
ಗದಗ, ಆಗಸ್ಟ್ 30: ಇಳಿವಯಸ್ಸಿನಲ್ಲಿ ಆಸರೆಯಾಗಬೇಕಿದ್ದ ಸರ್ಕಾರಿ ವ್ಯವಸ್ಥೆಯೇ ಬಡ ವೃದ್ಧರಿಗೆ ಕೈಕೊಟ್ಟಿದೆ. ಗದಗ (gadag) ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 5 ತಿಂಗಳಿಂದ ವೃದ್ಧಾಪ್ಯ ವೇತನ (Old age pension) ಸಿಗದೆ ಫಲಾನುಭವಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳಿಂದ ಪರಿತ್ಯಕ್ತರಾಗಿ, ದುಡಿಯುವ ಶಕ್ತಿಯೂ ಇಲ್ಲದೆ ತುತ್ತು ಅನ್ನ ಹಾಗೂ ಮಾತ್ರೆ-ಔಷಧಿಗೂ ಪರದಾಡುತ್ತಿರುವ ಹಿರಿಯ ಜೀವಿಗಳು, ಪ್ರತಿದಿನ ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಕಣ್ಣೀರಿಡುತ್ತಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ ಐದು ತಿಂಗಳಿಂದ ವೃದ್ಧರಿಗೆ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಹೀಗಾಗಿ ಹಳ್ಳಿಹಳ್ಳಿಗಳಿಂದ ವೇತನಕ್ಕಾಗಿ ಬಡ ಹಿರಿಯ ಜೀವಿಗಳು ನಿತ್ಯವೂ ತಹಶೀಲ್ದಾರ ಕಚೇರಿಗೆ ಅಲೆದಾಡಿ ಹೈರಾಣಾಗಿದ್ದಾರೆ. ಅಧಿಕಾರಿಗಳು ಮಾತ್ರ ನಾಳೆ ಬರುತ್ತೆ, ನಾಡಿದ್ದು ಬರುತ್ತೆ ಅಂತ ಭರವಸೆ ನೀಡಿ ಸಾಗಿ ಹಾಕುತ್ತಿದ್ದಾರೆ. ವೃದ್ಧರ ಬದುಕಿನ ಜೊತೆ ಚೆಲ್ಲಾಟ ಯಾಕೆ ಅಂತ ವೃದ್ಧರು ಕಿಡಿಕಾರುತ್ತಿದ್ದಾರೆ. ದುಡಿದು ತಿನ್ನುವ ಶಕ್ತಿ ಇಲ್ಲ. ಆದಾಯದ ಮೂಲವೂ ಇಲ್ಲ. ಸರ್ಕಾರ ಕೊಡುವ ವೃದ್ಧಾಪ್ಯ ವೇತನವೇ ಬದುಕಿಗೆ ಆಸರೆ. ಆದರೆ ಆ ಆಸರೆಯೇ ಈಗ ಐದು ತಿಂಗಳಿಂದ ಸಿಗುತ್ತಿಲ್ಲ. ವೇತನ ಬರುತ್ತೆ ಎನ್ನುವ ನಿರೀಕ್ಷೆಯಲ್ಲಿ ಪ್ರತಿದಿನ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಇಸ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ!
ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು 7,400 ವೃದ್ಧರು ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಆದರೆ ಇದೀಗ ಸುಮಾರು 3,200 ವೃದ್ಧರ ವೇತನಕ್ಕೆ ತಡೆ ಬಿದ್ದಿದೆ ಎನ್ನಲಾಗಿದೆ. ಆದಾಯ ಹೆಚ್ಚಾಗಿದೆ ಎನ್ನುವ ಕಾರಣ ನೀಡಿ ವೇತನಕ್ಕೆ ಸರ್ಕಾರದ ಮಟ್ಟದಲ್ಲೇ ಕೊಕ್ಕೆ ಹಾಕಲಾಗಿದೆ ಎನ್ನಲಾಗ್ತಿದೆ. ಆದರೆ ಇಲ್ಲಿ ಮತ್ತೊಂದು ಗಂಭೀರ ಪ್ರಶ್ನೆ ಎದುರಾಗಿದೆ. ಮನೆ ಇಲ್ಲ, ಜಮೀನು ಇಲ್ಲ, ಆದಾಯದ ಮೂಲವೂ ಇಲ್ಲ, ಇಂತಹ ಕಡುಬಡ ವೃದ್ಧರಿಗೂ ವೇತನ ಸಿಗದಿದ್ದರೆ ಅವರ ಬದುಕಿನ ಗತಿ ಏನು ಅಂತ ಪ್ರಶ್ನೆ ಎದ್ದಿದೆ. ಪ್ರತಿ ತಿಂಗಳು ಬರಬೇಕಾದ ಹಣಕ್ಕಾಗಿ ಹಿರಿಯ ಜೀವಗಳು ತಿಂಗಳುಗಟ್ಟಲೆ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಕೆಲ ವೃದ್ಧರಿಗೆ ಮಕ್ಕಳಿದ್ದರೂ ನೋಡಿಕೊಳ್ಳುತ್ತಿಲ್ಲ. ಅಂತವರಿಗೆ ಸರ್ಕಾರದ ಹಣವೇ ಆಸರೆ.
ಆದಾಯ ಪರಿಶೀಲನೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ 3,200 ಫಲಾನುಭವಿಗಳ ವೇತನ ತಡೆಹಿಡಿಯಲಾಗಿದ್ದು, ಅರ್ಹ ಫಲಾನುಭವಿಗಳ ಸಮಸ್ಯೆಯನ್ನು ಪರಿಶೀಲಿಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗಬೇಕಾದ ಈ ಹಕ್ಕಿನ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಿ, ಕಣ್ಣೀರಲ್ಲಿ ಕೈತೊಳೆಯುತ್ತಿರುವ ಹಿರಿಯ ಜೀವಗಳಿಗೆ ಆಸರೆಯಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.