ಅಂಚೆ ಚೀಟಿಯಲ್ಲಿ ರಾಜ್ಯದ ಹಿಂದೂಸ್ತಾನಿ ಗಾಯಕ ದಿ. ಸವಾಯೀ ಗಂಧರ್ವ – ಪ್ರಲ್ಹಾದ್ ಜೋಶಿ ಸಂತಸ

| Updated By: ಸಾಧು ಶ್ರೀನಾಥ್​

Updated on: Oct 11, 2022 | 2:33 PM

Hindustani Singer Sawai Gandharva: ಸವಾಯಿ ಗಂಧರ್ವ ಎಂದೇ ಖ್ಯಾತರಾಗಿದ್ದ ಪಂಡಿತ್‌ ರಾಮಭಾವು ಕುಂದಗೋಳಕರ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನ ಹುಬ್ಬಳ್ಳಿಯಲ್ಲಿ ಇಂದು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರು ಬಿಡುಗಡೆಗೊಳಿಸಿದರು.

ಅಂಚೆ ಚೀಟಿಯಲ್ಲಿ ರಾಜ್ಯದ ಹಿಂದೂಸ್ತಾನಿ ಗಾಯಕ ದಿ. ಸವಾಯೀ ಗಂಧರ್ವ - ಪ್ರಲ್ಹಾದ್ ಜೋಶಿ ಸಂತಸ
ಅಂಚೆ ಚೀಟಿಯಲ್ಲಿ ರಾಜ್ಯದ ಹಿಂದೂಸ್ತಾನಿ ಗಾಯಕ ದಿ. ಸವಾಯೀ ಗಂಧರ್ವ - ಪ್ರಲ್ಜಾದ್ ಜೋಶಿ ಸಂತಸ
Follow us on

ಹುಬ್ಬಳ್ಳಿ: ಸವಾಯಿ ಗಂಧರ್ವ ಎಂದೇ ಖ್ಯಾತರಾಗಿದ್ದ ಪಂಡಿತ್‌ ರಾಮಭಾವು ಕುಂದಗೋಳಕರ ಅವರ (Hindustani Singer Sawai Gandharva) ಸ್ಮರಣಾರ್ಥ ಅಂಚೆ ಚೀಟಿಯನ್ನ ಬಿಡುಗಡೆಗೊಳಿಸಲಾಗಿದೆ. ಹುಬ್ಬಳ್ಳಿಯಲ್ಲಿ ಇಂದು ಪಂಡಿತ್ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ (Railways Minister Ashwini Vaishnaw) ಅವರು ಬಿಡುಗಡೆಗೊಳಿಸಿದರು. ಸವಾಯೀ ಗಂಧರ್ವ ಅವರ ಸ್ಮರಣಾರ್ಥ ಅಂಚೆ ಚೀಟಿ ಹೊರಗೆ ತರಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಒತ್ತಾಯಿಸಿದ್ದರು. ಅದರಂತೆ ಇಂದು ಕೇಂದ್ರ ರೈಲ್ವೇ ಸಚಿವರು ಅಂಚೆ ಚೀಟಿಯನ್ನ ಬಿಡುಗಡೆಗೊಳಿಸಿದ್ದಾರೆ. ಸಂಗೀತ ಕ್ಷೇತ್ರಕ್ಕೆ ವಿಶೇಷವಾಗಿ ಹಿಂದೂಸ್ತಾನಿ ಗಾಯನಕ್ಕೆ ಸವಾಯೀ ಗಂಧರ್ವ ಅವರ ಕೊಡುಗೆ ಅನನ್ಯ.

ಪಂಡಿತ್ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಬಸವರಾಜ್ ರಾಜಗುರು ನಾನಾಸಾಹೇಬ್ ದೇಶಪಾಂಡೆ ಯವರಂತ ಖ್ಯಾತ ಹಿಂದೂಸ್ತಾನಿ ಗಾಯಕರಿಗೆ ಸವಾಯೀ ಗಂಧರ್ವ ಅವರು ಗುರುವಾಗಿದ್ದರು. ಭೀಮ್ ಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಅವರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಲು ಸಂಗೀತ ಕಲಿತಿದ್ದೆ ಸವಾಯೀ ಗಂಧರ್ವ ಅವರಿಂದ. ಅನೇಕ ಸಂಗೀತಗಾರರಿಗೆ ಧಾರವಾಡದಲ್ಲಿ ಕಿರಾಣಾ ಘರಣಾ ಪರಂಪರೆಯ ಮೂಲಕ ಒಂದು ವೇದಿಕೆಯನ್ನ ಹಾಕಿಕೊಟ್ಟವರು ಸವಾಯೀ ಗಂಧರ್ವ ಅವರು.

ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸವಾಯೀ ಗಂಧರ್ವ ಅವರ ಸಂಗೀತ ಕ್ಷೇತ್ರಕ್ಕೆ ನೀಡಿದ ವಿಶಿಷ್ಠ ಕೊಡುಗೆಯನ್ನ ಸ್ಮರಿಸಿದರು. ಹಲವು ಪ್ರಖ್ಯಾತ ಶಿಷ್ಯರನ್ನು ಹೊಂದಿದ್ದ ಸವಾಯಿ ಗಂಧರ್ವರು ಧಾರವಾಡ ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದವರು. ಅಸಂಖ್ಯಾತ ಅಭಿಮಾನಿಗಳ ಮನಸಿನಲ್ಲಿ ಇಂದಿಗೂ ಹಸಿರಾಗಿರುವ ಪಂಡಿತ್‌ ಜೀ ನಮ್ಮ ಹೆಮ್ಮೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಕಾರ್ಯಕ್ರಮದ ಭಾಗವಾಗಿದ್ದು ನನಗೆ ಗೌರವದ ಸಂಗತಿಯಾಗಿದೆ ಎಂದು ಜೋಶಿಯವರು ಹೆಮ್ಮೆಪಟ್ಟಿದ್ದಾರೆ.

ಸಂಗೀತಕ್ಕೆ ಭದ್ರ ಬುನಾದಿಯನ್ನ ಹಾಕಿದವರು ಸವಾಯಿ ಗಂಧರ್ವರು

ಸವಾಯಿ ಗಂಧರ್ವರು ಹಿಂದುಸ್ತಾನಿ ಸಂಗೀತದ ಕಂಪನ್ನ ಹರಡಿಸುವಲ್ಲಿ ಬಹಳಷ್ಟು ಪರಿಶ್ರಮ ಪಟ್ಟವರು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಅವರನ್ನ ಸಂಗೀತಕ್ಕಾಗಿ ಸಿದ್ದಪಡಿಸಿದವರು. ಸಂಗೀತಕ್ಕೆ ಭದ್ರ ಬುನಾದಿಯನ್ನ ಹಾಕಿದವರು ಸವಾಯಿ ಗಂಧರ್ವರು. ಬಹಳಷ್ಟು ಜನ ಈಗ ಜಾತಿ ಜಾತಿಯಲ್ಲಿ ಬಡಿದಾಡುತ್ತಿದ್ದಾರೆ. ಆದ್ರೆ ಸವಾಯಿ ಗಂಧರ್ವರನ್ನ ಮೈಸೂರು ಆಸ್ಥಾನದ ಪಂಡಿತರಾದ ಅಬ್ದುಲ್ ಕರೀಂ ಖಾನ್ ಕರೆದುಕೊಂಡು ಹೋಗಿ ಸಂಗೀತ ಕಲಿಸಿದ್ದರು. ಅಬ್ದುಲ್ ಕರೀಂ ಜಾನ್ ಅವರ ಗರಡಿ ಮನೆಯಲ್ಲಿ ಬೆಳೆದವರು ಸವಾಯಿ ಗಂಧರ್ವರು‌. ಈ ಮಣ್ಣು ಸಂಗೀತಕ್ಕಾಗಿ ಬಹಳಷ್ಟು ಮಹಾಪುರುಷರನ್ನ ನೀಡಿದೆ. ಇವತ್ತು ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದು ನಮ್ಮ ಹೆಮ್ಮೆಯ ವಿಷಯ ಎಂದು ಪಂ. ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪಂ.ಸವಾಯಿ ಗಂಧರ್ವರ ಸಂಗೀತವನ್ನ ವಾಜಪೇಯಿ ಇಷ್ಟಪಡ್ತಿದ್ರು -ಸಚಿವ ಅಶ್ವಿನಿ ವೈಷ್ಣವ

ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ ಅವರು ನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ಪಂ. ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಮಾತನಾಡುವುದು ಸೌಭಾಗ್ಯ. ಪಂ.ಸವಾಯಿ ಗಂಧರ್ವರ ಸಂಗೀತವನ್ನ ವಾಜಪೇಯಿ ಇಷ್ಟಪಡ್ತಿದ್ರು. ಬ್ರಿಟಿಷ್​​ ಗವರ್ನರ್ ಎದುರು ಸತತ 3 ಗಂಟೆ ಸಂಗೀತ ಕಚೇರಿ ನೀಡಿದ್ರು. ಸಂಗೀತಕ್ಕಿರುವ ಶಕ್ತಿಯನ್ನ ಬ್ರಿಟಿಷರಿಗೆ ಪರಿಚಯಿಸಿದರು. ಪಂ. ಸವಾಯಿ ಗಂಧರ್ವರಿಂದ ಧಾರವಾಡ ಪ್ರಸಿದ್ಧಿ ಪಡೆಯಿತು. ಗಂಗೂಬಾಯಿ ಹಾನಗಲ್​, ಪಂ.ಭೀಮಸೇನರಿಗೆ ಗುರುಗಳಾಗಿದ್ರು. ಪಂ. ಸವಾಯಿ ಗಂಧರ್ವರ ಸಾಧನೆ ಪರಿಗಣಿಸಿ ಅಂಚೆಚೀಟಿ ಬಿಡುಗಡೆಮಾಡಲಾಗಿದೆ ಎಂದು ಹೆಮ್ಮೆ ಪಟ್ಟರು.

ದೇಶಪಾಂಡೆ ನಗರದ ಪಂಡಿತ್‌ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಪದ್ಮಶ್ರೀ ಶ್ರೀ ಎಂ ಎಂ ಜೋಶಿ, ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಶ್ರೀ ಎಸ್‌ ರಾಜೇಂದ್ರ ಕುಮಾರ್‌, ಡಾ. ಗಂಗೂಬಾಯಿ ಹಾನಗಲ್‌ ಅವರ ಸುಪುತ್ರ ಶ್ರೀ ನಾರಾಯಣ ಹಾನಗಲ್‌ ಹಾಗೂ ಇತರ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.

Published On - 2:03 pm, Tue, 11 October 22