ಹಾಸನ ಜನತೆ ಕೂಗಿಗೆ ಮಣಿದ ಸರ್ಕಾರ, ಅಧ್ಯಯನ ನಡೆಸುತ್ತಿರುವ ಅರಣ್ಯ ಇಲಾಖೆ

| Updated By: Rakesh Nayak Manchi

Updated on: Nov 08, 2022 | 12:39 PM

ಹಾಸನ ಕೊಡಗು ಭಾಗದ ಜನರು ಕಾಡಾನೆ ಹಾವಳಿಯನ್ನು ದಶಕಗಳಿಂದ ಎದುರಿಸುತ್ತಾ ಬರುತ್ತಿದ್ದಾರೆ. ಕಾಡಾನೆ ಮಾನವ ಸಂಘರ್ಷ ಕೊನೆಯಾಗಬೇಕು ಎಂಬ ಜನರ ಕೂಗಿಗೆ ಕೊನೆಗೂ ಸರ್ಕಾರ ಮಣಿದಿದೆ. ಅರಣ್ಯ ಇಲಾಖೆಯು ಮೂರು ದಿನಗಳ ಅಧ್ಯಯನದಲ್ಲಿ ತೊಡಗಿಕೊಂಡಿದೆ.

ಹಾಸನ ಜನತೆ ಕೂಗಿಗೆ ಮಣಿದ ಸರ್ಕಾರ, ಅಧ್ಯಯನ ನಡೆಸುತ್ತಿರುವ ಅರಣ್ಯ ಇಲಾಖೆ
ಕಾಡಾನೆಗಳ ಹಾವಳಿ: ಅಧ್ಯಯನ ನಡೆಸುತ್ತಿರುವ ಅರಣ್ಯ ಇಲಾಖೆ
Follow us on

ಹಾಸನ: ಕಾಡಾನೆಗಳ ಉಪಟಳದಿಂದ ಮುಕ್ತಿ ನೀಡುವಂತೆ ಜನರು ದಶಕಗಳ ಹಿಂದಿನಿಂದ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಇದೀಗ ಜನತೆ ಕೂಗಿಗೆ ಸರ್ಕಾರ ಮಣಿದಿದೆ. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ನಿನ್ನೆಯಿಂದ ಅಧ್ಯಯನ ಆರಂಭಿಸಿದ್ದು, ನಾಳೆಗೆ ಮುಕ್ತಾಯವಾಗಲಿದೆ. ಮುಖ್ಯ ಪ್ರದಾನ ಅರಣ್ಯ ಸಂರಕ್ಷಣಾ ಅಧಿಕಾರಿ‌ ನೇತೃತ್ವದಲ್ಲಿ ಎಂಟು ಜನರ ತಂಡ ಅಧ್ಯಯನ ನಡೆಸಲಾಗುತ್ತಿದೆ. ಈ ವೇಳೆ ಅದಿಕಾರಿಗಳ‌ ಎದುರು ಜನರು ಆಕ್ರೋಶ ಹೊರ ಹಾಕಿದ ಪ್ರಸಂಗ ನಡೆದಿದೆ. ನಿಮ್ಮ ಪರಿಹಾರ ನಮಗೆ ಬೇಕಿಲ್ಲ, ನಿಮ್ಮ ಆನೆಯನ್ನು ನೀವು ಹಿಡಿದುಕೊಂಡು ಹೋಗಿ, ಇಲ್ಲವೇ ನಮ್ಮನ್ನು ಕೊಲ್ಲಲು ಬರುವ ಆನೆಗಳಿಗೆ ನಾವೇ ಗುಂಡು ಹೊಡಿತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡು ದಶಕಗಳಿಂದಲೂ ಹಾಸನ ಜಿಲ್ಲೆಯ, ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಕಾಡಾನೆಗಳ‌ ಸಮಸ್ಯೆ ಮಿತಿ ಮೀರಿದ್ದು, ಬೇಲೂರು, ಅರಕಲಗೂಡು ತಾಲ್ಲೂಕಿಗೂ ಈ ಸಮಸ್ಯೆ ವ್ಯಾಪಿಸಿದೆ. ಇದುವರೆಗೆ ಕಾಡಾನೆ ದಾಳಿಯಿಂದ 72 ಜನರು ಮೃತಪಟ್ಟಿದ್ದಾರೆ. ಒಂದು ಸಾವಿರ ಕೋಟಿಗೂ ಹೆಚ್ಚು ಪ್ರಮಾಣದ ಬೆಳೆ ಹಾನಿಯಾಗಿದೆ. 34 ಕಾಡಾನೆಗಳು ಗುಂಡೇಟು, ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿವೆ.‌ ಕಾಡಾನೆ ದಾಳಿಗೆ ಕಳೆದ ಒಂದು ವಾರದ ಹಿಂದೆ ಮನು ಎಂಬುವವರು ಮೃತಪಟ್ಟಿದ್ದರು.

ಮೃತ ವ್ಯಕ್ತಿಯ ಶವವನ್ನು ಇಟ್ಟು ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಗೆ ಮಣಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅಧಿಕಾರಿಗಳ ತಂಡ ಕಳುಹಿಸಿ ಕೊಡುವುದಾಗಿ ಹೇಳಿದ್ದರು. ಸಿಎಂ ಸೂಚನೆಯಂತೆ ನಿನ್ನೆಯಿಂದ ಹಾಸನ‌, ಕೊಡಗು ಭಾಗದಲ್ಲಿ ಅಧ್ಯಯನಕ್ಕೆ ಅರಣ್ಯ ಪಡೆ ಮುಖ್ಯಸ್ಥರಾದ ರಾಜಕೀಶೋರ್ ಸಿಂಗ್, ರಂಗರಾವ್.ಜಿ.ವಿ., ಸಮನ್ವಯ ಅಧಿಕಾರಿ ಶಾಶ್ವತಿ ನಿಷ್ಠ, ಫ್ರೊ.ನಿಶಾಂತ್, ಸಿದ್ದರಾಮಪ್ಪ ಸೇರಿ ಎಂಟು ಜನರ ತಂಡದಿಂದ ವನ್ಯಜೀವಿ ಬಾದಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲು ಆರಂಭಿಸಿತು.

ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದಲ್ಲಿ ಅಧಿಕಾರಿಗಳು ಬಾದಿತ ಪ್ರದೇಶದ ಜನರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಮೃತ ಕುಟುಂಬಕ್ಕೆ ಪರಿಹಾರ ಹೆಚ್ಚಿಸಿ ಸರ್ಕಾರಿ ಉದ್ಯೋಗ ಕೊಡುವಂತೆ ಜನರು ಒತ್ತಾಯಿಸಿದರು. ಇದೇ ವೇಳೆ ಕಾಡಾನೆ ಹಿಡಿಯಲು ಅಡ್ಡಿಪಡಿಸುವ ಪರಿಸರವಾದಿಗಳ ವಿರುದ್ಧ ಜನರು ಹರಿಹಾಯ್ದರು.

ಕಾಡಾನೆ ಸ್ಥಳಾಂತರಿಸುವುದೇ ಶಾಶ್ವತ ಪರಿಹಾರ ಎಂದು ಅಧಿಕಾರಿಗಳು ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ನನ್ನ ಬಳಿ ಡಬಲ್ ಬ್ಯಾರೆಲ್‌ಗನ್ ಇದೆ, ತೋಟಕ್ಕೆ ಹೋದಾಗ ದಾಳಿ ಮಾಡಲು ಬಂದರೆ ಕಾಡಾನೆಗಳನ್ನು ಗುಂಡು ಹಾರಿಸಿ ಸಾಯಿಸುತ್ತೇವೆ. ನೀವು ನನ್ನನ್ನ ಅರೆಸ್ಟ್ ಮಾಡಿ ಬೇಕಾದರೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಕಿಡಿ ಕಾರಿದರು. ಸಭೆಯಲ್ಲಿದ್ದ ಎಲ್ಲರೂ ಕಾಡಾನೆ ಹಾವಳಿ ತಡೆಗೆ ಕಾಡಾನೆಗಳ ಸ್ಥಳಾಂತರವೇ ಪರಿಹಾರ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಅದಿಕಾರಿಗಳಿಗೆ ಸಮಸ್ಯೆ ಹೇಳುತ್ತಿರುವುದು ಇದೇನು ಮೊದಲಲ್ಲ. ಆದರೆ ಕಾಡಾನೆ ಹಾವಳಿ ತಡೆಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಪುಲವಾಗಿದೆ ಎಂದು ಶಾಸಕ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದರು. ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಯಲು ಆನೆಗಳ ಸ್ಥಳಾಂತರವೇ ಪರಿಹಾರ ಎಂದು ಮನವರಿಕೆ ಮಾಡಿದರು.

ಸಭೆಯಲ್ಲಿ ಎಲ್ಲರ ಅಭಿಪ್ರಾಯ, ಸಲಹೆ ಹಾಗೂ ಮನವಿ ಸ್ವೀಕರಿಸಿ ಮಾತನಾಡಿದ ಪಿಸಿಸಿಎಫ್ ರಾಜ್ ‌ಕೀಶೋರ್ ಸಿಂಗ್, ಮೂರು ದಿನಗಳ ಕಾಲ ಹಾಸನ, ಕೊಡಗು ಭಾಗದಲ್ಲಿ ಅಧ್ಯಯನ ಮಾಡಲಿದ್ದೇವೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿರುವುದು ಮನದಟ್ಟಾಗಿದೆ. ಕಾಡಾನೆಗಳ ದಾಳಿಯಿಂದ ಮನುಷ್ಯನ ಪ್ರಾಣ ಹಾನಿ ತಪ್ಪಿಸುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬೇಕಾದ ಕ್ರಮಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.‌

ಇದಕ್ಕೆ ಒಪ್ಪದ ಸ್ಥಳೀಯರು ನೀವು ಕಾಡಾನೆ ಸ್ಥಳಾಂತರ ಮಾಡುವುದು ಒಂದೇ ಪರಿಹಾರ ಎಂದು ವರದಿ ನೀಡಬೇಕೆಂದು ಪಟ್ಟು ಹಿಡಿದರು. ಜನರ ಆಕ್ರೋಶ, ಸಿಟ್ಟನ್ನು ಸಮಾಧಾನವಾಗಿಯೇ ಆಲಿಸಿದ ಅದಿಕಾರಿಗಳ ತಂಡ ನಿಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ಮುಟ್ಟಿಸುತ್ತೇವೆ, ಸಮಸ್ಯೆ ಬಗೆಹರಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದರು.

ಒಟ್ಟಿನಲ್ಲಿ ವನ್ಯಪ್ರಾಣಿ ಬಾದಿತ ಪ್ರದೇಶದ ಜನರ ದಶಕಗಳ ಹೋರಾಟ, ಸಿಟ್ಟು, ಆಕ್ರೋಶ ಕೊನೆಗೂ ಸರ್ಕಾರದ ಕಣ್ಣ ತೆರೆಯುವಂತೆ ಮಾಡಿದ್ದು, ಸ್ವತಃ ಮುಖ್ಯಮಂತ್ರಿಯವರ ಸೂಚನೆಯಂತೆ ಉನ್ನತ ಅದಿಕಾರಿಗಳ ತಂಡ ಸಮಸ್ಯೆ ಅಧ್ಯಯನ ಮಾಡುತ್ತಿದ್ದು, ಇನ್ನಾದರೂ ಕಾಡಾನೆ ಹಾವಳಿಯಿಂದ ಜನರಿಗೆ ಮುಕ್ತಿ ಸಿಗಲಿದೆಯಾ ಎಂಬುದನ್ನು ನೋಡಬೇಕಿದೆ.

ವರದಿ: ಮಂಜುನಾಥ ಕೆ.ಬಿ, ಟಿವಿ9 ಹಾಸನ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Tue, 8 November 22