Lokayukta Raid: ಮುಂದುವರಿದ ಭ್ರಷ್ಟರ ಬೇಟೆ, ಲಂಚಕ್ಕೆ ಕೈಯೊಡ್ಡುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

|

Updated on: Apr 01, 2023 | 4:18 PM

ರಾಜ್ಯದಲ್ಲಿ ಭ್ರಷ್ಟ ಬೇಟೆ ಮುಂದುವರಿಸಿದ ಲೋಕಾಯುಕ್ತ ಅಧಿಕಾರಿಗಳು, ಇದೀಗ ಧಾರವಾಡದಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಕೆರೆ ಅಭಿವೃದ್ಧಿ ಕಾಮಗಾರಿಗಳ ಬಿಲ್ ಮಂಜೂರಾತಿಗೆ ಲಂಚ ಸ್ವೀಕರಿಸುತ್ತಿದ್ದಾಗ ನಡೆದ ದಾಳಿಯಲ್ಲಿ ಬಂಧಿಸಲಾಗಿದೆ.

Lokayukta Raid: ಮುಂದುವರಿದ ಭ್ರಷ್ಟರ ಬೇಟೆ, ಲಂಚಕ್ಕೆ ಕೈಯೊಡ್ಡುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ
ಕರ್ನಾಟಕ ಲೋಕಾಯುಕ್ತ
Follow us on

ಧಾರವಾಡ: ಕೆರೆ ಅಭಿವೃದ್ಧಿ ಕಾಮಗಾರಿಗಳ (Lake Development Works) ಬಿಲ್ ಮಂಜೂರಾತಿಗಾಗಿ ಲಂಚ (Bribery) ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ (Lokayukta Raid) ಅಧಿಕಾರಿಗಳು ಭ್ರಷ್ಟ ಅಧಿಕಾರಿಯನ್ನು ರೆಡ್​ ಹ್ಯಾಂಡ್ ಆಗಿ ಬಂಧಿಸಿದ ಘಟನೆ ಧಾರವಾಡ ಜಿಲ್ಲೆ ನವಲೂರಿನ ವಿನಾಯಕನಗರದಲ್ಲಿ ನಡೆದಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ತಾಂತ್ರಿಕ ತಜ್ಞ ಹಾಗೂ ಪ್ರಭಾರ ಜಿಲ್ಲಾ ಕಾರ್ಯನಿರ್ವಾಣಾಧಿಕಾರಿ ಆಗಿರುವ ಶಿವಲಿಂಗಸ್ವಾಮಿ ಹಲಗಲಿಮಠ ಅವರು ಕೆರೆ ಅಭಿವೃದ್ಧಿ ಕಾಮಗಾರಿಗಳ ಬಿಲ್ ಮಂಜೂರಾತಿಗೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಗುತ್ತಿಗೆದಾರ ಸುರೇಶ ಕಳಸೂರು ಎಂಬವರ ಬಳಿ 2 ಲಕ್ಷ 20 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ ಸುರೇಶ ಕಳಸೂರು ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಅದರಂತೆ ಬೇಡಿಕೆ ಇಟ್ಟಿದ್ದ ಲಂಚದ ಹಣದ ಪೈಕಿ 1 ಲಕ್ಷ 20 ಸಾವಿರ ರೂಪಾಯಿಯನ್ನು ಮುಂಗಡವಾಗಿ ನೀಡಲು ವಿನಾಯಕನಗರದ 4ನೇ ಕ್ರಾಸ್​ನಲ್ಲಿ ಇರುವ ಭ್ರಷ್ಟ ಅಧಿಕಾರಿ ಶಿವಲಿಂಗಸ್ವಾಮಿ ಮನೆಗೆ ತೆರಳಿದ್ದಾರೆ. ಅಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಟ್ರ್ಯಾಪ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಶಿವಲಿಂಗಸ್ವಾಮಿಯನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಹಾವೇರಿ ಮತ್ತು ಮಂಡ್ಯದಲ್ಲಿ ನಡೆದ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಪಿಎಸ್​ಐ, ಕಾರು ಚಾಲಕ ಹಾಗೂ ಎಪಿಎಂಸಿ ಕಾರ್ಯದರ್ಶಿ ಬಲೆಗೆ ಬಿದ್ದಿದ್ದರು. ಹಾವೇರಿಯ ಜಿಲ್ಲೆಯ ರಾಣೆಬೆನ್ನೂರಲ್ಲಿ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಶಹರ ಪೊಲೀಸ್​​​ ಠಾಣೆ ಪಿಎಸ್ಐ ಸುನೀಲ್ ತೇಲಿ ಮತ್ತು ಅವರ ವಾಹನ ಚಾಲಕ ಸಚಿನ್ ಎಂಬವರನ್ನು​​​​​ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರು. ಫಿರೋಜ್ ಎಂಬುವರಿಗೆ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ಪಿಎಸ್ಐ ಸುನೀಲ್ ತೇಲಿ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಫಿರೋಜ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ನಡೆದ ಕಾರ್ಯಾಚರಣೆ ವೇಳೆ 40 ಸಾವಿರ ಲಂಚ ಪಡೆಯುವಾಗ ಲಂಚದ ಹಣ ಸಹಿತ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದರು.

ಇದನ್ನೂ ಓದಿ: Bengaluru: ಲೋಕಾಯುಕ್ತ ಅಧಿಕಾರಿಗಳಂತೆ ನಟಿಸಿ ಸರ್ಕಾರಿ ನೌಕರನಿಂದ ಹಣ ಸುಲಿಗೆ, ಮೂವರ ಬಂಧನ

ಗೋದಾಮಿಗೆ ಅನುಮತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಅವರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಕಲ್ಕುಣಿ ಆನಂದ್ ಎಂಬವರು ಗೋದಾಮು ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಕೋರಿದ್ದರು. ಈ ವೇಳೆ ಸಾಕಮ್ಮ ಅವರು 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಲ್ಕುಣಿ ಆನಂದ್ ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಅದರಂತೆ ಕಲ್ಕುಣಿ ಆನಂದ್ ಎಂಬುವರ ಬಳಿಯಿಂದ ಬೇಡಿಕೆ ಇಟ್ಟ 50 ಸಾವಿರ ಲಂಚದ ಹಣದ ಪೈಕಿ ಮುಂಗಡವಾಗಿ 20 ಸಾವಿರ ಹಣ ಸ್ವೀಕಾರ ಮಾಡುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸಾಕಮ್ಮ ಅವರನ್ನು ಬಂಧಿಸಿದ್ದರು.

ಅದಕ್ಕೂ ಮುನ್ನ, ಲೋಕಾಯುಕ್ತ ಅಧಿಕಾರಿಗಳು ರಾಜ್ಯದಲ್ಲಿ ಅತಿ ದೊಡ್ಡ ಭ್ರಷ್ಟರ ಬೇಟೆಯನ್ನಾಡಿದ್ದರು. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನ ನಿವಾಸದ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದರು. ಅದಾಗ್ಯೂ, ಸಣ್ಣಪುಟ್ಟ ಲಂಚ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಳಿಗಳು ನಡೆಯುತ್ತಲೇ ಇವೆ. ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ಕಬ್ಬಿಣದ ಅಂಗಡಿಗೆ ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಂದ 5 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ದಾಳಿ ನಡೆದಿತ್ತು. ಆದರೆ ಲಂಚಕ್ಕೆ ಕೈಯೊಡ್ಡಿದ್ದ ಕೊಳ್ಳೇಗಾಲದ ಕಾರ್ಮಿಕ ಇಲಾಖೆಯ ನಿರೀಕ್ಷಕ ಚಂದ್ರು ಪರಾರಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Sat, 1 April 23