ಹಾಸನ: ಆಸ್ಪತ್ರೆಗೆ ವಾಸ್ತು ಪ್ರಕಾರವೇ ವಿದ್ಯುತ್ ಸ್ಟೇಷನ್ ಅಳವಡಿಕೆಗೆ ಹೆಚ್​ಡಿ ರೇವಣ್ಣ ಸೂಚನೆ

ಮಾಜಿ ಸಚಿವ ಹೆಚ್.​ ಡಿ. ರೇವಣ್ಣ ಅವರಿಗೆ ಜ್ಯೋತಿಷ್ ಶಾಸ್ತ್ರದಲ್ಲಿ ಅಪಾರ ನಂಬಿಕೆ. ಸದಾ ತಮ್ಮ ಬಳಿ ನಿಂಬೆ ಹಣ್ಣನ್ನು ಇಟ್ಟುಕೊಳ್ಳುವ ಇವರು, ಇತ್ತೀಚೆಗೆ ಹೈದರಾಬಾದ್​ನಲ್ಲಿ ಖ್ಯಾತ ಜ್ಯೋತಿಷ್ಯರನ್ನು ಭೇಟಿ ಮಾಡಿ ವಿವಿಧ ಪೂಜೆಗಳನ್ನು ನಡೆಸಿದ್ದರು. ಇದೀಗ, ಹಾಸನದಲ್ಲಿ ನೂತನವಾಗಿ ನಿರ್ಮಿಸಿರುವ ಆಸ್ಪತ್ರೆಗೆ ವಾಸ್ತು ಪ್ರಕಾರವೇ ವಿದ್ಯುತ್ ಸ್ಟೇಷನ್ ಅಳವಡಿಕೆಗೆ ಸೂಚನೆ ನೀಡಿದ್ದಾರೆ.

ಹಾಸನ: ಆಸ್ಪತ್ರೆಗೆ ವಾಸ್ತು ಪ್ರಕಾರವೇ ವಿದ್ಯುತ್ ಸ್ಟೇಷನ್ ಅಳವಡಿಕೆಗೆ ಹೆಚ್​ಡಿ ರೇವಣ್ಣ ಸೂಚನೆ
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್​ಡಿ ರೇವಣ್ಣ ಸಭೆ
Edited By: Rakesh Nayak Manchi

Updated on: Aug 17, 2023 | 4:40 PM

ಹಾಸನ, ಆಗಸ್ಟ್ 17: ನೂತನವಾಗಿ ನಿರ್ಮಿಸಿರುವ ಆಸ್ಪತ್ರೆಗೆ ವಾಸ್ತು ಪ್ರಕಾರವೇ ವಿದ್ಯುತ್ ಸ್ಟೇಷನ್ ಅಳವಡಿಸುವಂತೆ ಅಧಿಕಾರಿಗಳಿಗೆ ಮಾಜಿ ಸಚಿವ ಹೆಚ್​.ಡಿ. ರೇವಣ್ಣ (H.D.Revanna) ಅವರು ಸೂಚನೆ ನೀಡಿದ್ದಾರೆ. ಹಾಸನದ (Hassan) ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ರೇವಣ್ಣ ಅವರು ಈ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಹೆಚ್.ಡಿ.ರೇವಣ್ಣ ಅಲ್ಲದೆ, ಶಾಸಕ ಹೆಚ್.ಪಿ.ಸ್ವರೂಪ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ರೇವಣ್ಣ, ನಾನು ವಾಸ್ತು ಪ್ರಕಾರ ಇನ್ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ಮಾಡಿಕೊಟ್ಟಿದ್ದೇನೆ. ಎಲ್ಲವೂ ರೆಡಿ ಇದೆ. ಕರೆಂಟ್ ಸ್ಟೇಷನ್ ಹಾಕಬೇಕಾದರೆ ಅದನ್ನು ದಕ್ಷಿಣ, ಪಶ್ಚಿಮದಲ್ಲಿಡಬೇಕ ಎಂಬುದನ್ನು ಒಂದು ಸ್ವಲ್ಪ ವಾಸ್ತು ನೋಡಿ ಇಡುವಂತೆ ಸೂಚಿಸಿದರು.

ಕರೆಂಟ್ ಸ್ಟೇಷನ್ ಮಾಡುವಾಗ ಸಿಂಗಲ್ ಪೋಲ್‌ ಮಾಡಬಹುದಾ ಅಥವಾ ಯಾವ ತರಹ ಮಾಡುತ್ತೀರಾ ನೋಡಿ. ಸುಮ್ಮನೆ ಅರ್ಧ ಎಕರೆ ಪ್ರದೇಶದಲ್ಲಿ ಮಾಡುವುದು ಬೇಡ. ಒಂದು 10 ಗುಂಟೆ ಜಾಗದಲ್ಲಿ ಮಾಡಿ. ಎರಡು ಮಹಿಳಾ ಕಾಲೇಜಿದೆ, ಕುಳಿತುಕೊಂಡು ಮೇಡಂ ಜೊತೆ ಚರ್ಚೆ ಮಾಡಿ ಎಂದು ಸೂಚನೆ ನೀಡಿದರು.

ಇದನ್ನೂ ಓದಿ: ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣನ ಅತ್ಯಾಪ್ತ, ಗ್ರಾನೈಟ್ ಉದ್ಯಮಿ ಬರ್ಬರ ಹತ್ಯೆ

ಮೆಡಿಕಲ್ ಕಾಲೇಜು ಹತ್ತಿರ ಮಾಡುವಾಗ ಎಕ್ಸಿಕ್ಯೂಟಿವ್ ಇಂಜಿನಿಯರ್, ನೀವು ಎಲ್ಲಾ ಕೂತ್ಕಂಡು ಚರ್ಚೆ ಮಾಡಿ. ಎಲ್ಲವನ್ನೂ ವಾಸ್ತು ಪ್ರಕಾರ ಮಾಡಿ. ಏಕೆಂದರೆ ಹತ್ತಾರು ಜನ ಆಸ್ಪತ್ರೆಯಲ್ಲಿ ಉಳಿಯುತ್ತಾರೆ ನೋಡಿಕೊಂಡು ಮಾಡಿ ಎಂದರು.

ಮಾಜಿ ಸಚಿವ ರೇವಣ್ಣ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚಿನ ನಂಬಿಕೆ ಇಟ್ಟುಕೊಂಡವರಾಗಿದ್ದಾರೆ. ಸದಾ ತಮ್ಮ ಬಳಿ ನಿಂಬೆ ಹಣ್ಣನ್ನು ಇಟ್ಟುಕೊಂಡಿರುತ್ತಾರೆ. ಇತ್ತೀಚೆಗೆ ನಡೆದ ಅಧಿವೇಶದಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ-ಕಾಂಗ್ರೆಸ್ ಸದಸ್ಯರು ರೇವಣ್ಣ ಅವರ ವ್ಯಂಗ್ಯವಾಡಿದ್ದರು. ಕೊಬ್ಬರಿ ಬೆಲೆ ಇಳಿಕೆಯಾಗಿರುವುದನ್ನು ಸದನದಲ್ಲಿ ಗಮನ ಸೆಳೆಯಲು ಕೊಬ್ಬರಿ ಹಿಡಿದುಕೊಂಡು ಬಂದಿದ್ದ ರೇವಣ್ಣಗೆ, ನಿಂಬೆ ಹಣ್ಣು ಬದಲು ಕೊಬ್ಬರಿ ತೆಗೆದುಕೊಂಡು ಬಂದಿದ್ದೀರಲ್ಲ ಎಂದು ಕಾಂಗ್ರೆಸ್ ಸದಸ್ಯರು ಕಿಚಾಯಿಸಿದ್ದರು.

ಅಲ್ಲದೆ, ಚುನಾವಣೆ ಸಮಯದಲ್ಲಿ ರೇವಣ್ಣ ಅವರು ನಿಂಬೆಯನ್ನು ಸರಿಯಾಗಿ ಮಂತ್ರಿಸಿಲ್ಲ. ಇಲ್ಲವಾದರೆ ಜೆಡಿಎಸ್ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗಳಿಸುತ್ತಿತ್ತು ಎಂದು ಬಿಜೆಪಿ ಸದಸ್ಯರು ರೇವಣ್ಣ ಅವರ ಕಾಲೆಳೆದಿದ್ದರು. ನಂತರ, ಸದ್ದಿಲ್ಲದೆ ಕುಟುಂಬ ಸಮೇತರಾಗಿ ಹೈದರಾಬಾದ್​ಗೆ ತೆರಳಿದ ರೇವಣ್ಣ, ಖ್ಯಾತ ಜ್ಯೋತಿಷ್ಯ ವೇಣುಸ್ವಾಮಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕೆಲವೊಂದು ವಾಮಾಚಾರದ ಪೂಜೆಗಳು ನಡೆದವು ಎನ್ನಲಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Manjunath KB
Follow Us