ಧಾರವಾಡ: ದರಾ ಬೇಂದ್ರೆ ಅವರ ಜನ್ಮ ದಿನವನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸಲು ಸರ್ಕಾರಕ್ಕೆ ಮನವಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 30, 2023 | 8:38 PM

ಇತ್ತೀಚಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿಯವರು ದಾರವಾಡಕ್ಕೆ ಬಂದಾಗ ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಆರೋಗ್ಯ ವಿಚಾರಿಸಿದ ಸಚಿವರಿಗೆ ಡಾ. ಕಾಪಡೆ ಒಂದು ಕಿವಿ ಮಾತನ್ನು ಹೇಳಿದ್ದರು. ಕುವೆಂಪು, ಬೇಂದ್ರೆ, ಕಾರಂತ ಕನ್ನಡದ ಮೂರು ಶಿಖರಗಳು. ಅವರನ್ನು ಯಾವತ್ತೂ ಮರೆಯದಿರಿ ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ಹೆಚ್ಚಿನ ಮಹತ್ವ ಪಡೆದಿದ್ದು, ಇದೀಗ ದ.ರಾ. ಬೇಂದ್ರೆ ಅವರ ಜನ್ಮದಿನವನ್ನು ವಿಶ್ವ ಕವಿ ದಿನವನ್ನಾಗಿ ಘೋಷಿಸುವಂತೆ ಬೇಡಿಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಧಾರವಾಡ: ದರಾ ಬೇಂದ್ರೆ ಅವರ ಜನ್ಮ ದಿನವನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸಲು ಸರ್ಕಾರಕ್ಕೆ ಮನವಿ
ದರಾ ಬೇಂದ್ರೆ
Follow us on

ಧಾರವಾಡ, ಆ.30: ದ.ರಾ. ಬೇಂದ್ರೆ ಅಂದರೆ ಯಾರಿಗೆ ಗೊತ್ತಿಲ್ಲ. ಕನ್ನಡ ನಾಡು ಕಂಡ ಶ್ರೇಷ್ಠ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (Dattātreya Rāmachandra Bēndre)ಯವರು. ಆಧ್ಯಾತ್ಮದಿಂದ ಹಿಡಿದು ನಿಸರ್ಗದವರೆಗೆ ಎಲ್ಲ ಬಗೆಯ ಕವಿತೆ ರಚಿಸಿದವರಲ್ಲಿ ಬೇಂದ್ರೆ ಮೊದಲಿಗರು. ಇಂಥಹ ಬೇಂದ್ರೆ ಜನ್ಮದಿನವನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸಲು ಘೋಷಿಸಬೇಕೆಂಬ ಆಗ್ರಹ ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಏಕೆಂದರೆ ಸಾಹಿತಿ, ಕವಿ ಕುವೆಂಪು ಅವರ ಜನ್ಮದಿನವನ್ನು ವಿಶ್ವ ಮಾನವ ದಿನವೆಂದು ಆಚರಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಶ್ರೇಷ್ಠ ಕವಿ ಬೇಂದ್ರೆ ಅವರ ಜನ್ಮ ದಿನವನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸಲು ಆಗ್ರಹ ಕೇಳಿ ಬರುತ್ತಿದೆ. ಜನವರಿ 31, 1896 ರಲ್ಲಿ ಬೇಂದ್ರೆ ಜನಿಸಿದ್ದರು. ಜನವರಿ 31 ನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸುವಂತೆ ಅವರ ಅಭಿಮಾನಿಗಳು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಹಲವಾರು ಬಾರಿ ಬೇಂದ್ರೆ ಟ್ರಸ್ಟ್ ಮೂಲಕವೂ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಕೆಲ ವರ್ಷಗಳ ಹಿಂದೆ ಸರಕಾರ ಬೇಂದ್ರೆ ಟ್ರಸ್ಟ್ ರಚಿಸಿ, ಆ ಮೂಲಕ ಬೇಂದ್ರೆ ಅವರ ಸಮಗ್ರ ಕಾವ್ಯವನ್ನು ಉಳಿಸಿಕೊಳ್ಳುವ ಹಾಗೂ ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಅವರ ಹೆಸರಿನ ಭವನವನ್ನು ಕೂಡ ಧಾರವಾಡ ನಗರದ ಸಾಧನಕೇರಿ ಬಡಾವಣೆಯಲ್ಲಿ ನಿರ್ಮಿಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಟ್ರಸ್ಟ್​ಗೆ ಅನುದಾನದ ಕೊರತೆ ಉಂಟಾಗುತ್ತಿದೆ. ಕುವೆಂಪು ಅವರ ಟ್ರಸ್ಟ್​ಗೆ ಸಿಗುವಂತೆ ಈ ಟ್ರಸ್ಟ್​ಗೆ ಅನುದಾನ ಸಿಗುತ್ತಿಲ್ಲ ಎನ್ನುವ ನೋವು ಇಲ್ಲಿನ ಜನರಿಗೆ ಕಾಡುತ್ತಿದೆ. ಅಲ್ಲದೇ ಬೇಂದ್ರೆ ಅವರ ಮನೆಯ ದುರಸ್ತಿ ಕೆಲಸಕ್ಕೆ ಸಾಕಷ್ಟು ಸಮಸ್ಯೆಗಳಿವೆ. ಎಲ್ಲ ಸಮಸ್ಯೆಗಳ ನಡುವೆಯೂ ಟ್ರಸ್ಟ್​ ಕೆಲಸ ಮಾಡುತ್ತಿದೆ. ಇದೇ ವೇಳೆ ಬೇಂದ್ರೆ ಅವರ ಹೆಸರಿನಲ್ಲಿ ವಿಶ್ವ ಕವಿ ದಿನ ಆಚರಿಸಲು ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಇದನ್ನೂ ಓದಿ:Toddler: ಆರು ತಿಂಗಳಲ್ಲಿ ನೊಬೆಲ್ ವಿಶ್ವ ದಾಖಲೆ ತನ್ನದಾಗಿಸಿಕೊಂಡ ಮುದ್ದು ಮಗು.. ಏನು ಸಾಧನೆ ಮಾಡಿದ್ದಾನೆ ಗೊತ್ತಾ?

ಸಿಎಂ ಜೊತೆ ಚರ್ಚೆ, ಸಚಿವ ಶಿವರಾಜ ತಂಗಡಗಿ ಭರವಸೆ

ರಾಜ್ಯಕ್ಕೆ ಕರ್ನಾಟಕ ಎನ್ನುವ ಹೆಸರು ಇಟ್ಟು 50 ವರ್ಷಗಳಾಗುತ್ತಿವೆ. ಈ ವೇಳೆ ನವೆಂಬರ್ 1 ರಂದು ಸರಕಾರ ತಮ್ಮ ಬೇಡಿಕೆ ಈಡೇರಿಸಬೇಕು ಅನ್ನೋದು ಸ್ಥಳೀಯರು ಒತ್ತಾಯ. ಇದೀಗ ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸೋದಾಗಿ ಹೇಳಿದ್ದಾರೆ. ಪ್ರತಿವರ್ಷ ದ.ರಾ. ಬೇಂದ್ರೆ ಅವರ ಹೆಸರಿನಲ್ಲಿ ಒಬ್ಬ ಕವಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯ ಮೊತ್ತ 1 ಲಕ್ಷ ರೂಪಾಯಿ ಇದೆ. ಇದೇ ವೇಳೆ ಅವತ್ತಿನ ದಿನವನ್ನೇ ವಿಶ್ವ ಕವಿ ದಿನವನ್ನಾಗಿ ಆಚರಿಸಿದರೆ ವರಕವಿಗೆ ನೀಡಿದ ಗೌರವ ಎನ್ನುವುದು ಸ್ಥಳೀಯ ಸಾಹಿತಿಗಳ ಆಶಯ. ಸರಕಾರ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ