ಉದ್ಯಮಿಗಳಾಯ್ತು ಈಗ ಮಾಜಿ ಕ್ರಿಕೆಟರ್ ಸರದಿ: ಟ್ರಾಫಿಕ್ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ ಸುನೀಲ್ ಜೋಶಿ
ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿಗಳು ಧ್ವನಿ ಎತ್ತಿರುವ ಬೆನ್ನಲ್ಲೇ ನಗರದ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾಜಿ ಕ್ರಿಕೆಟರ್ ಸುನೀಲ್ ಜೋಶಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಪ್ರತಿನಿತ್ಯ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸುವಂತೆ ಅವರು ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 17: ಮೂಲ ಸೌಲರ್ಯಗಳ ಕೊರತೆ, ಟ್ರಾಫಿಕ್ ಮತ್ತು ರಸ್ತೆ ಗುಂಡಿಗಳಂತಹ ಸಮಸ್ಯೆಗಳಿಂದಾಗಿ ರಾಜಧಾನಿ ಬೆಂಗಳೂರು (Bengaluru) ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ನಗರದಲ್ಲಿನ ರಸ್ತೆ ಗುಂಡಿಗಳು ಮತ್ತು ಕಸದ ಬಗ್ಗೆ ಚೀನಾ ಉದ್ಯಮಿಯೊಬ್ಬರು ತಮ್ಮನ್ನು ಪ್ರಶ್ನಿಸಿದ್ದಾರೆಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಇತ್ತೀಚೆಗಷ್ಟೇ ಪೋಸ್ಟ್ ಮಾಡಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆ ಬೆನ್ನಲ್ಲೇ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾಜಿ ಕ್ರಿಕೆಟರ್ ಒಬ್ಬರು ಧ್ವನಿ ಎತ್ತಿದ್ದಾರೆ.
ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯ ಟ್ರಾಫಿಕ್ ಬಗ್ಗೆ ಮಾಜಿ ಕ್ರಿಕೆಟರ್ ಸುನೀಲ್ ಜೋಶಿ ಅಸಮಾಧಾನ ಹೊರ ಹಾಕಿದ್ದಾರೆ. ಸರಕು ಸಾಗಣೆ ವಾಹನಗಳಿಂದ ಆಗುತ್ತಿರೋ ತೊಂದರೆ ಬಗ್ಗೆ ಗಮನ ಸೆಳೆದಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ವಿಮಾನ ನಿಲ್ದಾಣ ಮಾರ್ಗದಲ್ಲಿ ಹಗಲಿನ ವೇಳೆಯೂ ಸರಕು ಸಾಗಣೆ ಮಾಡುವ ವಾಹನಗಳು ಸಂಚಾರ ನಡೆಸುತ್ತಿವೆ. ಇವುಗಳಿಗೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಮಾತ್ರ ಸಂಚಾರಕ್ಕೆ ಅನುಮತಿ ಇರುವಾಗ ಇದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಸುನೀಲ್ ಜೋಶಿ ಪೋಸ್ಟ್ನಲ್ಲಿ ಏನಿದೆ?
CM & DCM of Karnataka @siddaramaiah Sir @DKShivakumar Sir ವಿಮಾನ ನಿಲ್ದಾಣ ಮಾರ್ಗದಲ್ಲಿ ದಿನದ ವೇಳೆಯಲ್ಲೂ ಸರಕು ಮತ್ತು ನಿರ್ಮಾಣ ವಾಹನಗಳನ್ನು ಹೇಗೆ ಅನುಮತಿಸಲಾಗುತ್ತಿದೆ? ಇವುಗಳಿಗೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಾತ್ರ ಚಾಲನೆಗೆ ಅನುಮತಿ ಇರಬೇಕು ಅಲ್ಲವೇ? ಈಗ ಈ ವಾಹನಗಳು ಫಾಸ್ಟ್ ಲೇನ್ಗಳನ್ನು ಬಂದ್ ಮಾಡುತ್ತಿವೆ,…
— Sunil Joshi | 🇮🇳 ಸುನಿಲ್ ಜೋಶಿ (@SunilJoshi_Spin) October 16, 2025
ಸರಕು ಸಾಗಣೆ ಮಾಡುವ ವಾಹನಗಳು ಫಾಸ್ಟ್ ಲೇನ್ಗಳನ್ನು ಬಂದ್ ಮಾಡುತ್ತಿರುವ ಕಾರಣ ವಿಮಾನ ನಿಲ್ದಾಣಕ್ಕೆ ಹೋಗುವ ಅಥವಾ ಬರುವ ಪ್ರಯಾಣಿಕರು ಭಾರಿ ಟ್ರಾಫಿಕ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯ ಜನರು ಪ್ರಯಾಣಿಸಲು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಸುನೀಲ್ ಜೋಶಿ ಆಗ್ರಹಿಸಿದ್ದಾರೆ. ಜೊತೆಗೆ ಈ ಪೋಸ್ಟ್ ಅನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.|
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




