ಸಂಪನ್ನಗೊಂಡ ಹಾಸನಾಂಬೆ ಸಾರ್ವಜನಿಕ ದರ್ಶನೋತ್ಸವ, ಗರ್ಭಗುಡಿ ಬಾಗಿಲು ಬಂದ್​ಗೆ ಕ್ಷಣಗಣನೆ

| Updated By: ಆಯೇಷಾ ಬಾನು

Updated on: Nov 15, 2023 | 8:54 AM

ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಮುಚ್ಚಲು ಕ್ಷಣಗಣನೆ ಆರಂಭವಾಗಿದ್ದು ಮಧ್ಯಾಹ್ನ 12 ನಂತರ ವಿಶ್ವರೂಪ ದರ್ಶನದ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತೆ. ಹಾಸನಾಂಬೆ ನವೆಂಬರ್ 3ರಿಂದ 13 ದಿನಗಳ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಗಣ್ಯರು, ರಾಜಕಾರಣಿಗಳು, ಸಿನಿಮಾ ನಟ-ನಟಿಯರು ಸೇರಿದಂತೆ ಲಕ್ಷಾಂತರ ಜನರು ಅಮ್ಮನ ದರ್ಶನ ಪಡೆದುಕೊಂಡಿದ್ದು, ಇದೀಗ ಇಂದು ಹಾಸನಾಂಬೆಯ ದರ್ಶನಕ್ಕೆ ತೆರೆ ಬಿದ್ದಿದೆ.

ಸಂಪನ್ನಗೊಂಡ ಹಾಸನಾಂಬೆ ಸಾರ್ವಜನಿಕ ದರ್ಶನೋತ್ಸವ, ಗರ್ಭಗುಡಿ ಬಾಗಿಲು ಬಂದ್​ಗೆ ಕ್ಷಣಗಣನೆ
ಹಾಸನಾಂಬೆ
Follow us on

ಹಾಸನ, ನ.15: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ (Hasanamba Temple) ಕೊನೆಯ ದಿನದ ದರ್ಶನಕ್ಕೂ ಭಕ್ತ ಸಾಗರವೇ ಹರಿದು ಬಂದಿತ್ತು. ಇಂದು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಅಪಾರ ಭಕ್ತರು ಅಮ್ಮನ ದರ್ಶನ ಮಾಡಿ ಆಶೀರ್ವಾದ ಪಡೆದ್ರು. ನವೆಂಬರ್ 2ರಂದು ಹಾಸನಾಂಬೆ ದೇವಿಯ ಗರ್ಭಗುಡಿಯನ್ನು ತೆರೆಯಲಾಗಿದ್ದು ನವೆಂಬರ್ 3ರಿಂದ 13 ದಿನಗಳ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಗಣ್ಯರು, ರಾಜಕಾರಣಿಗಳು, ಸಿನಿಮಾ ನಟ-ನಟಿಯರು ಸೇರಿದಂತೆ ಲಕ್ಷಾಂತರ ಜನರು ಅಮ್ಮನ ದರ್ಶನ ಪಡೆದುಕೊಂಡಿದ್ದು, ಇದೀಗ ಇಂದು ಹಾಸನಾಂಬೆಯ ದರ್ಶನಕ್ಕೆ ತೆರೆ ಬಿದ್ದಿದೆ. ಅಮ್ಮನ ದರ್ಶನಕ್ಕೆ ಒಂದು ವರ್ಷ ಕಾಯಲೇಬೇಕು. ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಮುಚ್ಚಲು ಕ್ಷಣಗಣನೆ ಆರಂಭವಾಗಿದ್ದು ಮಧ್ಯಾಹ್ನ 12 ನಂತರ ವಿಶ್ವರೂಪ ದರ್ಶನದ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತೆ.

ಕಳೆದ 12 ದಿನಗಳಿಂದ 13 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದು 5.80 ಕೋಟಿ ಮೊತ್ತದ ಆದಾಯ ಹರಿದು ಬಂದಿದೆ. ಸಾರ್ವಜನಿಕ ದರ್ಶನದ ಕೊನೆಯ ದಿನವಾದ ಇಂದು ಕೂಡ ಹಲವು ಶಾಸಕರು, ಮಾಜಿ ಸಚಿವರುಗಳು ಹಾಗು ಅಧಿಕಾರಿಗಳು ದೇವಿ ದರ್ಶನ ಪಡೆದು ಪುನೀತರಾದ್ರು. ಇಂದು ಬೆಳಿಗ್ಗೆ 7.45ರ ವರೆಗೆ ತಾಯಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಸದ್ಯ ದರ್ಶನಕ್ಕೆ ತೆರೆ ಬಿದ್ದಿದೆ.

ಸಿದ್ದೇಶ್ವರ ಸ್ವಾಮಿ ರಥೋತ್ಸವ, ಕೆಂಡ ಹಾಯುವಾಗ ಮುಗ್ಗರಿಸಿದ ಮಹಿಳೆ

ಇನ್ನು ಹಾಸನಾಂಬೆ ದರ್ಶನೋತ್ಸವ ಹಿನ್ನೆಲೆಯಲ್ಲಿ ರಾತ್ರಿ ಅದ್ದೂರಿಯಾಗಿ ಸಿದ್ದೇಶ್ವರ ಸ್ವಾಮಿ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಹತ್ತಾರು ಕಲಾ ತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದರು. ರಥೋತ್ಸವ ನಂತರ ಕೆಂಡೋತ್ಸವ ನಡೆಯುತ್ತಿದ್ದು ಕೆಂಡೋತ್ಸದಲ್ಲೂ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ. ಪ್ರತಿ ವರ್ಷ ಮುಂಜಾನೆ ನಡೆಯುವ ಕೆಂಡೋತ್ಸವದಲ್ಲಿ ನೂರಾರು ಭಕ್ತರು ಕೆಂಡ ಹಾಯ್ದಿದ್ದಾರೆ. ಈ ವೇಳೆ ಅವಘಡವೊಂದು ಸಂಭವಿಸಿದೆ. ಕೆಂಡ ಹಾದು ನಂತರ ಮಹಿಳೆ ಮುಗ್ಗರಿಸಿದ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ. ತಕ್ಷಣವೇ ಮಹಿಳೆಯನ್ನು ಮೇಲೆತ್ತಿ ರಕ್ಷಿಸಲಾಗಿದೆ. ಹಾಸನಾಂಬೆ ದೇವಾಲಯದ ಮುಂಭಾಗ ಅಪಾರ ಭಕ್ತರು ನೆರೆದಿದ್ದಾರೆ.

ಇದನ್ನೂ ಓದಿ: Hasanamba Temple: ಹಾಸನಾಂಬೆ ದೇಗುಲಕ್ಕೆ ಆಗಮಿಸಿದ ನಟ ನಿಖಿಲ್ ಕುಮಾರಸ್ವಾಮಿ; ಇಲ್ಲಿದೆ ವಿಡಿಯೋ

ಮಧ್ಯಾಹ್ನ 12 ಗಂಟೆ ನಂತರ ಬಂದ್ ಆಗಲಿರುವ ಗರ್ಭಗುಡಿ ಬಾಗಿಲು

ಇಂದು ಮಧ್ಯಾಹ್ನ 12 ಗಂಟೆ ನಂತರ ಅರ್ಚಕರು ಶಾಸ್ತ್ರೋಕ್ತವಾಗಿ‌ ಗರ್ಭಗುಡಿ ಬಾಗಿಲು ಮುಚ್ಚಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸ್ಥಳೀಯ ಶಾಸಕ ಸ್ವರೂಪ್‌ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ‌ ಮಹಮದ್ ಸುಜಿತಾ, ಎಸಿ ಮಾರುತಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತೆ. ಬಾಗಿಲು ಮುಚ್ಚುವ ಮುನ್ನ ದೀಪ‌ ಹಚ್ಚಿ, ದೇವಿಯ ಮುಂದೆ ಹೂವು, ನೈವೇದ್ಯ ಇಡಲಾಗುತ್ತೆ. ಆನಂತರ ಶಾಸ್ತ್ರೋಕ್ತವಾಗಿ ಬಾಗಿಲು ಬಂದ್ ಮಾಡಲಾಗುತ್ತೆ. ಮತ್ತೆ ತಾಯಿಯ ದರ್ಶನ ಸಿಗೋದು ಮುಂದಿನ ವರ್ಷವೇ.

ಹಾಸನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:41 am, Wed, 15 November 23