
ಗದಗ: ನಿಂತ ನೆಲವೇ ಕುಸಿದುಬೀಳುತ್ತಿದೆ. ಏಕಾಏಕಿ ಸಂಭವಿಸುತ್ತಿರುವ ದುರಂತದ ಪರಿಣಾಮ ಅಲ್ಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಅದ್ರಲ್ಲೂ ಒಬ್ಬ ಯುವಕ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದು, ಜನ ಊರು ತೊರೆಯುವಂತಾ ಪರಿಸ್ಥಿತಿ ಗದಗದಲ್ಲಿ ನಿರ್ಮಾಣವಾಗಿದೆ.
ಕಂಡ ಕಂಡಲ್ಲಿ ಕುಸಿಯುತ್ತಿದೆ ಭೂಮಿ..!
ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 8 ಬಾರಿ ಭೂಕುಸಿತವಾಗಿದ್ದು, ನರಗುಂದದ ಜನ ಬೆಚ್ಚಿಬಿದ್ದಿದ್ದಾರೆ. ಪಟ್ಟಣದ 3 ಓಣಿಯ ಜನರಿಗೆ ಭೂಕಂಟಕ ಶುರುವಾಗಿದೆ. ಸತತ ಭೂಕುಸಿತದಿಂದ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, ನಿಂತರೂ ಕಂಟಕ, ಕುಂತರೂ ಆತಂಕ ಅನ್ನುವಂತಾಗಿದೆ.
ಒಂದೇ ತಿಂಗಳಲ್ಲಿ 8 ಬಾರಿ ಭೂಮಿ ಬಾಯಿಬಿಟ್ಟಿದ್ದರೂ ಪ್ರಕೃತಿಗೆ ಸಮಾಧಾನವಾಗಿಲ್ಲ. ಈಗಲೂ ನಿಂತ ನೆಲ ಕುಸಿಯುತ್ತಲೇ ಇದೆ. ಹೀಗೆ ಮತ್ತೆ ನೆಲ ಕುಸಿದಿದ್ದು, ನಬೀಸಾಬ್ ಮೊಕಾಶಿ ಎಂಬುವವರ ಮನೆಯಲ್ಲಿ ದುರಂತ ನಡೆದಿದೆ. ಆದ್ರೆ, ಅದೃಷ್ಟವಶಾತ್ ಅಲ್ಲೇ ಇದ್ದ ನಬೀಸಾಬ್ ಪುತ್ರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನರಗುಂದ ಪಟ್ಟಣದ ಕಸಬಾ, ಅರ್ಭಾಣ ಸೇರಿ ಹಲವು ಓಣಿಗಳಲ್ಲಿ ಭೂಮಿ ಕುಸಿಯುತ್ತಿದೆ. ಮಾತ್ರವಲ್ಲ ಮನೆಗಳ ಗೋಡೆ ಬಿರುಕು ಬಿಡುತ್ತಿದೆ. ಗಣಿ ಇಲಾಖೆ ಅಧಿಕಾರಿಗಳು ಅಧ್ಯಯನ ಮಾಡಿದ್ದರೂ, ನಿಖರ ಕಾರಣ ಮಾತ್ರ ಹೇಳುತ್ತಿಲ್ಲ. ಪ್ರಕರಣ ಗಂಭೀರವಾಗಿ ಪರಿಗಣಿಸಿ ಮಣ್ಣು ಪರೀಕ್ಷೆ ಮಾಡಬೇಕು. ಪದೇ ಪದೆ ಭೂ ಕುಸಿತವಾಗಲು ಕಾರಣ ತಿಳಿಸಬೇಕು ಅಂತಾ ಜನ ಒತ್ತಾಯಿಸುತ್ತಿದ್ದಾರೆ.
Published On - 6:45 am, Thu, 21 November 19