ಡಿಕೆ ಶಿವಕುಮಾರ್ ಮನಸ್ಥಿತಿಯ ನಾಯಕರಿಂದ ರಾಜ್ಯ ಕಷ್ಟಕ್ಕೆ ಸಿಲುಕಿದೆ; ರೈತ ಮುಖಂಡ ನಂಜುಂಡೇಗೌಡ ವಾಗ್ದಾಳಿ

| Updated By: ಗಣಪತಿ ಶರ್ಮ

Updated on: Sep 04, 2023 | 4:37 PM

Farmers protest intensified in Mandya; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಅನ್ಯಾಯ ಆದಾಗ ನಮ್ಮ ಪರ ಧ್ವನಿ ಎತ್ತಬೇಕು. ಅವರ ಹೇಳಿಕೆ ಉಪ ಮುಖ್ಯಮಂತ್ರಿ ಸ್ಥಾನಕ್ಕೇ ಅಪಮಾನ. ಅಧಿಕಾರದ ಗುಂಗಿನಿಂದ ಡಿಕೆ ಶಿವಕುಮಾರ್ ಹೊರಬೇಕು. ನಿಮ್ಮ ಸವಾಲಿಗೆ ಮಂಡ್ಯ ರೈತರು ಎದುರಲ್ಲ ಎಂದು ನಂಜುಂಡೇಗೌಡ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಮನಸ್ಥಿತಿಯ ನಾಯಕರಿಂದ ರಾಜ್ಯ ಕಷ್ಟಕ್ಕೆ ಸಿಲುಕಿದೆ; ರೈತ ಮುಖಂಡ ನಂಜುಂಡೇಗೌಡ ವಾಗ್ದಾಳಿ
ಡಿಕೆ ಶಿವಕುಮಾರ್
Follow us on

ಮಂಡ್ಯ, ಸೆಪ್ಟೆಂಬರ್ 4: ಕಾವೇರಿ ನದಿ ನೀರನ್ನು (Cauvery Water) ತಮಿಳುನಾಡಿಗೆ ಹರಿಸುವುದರ ವಿರುದ್ಧ ಮಂಡ್ಯದಲ್ಲಿ ರೈತರ ಪ್ರತಿಭಟನೆ ಕಾವೇರಿದೆ. ಈ ಮಧ್ಯೆ, ಮೇಕೆದಾಟು ಪಾದಯಾತ್ರೆಯಲ್ಲಿ ರೈತ ಸಂಘಟನೆಗಳು ಯಾಕೆ ಭಾಗವಹಿಸಲಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ರೈತ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ವಿಚಾರವಾಗಿ ಉಪ ಮುಖ್ಯಮಂತ್ರಿ ವಿರುದ್ಧ ರೈತ ಮುಖಂಡ ನಂಜುಂಡೇಗೌಡ (Nanjundegowda) ವಾಗ್ದಾಳಿ ‌ನಡೆಸಿದ್ದು, ಡಿಕೆ ಶಿವಕುಮಾರ್ ಅವರಂಥ ಮನಸ್ಥಿತಿಯ ನಾಯಕರು ಇರುವುದರಿಂದಲೇ ನಮ್ಮ ರಾಜ್ಯ ಕಷ್ಟಕ್ಕೆ ಸಿಲುಕಿರುವುದು ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ನಂಜುಂಡೇಗೌಡ, 1989 ರಿಂದಲೂ ಮಂಡ್ಯದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಆಗ ಡಿಕೆ ಶಿವಕುಮಾರ್ ಎಲ್ಲಿ ಇದ್ದರು? ಇಂತಹ ಮನಸ್ಥಿತಿಯ ನಾಯಕರು ಇರುವುದರಿಂದ ನಮ್ಮ ರಾಜ್ಯ ಕಷ್ಟಕ್ಕೆ ಸಿಲುಕಿರುವುದು. ಮಂಡ್ಯ ಜಿಲ್ಲೆಯ ರೈತರು ಸಂಕಷ್ಟದಲ್ಲಿ ಇದ್ದಾರೆ. ರೈತರು ಸಂಕಷ್ಟದಲ್ಲಿ ಇರುವಾಗ ಇಂತಹ ಸವಾಲು ಹಾಕುವುದು ಅವರನ್ನು ಅವಮಾನ ಮಾಡಿದಂತೆ. ಕಾವೇರಿ ವಿಚಾರದಲ್ಲಿ ಅನ್ಯಾಯ ಆಗಲು ಇಂತಹ ನಾಯಕರು ಕಾರಣ. ಮಂಡ್ಯ ರೈತರಿಗೆ ವಿಷಕೊಡುವ ಕೆಲಸವನ್ನು ಡಿಕೆ ಶಿವಕುಮಾರ್ ಮಾಡಿದ್ದಾರೆ. ಚಳವಳಿಯನ್ನ ವಿಷಯಾಂತರ ಮಾಡುತ್ತಿದ್ದಾರೆ. ಪ್ರಾಧಿಕಾರದ ಮುಂದೆ ಮಾಹಿತಿ ಕೊಡಲು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ವಿರುದ್ಧ ಕೂಡ ಹೋರಾಟಕ್ಕೆ ನಾವು ಸಿದ್ದರಿದ್ದೇವೆ. ಡಿಕೆ ಶಿವಕುಮಾರ್ ಹೇಳಿಕೆ ಮೂರ್ಖತನದಿಂದ ಕೂಡಿದೆ. ನೀರಿನ ಬಗ್ಗೆ ಮನವರಿಕೆ ಮಾಡುವುದು ಅವರ ಜವಾಬ್ದಾರಿ. ಅದರಲ್ಲಿ ವಿಫಲರಾದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಅನ್ಯಾಯ ಆದಾಗ ನಮ್ಮ ಪರ ಧ್ವನಿ ಎತ್ತಬೇಕು. ಅವರ ಹೇಳಿಕೆ ಉಪ ಮುಖ್ಯಮಂತ್ರಿ ಸ್ಥಾನಕ್ಕೇ ಅಪಮಾನ. ಅಧಿಕಾರದ ಗುಂಗಿನಿಂದ ಡಿಕೆ ಶಿವಕುಮಾರ್ ಹೊರಬೇಕು. ನಿಮ್ಮ ಸವಾಲಿಗೆ ಮಂಡ್ಯ ರೈತರು ಎದುರಲ್ಲ ಎಂದು ನಂಜುಂಡೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ವಿರುದ್ಧ ಮಂಡ್ಯದಲ್ಲಿ ಭುಗಿಲೆದ್ದ ಕಾವೇರಿ ಕಿಚ್ಚು, ಕಾನೂನು ಹೋರಾಟಕ್ಕೆ ಮುಂದಾದ ರೈತರು

ಈ ಮಧ್ಯೆ, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ರೈತರ ಪ್ರತಿಭಟನೆ ಭುಗಿಲೆದ್ದಿದೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್​ಎಸ್ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಇದೀಗ ಅಂತಿಮವಾಗಿ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.

ಕನ್ನಡಸೇನೆ ಕಾರ್ಯಕರ್ತರು ಭಾನುವಾರ ಮಂಡ್ಯದ ಸಂಜಯ್ ಸರ್ಕಲ್​ನಲ್ಲಿ ತಲೆಯ ಮೇಲೆ ಚಪ್ಪಡಿ ಕಲ್ಲು ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ