ಕೊವಿಡ್ ಸಭೆ; ಬೆಳಗಾವಿಗೆ ತೆರಳಲಿರುವ ಸಿಎಂ ಯಡಿಯೂರಪ್ಪಗೆ ತಟ್ಟಲಿದೆ ರೈತ ಮುಖಂಡರ ಪ್ರತಿಭಟನೆ ಬಿಸಿ

ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಸಭೆ ನಡೆಸುತ್ತಿರುವಾಗ ಇದೇ ವೇಳೆ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ರೈತ ಮುಖಂಡರು ನಿರ್ಧರಿಸಿದ್ದಾರೆ. ಹೀಗಾಗಿ ಸಿಎಂಗೆ ರೈತರ ಪ್ರತಿಭಟನಾ ಬಿಸಿ ತಟ್ಟಲಿದೆ. ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಮುಖಂಡರು ಇಂದು ಪ್ರತಿಭಟನೆ ನಡೆಸಲಿದ್ದಾರೆ.

ಕೊವಿಡ್ ಸಭೆ; ಬೆಳಗಾವಿಗೆ ತೆರಳಲಿರುವ ಸಿಎಂ ಯಡಿಯೂರಪ್ಪಗೆ ತಟ್ಟಲಿದೆ ರೈತ ಮುಖಂಡರ ಪ್ರತಿಭಟನೆ ಬಿಸಿ
ಬಿ.ಎಸ್​. ಯಡಿಯೂರಪ್ಪ (ಸಂಗ್ರಹ ಚಿತ್ರ)
Edited By: ಆಯೇಷಾ ಬಾನು

Updated on: Jun 04, 2021 | 10:59 AM

ಬೆಳಗಾವಿ: ಕೊವಿಡ್ ನಿರ್ವಹಣೆ, ಅಭಿವೃದ್ಧಿ ಕೆಲಸಗಳ ಕುರಿತು ಸಭೆ ಹಿನ್ನೆಲೆ ಇಂದು ಸಿಎಂ B.S.ಯಡಿಯೂರಪ್ಪ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಈ ಬಗ್ಗೆ ಸಭೆ ನಡೆಸಲಿದ್ದಾರೆ. ಹೀಗಾಗಿ ಇದೇ ವೇಳೆ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ರೈತ ಮುಖಂಡರು ನಿರ್ಧರಿಸಿದ್ದಾರೆ.

ಸಿಎಂ ಯಡಿಯೂರಪ್ಪ ಇಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೊರಟು ಬೆಳಗಾವಿಗೆ ತಲುಪಲಿದ್ದಾರೆ. ಹಾಗೂ ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಮಹಾಮಾರಿ ಕೊರೊನಾ ನಿರ್ವಹಣೆ ಮತ್ತು ಅಭಿವೃದ್ಧಿ ಕೆಲಸಗಳ ಕುರಿತು ಸಿಎಂ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಸಭೆಯ ನಂತರ ಸುವರ್ಣ ಸೌಧದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 1.30ಕ್ಕೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಲಿದ್ದಾರೆ.

ಸಿಎಂಗೆ ತಟ್ಟಲಿದೆ ರೈತರ ಪ್ರತಿಭಟನಾ ಬಿಸಿ
ಇನ್ನು ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಸಭೆ ನಡೆಸುತ್ತಿರುವಾಗ ಇದೇ ವೇಳೆ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ರೈತ ಮುಖಂಡರು ನಿರ್ಧರಿಸಿದ್ದಾರೆ. ಹೀಗಾಗಿ ಸಿಎಂಗೆ ರೈತರ ಪ್ರತಿಭಟನಾ ಬಿಸಿ ತಟ್ಟಲಿದೆ. ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಮುಖಂಡರು ಇಂದು ಪ್ರತಿಭಟನೆ ನಡೆಸಲಿದ್ದಾರೆ.

ಕಬ್ಬಿನ ಬಾಕಿ ಬಿಲ್ ಮತ್ತು ರೈತರ ಸಾಲ ವಸೂಲಿ ನಿಲ್ಲಿಸಬೇಕು. ತರಕಾರಿ ಬೆಳೆಗೆ ಹೆಕ್ಟೇರ್ಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ತಕ್ಷಣ ಪ್ರತಿ ಗ್ರಾಮದಲ್ಲಿ ವ್ಯಾಕ್ಸಿನ್ ನೀಡಬೇಕು. ಕೊರೊನಾದಿಂದ ಮೃತಪಟ್ಟ ರೈತರಿಗೆ ಹತ್ತು ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ರೈತ ಮುಖಂಡ‌ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಸುವರ್ಣ ಸೌಧದ ಮುಂಭಾಗ ಪೊಲೀಸ್ ಬಿಗಿ ಭದ್ರತೆ
ಇನ್ನು ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸುವರ್ಣ ಸೌಧದ ಮುಂಭಾಗ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರೈತರು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನಲೆ ಭದ್ರತೆ ಹೆಚ್ಚಿಸಲಾಗಿದೆ. ಸುವರ್ಣ ಸೌಧದ ಮುಂದೆ 116 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಓರ್ವ ಎಸಿಪಿ, ಇಬ್ಬರು ಸಿಪಿಐ, ಆರು ಜನ ಪಿಎಸ್ಐ ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಸುವರ್ಣ ಸೌಧದ ಎದುರು ರೈತ ಮುಖಂಡರ ಹೈಡ್ರಾಮಾ ಶುರುವಾಗಿದ್ದು ಒಬ್ಬೊಬ್ಬರಾಗಿ ಸುವರ್ಣ ಸೌಧದತ್ತ ಆಗಮಿಸುತ್ತಿದ್ದಾರೆ. ಹೀಗಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಕೊರೊನಾ ಮೂರನೇ ಅಲೆ, ಸರ್ಕಾರದ ಪ್ಯಾಕೇಜ್, ಷೇರು ಮಾರುಕಟ್ಟೆ ತನಕ ಮುಖ್ಯ ಆರ್ಥಿಕ ಸಲಹೆಗಾರರು ಹೇಳಿದ್ದೇನು?

Published On - 8:14 am, Fri, 4 June 21

Loading...
Unable to load recommendations.
Follow Us