ಗದಗ: ಅಕ್ರಮ ಗಣಿಗಾರಿಕೆ ಹೊಂಡದಲ್ಲಿ ತುಂಬಿದ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

| Updated By: Rakesh Nayak Manchi

Updated on: Aug 15, 2023 | 6:55 PM

ಆಕಳು ಕರುವನ್ನು ಸ್ನಾನ ಮಾಡಿಸಲು ಗಣಿಗಾರಿಕೆ ಹೊಂಡಕ್ಕೆ ಇಳಿದ ಮಹಿಳೆ ಮತ್ತು ಆಕೆಯ ಮಗ ನೀರಿನಲ್ಲಿ ಮುಳುಗಿದ್ದಾರೆ. ಇವರನ್ನು ರಕ್ಷಣೆ ಮಾಡಲು ಹೊಂಡಕ್ಕೆ ಹಾರಿದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ಈ ಘಟನೆ ಗದಗ ನಗರದಲ್ಲಿ ನಡೆದಿದೆ.

ಗದಗ: ಅಕ್ರಮ ಗಣಿಗಾರಿಕೆ ಹೊಂಡದಲ್ಲಿ ತುಂಬಿದ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು
ನೀರು ತುಂಬಿದ್ದ ಅಕ್ರಮ ಮಣ್ಣು ಗಣಿಗಾರಿಕೆ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ಇಬ್ಬರು ಬಾಲಕರು
Follow us on

ಗದಗ, ಆಗಸ್ಟ್ 15: ನೀರು ತುಂಬಿದ್ದ ಅಕ್ರಮ ಮಣ್ಣು ಗಣಿಗಾರಿಕೆ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಗದಗ (Gadag) ನಗರದ ರಹಮತ್ ನಗರದಲ್ಲಿ ನಡೆದಿದೆ. ಆಕಳು ಕರುವನ್ನು ಸ್ನಾನ ಮಾಡಿಸುವ ವೇಳೆ ಬಾಲಕನೊಬ್ಬ ನೀರು ಪಾಲಾಗಿದ್ದಾನೆ. ಈತನ ರಕ್ಷಣೆಗೆ ಈತನ ತಾಯಿ ಜೊತೆ ಮತ್ತಿಬ್ಬರು ಬಾಲಕರೂ  ಹಾರಿದ್ದಾರೆ. ಆದರೆ, ಈ ಇಬ್ಬರು ಬಾಲಕರು ಮತ್ತೆ ಮೇಲೆ ಬಂದಲೇ ಇಲ್ಲ. ಆದರೆ, ಮಹಿಳೆ ಮತ್ತು ಆಕೆಯ ಮಗನನ್ನು ವ್ಯಕ್ತಿಯೊಬ್ಬರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ರೈಲ್ವೇ ಟ್ರ್ಯಾಕ್ ಬಳಿ ಅಕ್ರಮವಾಗಿ ಮಣ್ಣಿನ ಗಣಿಗಾರಿಗೆ ನಡೆಸಿದ ಹೊಂಡದಲ್ಲಿ ನೀರು ತುಂಬಿತ್ತು. ಆಕಳು ಕರುವನ್ನು ಸ್ನಾನ ಮಾಡಿಸಲೆಂದು ಮಹಿಳೆ ಶಾಹಿನ್ ತನ್ನ ಮಗನೊಂದಿಗೆ ಹೊಂಡದ ಬಳಿ ಬಂದಿದ್ದಾರೆ. ಈ ವೇಳೆ ಶಾಹಿನ್ ಮಗನ ಮೇಲೆ ಆಕಳು ಎರಗಿದ ಪರಿಣಾಮ ಬಾಲಕ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಶಾಹಿನ್, ಮಗನ ರಕ್ಷಣೆಗೆ ದಾವಿಸಿದ್ದಾಳೆ. ಈಕೆಯೊಂದಿಗೆ 14 ವರ್ಷದ ಸಂತೋಷ್ ಕುಂಬಾರ, 12 ಮಹ್ಮದ್ ಅಮನ್ ಹುಬ್ಬಳ್ಳಿ ಕೂಡ ಹೊಂಡಕ್ಕೆ ಹಾರಿದ್ದಾರೆ.

ಇವರ್ಯಾರಿಗೂ ಈಜು ಬಾರದ ಹಿನ್ನೆಲೆ ನಾಲ್ವರೂ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ರಾಜಾ ಸಿಂಗ್ ಎಂಬವರು ಕೂಡಲೇ ಹೊಂಡಕ್ಕೆ ಹಾರಿ ಮಹಿಳೆ ಮತ್ತು ಆಕೆಯ ಮಗನನ್ನು ರಕ್ಷಿಸಿದ್ದಾರೆ. ಇತರೆ ಇಬ್ಬರ ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪರಿಣಾಮ, ಸಂತೋಷ್ ಮತ್ತು ಅಮನ್ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಗದಗ: ಅಂತ್ಯ ಸಂಸ್ಕಾರದ ಸಿದ್ಧತೆ ವೇಳೆ ಬಯಲಾದ ಮಹಿಳೆಯ ಸಾವಿನ ರಹಸ್ಯ

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮದ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳಕ್ಕೆ ಗದಗ ಎಸ್​ಪಿ ಬಿ.ಎಸ್.ನೇಮಗೌಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಣ್ಣು ಗಣಿಗಾರಿಕೆ ಮಾಡಿ ಹೊಂಡವನ್ನು ಹಾಗೇ ಬಿಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಈ ಜಾಗ ಯಾರ ಹೆಸರಿನಲ್ಲಿದೆ ಎಂದು ನೋಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಗದಗ ತಾಲೂಕಿನ ಹುಲಕೋಟಿ, ಕುರ್ತಕೋಟಿ, ಕಳಸಾಪೂರ, ಲಕ್ಕುಂಡಿ ಸೇರಿದಂತೆ ಹಲವು ಗ್ರಾಮಗಳ ಸುತ್ತಮುತ್ತ ಇಂತಹ 50ಕ್ಕೂ ಅಧಿಕ ಸಾವಿನ ಹೊಂಡಗಳಿವೆ. ಈಗಾಗಲೇ ಗದಗ ತಾಲೂಕಿನಲ್ಲಿ ಇಂತಹ ಅಕ್ರಮ ಹೊಂಡಕ್ಕೆ ನಾಲ್ಕು ಮಕ್ಕಳು ಬಲಿಯಾಗಿದ್ದು, ಈಗ ಮತ್ತೆ ಬಾಳಿ ಬದುಕಬೇಕಾದ ಇಬ್ಬರು ಮಕ್ಕಳು ನೀರು ಪಾಲಾಗಿದ್ದಾರೆ.

ಕಳೆದ ಆರೇಳು ಗಂಟೆಯಿಂದ ಶೋಧ ಕಾರ್ಯ ನಡೆಸುತ್ತಿದ್ದರೂ ಒಬ್ಬನ ದೇಹ ಪತ್ತೆಯಾಗಿಲ್ಲ.‌ ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿದೆ. ಗಣಿಗಾರಿಕೆ ಹೊಂಡಗಳಲ್ಲಿ ಸಾವುಗಳಾಗುತ್ತಿದ್ದರೂ ಜಿಲ್ಲಾಡಳಿತ, ಗಣಿ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಮಕ್ಕಳ ಸಾವಿಗೆ ಜಿಲ್ಲಾಡಳಿತ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.‌ ಇನಾದರೂ ಜಿಲ್ಲಾಡಳಿತ ಅನಧಿಕೃತ ಹೊಂಡಗಳನ್ನು ಮುಚ್ಚಿಸಿ, ದುರಂತಗಳನ್ನು ತಪ್ಪಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ