ಮುಸ್ಲಿಮರು ಮಥುರಾ, ಕಾಶಿ ಬಿಟ್ಟುಕೊಡದಿದ್ದರೆ ಕರಸೇವೆ ಮೂಲಕ ಪಡೆದುಕೊಳ್ಳುತ್ತೇವೆ: ಪ್ರಮೋದ್ ಮುತಾಲಿಕ್

| Updated By: Rakesh Nayak Manchi

Updated on: Dec 14, 2023 | 7:54 PM

ಮಥುರಾ ಕೃಷ್ಣ ಜನ್ಮಭೂಮಿ-ಮಸೀದಿ ವಿವಾದ ಸಂಬಂಧ ಇಂದು ಅಲಹಬಾದ್ ಹೈಕೋರ್ಟ್, ಮಧುರಾ ಮಸೀದಿ ಸರ್ವೆಗೆ ಅನುಮತಿ ನೀಡಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಮುಸ್ಲಿಮರು ಮಥುರಾ ಹಾಗೂ ಕಾಶಿ ಬಿಟ್ಟುಕೊಡಬೇಕು, ಇಲ್ಲವಾದರೆ ಕರ ಸೇವೆ ಮೂಲಕ ಪಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮುಸ್ಲಿಮರು ಮಥುರಾ, ಕಾಶಿ ಬಿಟ್ಟುಕೊಡದಿದ್ದರೆ ಕರಸೇವೆ ಮೂಲಕ ಪಡೆದುಕೊಳ್ಳುತ್ತೇವೆ: ಪ್ರಮೋದ್ ಮುತಾಲಿಕ್
ಮುಸ್ಲಿಮರು ಮಥುರಾ, ಕಾಶಿ ಬಿಟ್ಟುಕೊಡದಿದ್ದರೆ ಕರ ಸೇವೆ ಮೂಲಕ ಪಡೆದುಕೊಳ್ಳಬೇಕಾಗುತ್ತದೆ ಎಂದ ಪ್ರಮೋದ್ ಮುತಾಲಿಕ್
Follow us on

ಧಾರವಾಡ, ಡಿ.14: ಮುಸ್ಲಿಮರು ಮಥುರಾ ಹಾಗೂ ಕಾಶಿ ಬಿಟ್ಟುಕೊಡಬೇಕು, ಇಲ್ಲವಾದರೆ ಪಡೆದುಕೊಳ್ಳುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ. ಮಥುರಾ ಕೃಷ್ಣ ಜನ್ಮಭೂಮಿ-ಮಸೀದಿ ವಿವಾದ ಸಂಬಂಧ ಇಂದು ಅಲಹಬಾದ್ ಹೈಕೋರ್ಟ್, ಮಥುರಾ ಮಸೀದಿ ಸರ್ವೆಗೆ (Mathura Mosque Survey) ಅನುಮತಿ ನೀಡಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಇಡೀ ದೇಶದ ಜನರಿಗೆ ಹರ್ಷದಾಯಕ ತೀರ್ಪು ಎಂದರು.

1986ರಲ್ಲಿ ಅಶೋಕ ಸಿಂಘಾಲ್ ರಾಷ್ಟ್ರಪತಿಗೆ ಮನವಿ ಕೊಟ್ಟಿದ್ದರು. 30 ಸಾವಿರ ದೇವಸ್ಥಾನಗಳು ಮಸೀದಿ ಆಗಿವೆ. ಅವೆಲ್ಲ ನಮಗೆ ಬೇಡ. ಅಯೋಧ್ಯಾ, ಮಥುರಾ, ಕಾಶಿ ದೇವಸ್ಥಾನ ಮಾತ್ರ ಕೊಡಿ ಅಂದಿದ್ದರು. ಮಥುರಾದಲ್ಲಿ ಒಂದೇ ಗೋಡೆ ಇದೆ. ಒಂದೆಡೆ ಮಸೀದಿ, ಮತ್ತೊಂದೆಡೆ ದೇವಸ್ಥಾನ ಇದೆ. ಮಥುರಾ ಈಗ ವಾಸ್ತವಿಕಕ್ಕೆ ಬಂದಿದೆ. ಹಿಂದೂ ದೇವಸ್ಥಾನ ಎನ್ನುವುದು ಇದು ವಾಸ್ತವ. ಈ ಹಿನ್ನೆಲೆ‌ ಕೋರ್ಟ್ ತೀರ್ಪು ಸ್ವಾಗತಾರ್ಹ ಎಂದರು.

ಇದನ್ನೂ ಓದಿ: ಕೃಷ್ಣ ಜನ್ಮಭೂಮಿ ವಿವಾದ: ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ

ಈಗ ಮುಸ್ಲಿಮರ ಅಂಗಳದಲ್ಲಿ ಚೆಂಡು ಇದೆ. ಅವರು ಮಥುರಾ, ಕಾಶಿ ಬಿಟ್ಟುಕೊಡಬೇಕು. ಆಗ ದೇಶ ಶಾಂತವಾಗಿ ಇರುತ್ತದೆ. ಇಲ್ಲದೆ ಹೋದಲ್ಲಿ ಅಶಾಂತಿ ಆಗುತ್ತದೆ. ಇವರು ಪುನಃ ಕೋರ್ಟ್‌ಗೆ ಹೋಗುತ್ತಾರೆ. ಅದಕ್ಕೆ ಮತ್ತೇ ಹೋರಾಟಗಳು ಆರಂಭವಾಗುತ್ತವೆ. ಹೀಗಾಗಿ ಮುಸ್ಲಿಮರು ಇದನ್ನು ಕೊಟ್ಟು ಬಿಡಬೇಕು. 2024ರಲ್ಲಿ ಮತ್ತೆ ಮೋದಿ‌ಯೇ ಬರುತ್ತಾರೆ. ಈಗ ಕೊಡದೇ ಹೋದಲ್ಲಿ ಕರ ಸೇವೆ ಮೂಲಕ ಪಡೆದುಕೊಳ್ಳಬೇಕಾಗುತ್ತದೆ ಎಂದರು.

ಸಂಸತ್ ಭವನದಲ್ಲಿ ಗಲಾಟೆ ಹಿಂದೆ ಕಾಂಗ್ರೆಸ್ ಕುತಂತ್ರ: ಪ್ರಮೋದ್ ಮುತಾಲಿಕ್

ಸಂಸತ್ ಭವನದಲ್ಲಿ ಗಲಾಟೆ ವಿಚಾರವಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್, ಈ ಘಟನೆ ಆಘಾತಕಾರಿ ಆಗಿದೆ. ಪ್ರತಿಭಟನೆಗೆ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ. ಆದರೆ ಇದು ಕಾನೂನು ಬಾಹಿರವಾಗಿ ನಡೆದಿದೆ. ಭಯೋತ್ಪಾದಕ ಕೃತ್ಯದ ರೀತಿ ಮಾಡಿದ್ದಾರೆ. ಇದು ಯಾರೂ ಒಪ್ಪದ ಘಟನೆ. ಇದರ ಹಿಂದೆ ಕಾಂಗ್ರೆಸ್ ಕುತಂತ್ರ ಇರಬಹುದು. ಬುದ್ಧಿಜೀವಿಗಳ ಮೂಲಕ ಕಾಂಗ್ರೆಸ್ ಹೀಗೆ ಮಾಡಿಸಿರಬಹುದು. ಇದು ಸರಿಯಲ್ಲ, ಇದನ್ನು ಖಂಡಿಸುತ್ತೇವೆ ಎಂದರು.

ಸಂಸದ ಪ್ರತಾಪ ಸಿಂಹರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರತಾಪ ಸಿಂಹ ಅತ್ಯಂತ ದೇಶಭಕ್ತ, ರಾಷ್ಟ್ರಭಕ್ತ. ಅವರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ. ಖಲಿಸ್ತಾನದ ಲೀಡರ್ 22 ವರ್ಷದ ಹಿಂದಿನಂತೆ ಮಾಡುತ್ತೇವೆ ಅಂತಾ ಮುಂಚಿತವಾಗಿ ಹೇಳಿದ್ದ. ಆ ಹೇಳಿಕೆ ಮತ್ತು ನಿನ್ನೆ ಘಟನೆಗೆ ಲಿಂಕ್ ಆಗುತ್ತಿದೆ. ಇದು ದೇಶಕ್ಕೆ ಅಪಾಯಕಾರಿ ಘಟನೆ. ಪ್ರಕರಣ ಸಂಬಂಧ ಖಲಿಸ್ತಾನ ಹಿನ್ನೆಲೆ ಬಗ್ಗೆಯೂ ಪರಿಶೀಲನೆ ಮಾಡಬೇಕು. ಆರು ಜನರನ್ನು ನೇರವಾಗಿ ಎನ್‌ಕೌಂಟರ್ ಮಾಡಬೇಕು ಎಂದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂಥದೆಲ್ಲ ಬಿಜೆಪಿ ಮಾಡುತ್ತೆಂದು ಕಾಂಗ್ರೆಸ್ ಆರೋಪಗಳ ವಿಚಾರವಾಗಿ ಮಾತನಾಡಿದ ಮುತಾಲಿಕ್, ಇದು ಕಲ್ಪಿಸುವುದು ಸರಿಯಲ್ಲ. ಇದೊಂದು ಹಸಿಸುಳ್ಳು. ಹಾಗಾದಲ್ಲಿ ಜನ ಏಕೆ ಮೋದಿಗೆ ವೋಟ್ ಹಾಕುತ್ತಾರೆ. ಆರು ಜನ ಆರೋಪಿಗಳು ಬೇರೆ ಬೇರೆ ರಾಜ್ಯದವರು. ಇವರೆಲ್ಲ ಹೇಗೆ ಸೇರಿದರು ಎಂಬುದು ಆಘಾತಕಾರಿ. ಜೆಎನ್‌ಯುದಲ್ಲಿ ದೇಹದ್ರೋಹಿ ಘೋಷಣೆ ಹಾಕಿದ್ದರು. ಅದೇ ಮಾದರಿಯಲ್ಲಿಯೇ ಇದು ಕೂಡ ಆಗಿದೆ. ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ಪ್ರವೃತ್ತಿ ಇದರಲ್ಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ