ರೈತರ ಸ್ವಂತ ಜಮೀನಿನ ಪಹಣಿ ಪತ್ರದಲ್ಲಿ ಸರಕಾರ ಎಂದು ಬದಲಾವಣೆ ಆರೋಪ; ದಶಕಗಳಿಂದ ಬಗೆಹರೆಯದ 118 ರೈತ ಕುಟುಂಬಗಳ ಗೋಳಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 09, 2023 | 9:36 PM

ಈ ರೈತರ ಜಮೀನಿನ ಪಹಣಿಯಲ್ಲಿ ಸರಕಾರಿ ಜಾಗ ಎಂದು ನಮೂದು ಮಾಡಿದ್ದಾರೆ. ಆದರೂ ಇವತ್ತಿಗೂ ರೈತರರು ಉಳುಮೆ ಮಾಡುತ್ತಿದ್ದಾರೆ. ಸರಕಾರ ಎಂದು ತೆಗೆದು, ಮೂಲ ರೈತರ ಹೆಸರು ನಮೂದು ಮಾಡುವಂತೆ ಸಾಕಷ್ಟು ಅರ್ಜಿಗಳು ನೀಡಿದರೂ ಕ್ಯಾರೇ ಎಂದಿಲ್ಲ. ಜಿಲ್ಲಾಧಿಕಾರಿ, ತಹಶೀಲ್ದಾರ್​ ಕಚೇರಿ ಅಲೆದು ಅಲೆದು ಸುಸ್ತಾದ ರೈತರು, ಒಂದು ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿ ದೂರು ನೀಡಿದರೂ ಕೂಡ ಇನ್ನೂ ಸಮಸ್ಯೆ ಬಗೆ ಹರಿದಿಲ್ಲ.

ರೈತರ ಸ್ವಂತ ಜಮೀನಿನ ಪಹಣಿ ಪತ್ರದಲ್ಲಿ ಸರಕಾರ ಎಂದು ಬದಲಾವಣೆ ಆರೋಪ; ದಶಕಗಳಿಂದ ಬಗೆಹರೆಯದ 118 ರೈತ ಕುಟುಂಬಗಳ ಗೋಳಾಟ
ರೈತರ ಗೋಳಾಟ
Follow us on

ಗದಗ, ನ.09: ಜಿಲ್ಲೆಯ ನರಗುಂದ(Naragunda)ತಾಲೂಕಿನ ಮೂರು ಗ್ರಾಮಗಳ ರೈತರು (Farmers) ಏನೂ ತಪ್ಪು ಮಾಡದಿದ್ರೂ ಅಧಿಕಾರಿಗಳ ಚೆಲ್ಲಾಟಕ್ಕೆ ವಿಲವಿಲ ಎನ್ನುವಂತಾಗಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡ ಬಂದ ತಮ್ಮ ಸ್ವಂತ ಜಮೀನುಗಳಲ್ಲಿ ಇನಾಂದಾರ ಹೆಸರು ಕಡಿಮೆ ಮಾಡಿ ಎಂದು ಅರ್ಜಿ ಕೊಟ್ಟರೆ, ರೈತರ ಹೆಸರು ಹಾರಿಸಿ ಸರಕಾರ ಎಂದು ಪಹಣಿ ಪತ್ರದಲ್ಲಿ ನಮೂದು ಮಾಡಿದ್ದಾರೆ. ಇದರಿಂದ ಸಾಲ ಸೇರಿ ಸರ್ಕಾರ ಸೌಲಭ್ಯ ಸಿಗದೇ ಒದ್ದಾಟ ನಡೆಸಿದ್ದಾರೆ. ಮನಸ್ಸು ಮಾಡಿದ್ರೆ ತಹಶೀಲ್ದಾರ್​ ಮಟ್ಟದಲ್ಲೇ ಬಗೆಹರಿಯುವ ಸಮಸ್ಯೆಗೆ, ಅನ್ನದಾತರು ವಿಧಾನಸೌಧ ಮೆಟ್ಟಿಲು ಹತ್ತಿದ್ರೂ ಕೆಲಸ ಆಗಿಲ್ಲ. ಅಷ್ಟೇ ಅಲ್ಲ ಕಾನೂನು ಸಚಿವರು ಹೇಳಿದರೂ ಕೂಡ ಅಧಿಕಾರಿಗಳು ಮಾತ್ರ ರೈತರ ಜೀವ ಹಿಂಡುತ್ತಿದ್ದಾರೆ. ಇದು ರೈತರ ಕೋಪಕ್ಕೆ ಕಾರಣವಾಗಿದ್ದು, ಇದೀಗ ಕಂದಾಯ ಸಚಿವರ ಮೊರೆ ಹೋಗಿದ್ದಾರೆ.

ದಶಕಗಳಿಂದ 118 ರೈತ ಕುಟುಂಬಗಳ ಗೋಳಾಟ

ಹೌದು, ನರಗುಂದ ತಾಲೂಕಿನ ಕುರುಗೋವಿನಕೊಪ್ಪ, ಬೇನಕನಕೊಪ್ಪ, ಚಿಕ್ಕನರಗುಂದ ಗ್ರಾಮದ ಸುಮಾರು 538 ಎಕರೆ, ನೂರಾರು ವರ್ಷಗಳಿಂದ ರೈತರ ಹೆಸರಿನೊಂದಿಗೆ ಪಹಣೆ ಪತ್ರ ಪಾರ್ಮ್ ನಂಬರ್ 09 ರಲ್ಲಿ, ಬಾಹುದಿಕ್ಷಿತ್ ಇನಾಮದಾರ ಎಂದು ನಮೂದು ಇತ್ತು. ಆದ್ರೆ, 118 ರೈತ ಕುಟುಂಬಗಳು ನೂರಾರು ವರ್ಷಗಳಿಂದ ಈ ಜಮೀನುಗಳು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಜೊತೆಗೆ ಪಹಣಿಯಲ್ಲಿ ಈ ರೈತರ ಹೆಸರು ಕೂಡ ಇದೆ. ಹಲವು ದಶಕಗಳಿಂದ ಈ ಜಮೀನುಗಳ ಮೇಲೆ ಬೆಳೆ ಸಾಲ, ಬೆಳೆ ವಿಮೆ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳು ಈ 118 ರೈತ ಕುಟುಂಬಗಳು ಪಡಿಯುತ್ತಲೇ ಬಂದಿವೆ. ಆದ್ರೆ, ದಶಕದ ಹಿಂದೆ ಇನಾಮದಾರ ಎಂದು ಹೆಸರು ತೆಗೆಯಲು, ರೈತರು ಕಂದಾಯ ಇಲಾಖೆಗೆ ಅರ್ಜಿ ಹಾಕಿದ್ದಾರೆ. ಆದ್ರೆ, ತಹಶೀಲ್ದಾರ್​ ಕಚೇರಿಯ ಸಿಬ್ಬಂದಿಗಳು ಇನಾಮದಾರ ಹೆಸರಿನ ಜೊತೆಗೆ ರೈತರ ಹೆಸರು ತೆಗೆದು ಹಾಕಿದ್ದಾರೆ.

ಇದನ್ನೂ ಓದಿ:ಫಸಲು ಭೀಮಾ ಯೋಜನೆಯಡಿ 35 ಕೋಟಿ ರೂ. ಬಿಡುಗಡೆ: ಹಣ ನೀಡದ ಜಿಲ್ಲಾಡಳಿತ ವಿರುದ್ಧ ರೈತರು ಆಕ್ರೋಶ

ಜಿಲ್ಲಾಧಿಕಾರಿ, ತಹಶೀಲ್ದಾರ್​ ಕಚೇರಿ ಅಲೆದು ಅಲೆದು ಸುಸ್ತಾದ ರೈತರು!

ಈ ರೈತರ ಜಮೀನಿನ ಪಹಣಿಯಲ್ಲಿ ಸರಕಾರಿ ಜಾಗ ಎಂದು ನಮೂದು ಮಾಡಿದ್ದಾರೆ. ಆದರೂ ಇವತ್ತಿಗೂ ರೈತರರು ಉಳುಮೆ ಮಾಡುತ್ತಿದ್ದಾರೆ. ಸರಕಾರ ಎಂದು ತೆಗೆದು, ಮೂಲ ರೈತರ ಹೆಸರು ನಮೂದು ಮಾಡುವಂತೆ ಸಾಕಷ್ಟು ಅರ್ಜಿಗಳು ನೀಡಿದರೂ ಕ್ಯಾರೇ ಎಂದಿಲ್ಲ. ಜಿಲ್ಲಾಧಿಕಾರಿ, ತಹಶೀಲ್ದಾರ್​ ಕಚೇರಿ ಅಲೆದು ಅಲೆದು ಸುಸ್ತಾದ ರೈತರು, ಒಂದು ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿ ದೂರು ನೀಡಿದರೂ ಕೂಡ ಇನ್ನೂ ಸಮಸ್ಯೆ ಬಗೆ ಹರಿದಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ವರ್ಷಗಳಿಂದ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗದೇ ಒದ್ದಾಡುತ್ತಿದ್ದಾರೆ. ಬರಗಾಲದ ಸಂದರ್ಭದಲ್ಲಿ ಅಧಿಕಾರಿಗಳ ಮಾಡಿದ ಯಡವಟ್ಟು ರೈತರ ಬದುಕಿಗೆ ಬರೆ ಎಳೆದಂತಾಗಿದೆ ಎಂದು ರೈತರಾದ ವಿಜಯ ಕೋಟಿನ, ಗಿರೀಶ್ ನೀಲರೆಡ್ಡಿ ಸೇರಿ ಹಲವು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಸಚಿವ ಎಚ್ ಕೆ ಪಾಟೀಲ್ ಸೂಚನೆಗೂ ಕಂದಾಯ ಇಲಾಖೆ ಡೋಂಟ್ ಕೇರ್

ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ಅನ್ನದಾತರು ಅಕ್ಷರಶಃ ಬೇಸತ್ತು ಹೋಗಿದ್ದಾರೆ. ಕಳೆದ ತಿಂಗಳು ಗದಗ ನಗರದಲ್ಲಿ ಉಸ್ತುವಾರಿ ಸಚಿವರೂ ಆದ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಜನತಾ ದರ್ಶನದಲ್ಲೂ 118 ರೈತರು ಅರ್ಜಿ ನೀಡಿ ಮನವಿ ಮಾಡಿದರು. ಹೀಗಾಗಿ ಸಚಿವ ಎಚ್ ಕೆ ಪಾಟೀಲ್ ನರಗುಂದ ತಹಶೀಲ್ದಾರ್​ ಅವರಿಗೆ 20 ದಿನಗಳಲ್ಲಿ ರೈತರ ಸಮಸ್ಯೆ ಇತ್ಯರ್ಥ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ರು. ಆದ್ರೆ, ಜನತಾ ದರ್ಶನ ಮುಗಿದು ತಿಂಗಳುಗಳೇ ಕಳೆದ್ರೂ ರೈತರ ಸಮಸ್ಯೆ ಬಗೆ ಹರಿಸುವ ಕೆಲಸ ಕಂದಾಯ ಇಲಾಖೆ ಮಾಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂದಾಯ ಸಚಿವರ ಮೊರೆ

ಹೀಗಾಗಿ ನಿನ್ನೆ ಗದಗ ಜಿಲ್ಲೆ ಆಗಮಿಸಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ 118 ರೈತರು ಮನವಿ ಸಲ್ಲಿಸಿದ್ದಾರೆ. ರೈತರ ಸ್ವಂತ ಜಮೀನಿನ ಪಹಣಿಯಲ್ಲಿ ಸರ್ಕಾರಿ ಎಂದು ನಮೂದು, ರೈತ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಬರಗಾಲ ಸರ್ಕಾರದ ಯಾವ ಸೌಕರ್ಯ ಸಿಗದೆ ಪರದಾಡುತ್ತಿದ್ದೇವೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಎಷ್ಟೆ ಮನವಿ ಮಾಡಿದ್ರು ಕ್ಯಾರೇ ಎನ್ನುತ್ತಿಲ್ಲ ಎಂದು ದೂರು ನೀಡಿದ್ದಾರೆ. ರೈತರ ಸಮಸ್ಯೆ ಆಲಿಸಿದ ಕಂದಾಯ ಸಚಿವರು ‘ಪರಿಶೀಲನೆ ಮಾಡಲಾಗಿದೆ. ಡಿಸಿ, ಎಸಿ ಅವರಿಗೆ ರೈತರ ಸಮಸ್ಯೆ ವಿಲೆವಾರಿ ಮಾಡಲು ಸೂಚಿಸಲಾಗಿದೆ. ಈ ಸಮಸ್ಯೆ ಬಗೆಹರಿಸಲಾಗುತ್ತೆ ಎಂದರು.

ಇದನ್ನೂ ಓದಿ:ಬುಧವಾರ ರಾತ್ರಿ ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆ, ಕಂಗಾಲಾಗಿದ್ದ ರೈತರಲ್ಲಿ ನಿರಾಳತೆಯ ಭಾವ

ಬಂಡಾಯದ ನಾಡಿನ ರೈತರು ಮೊದಲೆ ಸತತ ಮೂರ್ನಾಲ್ಕು ವರ್ಷಗಳಿಂದ ಅತೀವೃಷ್ಠಿಯಿಂದ ಹಾಳಾಗಿದ್ದಾರೆ. ಈ ಬರಗಾಲ ಜೀವ ಹಿಂಡುತ್ತಿದೆ. ಆದ್ರೆ, ಕಂದಾಯ ಇಲಾಖೆ ಯಡವಟ್ಟಿನಿಂದ ದಶಕಗಳಿಂದ 118 ರೈತ ಕುಟುಂಬಗಳು ಸರ್ಕಾರದ ಸೌಲಭ್ಯ ಇಲ್ಲದೇ ಒದ್ದಾಡುತ್ತಿವೆ. ಸಚಿವರಿಗೆ ದೂರು ನೀಡಿದಾಗ ಎಚ್ಚೆತ್ತ ಜಿಲ್ಲಾಡಳಿತ ಇತ್ಯರ್ಥಕ್ಕೆ ಅವಕಾಶ ಇದೆ ಎಂದಿದೆ. ಹಾಗಾದ್ರೆ, ಇಷ್ಟು ವರ್ಷ ಅನ್ನದಾತರ ಜೊತೆ ಚೆಲ್ಲಾಟವಾಡಿತ್ತಾ. ಕಾನೂನು ಸಚಿವರು ಹೇಳಿದರೂ ಕ್ಯಾರೇ ಎನ್ನದ ಅಧಿಕಾರಿಗಳು ಕಂದಾಯ ಸಚಿವರಿಗೆ ಮಾಡುವುದಾಗಿ ಹೇಳಿದ್ದಾರೆ. ಏನೇ ಇರಲಿ ಈಗಲಾದ್ರೂ ಸಂಕಷ್ಟದಲ್ಲಿ ಇರುವ ರೈತರ ಸಮಸ್ಯೆ ಇತ್ಯರ್ಥ ಮಾಡುವ ಮೂಲಕ ಅಧಿಕಾರಿಗಳು ಮಾನವೀಯತೆ ತೋರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ