ಗದಗ: ಸಿಂಜೆಂಟಾ ವಿರುದ್ಧ ರೈತರ ವಿನೂತನ ಪ್ರತಿಭಟನೆ, ಸೂರ್ಯಕಾಂತಿ ಎಸ್​ಬಿ-293 ಹೈಬ್ರಿಡ್ ಬೀಜ ಮಾರಾಟಕ್ಕೆ ತಡೆ

Gadag News: ಕಳಪೆ ಬೀಜ ವಿತರಿಸಿದ ಸಿಜೆಂಟಾ ಕಂಪನಿ ವಿರುದ್ಧ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದ ರೈತರು ಪರಿಹಾರಕ್ಕಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ಜಂಟಿ ಕೃಷಿ ನಿರ್ದೇಶಕರು, ಕಂಪನಿಯ ಸೂರ್ಯಕಾಂತಿ ಎಸ್​ಬಿ-293 ಬೀಜಗಳ (Sunflower SB 293 Seeds) ಮಾರಾಟಕ್ಕೆ ತಡೆಯಾಜ್ಞೆ ನೀಡಿದ್ದಾರೆ.

ಗದಗ: ಸಿಂಜೆಂಟಾ ವಿರುದ್ಧ ರೈತರ ವಿನೂತನ ಪ್ರತಿಭಟನೆ, ಸೂರ್ಯಕಾಂತಿ ಎಸ್​ಬಿ-293 ಹೈಬ್ರಿಡ್ ಬೀಜ ಮಾರಾಟಕ್ಕೆ ತಡೆ
ಕಳಪೆ ಸೂರ್ಯಕಾಂತಿ ಎಸ್​ಬಿ-293 ಹೈಬ್ರಿಡ್ ಬೀಜ ನೀಡಿದ ಸಿಂಜೆಂಟಾ ಕಂಪನಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗದಗದಲ್ಲಿ ರೈತರಿಂದ ಪ್ರತಿಭಟನೆ
Edited By: Rakesh Nayak Manchi

Updated on: Jul 17, 2023 | 7:53 PM

ಗದಗ, ಜುಲೈ 17: ಕಳಪೆ ಬೀಜ ವಿತರಿಸಿ ಮೋಸ ಮಾಡಿದ ಸಿಜೆಂಟಾ ಕಂಪನಿ (Syngenta) ವಿರುದ್ಧ ರೈತರಿಂದ ಆಕ್ರೋಶ ಹೊರಬೀಳುತ್ತಿದ್ದಂತೆ ಎಚ್ಚೆತ್ತ ಗದಗದ ಜಂಟಿ ಕೃಷಿ ನಿರ್ದೇಶಕರು, ಕಂಪನಿಯ ಸೂರ್ಯಕಾಂತಿ ಎಸ್​ಬಿ-293 ಬೀಜಗಳ (Sunflower SB 293 Seeds) ಮಾರಾಟಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಕಳಪೆ ಬೀಜ ವಿತರಿಸಿದ ಸಿಜೆಂಟಾ ಕಂಪನಿ ವಿರುದ್ಧ ಗದಗ (Gadag) ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದ ರೈತರು ಪರಿಹಾರಕ್ಕಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿದ್ದಾರೆ.

ರೈತರು ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎತ್ತುಗಳನ್ನ ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕಳಪೆ ಬೀಜಗಳಿಂದಾಗಿ ತಾಲೂಕಿನೆಲ್ಲೆಡೆ ರೈತರು ಬೆಳೆದಿದ್ದ ಸೂರ್ಯಕಾಂತಿ ಬೆಳೆ‌ ಹಾಳಾಗಿವೆ. ನಷ್ಟವಾಗಿರುವ ಸೂರ್ಯಕಾಂತಿ ಬೆಳೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ವರದಿ ಆಧರಿಸಿ ಎಸ್​ಬಿ 293 ಸೂರ್ಯಕಾಂತಿ ಹೈಬ್ರೀಡ್ ಬೀಜ ಮಾರಟಕ್ಕೆ ತಡೆ

ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಪೇಠಾಲೂರ, ಬರದೂರ ಹಾಗೂ ಇತರೆ ಗ್ರಾಮದಲ್ಲಿ ಎಸ್​ಬಿ 293 ಸೂರ್ಯಕಾಂತಿ ಹೈಬ್ರಿಡ್ ತಳಿ ಬೆಳೆದ ರೈತರ ಸಮಸ್ಯಾತ್ಮಕ ಕ್ಷೇತ್ರಗಳಿಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಜೂನ್ 26 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಜುಲೈ 14 ರಂದು ವೈಜ್ಞಾನಿಕ ವರದಿಯನ್ನು ಸಲ್ಲಿಸಿದೆ.

ಇದನ್ನೂ ಓದಿ: ಗದಗ: ಸಾರಿಗೆ ಬಸ್​ ಕಿಟಕಿ ಮೇಲೆ ಕುಳಿತು ಅಪಾಯಕಾರಿ ಪ್ರಯಾಣ ಮಾಡಿದ ಮಹಿಳೆ

ಸಿಂಜೆಂಟಾ ಸಂಸ್ಥೆಯ ಎಸ್​ಬಿ 293 ಸೂರ್ಯಕಾಂತಿ ಹೈಬ್ರಿಡ್ ಬೀಜಗಳು ಶೇ.30 ರಿಂದ ಶೇ.50 ರಷ್ಟು ಜೊಳ್ಳು ಹಾಗೂ ಗೊಡ್ಡುರೋಗ (Phyllody) ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಕುರಿತು ಚರ್ಚಿಸಲು ಜುಲೈ 15 ರಂದು ಜಂಟಿ ಕೃಷಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮುಂಡರಗಿ ರೈತ ಮುಖಂಡರು ಹಾಗೂ ಸಿಂಜೆಂಟಾ ಸಂಸ್ಥೆಯ ಪ್ರಾಂತೀಯ ವ್ಯವಸ್ಥಾಪಕರನ್ನೊಳಗೊಂಡು ಸಭೆಯನ್ನು ನಡೆಸಲಾಗಿದೆ.

ಸಿಂಜೆಂಟಾ ಸಂಸ್ಥೆಯ ಎಸ್​ಬಿ 293 ಸೂರ್ಯಕಾಂತಿ ಸಮಸ್ಯಾತ್ಮಕ ಬೆಳೆಯ ವರದಿಯಾಗಿರುವ ಕಾರಣ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಪೇಠಾಲೂರ, ಬರದೂರ ಹಾಗೂ ಇತರೆ ಗ್ರಾಮದ ರೈತ ಮುಖಂಡರು ಸಿಂಜೆಂಟಾ ಸಂಸ್ಥೆಯ ಸೂರ್ಯಕಾಂತಿ ಬೀಜಗಳನ್ನು ಮಾರಾಟ ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ.

ಮನವಿ ಮೇರೆಗೆ ಸಿಂಜೆಂಟಾ ಸಂಸ್ಥೆಯ ಎಸ್​ಬಿ 293 ಸೂರ್ಯಕಾಂತಿ ಹೈಬ್ರಿಡ್ ಬೀಜಗಳನ್ನು ಮುಂದಿನ ಆದೇಶದವರೆಗೆ ಬೀಜ ಅಧಿನಿಯಮ 1966 (7)ರ ಪ್ರಕಾರ ಮಾರಾಟ ಮಾಡದಂತೆ ತಡೆಯಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಗದಗದ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Mon, 17 July 23

Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us