ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ: ಜಮೀರ್ ಅಹ್ಮದ್ ​ಖಾನ್​ ವಿವಾದಾತ್ಮಕ ಹೇಳಿಕೆ

| Updated By: ganapathi bhat

Updated on: Feb 13, 2022 | 9:18 PM

Hijab Row in Karnataka: ಹಿಜಾಬ್​ ಧರಿಸುವುದು ಈಗಿನದ್ದಲ್ಲ, ಹಳೆಯ ಪದ್ಧತಿಯಾಗಿದೆ. ಯಾರು ಧರಿಸಬೇಕು ಅನಿಸುತ್ತೋ ಅವರು ಹಾಕಿಕೊಳ್ಳಬಹುದು. ಕಡ್ಡಾಯವಾಗಿ ಹಿಜಾಬ್​ ಧರಿಸಬೇಕೆಂಬ ನಿಯಮವಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​​ ಹೇಳಿಕೆ ನೀಡಿದ್ದಾರೆ

ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ: ಜಮೀರ್ ಅಹ್ಮದ್ ​ಖಾನ್​ ವಿವಾದಾತ್ಮಕ ಹೇಳಿಕೆ
ಜಮೀರ್ ಅಹ್ಮದ್​
Follow us on

ಹುಬ್ಬಳ್ಳಿ: ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್​ಖಾನ್​ ಇಂದು (ಫೆಬ್ರವರಿ 13) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಜಾಬ್​ ಅಂದ್ರೆ ಮುಸಲ್ಮಾನರಲ್ಲಿ ಗೋಶಾಪರದ ಅಂತ ಹೇಳ್ತೇವೆ. ಅವರ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಿದ್ದರೆ ಗೊತ್ತಾಗುತ್ತಿತ್ತು. ಹೆಣ್ಣುಮಕ್ಕಳು ತಮ್ಮ ರಕ್ಷಣೆಗಾಗಿ ಹಿಜಾಬ್​ ಧರಿಸುತ್ತಾರೆ. ಹೆಣ್ಣುಮಕ್ಕಳು ದೊಡ್ಡವರಾದ ಮೇಲೆ ದೇಹರಚನೆ ಕಾಣಿಸಬಾರದು. ದೇಹರಚನೆ ಹೊರಗೆ ಕಾಣಿಸಬಾರದು ಎಂದು ಹಿಜಾಬ್​ ಬಳಸ್ತಾರೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವುದು ಭಾರತದಲ್ಲಿ. ಹಿಜಾಬ್​ ಹಾಕದಿರುವ ಕಾರಣದಿಂದ ಇಂತಹ ಘಟನೆ ನಡೆದಿದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ಹಿಜಾಬ್​ ಧರಿಸುವುದು ಈಗಿನದ್ದಲ್ಲ, ಹಳೆಯ ಪದ್ಧತಿಯಾಗಿದೆ. ಯಾರು ಧರಿಸಬೇಕು ಅನಿಸುತ್ತೋ ಅವರು ಹಾಕಿಕೊಳ್ಳಬಹುದು. ಕಡ್ಡಾಯವಾಗಿ ಹಿಜಾಬ್​ ಧರಿಸಬೇಕೆಂಬ ನಿಯಮವಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​​ ಹೇಳಿಕೆ ನೀಡಿದ್ದಾರೆ. ಇನ್ನು ಹಿಜಾಬ್ ಹಾಕಿಕೊಳ್ಳುವ ಬಗ್ಗೆ ಎಂಎಲ್​ಸಿ ಸಿಎಂ ಇಬ್ರಾಹಿಂ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಜಾಬ್ ಹಾಕಿಕೊಳ್ಳುವುದು ಮುಸ್ಲಿಂ ಸಮುದಾಯದ ಸಂಪ್ರದಾಯ. ಹಿಂದೂ ಧರ್ಮದಲ್ಲಿ ಮಹಿಳೆಯರು ತಲೆ ಮೇಲೆ ಸೆರಗು ಹಾಕುತ್ತಾರೆ. ಅದೇ ರೀತಿ ಮುಸ್ಲಿಂ ಸಮುದಾಯದಲ್ಲಿ ಹಿಜಾಬ್​ ಹಾಕಿಕೊಳ್ಳುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳದಿದ್ರೆ ನಾನೇ ಕೇಸ್ ಹಾಕಿ ಬಂಧಿಸುವಂತೆ ಆಗ್ರಹಿಸುವೆ: ಸಿಎಂ ಇಬ್ರಾಹಿಂ

ತಲೆ ಮೇಲೆ ಬಟ್ಟೆ ಹಾಕಬಾರದು ಎಂದು ವಿಶ್ವದಲ್ಲಿ ಏಲ್ಲೂ ಹೇಳಿಲ್ಲ. ಸಚಿವ ಈಶ್ವರಪ್ಪ ಮಗ ಕೇಸರಿ ಶಾಲು ಹಂಚುವ ಕೆಲಸ ಮಾಡಿದ್ದಾನೆ. ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳುತ್ತಿದ್ದಾನೆ. ಮುಖ್ಯಮಂತ್ರಿ ಏನು ಮಾಡುತ್ತಿದ್ದಾರೆಂದು ಸಿ.ಎಂ.ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿ&ಐಜಿಪಿ ಮಲಗಿದ್ದಾರಾ? ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಇನ್ನೂ ಕೇಸ್ ಹಾಕಿಲ್ಲ ಏಕೆ? ಕ್ರಮಕೈಗೊಳ್ಳದಿದ್ರೆ ನಾನೇ ಕೇಸ್ ಹಾಕಿ ಬಂಧಿಸುವಂತೆ ಆಗ್ರಹಿಸುವೆ. ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಲು ಮಾತ್ರ ಅವಕಾಶವಿದೆ ಎಂದು ಸಿ.ಎಂ.ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮಮಂದಿರ, ಗೋಹತ್ಯೆ ನಿಷೇಧದಿಂದ ದುಖಾನ್ ಬಂದ್​ ಆಗಿವೆ: ಬಿಜೆಪಿ ಟೀಕಿಸಿದ ಸಿಎಂ ಇಬ್ರಾಹಿಂ

ರಾಮಮಂದಿರ, ಗೋಹತ್ಯೆ ನಿಷೇಧದಿಂದ ದುಖಾನ್ ಬಂದ್​ ಆಗಿವೆ. ಅದಕ್ಕಾಗಿ ಹಿಜಾಬ್ ದುಖಾನ್ ಶುರುವಾಗಿದೆ. ಹಿಜಾಬ್ ವಿಚಾರದಲ್ಲಿ ಯಡಿಯೂರಪ್ಪ ಮಧ್ಯಪ್ರವೇಶಿಸಬೇಕು. ಹಿಜಾಬ್ ವಿಚಾರವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು. ಇಲ್ಲದಿದ್ದರೆ 2023ರಲ್ಲಿ ಇದೇ ಹಿಜಾಬ್​ ಬಿಜೆಪಿಗೆ ನೆರವಾಗುತ್ತದೆ. ಸೋತ ಮೇಲೆ ಹಿಜಾಬ್​ನಿಂದ ಮುಖ ಮುಚ್ಚಿಕೊಳ್ಳಬೇಕಾಗುತ್ತದೆ ಎಂದು ಸಿ.ಎಂ.ಇಬ್ರಾಹಿಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಕ್ಕಳನ್ನು ಎತ್ತಿಕಟ್ಟಿ ಕೇಸರಿ ಶಾಲು ಹಾಕಿಸುವ ಹೀನ ಕಾರ್ಯ: ಕೆ.ಎಸ್. ಲಿಂಗೇಶ್​ 

ನಾವು ಹಿಜಾಬ್ ಪರವೂ ಇಲ್ಲ, ಹಿಜಾಬ್ ವಿರುದ್ಧವೂ ಇಲ್ಲ. ಸಾಧನೆ ಶೂನ್ಯ ಮಾಡಿಕೊಂಡು ಜನರ ಭಾವನೆ ಬಡಿದೇಳಿಸಲು ಹದಿಹರೆಯದ ಮನಸ್ಸುಗಳು ಬೇಕಾಗಿತ್ತಾ ಇವರಿಗೆ? ವಿದ್ಯಾರ್ಥಿಗಳಿಗೆ 16, 17 ವರ್ಷದ ತುಂಬಿಲ್ಲ, ಪ್ರಬುದ್ಧರಾಗಿಲ್ಲ. ಮಕ್ಕಳನ್ನು ಎತ್ತಿಕಟ್ಟಿ ಕೇಸರಿ ಶಾಲು ಹಾಕಿಸುವ ಹೀನ ಕಾರ್ಯ ಎಂದು ಹಾಸನದಲ್ಲಿ ಬೇಲೂರು ಶಾಸಕ ಕೆ.ಎಸ್. ಲಿಂಗೇಶ್​ ಹೇಳಿಕೆ ನೀಡಿದ್ದಾರೆ.

ಹಿಜಾಬ್ ಹಾಕುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ವಸ್ತ್ರಸಂಹಿತೆ ಬಗ್ಗೆ ಶಾಲಾ ಆಡಳಿತ ಮಂಡಳಿ ನೋಡಿಕೊಳ್ಳುತ್ತೆ. ರಾತ್ರೋರಾತ್ರಿ ಹುಡುಗರಿಗೆ ಕೇಸರಿ ಶಾಲು ಹಾಕಿಸಿ ರಾಜಕಾರಣ ಮಾಡಲಾಗುತ್ತಿದೆ. ಮಕ್ಕಳನ್ನು ಛೂಬಿಟ್ಟು ಕ್ಯಾಂಪಸ್​ನಲ್ಲಿ ಗಲಾಟೆ ಮಾಡಿಸುತ್ತಾರೆ. ವಿದ್ಯಾರ್ಥಿಗಳು ಕೇಸರಿಶಾಲು ಹಾಕದೆ ಕಾಲೇಜಿಗೆ ಹೋಗಿದ್ದರೆ ಹಿಜಾಬ್ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುತ್ತಿರಲಿಲ್ಲ. 10 ರಿಂದ 15 ವಿದ್ಯಾರ್ಥಿಗಳು ಜೈಲಿನಲ್ಲಿದ್ದಾರೆ ಎಂದು ಕೆ.ಎಸ್.ಲಿಂಗೇಶ್ ಹೇಳಿದ್ದಾರೆ.

ರಾಜಕಾರಣಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಜಾತೀಯತೆ, ಧರ್ಮ ತಂದ್ರು. ಮತ್ತೆ ಇವರೇ ಅಧಿಕಾರಕ್ಕೆ ಬಂದರೆ ದೇಶ, ರಾಜ್ಯ ಉಳಿಯುತ್ತಾ? ಶಾಂತಿ, ಪ್ರೀತಿ ಬೆಳೆಸಿಕೊಂಡರೆ ಭವಿಷ್ಯದಲ್ಲಿ ದೇಶಕ್ಕೆ ಒಳ್ಳೆದಾಗುತ್ತೆ. ಇಲ್ಲದಿದ್ದರೆ ಮತ್ತೊಂದು ತಾಲಿಬಾನ್ ಆಗುವುದರಲ್ಲಿ ಸಂಶಯವಿಲ್ಲ ಎಂದು ಹಾಸನದಲ್ಲಿ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್​ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ರಾಜೀನಾಮೆ ನೀಡುವುದಿಲ್ಲ, ಹೈಕಮಾಂಡ್​ನಿಂದ ಬುಲಾವ್ ಬಂದಿದೆ: ಮುನಿಸಿಕೊಂಡಿದ್ದ ಸಿಎಂ ಇಬ್ರಾಹಿಂ ಯುಟರ್ನ್

ಇದನ್ನೂ ಓದಿ: ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ; ಪ್ರತಾಪ್‌ಸಿಂಹ ಸಮಸ್ಯೆ ಸೃಷ್ಟಿ ಮಾಡುತ್ತಾರೆ: ಯುಟಿ ಖಾದರ್ ಟೀಕೆ