ಹಾಸನ: ಹೆಚ್​ಡಿ ದೇವೇಗೌಡರ ಆಪ್ತ ಮಾಜಿ ಎಂಎಲ್​ಸಿ ಪಟೇಲ್ ಶಿವರಾಂ ನಿಧನ

ವಿಧಾನ ಪರಿಷತ್ ಸದಸ್ಯ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ, ನಾಲ್ಕು ದಶಕಗಳ ಕಾಲ ಜೆಡಿಎಸ್​ನಲ್ಲಿ ಸಕ್ರಿಯರಾಗಿದ್ದ ಹಾಸನದ ಪ್ರಭಾವಿ ಮುಖಂಡ ಪಟೇಲ್ ಶಿವರಾಂ ನಿಧನರಾದರು. ಹೆಚ್​ಡಿ ದೇವೇಗೌಡರ ಆಪ್ತರೂ ಆಗಿದ್ದ ಶಿವರಾಂ ನಿಧನಕ್ಕೆ ಪಕ್ಷದ ನಾಯಕರು ಸಂತಾಪ ಸೂಚಿಸಿದ್ದಾರೆ.

ಹಾಸನ: ಹೆಚ್​ಡಿ ದೇವೇಗೌಡರ ಆಪ್ತ ಮಾಜಿ ಎಂಎಲ್​ಸಿ ಪಟೇಲ್ ಶಿವರಾಂ ನಿಧನ
ಪಟೇಲ್ ಶಿವರಾಂ
Image Credit source: Facebook
Updated By: Ganapathi Sharma

Updated on: Jan 16, 2025 | 10:30 AM

ಹಾಸನ, ಜನವರಿ 16: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಆಪ್ತರಾಗಿದ್ದ, ಹಾಸನ ಜಿಲ್ಲೆಯ ಪ್ರಭಾವಿ ಜೆಡಿಎಸ್ ಮುಖಂಡರಾಗಿದ್ದ, ಮಾಜಿ ಎಂಎಲ್​ಸಿ ಪಟೇಲ್ ಶಿವರಾಂ (75) ಗುರುವಾರ ಬೆಳಗ್ಗೆ ನಿಧನರಾರದರು. ಹಾಸನ ನಗರದ ಹೌಸಿಂಗ್ ಬೋರ್ಡ್‌‌ ನಿವಾಸದಲ್ಲಿ ಪಟೇಲ್ ಅವರು ನಿಧನ ಹೊಂದಿದರು. ಅವರು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಪಟೇಲ್ ಶಿವರಾಂ 2010-2016ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕ, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಪಟೇಲ್ ಶಿವರಾಂ ಕಾರ್ಯನಿರ್ವಹಿಸಿದ್ದರು.

ಸುಮಾರು 4 ದಶಕಗಳ ಕಾಲ ಜೆಡಿಎಸ್​​ನಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದ ಪಟೇಲ್ ಶಿವರಾಂ ನಿಧನಕ್ಕೆ ಜೆಡಿಎಸ್ ನಾಯಕರು ಸಂತಾಪ ಸೂಚಿಸಿದ್ದಾರೆ.

ದೇವೇಗೌಡ ಸಂತಾಪ


ಮಾಜಿ ವಿಧಾನ ಪರಿಷತ್ ಸದಸ್ಯರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಹಾಗು ಜಾತ್ಯತೀತ ಜನತಾ ದಳ ಪಕ್ಷದ ಹಾಸನದ ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಪಟೇಲ್ ಶಿವರಾಂ ಅವರು ಹೃದಯಾಘಾತದಿಂದ ನಿಧನರಾದ ವಿಷಯ ಅತೀವ ದುಃಖವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.

ಅತೀವ ದುಃಖವುಂಟು ಮಾಡಿದೆ: ಕುಮಾರಸ್ವಾಮಿ

ಹಾಸನ ಜಿಲ್ಲೆಯ ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಮಾಜಿ ಸದಸ್ಯರು, ಸರಳರು, ಸಜ್ಜನರು, ನಮ್ಮ ತಂದೆಯವರ ಆತ್ಮೀಯರೂ ಆಗಿದ್ದ ಹಿರಿಯರಾದ ಶ್ರೀ ಪಟೇಲ್ ಶಿವರಾಂ ಅವರ ನಿಧನ ನನಗೆ ಅತೀವ ದುಃಖವುಂಟು ಮಾಡಿದೆ. ಜೆಡಿಎಸ್​​ ಪಕ್ಷದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಶ್ರೀಯುತರು, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಅತ್ಯಂತ ಪ್ರಾಮಾಣಿಕವಾಗಿ ದುಡಿದಿದ್ದರು. ಅವರ ನಿಧನ ವೈಯಕ್ತಿಕವಾಗಿ ನನಗೆ ಬಹುದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸೂರಜ್​ ರೇವಣ್ಣ ಅವಾಚ್ಯ ಶಬ್ದ ಬಳಕೆ: ಪಕ್ಷ ವಿರೋಧಿ ಕೆಲಸ ಮಾಡುವವರು ಸೂ…

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:21 am, Thu, 16 January 25