ಐಸಿಸ್ ಮ್ಯಾಗಜೀನ್​ನಲ್ಲಿ ರುಂಡವಿಲ್ಲದ ಮುರುಡೇಶ್ವರನ ವಿಗ್ರಹ, ಕ್ರಮ ಕೈಗೊಳ್ಳುವಂತೆ ಕುಮಟಾ ಶಾಸಕ ದಿನಕರ್ ಶೆಟ್ಟಿ ಆಗ್ರಹ

| Updated By: ಸಾಧು ಶ್ರೀನಾಥ್​

Updated on: Nov 23, 2021 | 11:41 AM

ಐಸಿಸ್ ಮ್ಯಾಗಜೀನ್ 'ದಿ ವೈಸ್ ಆಫ್ ಹಿಂದ್'ನ ಕವರ್ ಪೇಜ್ ಗೆ ಮುರ್ಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ 'Its time to Break False Gods' ಎಂಬ ಅಡಿಬರಹ ಮುದ್ರಿಸಲಾಗಿದೆ. ಜೊತೆಗೆ ಶಿವನ ಪ್ರತಿಮೆಯ ರುಂಡವನ್ನು ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ಧ್ವಜ ಹಾರಾಡುತ್ತಿರುವಂತೆ ವಿಕೃತಗೊಳಿಸಿದ ಚಿತ್ರವನ್ನು ಬಳಸಿಕೊಳ್ಳಲಾಗಿದೆ.

ಐಸಿಸ್ ಮ್ಯಾಗಜೀನ್​ನಲ್ಲಿ ರುಂಡವಿಲ್ಲದ ಮುರುಡೇಶ್ವರನ ವಿಗ್ರಹ, ಕ್ರಮ ಕೈಗೊಳ್ಳುವಂತೆ ಕುಮಟಾ ಶಾಸಕ ದಿನಕರ್ ಶೆಟ್ಟಿ ಆಗ್ರಹ
ಐಸಿಸ್ ಮ್ಯಾಗಜೀನ್​ನಲ್ಲಿ ರುಂಡವಿಲ್ಲದ ಮುರುಡೇಶ್ವರನ ವಿಗ್ರಹ, ಕ್ರಮ ಕೈಗೊಳ್ಳುವಂತೆ ಕುಮಟಾ ಶಾಸಕ ದಿನಕರ್ ಆಗ್ರಹ
Follow us on

ಕಾರವಾರ: ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭಟ್ಕಳ ತಾಲೂಕಿನ ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆಯನ್ನು ವಿಕೃತಗೊಳಿಸಿರುವ ಫೊಟೋ ಒಂದನ್ನು ಐಸಿಸ್ ಸಂಘಟನೆಯ ಮ್ಯಾಗಜೀನ್​ನ ಕವರ್ ಪೇಜ್ ನಲ್ಲಿ ಬಳಸಿಕೊಂಡಿದ್ದಾರೆ ಎಂಬ ಗುರುತರ ಆರೋಪವನ್ನು ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾಡಿದ್ದಾರೆ. ಐಸಿಸ್ ನ ಮ್ಯಾಗಜೀನ್ (ISIS Magazine)ಆಗಿರುವ ‘ದಿ ವೈಸ್ ಆಫ್ ಹಿಂದ್’ನ (The Voice oF Hind) ಕವರ್ ಪೇಜ್ ಗೆ ಮುರ್ಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ ‘Its time to Break False Gods’ ಎಂಬ ಅಡಿಬರಹವನ್ನೂ ಮುದ್ರಿಸಲಾಗಿದೆ. ಜೊತೆಗೆ ಶಿವನ ಪ್ರತಿಮೆಯ ರುಂಡವನ್ನು ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ಧ್ವಜ ಹಾರಾಡುತ್ತಿರುವಂತೆ ವಿಕೃತಗೊಳಿಸಿದ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಈ ಪೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಕುಮಟಾ ಶಾಸಕ ದಿನಕರ್​ ಕೇಶವ್​ ಶೆಟ್ಟಿ (Dinakar Keshav Shetty) ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು (BJP Kumta MLA), ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆಯೇ ಐಸಿಸ್?
ಐಸಿಸ್ ಪ್ರಚಾರ ಮಾಸಿಕವಾಗಿರುವ ಆನ್‌ಲೈನ್ ನಿಯತಕಾಲಿಕೆ ‘ವಾಯ್ಸ್ ಆಫ್ ಹಿಂದ್’ನ ಉತ್ಪಾದನೆ ಮತ್ತು ಪ್ರಸರಣದಲ್ಲಿ ಸಕ್ರಿಯ ಪಾತ್ರದ ಆರೋಪದ ಮೇಲೆ, ಈ ವರ್ಷದ ಆಗಸ್ಟ್ ನಲ್ಲಿ ಉಫ್ರಿ ಜವಾಹರ್ ದಾಮುದಿ ಅಲಿಯಾಸ್ ಅಬು ಹಾಜಿರ್ ಅಲ್ ಬದರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಜ್ಯ ಪೊಲೀಸರ ನೇತೃತ್ವದ ಸಂಘಟಿತ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಭಟ್ಕಳದಲ್ಲಿ ಬಂಧಿಸಿತ್ತು. ಈತನ ಮೇಲೆ ಏಪ್ರಿಲ್ 2020ರಿಂದ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ಇರಿಸಿದ್ದವು. ಐಸಿಸ್ ಪ್ರಚಾರ ಮತ್ತು ಮಾಧ್ಯಮ ಚಟುವಟಿಕೆಗಳ ಹೊರತಾಗಿ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಖರೀದಿ, ಮುಜಾಹಿದ್ದೀನ್‌ಗಳಿಗೆ ನಿಧಿ ಸಂಸ್ಥೆ ಮತ್ತು ನೇಮಕಾತಿ ಸೇರಿದಂತೆ ಲಾಜಿಸ್ಟಿಕಲ್ ಬೆಂಬಲವನ್ನು ಇವರು ನೋಡಿಕೊಂಡಿದ್ದರು.

ಹೀಗಾಗಿ ಈತನ ಬಂಧನ ಐಸಿಸ್ ಗೆ ದೊಡ್ಡ ಹೊಡೆತ ಎಂದು ಅಂದೇ ಬಿಂಬಿಸಲಾಗಿತ್ತು. ಈತನ ಬಂಧನದಿಂದಾಗಿ ಈ ಕುರಿತು ಸೇಡು ತೀರಿಸಿಕೊಳ್ಳಲು ಐಸಿಸ್ ಸಜ್ಜಾಗಿದೆಯೇ? ಎಂಬ ಪ್ರಶ್ನೆ ಇದೀಗ ಈ ಮ್ಯಾಗಜೀನ್ ನ ಕವರ್ ಪೇಜ್ ನಿಂದಾಗಿ ಎದ್ದಿದೆ. ಸರ್ಕಾರ, ಭದ್ರತಾ ಇಲಾಖೆಗಳು ಈ ಪ್ರಕಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆ ಮೂಲಕ ಮುಂದಾಗಬಹುದಾದ ಅನಾಹುತಗಳನ್ನು ತಡೆಯಬೇಕಿದೆ ಎಂದು @ Chief Minister of Karnataka ಅವರ ಸಾಮಾಜಿಕ ಜಾಲತಾಣ ಖಾತೆಗೆ ಟ್ಯಾಗ್​ ಮಾಡಿ, ದಿನಕರ್​ ಶೆಟ್ಟಿ ಅವರು ಒತ್ತಾಯಿಸಿದ್ದಾರೆ.

ದಿನಕರ್​ ಶೆಟ್ಟಿ ಫೇಸ್​ಬುಕ್​ ಪೋಸ್ಟ್ ಸಾರಾಂಶ ಹೀಗಿದೆ:
ಐ.ಎಸ್.ಐ.ಎಸ್ ISIS ಉಗ್ರ ಸಂಘಟನೆಯ “ವಯ್ಸ್ ಒಪ್ ಹಿಂದ್” VOICE OF HIND ಎಂಬ ಪತ್ರಿಕೆಯೊಂದು ನಮ್ಮ ಮುರ್ಡೇಶ್ವರ ದೇವಸ್ಥಾನದ ಶಿವನ ಮೂರ್ತಿಯನ್ನು ಕೆಡವುಂತೆ ತನ್ನ ಮುಖಪುಟದಲ್ಲಿ ಘೋಷಣೆ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದ ಮೂಲಕ ನನ್ನ ಗಮನಕ್ಕೆ ಬಂದಿದೆ. ಹಿಂದೂ ದೇವಾಲಯಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ನಮ್ಮ ಪಕ್ಷದ, ನನ್ನ ತತ್ವ ಸಿದ್ಧಾಂತಗಳಲೊಂದಾಗಿದೆ.

ಉಗ್ರ ಸಂಘಟನೆಯ ಹೆಡೆಮುರಿಕಟ್ಟಲು ನಮ್ಮ ರಕ್ಷಣಾ ಇಲಾಖೆಯು ಸದೃಢ ಮತ್ತು ಸಶಕ್ತವಾಗಿದೆ. ಇಂತಹ ಪೊಳ್ಳು ಬೆದರಿಕೆಗೆ ಹೆದರುವ ಆಡಳಿತ ವ್ಯವಸ್ಥೆ ಈಗಿಲ್ಲ. ಈ ಸಂಬಂಧ ಈಗಾಗಲೇ ಗೃಹ ಮಂತ್ರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲಾಗಿದ್ದು, ಶೀಘ್ರವೇ ಮುಖತಃ ಬೇಟಿಯಾಗಿ ಮುರ್ಡೇಶ್ವರ ದೇವಸ್ಥಾನದ ಸುತ್ತ ಮುತ್ತ ಹೆಚ್ಚಿನ ಭದ್ರತೆ ವದಗಿಸಲು ಕ್ರಮ ವಹಿಸಲಾಗುವುದು. Chief Minister of Karnataka