ಯಡಿಯೂರಪ್ಪ ಸಿಎಂ ಆಗೋ ಮುನ್ನ ಪೂಜೆ ಸಲ್ಲಿಸಿದ್ದ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ಡಿಕೆಶಿ ಮನೇಲಿ ಪೂಜೆ!

ಡಿಕೆ ಶಿವಕುಮಾರ್ ಬೆಂಗಳೂರು ನಿವಾಸದಲ್ಲಿ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಪೂಜೆ ನಡೆದಿರುವುದು ಅವರ ಸಿಎಂ ಸ್ಥಾನದ ಆಕಾಂಕ್ಷೆಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗುವ ಮುನ್ನ ಇದೇ ದೇವರಿಗೆ ಪೂಜೆ ಸಲ್ಲಿಸಿದ್ದರು.

ಯಡಿಯೂರಪ್ಪ ಸಿಎಂ ಆಗೋ ಮುನ್ನ ಪೂಜೆ ಸಲ್ಲಿಸಿದ್ದ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ಡಿಕೆಶಿ ಮನೇಲಿ ಪೂಜೆ!
ಡಿಕೆ ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆ
Updated By: Ganapathi Sharma

Updated on: Nov 22, 2025 | 8:23 AM

ಹಾಸನ, ನವೆಂಬರ್ 22: ಕರ್ನಾಟಕ ಕಾಂಗ್ರೆಸ್​​ನಲ್ಲಿ (Congress) ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿರುವಂತೆಯೇ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದೇ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮನೆಯಲ್ಲಿ, ಹಾಸನದ ಪುರಾಣ ಪ್ರಸಿದ್ದ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಡಿಕೆ ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಐವರು ಪೂಜಾರಿಗಳಿಂದ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ವಿಶೇಷ ಪೂಜೆ ನೆರವೇರಿದೆ.

ಜೇನುಕಲ್ ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಆಗಿದ್ದ ಯಡಿಯೂರಪ್ಪ

ಜೇನುಕಲ್ ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದ ಯಡಿಯೂರಪ್ಪ (ಸಂಗ್ರಹ ಚಿತ್ರ)

ಈ ಹಿಂದೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮುನ್ನ ಹಾಸನದ ಜೇನುಕಲ್ ಸಿದ್ದೇಶ್ವರ ಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಋಷಿಮುನಿಗಳಾಗಿರುವ ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದರೆ ಇಷ್ಟಾರ್ಥ ಸಿದ್ದಿಸುವ ನಂಬಿಕೆ ಅನಾದಿ ಕಾಲದಿಂದಲೂ ಭಕ್ತರಲ್ಲಿದೆ.

ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇಗುಲದ ಧಾರ್ಮಿಕ ಮಹತ್ವ

ಪ್ರತೀ ಹುಣ್ಣಿಮೆಯಂದು ಲಕ್ಷಾಂತರ ಭಕ್ತರು ಸಿದ್ದೇಶ್ವರ ಸ್ವಾಮಿಗಳ ಪಾದುಕೆ ದರ್ಶನ ಪಡೆಯುತ್ತಾರೆ. ಈ ದೇಗುಲ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬೆಟ್ಟದ ಮೇಲಿದೆ. ಸಿದ್ದೇಶ್ವರ ಸ್ವಾಮಿಜಿಯವರ ಗದ್ದುಗೆಯಿಂದ ಪ್ರಸಾದ ಪಡೆದರೆ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಈ ಕ್ಷೇತ್ರಕ್ಕೆ ಬಂದು ಹೋದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು.

ಜುಲೈ26 ರಂದು ಡಿಸಿಎಂ ಡಿಕೆ ಶಿವಕುಮಾರ್ ಜೇನುಕಲ್ ಸಿದ್ದೇಶ್ವರ ಸ್ವಾಮೀಜಿಯವರ ಗದ್ದುಗೆ ದರ್ಶನ ಮಾಡಿ ಪೂಜೆ ಸಲ್ಲಿಸಿದ್ದರು. ಗದ್ದುಗೆ ಎದುರು ಏಕಾಂಗಿಯಾಗಿ ಕುಳಿತು ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: ಒಂದು ವಾರದಿಂದ ಡಿಸಿಎಂ ಟೆಂಪಲ್ ರನ್: ಸಿಎಂ ಗಾದಿಗಾಗಿ ರಹಸ್ಯ ಪೂಜೆ ಮಾಡಿದ್ರಾ ಡಿಕೆ ಶಿವಕುಮಾರ್?

ಜುಲೈ ತಿಂಗಳಲ್ಲಿ ರಾಜ್ಯದ ಅನೇಕ ದೇಗುಲಗಳಿಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್, ಜೇನುಕಲ್ ಸಿದ್ದೇಶ್ವರ ಸ್ವಾಮೀಜಿಯವರ ಗದ್ದುಗೆ ದರ್ಶನ ಮಾಡಿದ ನಂತರ ಮಾತನಾಡಿ, ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ‌ ಎಂದಿದ್ದರು. ರಾಜ್ಯಕ್ಕೆ ಮತ್ತು ಜನತೆಗೆ ನೆಮ್ಮದಿ, ಶಾಂತಿ ಸಿಗಲೆಂದು ಪ್ರಾರ್ಥಿಸಿರುವುದಾಗಿ ತಿಳಿಸಿದ್ದರು. ಆದರೆ, ಅವರು ಸಿಎಂ ಗಾದಿಗಾಗಿ ರಹಸ್ಯ ಪೂಜೆ ಮಾಡಿದ್ದರೇ ಎಂಬ ಪ್ರಶ್ನೆಗಳು ಅಂದು ಹುಟ್ಟಿಕೊಂಡಿದ್ದವು. ಇದೀಗ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವ ಹೊತ್ತಿನಲ್ಲಿ ಅದೇ ಜೇನುಕಲ್ ಸಿದ್ದೇಶ್ವರ ಸ್ವಾಮೀಜಿಯವರ ಪಾದುಕೆಯನ್ನು ಮನೆಗೇ ಕರೆಸಿಕೊಂಡು ಪೂಜೆ ಸಲ್ಲಿಸಿರುವುದು ಗಮನಾರ್ಹ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ