AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Facebook Live | ರಾಜ್ಯದ ಹಿತಕ್ಕೆ ಬಂದ್ ಪೂರಕವೇ? ಮಾರಕವೇ?

ಸಂಪೂರ್ಣ ಬಂದ್ ಮಾಡುವುದರಿಂದ ಆಗುವ ಸಮಸ್ಯೆಗಳೆಷ್ಟು ಎಂಬ ಬಗ್ಗೆ ಟಿವಿ9 ಫೇಸ್​ಬುಕ್​ ಲೈವ್​ನಲ್ಲಿ ಸಾಮಾಜಿಕ ಹೋರಾಟಗಾರ ಸಾ.ರಾ. ಗೋವಿಂದು, ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಜೆ.ಆರ್. ಬಂಗೇರ ಹಾಗೂ ಮೈಸೂರಿನ ಗೃಹಿಣಿ ಶ್ರುತಿ ಚರ್ಚಿ ನಡೆಸಿದರು.

Tv9 Facebook Live | ರಾಜ್ಯದ ಹಿತಕ್ಕೆ ಬಂದ್ ಪೂರಕವೇ? ಮಾರಕವೇ?
ಶ್ರುತಿ, ಸಾ.ರಾ. ಗೋವಿಂದು, ಜೆ.ಆರ್ ಬಂಗೇರ
sandhya thejappa
| Updated By: ಸಾಧು ಶ್ರೀನಾಥ್​|

Updated on:Dec 16, 2020 | 5:03 PM

Share

ಬೆಂಗಳೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒಪ್ಪಿಗೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಇದನ್ನು ವಿರೋಧಿಸಿ ಬಂದ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಈಗಾಗಲೇ ಕೊರೊನಾದಿಂದ ಜನರು ಸಾಕಷ್ಟು ಸಂಕಟ ಅನುಭವಿಸುತ್ತಿದ್ದಾರೆ. ಇದರ ನಡುವಲ್ಲಿ ಸಂಪೂರ್ಣ ಬಂದ್ ಮಾಡುವುದರಿಂದ ಆಗುವ ಸಮಸ್ಯೆಗಳೆಷ್ಟು?

ಈ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ (ಡಿ.10) ಟಿವಿ9 ಫೇಸ್​ಬುಕ್​ ಲೈವ್​ನಲ್ಲಿ ಸಾಮಾಜಿಕ ಹೋರಾಟಗಾರ ಸಾ.ರಾ. ಗೋವಿಂದು, ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಜೆ.ಆರ್. ಬಂಗೇರ ಹಾಗೂ ಮೈಸೂರಿನ ಗೃಹಿಣಿ ಶ್ರುತಿ ಸುನಿಲ್ ಕುಮಾರ್ ಚರ್ಚಿ ನಡೆಸಿದರು. ಆ್ಯಂಕರ್​ ಮಾಲ್ತೇಶ್​ ಕಾರ್ಯಕ್ರಮ ನಡೆಸಿಕೊಟ್ಟರು.

ನೇರವಾಗಿ ಬಂದ್ ಕರೆ ನೀಡುವುದರಿಂದ ಆಗುವ ಪ್ರಯೋಜನಗಳೇನು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾ.ರಾ.ಗೋವಿಂದು, ಸರ್ಕಾರ ಜನರ ಹಿತಕ್ಕಾಗಿ ಯೋಜನೆಗಳನ್ನು ರೂಪಿಸಿದರೆ ಬಂದ್​ಗಳು ನಮಗೆ ಅನಿವಾರ್ಯವಾಗುವುದಿಲ್ಲ. ಜನರ ಕಷ್ಟ ಹಾಗೂ ಅಗತ್ಯಗಳ ಬಗ್ಗೆ ಅರಿತು ಸರ್ಕಾರ ಕೆಲಸಗಳನ್ನು ಕೈಗೆತ್ತಿಕೊಂಡರೆ ಬಂದ್ ಅಗತ್ಯ ಹುಟ್ಟುವುದಿಲ್ಲ ಎಂದು ತಿಳಿಸಿದರು. ಅಧಿಕಾರದ ಆಸೆಯನ್ನು ಕಡಿಮೆಗೊಳಿಸಿ ಜನರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ಹರಿಸಲು ಬಂದ್​ಗಳು ನಮಗೆ ಅನಿವಾರ್ಯ ಎಂದರು.

ಏಕಾಏಕಿ ಮರಾಠ ಪ್ರಾಧಿಕಾರ ಸ್ಥಾಪನೆಗೆ ಯಾವ ಮರಾಠರು ಕೋರಿದ್ದರು. ಇದರ ಅವಶ್ಯಕತೆ ಏನಿತ್ತು ಎಂದು ಮಾತನಾಡಿದ ಸಾ.ರಾ. ಗೋವಿಂದು ಮಹಾದಾಯಿ, ಕಾವೇರಿ ಬಗ್ಗೆ ಕಾತರವಿಲ್ಲದ ಸರ್ಕಾರ ಜನರ ಮನವೊಲಿಸಲು ಇಂತಹ ವಿಚಾರಗಳತ್ತ ಗಮನಹರಿಸುತ್ತದೆ ಎಂದು ನುಡಿದರು.

ಬಂದ್​ಗಳ ಸಾಧಕ ಬಾಧಕಗಳ ಬಗ್ಗೆ ಪ್ರತಿಕ್ರಿಯಿಸಿದ ಗೃಹಿಣಿ ಶ್ರುತಿ, ಬಂದ್​ಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಕೊರೊನಾ ಸೋಂಕಿನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಲಾಕ್​ಡೌನ್ ಅನಿವಾರ್ಯವಾಗಿತ್ತು. ಆಗ ಎದುರಾದ ಸಮಸ್ಯೆಗಳು ಒಂದೆರಡಲ್ಲ. ಈ ನಡುವೆ ಬಂದ್​ಗೆ ಕರೆ ನೀಡಿದಾಗ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಸರ್ಕಾರದ ವಿರುದ್ಧ ಹೋರಾಡುವ ಅಗತ್ಯವಿದ್ದರೆ ಧರಣಿ ಮಾಡಬಹುದು. ಬಂದ್ ಮಾಡುವುದರಿಂದ ಇನ್ನೊಂದು ಸಮಸ್ಯೆ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಯಾವುದೇ ಪ್ರಯೋಜನಗಳಿಲ್ಲ ಎಂದರು.

ಬಂದ್​ಗಳಿಂದ ವಾಣಿಜ್ಯ ಕ್ಷೇತ್ರಕ್ಕೆ ಆಗುವ ಸಮಸ್ಯೆಗಳ ಬಗ್ಗೆ ಮಾತನಾಡಿದ ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಜೆ.ಆರ್.ಬಂಗೇರ, ಕೊರೊನಾದಿಂದಾಗಿ ದೇಶದ ಪರಿಸ್ಥಿತಿ ಹದಗಟ್ಟಿದೆ. ಕೈಗಾರಿಕೆ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ದೊಡ್ಡದೊಡ್ಡ ಕಂಪನಿಗಳಲ್ಲಿ ಲಾಭವಿಲ್ಲದೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಬಂದ್​ ಮಾಡುವುದು ಅಪರಾಧ. ಜನರ ಹಿತದೃಷ್ಟಿಯಲ್ಲಿ ಹೋರಾಟಗಳು ನಡೆಯಬೇಕು. ಇದಕ್ಕೆ ಬದಲಾಗಿ ಬಂದ್​ ಮಾಡಿದಾಗ ಆಗುವುದು ನಷ್ಟವೇ ಹೊರತು ಲಾಭವಲ್ಲ ಎಂದು ಅಭಿಪ್ರಾಯಪಟ್ಟರು.

Tv9 Facebook Live | ಕೋವಿಡ್-19 ಲಸಿಕೆ ಎಷ್ಟು ಉಪಯುಕ್ತ?

Published On - 7:00 pm, Thu, 10 December 20