
ಧಾರವಾಡ: ಜಿಲ್ಲೆಯಲ್ಲಿ ಇತ್ತೀಚೆಗೆ ಶ್ರೀಗಂಧ ಚೋರರ ಹಾವಳಿ ಹೆಚ್ಚುತ್ತಲೇ ಇದೆ. ಒಂದು ಕಡೆ ಸರ್ಕಾರ ರೈತರಿಗೆ ಶ್ರೀಗಂಧ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದರೆ ಮತ್ತೊಂದೆಡೆ ಅದಾಗಲೇ ಬೆಳೆದು ನಿಂತ ಶ್ರೀಗಂಧದ ಮರಗಳನ್ನು ಕಳ್ಳರು ರಾತ್ರೋ ರಾತ್ರಿ ಕತ್ತರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ರೈತರು ಈ ಶ್ರೀಗಂಧದ ಸಹವಾಸವೇ ಬೇಡ ಎನ್ನುತ್ತಿದ್ದಾರೆ.
ಇದೀಗ ಅಂಥ ಐವರು ಶ್ರೀಗಂಧ ಕಳ್ಳರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ರೈತರಿಗೆ ತುಸು ಸಮಾಧಾನ ತಂದಿದೆ. ಕಳ್ಳರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.
ಸಿಕ್ಕಿರಲಿಲ್ಲ ಕಳ್ಳರು !
ಕಳೆದ ಹಲವಾರು ತಿಂಗಳಿನಿಂದ ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶ್ರೀಗಂಧ ಗಿಡಗಳ ಕಳ್ಳತನ ಹೆಚ್ಚಾಗಿದ್ದು, ಅದರಲ್ಲೂ ಹೊಲಗಳಲ್ಲಿ ಹಾಗೂ ಹೊಲದ ಅಕ್ಕಪಕ್ಕಗಳಲ್ಲಿ ಬೆಳೆದಿದ್ದ ಶ್ರೀಗಂಧ ಗಿಡಗಳೆಲ್ಲಾ ಕಳ್ಳರ ಪಾಲಾಗುತ್ತಿತ್ತು . ಆಗಾಗ ಕೆಲ ಕಳ್ಳರು ಸಿಕ್ಕಿಬಿದ್ದರಾದರೂ ಅಷ್ಟೊಂದು ಪ್ರಮಾಣದ ಶ್ರೀಗಂಧ ಕಟ್ಟಿಗೆ ಸಿಕ್ಕಿರಲಿಲ್ಲ. ಆದರೆ ಕಳೆದೆರಡು ತಿಂಗಳಿನಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಿದ ಧಾರವಾಡದ ಆರ್ಎಫ್ಒ ಆರ್.ಎಸ್. ಉಪ್ಪಾರ್ ಹಾಗೂ ಅವರ ಸಿಬ್ಬಂದಿ ಇದೀಗ ಭರ್ಜರಿ ಬೇಟೆಯಾಡಿದ್ದಾರೆ.
ಕಳ್ಳರು ಕಂಡುಕೊಂಡ ಹೊಸದಾದ ಕಳ್ಳದಾರಿ:
ವಾಹನಗಳಲ್ಲಿ ಕಟ್ಟಿಗೆ ಸಾಗಣೆ ಮಾಡಿದರೆ ಅನೇಕ ಕಡೆಗಳಲ್ಲಿ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ತಡೆದು ನಿಲ್ಲಿಸಿ, ವಿಚಾರಣೆ ನಡೆಸುತ್ತಾರೆ. ಇಂತಹ ವೇಳೆಯಲ್ಲಿ ಶ್ರೀಗಂಧ ಕಟ್ಟಿಗೆಯನ್ನು ಅಕ್ರಮವಾಗಿ ಸಾಗಿಸುವುದು ಅಷ್ಟು ಸುಲಭದ ಮಾತಲ್ಲ.
ಹೀಗಾಗಿ ಕಳ್ಳರು ಈ ಶ್ರೀಗಂಧ ಸಾಗಿಸಲು ಹೊಸದೊಂದು ದಾರಿಯನ್ನು ಕಂಡುಕೊಂಡಿದ್ದರು. ಅದರಂತೆ ವಾಹನದ ಕೆಳಭಾಗದಲ್ಲಿ ಬಾಕ್ಸ್ ನಿರ್ಮಿಸಿ, ಅದರ ಮೇಲೆ ಶೀಟ್ ಮೆಟಲ್ ಹಾಕಿ, ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದರು. ಹೊರಗಿನಿಂದ ನೋಡಿದರೆ ಸಾಮಾನ್ಯ ವಾಹನದಂತೆ ಕಾಣುತ್ತಿತ್ತು.
ಬಾಕ್ಸ್ನೊಳಗೆ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಹಾಕಿ, ಬಳಿಕ ಶೀಟ್ ಮುಚ್ಚಿಬಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ. ಇದೇ ಉಪಾಯವನ್ನು ಈ ಖದೀಮರು ಕಂಡುಕೊಂಡಿದ್ದರು. ಅದರ ಬಗ್ಗೆ ಹೇಗೋ ಮಾಹಿತಿ ಸಂಗ್ರಹಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದರು.
ಆ ಬಾಕ್ಸ್ನ ಮೇಲಿನ ಶೀಟ್ ತೆಗೆದರೆ ಅಲ್ಲಿ ಕಾಣುವ ಬಾಕ್ಸ್ನಲ್ಲಿ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಹಾಕಿ, ಬಳಿಕ ಶೀಟ್ ಹಾಕಿಬಿಟ್ಟರೆ ಅದು ಯಾರಿಗೂ ಗೊತ್ತೇ ಆಗುವುದಿಲ್ಲ. ಆದರೆ ಅದಾಗಲೇ ಈ ಬಗ್ಗೆ ಮಾಹಿತಿ ಪಡೆದಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಕಳ್ಳರ ಮೇಲೆ ನಿಗಾ ಇಟ್ಟಿದ್ದರು. ಇತ್ತೀಚಿಗೆ ಈ ವಾಹನವನ್ನು ಧಾರವಾಡದ ಹೊರ ಭಾಗದಲ್ಲಿ ನಿಲ್ಲಿಸಿ ತಪಾಸಣೆ ಮಾಡಲು ಮುಂದಾದಾಗ ಅಲ್ಲಿಂದ ಚಾಲಕ ವೇಗವಾಗಿ ಸಾಗಿದ್ದಾನೆ.
ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ವಾಹನವನ್ನು ಹಿಂಬಾಲಿಸಿರು. ಕೊನೆಗೆ ಖದೀಮರು ಹಾವೇರಿ ಜಿಲ್ಲೆಯ ಚಳಗೇರಿ ಚೆಕ್ ಪೋಸ್ಟ್ ಬಳಿ ಸಿಕ್ಕಿಹಾಕಿಕೊಂಡಿದ್ದು, ಈ ವೇಳೆ ಪರಿಶೀಲನೆ ನಡೆಸಿದಾಗ ವಾಹನದ ಕೆಳಭಾಗದಲ್ಲಿದ್ದ ಬಾಕ್ಸ್ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧ ಪತ್ತೆಯಾಗಿದೆ.
ಕಾರ್ಯಾಚರಣೆ ವೇಳೆ ಸಿಕ್ಕ ಶ್ರೀಗಂಧ
ನೂರಾರು ಕೆ.ಜಿ ಶ್ರೀಗಂಧ
ಈ ಮುಂಚೆಯೂ ಇಂತಹ ಅನೇಕ ಕಾರ್ಯಾಚರಣೆಗಳು ನಡೆದಿದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಂದೂ ನಡೆದಿರಲಿಲ್ಲ. ಸುಮಾರು 2 ತಿಂಗಳ ಕಾಲ ನಿರಂತರವಾಗಿ ನಡೆದ ಕಾರ್ಯಾಚರಣೆ ಬಳಿಕ ಈ ಖದೀಮರು ಸಿಕ್ಕಿಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಪರಸಪ್ಪ ಭಜಂತ್ರಿ, ಮಾರುತಿ ಭಜಂತ್ರಿ, ಕಲ್ಲಪ್ಪ ಸಿಂಧೆ, ಮಹದೇವ ಮಾಂಗ್ ಮತ್ತು ರಾಜು ಭಜಂತ್ರಿ ಎನ್ನುವ ಐವರು ಆರೋಪಿಗಳೇ ಸಿಕ್ಕಿಬಿದ್ದ ಖದೀಮರು.
ಇನ್ನು ವಶಪಡಿಸಿಕೊಂಡ ಶ್ರೀಗಂಧ 370 ಕೆ.ಜಿ. ಇದ್ದು, ಇದರ ಮೌಲ್ಯ ಬರೋಬ್ಬರಿ 40 ಲಕ್ಷ ರೂಪಾಯಿ. ಇದರೊಂದಿಗೆ ಟಾಟಾ ಗೂಡ್ಸ್ ಹಾಗೂ ಸ್ವಿಫ್ಟ್ ಡಿಸೈರ್ ವಾಹನವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಕದ್ದು ಸಾಗಣೆ ಮಾಡುತ್ತಿದ್ದ ದೃಶ್ಯ
ಹಿರಿಯ ಅಧಿಕಾರಿಗಳ ಶ್ಲಾಘನೆ
ಈ ಕಾರ್ಯಾಚರಣೆ ನಿಜಕ್ಕೂ ಸಾಕಷ್ಟು ಅಪಾಯಕಾರಿಯಾಗಿತ್ತು. ಶ್ರೀಗಂಧ ಕಳ್ಳರು ಸಿಕ್ಕಿಬೀಳುತ್ತಿದ್ದಂತೆಯೇ ಎಂತಹ ಅನಾಹುತಕ್ಕೂ ಸಿದ್ಧರಾಗಿರುತ್ತಾರೆ. ಹೀಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡೇ ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಈ ವೇಳೆ ಸ್ಥಳೀಯ ಪೊಲೀಸರ ಸಹಾಯವನ್ನು ಕೂಡ ತೆಗೆದುಕೊಳ್ಳಲಾಗಿತ್ತು.
ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಬಗ್ಗೆ ಡಿಎಫ್ಒ ಯಶಪಾಲ್ ಕ್ಷೀರಸಾಗರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಲವಾರು ದಿನಗಳಿಂದ ಶ್ರೀಗಂಧ ಗಿಡಗಳನ್ನು ಕದ್ದು, ಆಂಧ್ರಪ್ರದೇಶಕ್ಕೆ ಮಾರಾಟ ಮಾಡುತ್ತಿದ್ದ ಜಾಲದ ಬಗ್ಗೆ ಮಾಹಿತಿ ಇತ್ತಾದರೂ ಅದನ್ನು ಹಿಡಿಯುವುದು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸಿಬ್ಬಂದಿ ಅಂತಹದೊಂದು ಕೆಲಸವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಶ್ರೀಗಂಧ ಮರದ ತುಂಡುಗಳು
ಕಳ್ಳಸಾಗಣೆಯಾಗುತ್ತಿದ್ದ ಶ್ರೀಗಂಧ
ರಾಮನಗರ: ಒಂದು ತಿಂಗಳ ಅವಧಿಯಲ್ಲಿ ಸೆರೆಯಾಗಿದ್ದು ಎಷ್ಟು ಚಿರತೆ ಗೊತ್ತಾ?