AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮ್ಸ್​ಗೆ ಮತ್ತೊಂದು ಹಿರಿಮೆ; ಆಯುಷ್ಮಾನ್​ನಲ್ಲಿ ಗುರಿ ಸಾಧನೆಯ ಗರಿಮೆ!

ಆಸ್ಪತ್ರೆಗೆ ಬರುವ ರೋಗಿಗಳನ್ನು ಗುರುತಿಸಿ, ಅವರಿಗೆ ಸರ್ಕಾರ ಬಡವರಿಗಾಗಿ ಮೀಸಲಿಟ್ಟಿರುವ ಯೋಜನೆಯ ಅನುಕೂಲ ಆಗುವಂತೆ ಮಾಡಿದ್ದೇವೆ. ಹಾಗಾಗಿಯೇ ಇದೊಂದು ವಿಶೇಷ ಸಂದರ್ಭ ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಹೇಳಿದ್ದಾರೆ.

ಹಿಮ್ಸ್​ಗೆ ಮತ್ತೊಂದು ಹಿರಿಮೆ; ಆಯುಷ್ಮಾನ್​ನಲ್ಲಿ ಗುರಿ ಸಾಧನೆಯ ಗರಿಮೆ!
ಹಿಮ್ಸ್ ಆಸ್ಪತ್ರೆ
Follow us
TV9 Web
| Updated By: preethi shettigar

Updated on: Sep 01, 2021 | 7:37 AM

ಹಾಸನ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ(ಎಬಿಎಆರ್‌ಕೆ) ಅನುಷ್ಠಾನದಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಹಿಮ್ಸ್) ರಾಜ್ಯದಲ್ಲೇ 2ನೇ ರ‍್ಯಾಂಕ್ ಪಡೆದು ಮತ್ತೊಮ್ಮೆ ನಾಡಿನ ಗಮನ ಸೆಳೆದಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮೊದಲ ರ‍್ಯಾಂಕ್ ಪಡೆದಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆ ಮೂರನೇ ಸ್ಥಾನ ಪಡೆದುಕೊಂಡಿದೆ.

ಎರಡು ಸಾವಿರ ಹಾಸಿಗೆ ಸಾಮರ್ಥ್ಯದ ಕಿಮ್ಸ್ ಆಸ್ಪತ್ರೆ ಸಹಜವಾಗಿಯೇ ಮೊದಲೆ ಸ್ಥಾನ ಅಲಂಕರಿಸಿದೆ. ಆದರೆ ಕೇವಲ 750 ಹಾಸಿಗೆ ಹೊಂದಿರುವ ಹಿಮ್ಸ್‌ ಉತ್ತಮ ಸಾಧನೆ ಮೂಲಕ ಗಮನಸೆಳೆದಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚು ಹೆಚ್ಚು ಎಬಿಎಆರ್‌ಕೆನಡಿ ಚಿಕಿತ್ಸೆ ನೀಡುವ ಮೂಲಕ ಬಡವರಿಗೆ ನೆರವಾಗುವ ಜತೆಗೆ ಉತ್ತಮ ಸಾಧನೆ ಮಾಡಿರುವುದು ನಿಜಕ್ಕೂ ಸಾಧನೆಯೇ ಸರಿ. ಮೈಸೂರಿನಲ್ಲಿ 1500 ಹಾಸಿಗೆಗಳಿದ್ದರೂ, 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ ಇನ್ನುವುದನ್ನು ಇಲ್ಲಿನ ಗಮನಿಸಬೇಕಾಗಿದೆ.

ಹಾಸನದಲ್ಲಿ ಸರ್ಕಾರಿ ಆಸ್ಪತ್ರೆಯೇ ಅಚ್ಚುಮೆಚ್ಚು ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದಿಂದ ಹಾಸನದ ಹಿಮ್ಸ್​​ನಲ್ಲಿ ಹಾಸಿಗೆ ಲಭ್ಯತೆಯೂ ಕಡಿಮೆಯಿತ್ತು. ಕಳೆದ ಏಪ್ರಿಲ್ 21 ರಿಂದ ಜುಲೈ 21 ರ ವರೆಗೆ ಹಿಮ್ಸ್ ಆಸ್ಪತ್ರೆಯಲ್ಲಿ ಕಡಿಮೆ ಹಾಸಿಗೆಗಳಿದ್ದರೂ ಕೂಡ ಪರ್ಯಾಯ ವ್ಯವಸ್ಥೆ ಮೂಲಕ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಷ್ಟೇ ಅಲ್ಲ ಅದರಲ್ಲಿ ಅರ್ಹರನ್ನು ಗುರುತಿಸಿ ಎಬಿಎಆರ್ ಕೆ ಯೋಜನೆಯಡಿ ಫಲಾನುಭವಿಗಳನ್ನಾಗಿ ಮಾಡಿ ಸರ್ಕಾರದ ನೆರವನ್ನು ನೀಡಲಾಗಿದೆ.

ಏಪ್ರಿನ್ ನಿಂದ ಜುಲೈ ಅವಧಿಯಲ್ಲಿ ಹಿಮ್ಸ್‌ನಲ್ಲಿ 3075 ಕೊವಿಡ್ ರೋಗಿಗಳಿಗೆ ಹಾಗೂ 1794 ಕೊವಿಡೇತರ ರೋಗಿಗಳು ಸೇರಿ 4869 ರೋಗಿಗಳಿಗೆ ಚಿಕಿತ್ಸೆ ನೀಡಿದ್ದರೆ, ಕಿಮ್ಸ್‌ನಲ್ಲಿ ಕ್ರಮವಾಗಿ 1817 ಮತ್ತು 3078 ಸೇರಿ 4895 ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. ಮೈಸೂರಿನಲ್ಲಿ 806 ಹಾಗೂ 2806 ರೋಗಿಗಳು ಸೇರಿ ಒಟ್ಟು 2892 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ಏಪ್ರಿಲ್-ಜುಲೈ ನಡುವಿನ ಹೋಲಿಕೆಯಲ್ಲಿ ಹಿಮ್ಸ್ ಸಾಧನೆ ಮೊದಲಿದೆ. ಹಿಮ್ಸ್ ಸಾಧನೆ 2750 ಇದ್ದರೆ, ಕಿಮ್ಸ್ 2500 ಮತ್ತು ಮೈಸೂರು ಕೇವಲ 755 ಇದೆ. ಹಿಮ್ಸ್​ನಲ್ಲಿ ವೈದ್ಯರ ಉತ್ತಮವಾದ ಸೇವೆಯ ಜೊತೆಗೆ ಸಿಬ್ಬಂದಿಯ ಸ್ಪಂದನೆಯೂ ಉತ್ತಮವಾಗಿರುವುದು ಈ ಸಾಧನೆಯಿಂದಲೇ ದೃಢವಾಗಿದೆ.

ಕಡಿಮೆ ಸಾಮರ್ಥ್ಯ ಗರಿಷ್ಠ ಸಾಧನೆಯ ಗರಿಮೆ ಈ ಕುರಿತು ಮಾತನಾಡಿರುವ ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಲ್ಲಾ ರೋಗಿಗಳಿಗೆ ನೀಡಿರುವ ಚಿಕಿತ್ಸೆ ಅನುಪಾತ ಆಧರಿಸಿ ರ‍್ಯಾಂಕಿಂಗ್ ಕೊಟ್ಟಿದ್ದಾರೆ. ನಮ್ಮಲ್ಲಿ ಬೆಡ್ ಸಂಖ್ಯೆ ಕಡಿಮೆ ಇದ್ದರೂ, ಉತ್ತಮ ಸಾಧನೆ ಮಾಡಿರುವ ತೃಪ್ತಿ ಇದೆ. 2ನೇ ಸ್ಥಾನ ಪಡೆದಿರುವುದೂ ಮಹತ್ವದ ಸಾಧನೆಯೇ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹೆಚ್ಚು ಹೆಚ್ಚು ರೋಗಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಅನುಕೂಲ ಕಲ್ಪಿಸಿಕೊಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಗುರುತಿಸಿ, ಅವರಿಗೆ ಸರ್ಕಾರ ಬಡವರಿಗಾಗಿ ಮೀಸಲಿಟ್ಟಿರುವ ಯೋಜನೆಯ ಅನುಕೂಲ ಆಗುವಂತೆ ಮಾಡಿದ್ದೇವೆ. ಹಾಗಾಗಿಯೇ ಇದೊಂದು ವಿಶೇಷ ಸಂದರ್ಭ ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಹೇಳಿದ್ದಾರೆ.

ಈ ಹಿಂದೆ ಸಂಸ್ಥೆಯ ವಿದ್ಯಾರ್ಥಿಗಳು ಹೋಂ ಐಸೋಲೇಶನ್​ನಲ್ಲಿರುವವರ ಕೌನ್ಸೆಲಿಂಗ್‌ನಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರು. ಇದೀಗ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನದಲ್ಲಿ 2ನೇ ರ‍್ಯಾಂಕ್ ಪಡೆದಿರುವುದು ಸಂತಸ ಇಮ್ಮಡಿಗೊಳಿಸಿದೆ ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರ‍್ಯಾಂಕ್​ನಿಂದ ಹಲವು ಅನುಕೂಲ ಹಿಮ್ಸ್‌ಗೆ ಸಿಕ್ಕಿರುವ ಈ ರ‍್ಯಾಂಕ್‌ನಿಂದ ಅನೇಕ ಅನುಕೂಲಗಳಾಗಲಿವೆ. ಒಂದು ಎಬಿಎಆರ್‌ಕೆ ಯೋಜನೆಯಡಿ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ಹಾಗೂ ನಾನಾ ರೀತಿಯ ಉಪಯೋಗ ಕಲ್ಪಿಸಲಾಗಿದೆ. ಮತ್ತೊಂದು ಆರ್ಥಿಕ ಸಂಪನ್ಮೂಲ ಕ್ರೂಢೀಕರಣವೂ ಸಾಧ್ಯವಾಗಿದೆ. ಹೀಗೆ ಲಭ್ಯವಾದ ಅನುದಾನವನ್ನು ಬೇರೆ ಬೇರೆ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಬಹುದಾಗಿದೆ. ಆಗ ಹಿಮ್ಸ್‌ಗೆ ಮತ್ತಷ್ಟು ಸೌಲಭ್ಯ ಸಿಗುವುದರ ಜೊತೆಗೆ ಬಡ ಜನರಿಗೆ ಮತ್ತಷ್ಟು ಅನುಕೂಲ ಕೂಡ ಆಗಲಿದೆ.

ಮೊದಲ ಸ್ಥಾನದ ಗುರಿ ಇದು ನಮ್ಮ ಸಂಸ್ಥೆಯ ಎಲ್ಲರೂ ತಂಡವಾಗಿ ಕೆಲಸ ಮಾಡಿದ್ದರಿಂದ ಸಿಕ್ಕಿರುವ ಪ್ರತಿಫಲ ಹಾಗಾಗಿ ಎಲ್ಲರೂ ಅಭಿನಂದನಾರ್ಹರು. ಇದರಿಂದ ಹೆಚ್ಚು ಜನರಿಗೆ ಅನುಕೂಲ ಆಗಿದೆ, ಎಂದರೆ ಹೆಚ್ಚು ಬಡವರಿಗೆ ಉಚಿತ ಚಿಕಿತ್ಸೆ ಸಿಕ್ಕಿದೆ ಎಂದೇ ಅರ್ಥ. ಹಾಗಾಗಿ ಮತ್ತಷ್ಟು ಪರಿಶ್ರಮ ವಹಿಸಿ ಸಂಸ್ಥೇಯನ್ನು ನಂಬರ್ ಒನ್ ಮಾಡುವುದು ನಮ್ಮೆಲ್ಲರ ಗುರಿ ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ತಿಳಿಸಿದ್ದಾರೆ.

ವರದಿ: ಮಂಜುನಾಥ್ ಕೆ.ಬಿ

ಇದನ್ನೂ ಓದಿ: ಅತಿ ಹೆಚ್ಚು ಸರ್ಜರಿಗಳನ್ನು ಯಶಸ್ವಿಯಾಗಿ ನೆರವೇರಿಸಿದ ಕಿಮ್ಸ್​​; ಕರ್ನಾಟಕದಲ್ಲಿಯೇ ಅಗ್ರಸ್ಥಾನವನ್ನು ಪಡೆಯುವಲ್ಲಿ ಸಫಲ

ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕನಸು ನನಸಾಗಲು ಬೇಕಿನ್ನೆಷ್ಟು ಕಾಲ?