ್ನು ಪ್ರಶ್ನಿಸಿ ನಿರ್ದೇಶಕ ಶಂಕರ ಮುಗದ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಶಿವಲೀಲಾ ಕುಲಕರ್ಣಿ ಅವರು ಸ್ವತಃ ಡೇರಿ ಹೊಂದಿದ್ದು, ದೊಡ್ಡ ಪ್ರಮಾಣದ ಹೈನುಗಾರಿಕೆ ನಡೆಸುತ್ತಿದ್ದಾರೆ. ಕೆಎಂಎಫ್ ಗೆ ನಾಮನಿರ್ದೇಶನ ಆಗುವುದರ ಹಿಂದೆ ಸ್ವಹಿತಾಸಕ್ತಿ ಅಡಗಿದೆ. ಹೀಗಾಗಿ ನಾಮನಿರ್ದೇಶನದಲ್ಲಿ ಕೆಎಂಎಫ್ ನಿಯಮಾವಳಿಯ ಉಲ್ಲಂಘನೆ ಆಗಲಿದೆ. ಆದ್ದರಿಂದ ಅವರ ನಾಮನಿರ್ದೇಶನ ಸರಿಯಲ್ಲ ಎಂದು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಕಾರಣದಿಂದ ಕೆಎಂಎಫ್ ಅಧ್ಯಕ್ಷ ಗದ್ದುಗಾಗಿ ನಡೆದ ಚುನಾವಣೆ ಮತ್ತಷ್ಟು ಕೌತುಕ ಮೂಡಿಸಿತ್ತು. ಆದರೆ ಇದೀಗ ಚುನಾವಣೆ ಸೋತ ಶಿವಲೀಲಾ ಕುಲಕರ್ಣಿ ಮನೆಮುಂದೆ ಪಟಾಕಿ ಸಿಡಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.