AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ 8 ಜಿಲ್ಲೆಗಳಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ರಾಜ್ಯದ ಸರಾಸರಿ ಪ್ರಮಾಣಕ್ಕಿಂತಲೂ ಕಡಿಮೆ

ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ.ಎಂ.ಕೆ ಸುದರ್ಶನ್ ಹೇಳುವಂತೆ ಚೇತರಿಸಿಕೊಳ್ಳುವವರ ಪ್ರಮಾಣ ಅನೇಕ ಸಂಗತಿಗಳ ಮೇಲೆ ಅವಲಂಬಿತವಾಗಿದೆ. ಕೊರೊನಾ ಸೋಂಕಿನ ಗಂಭೀರತೆ, ಸೋಂಕಿತರು ದಾಖಲಾಗುವ ಸಮಯ, ಚಿಕಿತ್ಸಾ ವಿಧಾನ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆ ಇವೆಲ್ಲವೂ ಪ್ರಮುಖವಾಗುತ್ತವೆ.

ಕರ್ನಾಟಕದ 8 ಜಿಲ್ಲೆಗಳಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ರಾಜ್ಯದ ಸರಾಸರಿ ಪ್ರಮಾಣಕ್ಕಿಂತಲೂ ಕಡಿಮೆ
ಸಾಂದರ್ಭಿಕ ಚಿತ್ರ
Skanda
|

Updated on: May 27, 2021 | 8:48 AM

Share

ಬೆಂಗಳೂರು: ಕೊರೊನಾ ಎರಡನೇ ಅಲೆಯ ಆಘಾತಕ್ಕೆ ಸಿಲುಕಿರುವ ಕರ್ನಾಟಕ ಕೊಂಚ ಚೇತರಿಕೆ ಕಾಣುತ್ತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.81ಕ್ಕೆ ತಲುಪಿದೆಯಾದರೂ ಬೆಳಗಾವಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ 8 ಜಿಲ್ಲೆಗಳಲ್ಲಿ ಚೇತರಿಕೆ ಪ್ರಮಾಣ ತೀರಾ ಕಡಿಮೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದೆರೆಡು ವಾರಗಳಲ್ಲಿ ಹೊಸದಾಗಿ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಕಂಡಿರುವುದು ಚೇತರಿಕೆ ಪ್ರಮಾಣದ ಮೇಲೆ ನೇರ ಪರಿಣಾಮ ಬೀರಿದಂತೆ ಕಾಣುತ್ತಿದೆ.

ರಾಜ್ಯದಲ್ಲಿ ಅತಿ ಕಡಿಮೆ ಚೇತರಿಕೆ ಪ್ರಮಾಣವನ್ನು ಬೆಳಗಾವಿ ಜಿಲ್ಲೆ ದಾಖಲಿಸಿದ್ದು ಮೇ 24ರ ಅಂಕಿ ಅಂಶಗಳ ಪ್ರಕಾರ ಕೇವಲ ಶೇ.69ರಷ್ಟು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ.69.8 ಹಾಗೂ ಬೆಂಗಳೂರು ನಗರದಲ್ಲಿ ಶೇ.79 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗುತ್ತಿರುವುದು ಬೀದರ್ ಜಿಲ್ಲೆಯಲ್ಲಾಗಿದ್ದು ಶೇ.95.4ರಷ್ಟು ಸೋಂಕಿತರು ಕೊರೊನಾವನ್ನು ಮಣಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದರೂ ಚೇತರಿಕೆ ಪ್ರಮಾಣ ಆಶಾದಾಯಕವಾಗಿದೆ. ಮೈಸೂರಿನಲ್ಲಿ ಶೇ.86 ಹಾಗೂ ಹಾಸನದಲ್ಲಿ ಶೇ.80ಮಂದಿ ಕೊರೊನಾ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಸೋಂಕಿತರ ಸಂಖ್ಯೆ ಹೆಚ್ಚಿದಂತೆ ಗುಣಮುಖರಾಗುವವರ ಪ್ರಮಾಣ ಕಡಿಮೆಯಾಗುತ್ತದೆ ಎನ್ನುವ ವಾದಕ್ಕೆ ಇ ಎರಡು ಜಿಲ್ಲೆಗಳು ಅಪವಾದ ಎಂಬಂತೆ ಕಂಡುಬರುತ್ತಿವೆ.

ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ.ಎಂ.ಕೆ ಸುದರ್ಶನ್ ಹೇಳುವಂತೆ ಚೇತರಿಸಿಕೊಳ್ಳುವವರ ಪ್ರಮಾಣ ಅನೇಕ ಸಂಗತಿಗಳ ಮೇಲೆ ಅವಲಂಬಿತವಾಗಿದೆ. ಕೊರೊನಾ ಸೋಂಕಿನ ಗಂಭೀರತೆ, ಸೋಂಕಿತರು ದಾಖಲಾಗುವ ಸಮಯ, ಚಿಕಿತ್ಸಾ ವಿಧಾನ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆ ಇವೆಲ್ಲವೂ ಪ್ರಮುಖವಾಗುತ್ತವೆ.

ಮೇ 24ರ ಅಂಕಿ ಅಂಶಗಳ ಪ್ರಕಾರ ಬೆಳಗಾವಿಯಲ್ಲಿ 17,441 ಸಕ್ರಿಯ ಪ್ರಕರಣಗಳಿದ್ದು ಒಟ್ಟು 57,846 ಪ್ರಕರಣಗಳ ಪೈಕಿ 39,946ಜನ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 459 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಾಂತ್ ಮುನಿಯಾಲ್ ಅವರು ಹೇಳುವ ಪ್ರಕಾರ, ಮೇ 24ಕ್ಕೆ ಸರಿಯಾಗಿ ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 7,159 ಪ್ರಕರಣಗಳು ಹೊಸದಾಗಿ ದಾಖಲಾಗಿದ್ದು, ಸೋಂಕಿತರ ಪ್ರಮಾಣ ಏಕಾಏಕಿ ಏರಿಕೆಯಾಗುತ್ತಿರುವುದು ಚೇತರಿಕೆ ಪ್ರಮಾಣ ಇಳಿಮುಖವಾಗಲು ಕಾರಣವಾಗಿದೆ.

ಅಲ್ಲದೇ, ಕೊರೊನಾದಿಂದ ಮೃತಪಟ್ಟವರ ವಿವರ ದಾಖಲಾಗುವುದು ತಡವಾಗುತ್ತಿರುವುದೂ ಚೇತರಿಕೆ ಪ್ರಮಾಣದ ಮೇಲೆ ಪರಿಣಾಮ ಬೀರುತ್ತಿದೆ. ಏಕೆಂದರೆ, ಮೃತಪಟ್ಟ ಸೋಂಕಿತರ ಹೆಸರನ್ನು ದಾಖಲಿಸುವ ತನಕವೂ ಅವರು ಸಕ್ರಿಯ ಪ್ರಕರಣದಡಿಯಲ್ಲೇ ಉಳಿಯುವುದರಿಂದ ಹೆಚ್ಚು ಸೋಂಕಿತರು ಇದ್ದಾರೆ ಎಂದು ಅಂಕಿ ಅಂಶ ಸೂಚಿಸುತ್ತದೆ. ಹೀಗಾಗಿ ಈ ಎಲ್ಲಾ ಕಾರಣಗಳು ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿರುವಂತೆ ತೋರಿಸಲು ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಹದಿನೈದು ದಿನದ ಅಂತರದಲ್ಲಿ ಬೆಳಗಾವಿಯ ಒಂದೇ ಕುಟುಂಬದ ಮೂವರು ಸಹೋದರರು ಕೊರೊನಾಗೆ ಬಲಿ 

ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ; ಗ್ರಾಮ ಪಂಚಾಯತಿ ಅಧಿಕಾರಿಗಳ ಜೊತೆ ಬಿ.ಎಸ್. ಯಡಿಯೂರಪ್ಪ ಸಂವಾದ