ಒಂದೇ ದಿನ 5 ಪ್ರತ್ಯೇಕ ಅಪಘಾತ, ರಸ್ತೆ ದಾಟುತ್ತಿದ್ದ ಅಂಧ ದಂಪತಿ ಸೇರಿದಂತೆ ಆರು ಮಂದಿ ಸಾವು

| Updated By: ವಿವೇಕ ಬಿರಾದಾರ

Updated on: Feb 23, 2024 | 1:41 PM

ಕರ್ನಾಟಕದಲ್ಲಿ ಇಂದು (ಫೆ.23) ಒಂದು ನಾಲ್ಕು ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಐವರು ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ದಾಟುತ್ತಿದ್ದ ಅಂಧ ದಂಪತಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಒಂದೇ ದಿನ 5 ಪ್ರತ್ಯೇಕ ಅಪಘಾತ, ರಸ್ತೆ ದಾಟುತ್ತಿದ್ದ ಅಂಧ ದಂಪತಿ ಸೇರಿದಂತೆ ಆರು ಮಂದಿ ಸಾವು
ಮೃತ ಅಂಧ ದಂಪತಿಗಳು
Follow us on

ನೆಲಮಂಗಲ ಫೆಬ್ರವರಿ 23: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಯಂಟಗಾನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 (National Highway 75) ದಾಟುತ್ತಿದ್ದ ಅಂಧ ದಂಪತಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಶ್ರೀಧರ್ (52), ಅರ್ಚನಾ(35) ಮೃತ ಅಂಧ ದಂಪತಿ. ಘಟನೆಯಲ್ಲಿ ಬೈಕ್ ಸವಾರನಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​ಗೆ ಲಾರಿ ಡಿಕ್ಕಿ, ಸಾವರ ಸ್ಥಳದಲ್ಲೆ ಸಾವು

ಮತ್ತೊಂದು ಪ್ರಕರಣದಲ್ಲಿ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ದಾಬಸ್ ಪೇಟೆಯಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರದೀಪ್ (25) ಮೃತ ದುರ್ದೈವಿ. ಅಪಘಾತ ಬಳಿಕ ಸ್ಥಳದಲ್ಲೆ ಲಾರಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್​ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಯಾದಗಿರಿ: ಸುರಪುರ ತಾಲೂಕಿನ ಕೆಂಭಾವಿ ಹೊರವಲಯದಲ್ಲಿ ರಸ್ತೆ ಬದಿ ನಿಂತಿದ್ದ ಅಕ್ರಮ ಮರಳು ಸಾಗಾಟದ ಟಿಪ್ಪರ್​ಗೆ ಡಿಕ್ಕಿ ಹೊಡೆದ ಪರಿಣಮಾ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ​ಆಲಾಳ ಗ್ರಾಮದ ನಿವಾಸಿ ಶ್ರೀಶೈಲ (40) ಮೃತ ದುರ್ದೈವಿ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಸಾವಿನ ಹೆದ್ದಾರಿಯಾದ ಬೆಂಗಳೂರು ಹೈದರಾಬಾದ್ ರಸ್ತೆ: ಒಂದೇ ವರ್ಷದಲ್ಲಿ 76 ಅಪಘಾತ, 36 ಸಾವು

ಆಟೋ ಪಲ್ಟಿಯಾಗಿ ವೃದ್ಧೆ ದುರ್ಮರಣ, ಐವರಿಗೆ ಗಂಭೀರ ಗಾಯ

ಕಲಬುರಗಿ: ಆಟೋ ಪಲ್ಟಿಯಾಗಿ ವೃದ್ಧೆ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಫಜಲಪುರ ತಾಲೂಕಿನ ಸೊನ್ನ ಕ್ರಾಸ್ ಬಳಿ ನಡೆದಿದೆ. ಆಟೋದಲ್ಲಿದ್ದ ವೃದ್ಧೆ ಕಲ್ಲವ್ವ ಪಾಣೆಗಾರ್ (60) ಮೃತ ದುರ್ದೈವಿ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಒಂದೇ ಆಟೋದಲ್ಲಿ 15 ಜನ ಕೂಲಿ ಕೆಲಸಕ್ಕಾಗಿ ಸಿಂದಗಿ ತಾಲೂಕಿನ ಕುಮಸಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಫಜಲಪುರ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಕಾರು ಡಿಕ್ಕಿ ಬೈಕ್‌ನಲ್ಲಿದ್ದ ಮಹಿಳೆ ಸಾವು

ತುಮಕೂರು: ಕೊರಟಗೆರೆ ತಾಲೂಕಿನ ತುಂಬಾಡಿ ಬಳಿ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಸಿದ್ದಮ್ಮ (65) ಮೃತ ದುರ್ದೈವಿ. ದೇವರಾಜ್‌ ಎಂಬುವವರಿಗೆ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ