Vaccination: ಜೂನ್​ 21ರಿಂದ ವ್ಯಾಕ್ಸಿನೇಶನ್​​​ ಮೇಳ, ಸೋಮವಾರ 5-7 ಲಕ್ಷ ಜನರಿಗೆ ಲಸಿಕೆ ಗುರಿ -ಆರೋಗ್ಯ ಸಚಿವ ಡಾ. ಕೆ. ಸುಧಾಕರ್

Dr K Sudhakar: 5 ಕ್ಕಿಂತ ಕಡಿಮೆ ಪಾಸಿಟಿವ್ ರೇಟ್ ಇರೊ ಜಿಲ್ಲೆಗಳು 13 ಇವೆ. ಇನ್ನು, 5ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರೊ ಜಿಲ್ಲೆಗಳೂ 13 ಇವೆ. ಮೈಸೂರು ಜಿಲ್ಲೆಯಲ್ಲಿ ಮಾತ್ರ ಶೇ. 10 ಕ್ಕಿಂತ ಹೆಚ್ಚು ಪಾಸಿಟಿವ್ ದರ ಇದೆ. ಕೊರೊನಾ ಕೇಸ್​ ಹೆಚ್ಚಿರುವ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇವೆ. ತಜ್ಞರು ಈ ಬಗ್ಗೆ ಸಲಹೆ ನೀಡಿದ್ದಾರೆ, ಅದರಂತೆ ಚರ್ಚಿಸುತ್ತೇವೆ ಎಂದರು.

Vaccination: ಜೂನ್​ 21ರಿಂದ ವ್ಯಾಕ್ಸಿನೇಶನ್​​​ ಮೇಳ, ಸೋಮವಾರ 5-7 ಲಕ್ಷ ಜನರಿಗೆ ಲಸಿಕೆ ಗುರಿ -ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ
Edited By: ಸಾಧು ಶ್ರೀನಾಥ್​

Updated on: Jun 19, 2021 | 5:49 PM

ಬೆಂಗಳೂರು: ಕೋವಿಡ್ ಸ್ಥಿತಿಗತಿ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಇದೀಗತಾನೆ ಆರೋಗ್ಯ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಜಾರಿಗೊಳಿಸಿದ್ದ ಲಾಕ್​ಡೌನ್ ಇಂದಿಗೆ ಮುಗಿಯುತ್ತಿದೆ. ಹಾಗಾಗಿ ಕೊರೊನಾ ನಿರ್ಬಂಧಗಳನ್ನು ಇನ್ನಷ್ಟು ಸಡಿಲಗೊಳಿಸುವ ಕುರಿತಂತೆ ಇಂದು ಸಿಎಂ ಜೊತೆಗೆ ಸಚಿವ ಡಾ.ಕೆ. ಸುಧಾಕರ್ ಮಾತುಕತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವಾಭಾವಿಯಾಗಿ ಆರೋಗ್ಯ ಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಅವರು ಸಮಾಲೋಚನೆ ನಡೆಸಿದರು. ಈ ಮಧ್ಯೆ, ಲಘು ಸುದ್ದಿಗೋಷ್ಠಿಯನ್ನೂ ನಡೆಸಿದರು. ಜಿಲ್ಲಾವಾರು ಪಾಸಿಟಿವಿಟಿ ದರ, ಬೆಡ್ ಗಳ ಲಭ್ಯತೆ‌, ಮರಣ ಪ್ರಮಾಣ, ಸೋಂಕು ನಿಯಂತ್ರಣಾ ಕ್ರಮಗಳ ಕುರಿತಂತೆ ಮಾಹಿತಿ ಪಡೆದರು. ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಆಯುಕ್ತ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ತಜ್ಞರ ಜೊತೆ ಚರ್ಚೆ ಬಳಿಕ ಸಚಿವ ಸುಧಾಕರ್ ಸುದ್ದಿಗೋಷ್ಠಿ ನಡೆಸಿದರು.

ಲಾಕ್‌ಡೌನ್ ಸಡಿಲಿಕೆ ಬಗ್ಗೆ ಇಂದು ರಾತ್ರಿ ಸಿಎಂ ಅಂತಿಮ ನಿರ್ಧಾರ ಲಾಕ್‌ಡೌನ್ ಹಂತಹಂತವಾಗಿ ಸಡಿಲಿಕೆ ಮಾಡಲು ಚಿಂತನೆ ನಡೆಸಿದ್ದೇವೆ. ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ. ಲಾಕ್‌ಡೌನ್ ಸಡಿಲಿಕೆ ಬಗ್ಗೆ ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್​ ಹೇಳಿದರು.

ಈ ಮಧ್ಯೆ, ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು, ರಾಜ್ಯದಲ್ಲಿ ಮತ್ತಷ್ಟು ಅನ್‌ಲಾಕ್ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಸಭೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ‌, ಆರೋಗ್ಯ ಸಚಿವ ಡಾ. ಸುಧಾಕರ್, ಸಚಿವರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ, ಸಿಎಸ್ ರವಿಕುಮಾರ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಜೂನ್​ 21ರಂದು ವ್ಯಾಕ್ಸಿನೇಶನ್​ ಮೇಳ ಆರಂಭಿಸುತ್ತೇವೆ. 18ರಿಂದ 45ವರ್ಷದವರಿಗೆ ವ್ಯಾಕ್ಸಿನ್​ ಹಾಕುವ ಗುರಿಯಿದೆ. ಸೋಮವಾರ ಅಂದಾಜು 5-7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಲಸಿಕೆ ಎರಡು ಡೋಸ್ ಪಡೆದವರಿಗೆ ಯಾವುದೇ ಸಮಸ್ಯೆ ಇರೋದಿಲ್ಲ. ಕೊರೊನಾದ ಯಾವುದೇ ರೂಪಾಂತರಿ ವೈರಾಣುಯೂ ಲಸಿಕೆ ಪಡೆದವರಿಗೆ ಹೆಚ್ಚು ಸಮಸ್ಯೆ ಮಾಡಿಲ್ಲ ಎಂದು ಅವರು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಮಾತ್ರ ಶೇ. 10 ಕ್ಕಿಂತ ಹೆಚ್ಚು ಪಾಸಿಟಿವ್ ದರ
5 ಕ್ಕಿಂತ ಕಡಿಮೆ ಪಾಸಿಟಿವ್ ರೇಟ್ ಇರೊ ಜಿಲ್ಲೆಗಳು 13 ಇವೆ. ಇನ್ನು, 5ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರೊ ಜಿಲ್ಲೆಗಳೂ 13 ಇವೆ. ಮೈಸೂರು ಜಿಲ್ಲೆಯಲ್ಲಿ ಮಾತ್ರ ಶೇ. 10 ಕ್ಕಿಂತ ಹೆಚ್ಚು ಪಾಸಿಟಿವ್ ದರ ಇದೆ. ಅನ್​​ಲಾಕ್​ ಪ್ರದೇಶಗಳಲ್ಲಿ ಸೋಂಕು ಹರಡುವಿಕೆ ಬಗ್ಗೆ ಅಧಿಕಾರಿಗಳೊಂದಿಗೆ ಇದೀಗತಾನೆ ಚರ್ಚೆ ನಡೆಸಿರುವೆ. ಕೊರೊನಾ ಕೇಸ್​ ಹೆಚ್ಚಿರುವ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇವೆ. ಕೇಸ್​ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್​ಡೌನ್ ಬಗ್ಗೆ ಚರ್ಚಿಸ್ತೇವೆ​. ತಜ್ಞರು ಈ ಬಗ್ಗೆ ಸಲಹೆ ನೀಡಿದ್ದಾರೆ, ಅದರಂತೆ ಚರ್ಚಿಸುತ್ತೇವೆ ಎಂದರು.

ಟ್ರೇಸಿಂಗ್​ ಮತ್ತು ಟ್ರ್ಯಾಕಿಂಗ್ ಕ್ರಮವನ್ನು​ ಮುಂದುವರಿಸುತ್ತೇವೆ. 3ನೇ ಅಲೆ ನಿಯಂತ್ರಣಕ್ಕೆ ನಾವು ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. 3ನೇ ಅಲೆ ನಿಂಯತ್ರಣಕ್ಕೆ ಸಿದ್ಧತೆ ಬಗ್ಗೆ ತಜ್ಞರ ಸಮಿತಿ ಅಧ್ಯಕ್ಷ ದೇವಿಪ್ರಸಾದ್​ ಶೆಟ್ಟಿ ವರದಿ ನೀಡಿದ್ದಾರೆ. ವರದಿ ಪರಿಶೀಲಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸುಧಾಕರ್​ ತಿಳಿಸಿದರು.

ಜೂನ್​​ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಉತ್ತಮ ಆರೋಗ್ಯ ಇಟ್ಟುಕೊಳ್ಳಲು ಯೋಗ ಸಹಕಾರಿ. ಯೋಗ ಮಾಡುವವರಿಗೆ ಕೊರೊನಾ ಸೋಂಕು ತಗುಲಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ ಮಾಡಬೇಕು. ಯೋಗ ದಿನಾಚರಣೆ ದಿನ ಬಹಿರಂಗವಾಗಿ ಯೋಗ ಮಾಡಬೇಡಿ. ಎಲ್ಲರೂ ಗುಂಪು ಸೇರಿ ಯೋಗವನ್ನು ಮಾಡಬೇಡಿ. ಯೋಗ ದಿನಾಚರಣೆ ದಿನ ಸಿಎಂ ಸಹ ಯೋಗ ಮಾಡ್ತಾರೆ. ಸಿಎಂ ತಮ್ಮ ಅಧಿಕೃತ ನಿವಾಸದಲ್ಲಿ ಯೋಗ ಮಾಡಲಿದ್ದಾರೆ.

ನಾನು ಎಲ್ಲರಿಗೂ ಮನೆಯಲ್ಲೇ ಯೋಗ ಮಾಡಲು ಮನವಿ ಮಾಡುತ್ತೇವೆ. ದಯವಿಟ್ಟು ಎಲ್ಲರೂ ಮನೆಗಳಲ್ಲೇ ಯೋಗ ಮಾಡಿ ಯೋಗ ದಿನಾಚರಣೆಗೆ ಚಾಲನೆ ನೀಡಿ. ಆಯುಷ್ ಇಲಾಖೆಯಿಂದ ಯೋಗ ದಿನಾಚರಣೆಗೆ ಚಾಲನೆ ದೊರೆಯುತ್ತೆ. ಯೋಗಗುರುಗಳಿಂದ ಯೋಗಾಭ್ಯಾಸ ಮಾಡಿಸಿ ದೃಶ್ಯಗಳನ್ನು ಪ್ರಸಾರ ಮಾಡಲಾಗುವುದು. ಎಲ್ಲ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಯೋಗ ಮಾಡಬೇಕು ಎಂದು ಸಚಿವ ಸುಧಾಕರ್​ ಕಿವಿಮಾತು ಹೇಳಿದರು.

(five seven lakh people to be vaccinated on june 21 declared health minister dr k sudhakar)

Published On - 5:43 pm, Sat, 19 June 21

Web contact

TV9 Kannada

Read More
Follow Us