ಕೊರೊನಾ ಸೋಂಕು ಭೀತಿ: ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ವೈರಮುಡಿ ಮಹೋತ್ಸವ ಸರಳ ಆಚರಣೆಗೆ ನಿರ್ಧಾರ

|

Updated on: Mar 16, 2021 | 4:18 PM

ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿರುವ ಚೆಲುವನಾರಾಯಣ ಸ್ವಾಮಿಗೆ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಪುರಾತನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದ್ದ ವೈರಮುಡಿ ಉತ್ಸವ ಕಳೆದ ವರ್ಷ ಕೊರೊನಾದಿಂದಾಗಿ ನಿಂತಿತ್ತು.

ಕೊರೊನಾ ಸೋಂಕು ಭೀತಿ: ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ವೈರಮುಡಿ ಮಹೋತ್ಸವ ಸರಳ ಆಚರಣೆಗೆ ನಿರ್ಧಾರ
ಚೆಲುವನಾರಾಯಣ ಸ್ವಾಮಿ ದೇಗುಲ
Follow us on

ಮಂಡ್ಯ: ಜಿಲ್ಲೆಯ ಮೇಲುಕೋಟೆಯ ವಿಶ್ವ ಪ್ರಸಿದ್ಧ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಮಹೋತ್ಸವಕ್ಕೆ ಕೊರೊನಾ ವೈರಸ್ ಎರಡನೇ ಅಲೆಯ ಭೀತಿ ಎದುರಾಗಿದೆ. ಕಳೆದ ವರ್ಷ ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಮೇಲುಕೋಟೆಯ ವಿಶ್ವ ಪ್ರಸಿದ್ಧ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಮಹೋತ್ಸವವನ್ನು ರದ್ದುಪಡಿಸಿದ್ದ ಜಿಲ್ಲಾಡಳಿತ ಈ ಬಾರಿಯಾದರೂ ಅದ್ದೂರಿಯಾಗಿ ಉತ್ಸವ ಆಚರಣೆಗೆ ನಿರ್ಧರಿಸಿತ್ತು. ಆದರೆ ಬದಲಾದ ಪರಿಸ್ಥಿತಿಯಿಂದಾಗಿ ಸರ್ಕಾರದ ಮಾರ್ಗಸೂಚಿಯ ಅನ್ವಯ ಹತ್ತಾರು ಷರತ್ತುಗಳೊಂದಿಗೆ ಸರಳವಾಗಿ ವೈರಮುಡಿ ಉತ್ಸವ ಮಾಡಲು ಮುಂದಾಗಿದೆ. ಜೊತೆಗೆ ಕಳೆದ ವರ್ಷ ಉತ್ಸವ ಮಾಡಲು ಆಗದಿದ್ದಕ್ಕೆ ಪ್ರಾಯಶ್ಚಿತ್ತ ಉತ್ಸವ ನೆರವೇರಿಸಿ ನಂತರ ವೈರಮುಡಿ ಉತ್ಸವ ಆಚರಿಸಲು ನಿರ್ಧರಿಸಿದೆ.

ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿರುವ ಚೆಲುವನಾರಾಯಣ ಸ್ವಾಮಿಗೆ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಪುರಾತನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದ್ದ ವೈರಮುಡಿ ಉತ್ಸವ ಕಳೆದ ವರ್ಷ ಕೊರೊನಾದಿಂದಾಗಿ ನಿಂತಿತ್ತು. ಈ ವರ್ಷ ಕೊರೊನಾ ಆರ್ಭಟ ತಗ್ಗಿದೆ. ಹೀಗಾಗಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಬಹುದು ಎಂದುಕೊಂಡು ಸಿದ್ಧತೆ ಆರಂಭಿಸಿದ್ದ ಜಿಲ್ಲಾಡಳಿತಕ್ಕೆ ಸರ್ಕಾರದ ಹೊಸ ಮಾರ್ಗಸೂಚಿ  ಯೋಜನೆಯನ್ನು ಬದಲಿಸುವಂತೆ ಮಾಡಿದೆ.

ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿಯೇ ಈ ಬಾರಿಯ ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಹೊರಗಿನ ರಾಜ್ಯದ ಜನರಷ್ಟೇ ಅಲ್ಲ ಹೊರಗಿನ ಜಿಲ್ಲೆಯ ಜನರೂ ಬರುವಂತಿಲ್ಲ ಎಂಬ 14 ಷರತ್ತುಗಳನ್ನ ವಿಧಿಸುವ ಮೂಲಕ ಜಿಲ್ಲಾಡಳಿತ ಸರಳವಾಗಿ ವೈರಮುಡಿ ಉತ್ಸವ ಆಚರಣೆಗೆ ಮುಂದಾಗಿದೆ.

ಜಿಲ್ಲಾಡಳಿತದ ಮನವಿ
ಜಿಲ್ಲಾಡಳಿತಕ್ಕೆ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಸರಳವಾಗಿ ಉತ್ಸವ ಆಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಂತೆ ನಿನ್ನೆ (ಮಾರ್ಚ್ 15)  ಜಿಲ್ಲಾಧಿಕಾರಿ ಅಶ್ವಥಿ ಅಧಿಕಾರಿಗಳ ಸಭೆ ನಡೆಸುವ ಮೂಲಕ ಕೆಲವು ಷರತ್ತುಗಳೊಂದಿಗೆ ಈ ಬಾರಿ ಸರಳವಾಗಿ ಉತ್ಸವ ಆಚರಿಸಲು ನಿರ್ಣಯ ಪ್ರಕಟಿಸಿದ್ದಾರೆ. ಅದರಂತೆ ಉತ್ಸವದಲ್ಲಿ ಹೊರ ರಾಜ್ಯದ ಭಕ್ತರಿಗೆ ನಿರ್ಬಂಧ ವಿಧಿಸುವುದು. ಉತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಆರೋಗ್ಯ ಇಲಾಖೆಯ ವತಿಯಿಂದ ಸೀಲ್ ಹಾಕುವುದು. ಆರೋಗ್ಯ ಇಲಾಖೆಯ ಸೀಲ್ ಇದ್ದವರಿಗೆ ಮಾತ್ರ ದೇವಾಲಯದ ಒಳಗೆ ಪ್ರವೇಶ ನೀಡುವುದು. ದೇವಾಲಯದ ಒಳಗೆ 100 ಮಂದಿಗೆ ಅವಕಾಶ. ದೇವಸ್ಥಾನದ ಹೊರಭಾಗದಲ್ಲಿ 2 ಸಾವಿರ ಮಂದಿಗೆ ಮಾತ್ರ ಅವಕಾಶ. ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸುವವರು ಮಾತ್ರ ಪಾಲ್ಗೊಳ್ಳುವುದು. ಮಧ್ಯರಾತ್ರಿ 12 ಗಂಟೆಯವರೆ ಮಾತ್ರ ಉತ್ಸವದ ಮೆರವಣಿಗೆ ನಡೆಸುವುದು ಸೇರಿದಂತೆ ಹದಿನಾಲ್ಕು ಪ್ರಮುಖ ಷರತ್ತುಗಳೊಂದಿಗೆ ಸರಳವಾಗಿ ಆಚರಿಸಲು ಮುಂದಾಗಿದ್ದು,  ಇತರ ಊರುಗಳಿಂದ ಭಕ್ತರು ಆಗಮಿಸದಂತೆ  ಜಿಲ್ಲಾಡಳಿತ ಮನವಿ ಮಾಡಿದೆ.

ಇದನ್ನೂ ಓದಿ

ಕೊರೊನಾ ಎರಡನೇ ಅಲೆ ಕುರಿತು ಮೋದಿ ಸಭೆ; ಮುಖ್ಯಮಂತ್ರಿಗಳಿಗೆ ಕಠಿಣ ನಿರ್ಧಾರ ಕೈಗೊಳ್ಳಲು ಸಲಹೆ ಸಾಧ್ಯತೆ?

Penny Stocks: ಕೊರೊನಾ ಆತಂಕವಿದ್ದರೂ ಬಂಗಾರದ ಫಸಲು ನೀಡಿದ ಚಿಲ್ಲರೆ ಬೆಲೆಯ ಷೇರುಗಳು ಇವು..