ಗದಗ: ರೈತನಿಗೆ ಗೊತ್ತಿಲ್ಲದೆ ಭೂ ಪರಿವರ್ತನೆ, ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿಗೆ ರೈತ ಕಂಗಾಲು

| Updated By: Rakesh Nayak Manchi

Updated on: Aug 17, 2023 | 10:58 PM

ಬೆಳೆನಾಶದ ಪರಿಹಾರ ಸೇರಿದಂತೆ ಸರ್ಕಾರಿ ಸೌಕರ್ಯ ಸಿಗದ್ದನ್ನು ಅನುಮಾನಿಸಿದ ಗದಗದ ರೈತರೊಬ್ಬರು, ಪಹಣೆ ಪತ್ರ ತೆಗೆಸಿ ನೋಡಿದಾಗ ತನ್ನ ಜಮೀನು ಕಮರ್ಷಿಯಲ್ ಆಗಿ ಪರಿವರ್ತನೆ ಆಗಿದ್ದನ್ನು ನೋಡಿ ಕಂಗಾಲಾಗಿದ್ದಾರೆ. ನನ್ನ ಜಮೀನು ಭೂ ಪರಿವರ್ತನೆ ಮಾಡಿದವರು ಯಾರು ಅಂತ ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ: ರೈತನಿಗೆ ಗೊತ್ತಿಲ್ಲದೆ ಭೂ ಪರಿವರ್ತನೆ, ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿಗೆ ರೈತ ಕಂಗಾಲು
ತನ್ನ ಕೃಷಿ ಜಮೀನು ವಾಣಿಜ್ಯ ಉಪಯೋಗಕ್ಕೆ ಬಳಸುವ ಭೂಮಿ ಎಂದು ನಮೂದಾಗಿರುವುದನ್ನು ನೋಡಿ ಕಂಗಾಲಾದ ರೈತ
Follow us on

ಗದಗ, ಆಗಸ್ಟ್ 17: ಬೆಳೆ ವಿಮೆ, ಬೆಳೆನಾಶದ ಪರಿಹಾರ ಸೇರಿದಂತೆ ಯಾವುದೇ ಸರ್ಕಾರಿ ಸೌಕರ್ಯ ಸಿಗದ ಹಿನ್ನೆಲೆ ರೈತರೊಬ್ಬರು ತನ್ನ ಪಹಣೆ ಪತ್ರ ತೆಗೆಸಿ ನೋಡಿದ್ದಾರೆ. ಈ ವೇಳೆ ಜಮೀನು ಭೂ ಪರಿವರ್ತನೆಯಾಗಿ (Land Conversion) ಕಮರ್ಷಿಯಲ್ ಅಂತಾ ನಮೂದಿಸಿರುವುದು ಕಂಡುಬಂದಿದೆ. ಇದನ್ನು ಸರಿಪಡಿಸಲು ತಹಶೀಲ್ದಾರ ಕಚೇರಿ ಅಲೆದು ಅಲೆದು ಸುಸ್ತಾಗಿರುವ ರೈತ, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಗದಗ ತಾಲುಕಿನ ಹೊಂಬಳ ಗ್ರಾಮದ ರೈತ ರಘು ಹುಣಸೆಮರದ ಅವರ ಜಮೀನಿನಲ್ಲಿ ಭರ್ಜರಿ ಬೆಳೆ ಇದ್ದರೂ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟು. ಕೃಷಿ ಜಮೀನನ್ನು ರಘು ಅವರಿಗೆ ಗೊತ್ತಾಗದೆ ಕಂದಾಯ ಇಲಾಖೆ ಅಧಿಕಾರಿಗಳು ಭೂ ಪರಿವರ್ತನೆ ಮಾಡಿದ್ದಾರೆ. ಹೀಗಾಗಿ ಸರ್ಕಾರಿ ಸೌಕರ್ಯ ಇಲ್ಲದೆ ರಘು ಕುಟುಂಬ ಅಕ್ಷರಶಃ ಕಂಗಾಲಾಗಿದೆ.

ಈತನ ಏಳು ಎಕರೆ ಜಮೀನಿನಲ್ಲಿ 3 ಎಕರೆ 32 ಗುಂಟೆ ಜಮೀನು ಭೂ ಪರಿವರ್ತನೆಯಾಗಿದೆ. ಹೀಗಾಗಿ ಸರ್ಕಾರದ ಯಾವುದೇ ಸೌಕರ್ಯ ರೈತ ರಘು ಅವರಿಗೆ ಸಿಗುತ್ತಿಲ್ಲ. ಹೀಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಪಹಣಿ ಪತ್ರ ಪಡೆದು ನೋಡಿದಾಗ, ಕಮರ್ಷಿಯಲ್ ಬಳಕೆ ಮಾಡುವ ಉದ್ದೇಶವನ್ನು ರೈತ ಹೊಂದಿದ್ದಾನೆ ಅಂತಾ ಪಹಣೆ ಪತ್ರದಲ್ಲಿ ನಮೂದು ಆಗಿದೆ.

ಇದನ್ನೂ ಓದಿ: ಗದಗ: ನಕಲಿ ದಾಖಲೆ ಸೃಷ್ಟಿಸಿ 40 ಕೋಟಿ ಮೊತ್ತದ ಜಮೀನು ಲೂಟಿಗೆ ಪ್ಲಾನ್! ಆರು ಮಂದಿ ಅರೆಸ್ಟ್

ಈ ರೈತ ಭೂ ಪರಿವರ್ತನೆ ಮಾಡುವಂತೆ ಒಂದು ಅರ್ಜಿ ಕೂಡ ನೀಡಿಲ್ಲ. ಆದರೆ, ಅಧಿಕಾರಿಗಳೇ ಈ ಜಮೀನನ್ನು ರೈತನ ಅನುಮತಿ ಇಲ್ಲದೆ ಭೂ ಪರಿವರ್ತನೆ ಮಾಡಿದ್ದಾರೆ ಅಂತ ರಘು ಆರೋಪಿಸಿದ್ದಾರೆ. ಕಂದಾಯ ಅಧಿಕಾರಿಗಳ ಎಡವಟ್ಟಿನಿಂದಾಗಿ ರೈತ ರಘು ಸುಮಾರು ಆರು ವರ್ಷಗಳಿಂದ ತಹಶೀಲ್ದಾರ್ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜಮೀನಿಗೆ ಸರ್ಕಾರಿ ಸೌಕರ್ಯ ಸಿಗುವಂತೆ ಮಾಡಿ ಎಂದು ರಘು ಕಣ್ಣೀರು ಹಾಕುತ್ತಿದ್ದಾರೆ.

ರಘು ಹುಣಸೆಮರದ ಜಮೀನು ಹೊಂಬಳ ಗ್ರಾಮದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿದೆ. ಈ ಭಾಗದಲ್ಲಿ ಸೈಟ್ ಆಗಲಿ, ಮನೆಯಾಗಲಿ, ಕೈಗಾರಿಕಾ ಆಗಲಿ ಯಾವುದು ಇಲ್ಲ. ಈ ರೈತ ಕೂಡಾ ಭೂ ಪರಿವರ್ತನೆಗೆ ಅರ್ಜಿ ಹಾಕಿಲ್ಲ. ಆದರೂ ಕಂದಾಯ ಅಧಿಕಾರಿಗಳು ಭೂ ಪರಿವರ್ತನೆ ಮಾಡಿದ್ದಾರೆ ಎಂದು ರಘು ಆರೋಪ ಮಾಡಿದ್ದಾರೆ.

ಕಳೆದ ಏಳು ವರ್ಷಗಳ ಹಿಂದೆಯೇ ಭೂ ಪರಿವರ್ತನೆಯಾಗಿರುವುದು ಜಮೀನು ಮಾಲೀಕ ರಘು ಅವರಿಗೆ ತಿಳಿದೇ ಇಲ್ಲ. ಸದ್ಯ ಭೂ ಪರಿವರ್ತೆಯಾಗಿರುವ ಹಿನ್ನೆಲೆ ತಹಶಿಲ್ದಾರರ ಕಚೇರಿ, ಎಸಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ‌. ಈ ಬಗ್ಗೆ ಗದಗ ಎಸಿ ವೆಂಕಟೇಶ ನಾಯಕ್ ಅವರನ್ನು ಕೇಳಿದಾಗ, ಘಟನೆ ಕುರಿತು ಮಾಹಿತಿ ಈವಾಗ ಸಿಕ್ಕಿದೆ. ಹೇಗೆ ಭೂ ಪರಿವರ್ತನೆಯಾಗಿದೆ ಎನ್ನುವ ಕುರಿತು ವಿಚಾರಣೆ ಮಾಡಿ, ಸೂಕ್ತವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಈಗಾಗಲೇ ಗದಗ ಜಿಲ್ಲೆಯಲ್ಲಿ ಅಮಾಯಕರ ಜಮೀನು, ಆಸ್ತಿ ಲೂಟಿ ಮಾಡುವ ಗ್ಯಾಂಗ್ ಇದೆ. ಇತ್ತೀಚೆಗಷ್ಟೇ, ಕೋಟಿ ಕೋಟಿ ಆಸ್ತಿ ಲಪಟಾಯಿಸುವ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದರು. ಈ ವಿಚಾರ ತಿಳಿದ ಜನರು ಬೆಚ್ಚಿಬಿದ್ದಿದ್ದರು. ಅನ್ನದಾತರು ತಮ್ಮ ಜಮೀನುಗಳ ದಾಖಲೆ ಪತ್ರಗಳ ಬಗ್ಗೆ ಕಣ್ಣಿಟ್ಟಿರಬೇಕು. ಆಗಾಗ ಪರಿಶೀಲನೆ ನಡೆಸುವುದು ಉತ್ತಮ. ಇಲ್ಲವಾದರೆ, ಕಂಡವರ ಪಾಲಾಗಬಹುದು ಎಚ್ಚರ..

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ