ಧರ್ಮದ ಎಲ್ಲೆ ದಾಟಿದ ಪ್ರೇಮಕ್ಕೆ ಪೊಲೀಸರಿಂದ ಅಡ್ಡಿ, ಮಧ್ಯೆ ಪ್ರವೇಶಿಸಿದ ಬಜರಂಗ ದಳ -ಠಾಣೆಯಲ್ಲೇ ಮರು ಮದುವೆ ಮಾಡಿಸಿದ ಧಾರವಾಡ ಪೊಲೀಸ್! ​

| Updated By: ಸಾಧು ಶ್ರೀನಾಥ್​

Updated on: Dec 05, 2023 | 5:15 PM

ಹಿಂದೂ ಯುವಕ, ಅನ್ಯ ಧರ್ಮಿಯ ಯುವತಿಯನ್ನು ಮದುವೆಯಾದ ಅನ್ನೋ ಕಾರಣಕ್ಕೆ ಅವರಿಬ್ಬರನ್ನೂ ಬೇರ್ಪಡಿಸಲು ಹೋಗಿದ್ದ ಧಾರವಾಡ ಗ್ರಾಮೀಣ ಪೊಲೀಸರಿಗೆ ಬಜರಂಗ ದಳದ ಕಾರ್ಯಕರ್ತರು ಬಿಸಿ ಮುಟ್ಟಿಸಿದ್ದಾರೆ. ಯಾವ ಠಾಣೆಯಿಂದ ಜೋಡಿಯನ್ನು ಬೇರ್ಪಡಿಸಿದ್ದರೋ, ಅದೇ ಠಾಣೆಯಲ್ಲಿ ಪುನಃ ಅವರನ್ನು ಒಂದಾಗಿಸಿ, ರಕ್ಷಣೆ ಕೊಟ್ಟು ಕಳುಹಿಸಿದ್ದಾರೆ.

ಧರ್ಮದ ಎಲ್ಲೆ ದಾಟಿದ ಪ್ರೇಮಕ್ಕೆ ಪೊಲೀಸರಿಂದ ಅಡ್ಡಿ, ಮಧ್ಯೆ ಪ್ರವೇಶಿಸಿದ ಬಜರಂಗ ದಳ -ಠಾಣೆಯಲ್ಲೇ ಮರು ಮದುವೆ ಮಾಡಿಸಿದ ಧಾರವಾಡ ಪೊಲೀಸ್! ​
ಧರ್ಮದ ಎಲ್ಲೆ ದಾಟಿದ ಪ್ರೇಮಕ್ಕೆ ಪೊಲೀಸರಿಂದ ಅಡ್ಡಿ, ಮಧ್ಯೆ ಪ್ರವೇಶಿಸಿದ ಬಜರಂಗ ದಳ
Follow us on

ಯುವಕ ಮತ್ತು ಯುವತಿ ಮದುವೆ ವಯಸ್ಸಿಗೆ ಬಂದವರಾದರೆ ಧರ್ಮ, ಜಾತಿ ಯಾವುದೇ ಇರಲಿ, ಪರಸ್ಪರ ಒಪ್ಪಿ ಮದುವೆ ಆಗೋದಕ್ಕೆ ಕಾನೂನು ಸಮ್ಮತಿಸುತ್ತದೆ. ಆದರೆ ಈ ರೀತಿ ಆಗಿದ್ದ ಮದುವೆಯೊಂದನ್ನು ಮುರಿದು, ಪ್ರೇಮಿಗಳನ್ನು (love marriage) ಬೇರ್ಪಡಿಸಲು ಸ್ವತಃ ಕಾನೂನು ಪಾಲಕ ಪೊಲೀಸರೇ ಮುಂದಾಗಿದ್ದರು. ಆದರೆ ಕೊನೆಗೆ ಆ ಪೊಲೀಸರು ತಮ್ಮ ಠಾಣೆಯಲ್ಲಿಯೇ ಆ ಜೋಡಿಗೆ ಮದುವೆ ಮಾಡಿ ಕಳುಹಿಸಿದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ. ಪೊಲೀಸ್ ಠಾಣೆ ಎದುರಿನಲ್ಲಿಯೇ ತಾಳಿ ಕಟ್ಟುತ್ತಿರುವ ಯುವಕ; ಠಾಣೆಯ ಅಂಗಳದಲ್ಲಿಯೇ ಹಾರ ಬದಲಾವಣೆ; ಠಾಣೆಯ ಎದುರಿನಲ್ಲಿಯೇ ಮೊಳಗಿದ ಮಾಂಗಲ್ಯ ಧಾರಣೆಯ ಮಂತ್ರ ಮತ್ತು ಜೈ ಶ್ರೀರಾಮ ಘೋಷಣೆ (Bajrang Dal)- ಇಂಥ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆ (Dharwad police station)

ಹೌದು; ಠಾಣೆಯ ಆವರಣದಲ್ಲಿ ವಿವಾಹ ಬಂಧನಕ್ಕೆ ಒಳಗಾದ ಈ ಜೋಡಿ.. ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ ಮಾಯಕಾರ್ ಹಾಗೂ ಅದೇ ಗ್ರಾಮದ ಉಮೆಕುಲ್ಸುಮಾ ಕರಿಗಾರ ಅನ್ನೋ ಯುವಕ-ಯುವತಿ. ಒಂದೇ ಗ್ರಾಮದ ಇವರಿಬ್ಬರೂ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿ ಮನೆಯವರಿಗೆ ಗೊತ್ತಾದಾಗ, ಯುವತಿ ಮನೆಯಿಂದ ವಿರೋಧ ವ್ಯಕ್ತವಾಗಿತ್ತು.

ಈ ಹಿನ್ನೆಲೆ ಪರಸ್ಪರ ಮೆಚ್ಚಿ ರಿಜಿಸ್ಟ್ರಾರ್ ವಿವಾಹಕ್ಕೆ ಅರ್ಜಿಯನ್ನು ಕೂಡ ಸಲ್ಲಿಸಿದರು. ಬಳಿಕ ಯುವತಿ ಮನೆ ಬಿಟ್ಟು ಯುವಕನ ಬಳಿ ಓಡಿ ಬಂದಳು. ಈ ಸುದ್ದಿ ತಿಳಿದ ಬಳಿಕ ಯುವತಿ ಮನೆಯವರು ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಅಂತಾ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆ ಪೊಲೀಸರು ಮಂಜುನಾಥನ ಮನೆಯವರನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿ, ಕಳಿಸಿದ್ದರು. ಮಂಜುನಾಥ ಪೊಲೀಸರಿಂದ ಒತ್ತಡ ಬಂದ ಹಿನ್ನೆಲೆ ಉಮೆಕುಲ್ಸುಮಾಳನ್ನು ಕರೆದುಕೊಂಡು ಠಾಣೆಗೆ ಬಂದಿದ್ದರು. ಈ ವೇಳೆ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ರವಾನಿಸಿದ ಪೊಲೀಸರು, ಯುವಕನನ್ನು ವಶಕ್ಕೆ ಪಡೆದಿದ್ದರು.

Also read: ದೇಶದ ಸಂಪತ್ತು ಮುಸ್ಲಿಮರಿಗೆ ಹಂಚುತ್ತೇನೆ ಎಂಬ ಸಿಎಂ ಹೇಳಿಕೆಗೆ ಹೆಚ್​ಡಿಕೆ ತಿರುಗೇಟು

ಆದರೆ ಈ ವಿಷಯ ತಿಳಿದ ತಕ್ಷಣವೇ ಪೊಲೀಸರ ವಿರುದ್ಧ ಠಾಣೆ ಎದುರಿನಲ್ಲಿಯೇ ಬಜರಂಗ ಪ್ರತಿಭಟನೆ ನಡೆಸಿ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿತ್ತು. ಯಾವಾಗ ಬಜರಂಗದಳದಿಂದ ಪ್ರತಿಭಟನೆ ಶುರುವಾಯ್ತೋ? ಆಗ ಪೊಲೀಸರು ಅನಿವಾರ್ಯವಾಗಿ ವಶಕ್ಕೆ ಪಡೆದಿದ್ದ ಮಂಜುನಾಥನನ್ನು ಬಿಡಬೇಕಾಯ್ತು. ಅಲ್ಲದೇ ಯಮೆಕುಲ್ಸುಮಾಳರನ್ನು ಸಾಂತ್ವನ ಕೇಂದ್ರದಿಂದ ಕರೆಯಿಸಿ ಪುನಃ ಇಬ್ಬರನ್ನೂ ಒಂದು ಮಾಡಿದರು.

ಹೀಗಾಗಿ ಬಜರಂಗ ದಳದ ಕಾರ್ಯಕರ್ತರು, ಠಾಣೆ ಆವರಣದಲ್ಲಿಯೇ ಇಬ್ಬರಿಗೂ ಮತ್ತೊಮ್ಮೆ ಮದುವೆ ಮಾಡಿಸಿದರು. ಸದ್ಯ ಇಬ್ಬರೂ ಮದುವೆಯಾಗಿದ್ದು, ಯುವತಿ ತಾನು ಒಪ್ಪಿ ಮದುವೆಯಾಗಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದರಿಂದ ಪೊಲೀಸರು ಕಿಡ್ನಾಪ್ ಕೇಸ್ ಕೈಬಿಟ್ಟಿದ್ದಾರೆ. ಅಲ್ಲದೇ ತನ್ನ ಮನೆಯವರಿಂದ ನನ್ನ ಭಾವಿ ಪತಿ ಹಾಗೂ ಪತಿಯ ಮನೆಯವರಿಗೆ ಜೀವ ಬೆದರಿಕೆ ಇದೆ ಅಂತಾ ಪೊಲೀಸರಿಗೆ ದೂರು ಸಹ ಸಲ್ಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ