ರಾಜ್ಯದಲ್ಲಿ ಅಮುಲ್​ ಉತ್ಪನ್ನಗಳ ಮಾರಾಟ ವಿಚಾರ: ನಂದಿನಿ ಹಾಲು ಉತ್ಪನ್ನಗಳನ್ನು ಖರೀದಿಸುವ ಮೂಲಕ ವಿರೋಧ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್

|

Updated on: Apr 10, 2023 | 10:28 AM

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಸನದ ಕೆಎಂಎಫ್​ ನಂದಿನಿ ಹಾಲಿನ ಕೇಂದ್ರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಮುಲ್​ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹಾಸನ: ರಾಜ್ಯದ ಹಾಲು ಮಾರುಕಟ್ಟೆಯನ್ನು, ಗುಜರಾತ್​​ನ (Gujarat) ಅಮುಲ್ (Amul)​ ಕಂಪನಿ ಅತಿಕ್ರಮಿಸಿಕೊಳ್ಳಲು ರಾಜ್ಯ ಸರ್ಕಾರ (Karnataka Government) ನೆರವು ನೀಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಚುನಾವಣೆ ಹೊಸ್ತಿಲಿನಲ್ಲಿ ಪ್ರತಿಪಕ್ಷಗಳು ಇದನ್ನು ಅಸ್ತ್ರವಾಗಿ ಬಳಸಿಕೊಂಡಿದ್ದು, ಸರ್ಕಾರದ ಮೇಲೆ ಝಳಪಿಸುತ್ತಿವೆ. ಇನ್ನು ಸಾರ್ವಜನಿಕರು ಸೇವ್​ ಕೆಎಂಎಫ್ (Save KMF)​ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಈಗ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar)​ ಹಾಸನದ (Hassan) ಕೆಎಂಎಫ್​ ನಂದಿನಿ ಹಾಲಿನ ಕೇಂದ್ರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಮುಲ್​ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಂದಿನಿ ಅಳಿವು-ಉಳಿವಿನ ಪ್ರಶ್ನೆ, ಕರ್ನಾಟಕದ ಹಾಲು ಉತ್ಪಾದಕರ ಪ್ರಶ್ನೆ

ಡಿಕೆ ಶಿವಮಕುಮಾರ್​ ಹಾಲು, ತುಪ್ಪ, ಮಜ್ಜಿಗೆ, ಮೈಸೂರು ಪಾಕ್ ಸೇರಿ ಎರಡೂವರೆ ಸಾವಿರ ಮೌಲ್ಯದ ನಂದಿನಿ ಉತ್ಪನ್ನ ಖರೀದಿಸಿದ್ದಾರೆ. ನಂತರ ಅವುಗಳನ್ನು ಸ್ಥಳದಲ್ಲಿದ್ದವರಿಗೆ ಹಂಚಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಂದಿನಿ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹಾಗೇ ಕರ್ನಾಟಕದ ಹಾಲು ಉತ್ಪಾದಕರ ಪ್ರಶ್ನೆಯಾಗಿದೆ. ನಂದಿನಿ ಉಳಿಸಿಕೊಳ್ಳೋದು ಕರ್ನಾಟಕ ರೈತರ ಬದುಕಿನ ಪ್ರಶ್ನೆಯಾಗಿದೆ ಎಂದರು.

ಸುಮಾರು 80 ಲಕ್ಷ ರೈತರು ಹಾಲು ಉತ್ಪಾದನೆ‌ ಮಾಡುತ್ತಾರೆ. ಎಲ್ಲರೂ ಕೆಎಂಎಫ್​​ ಹಾಲು ಒಕ್ಕೂಟಕ್ಕೆ ಹಾಲು ಹಾಕುತ್ತಾರೆ, ರೈತರು ಕಟ್ಟಿದ ನಂದಿನಿ ಇದು. ಲೀಟರ್ ಗೆ 27-28 ರೂ ಕೊಡುತ್ತಾರೆ. ಸರ್ಕಾರ 5 ರೂ. ಸಹಾಯಧನ ಕೊಡುತ್ತಿದೆ. ಅಮುಲ್ ಗುಜರಾತ್​​ನದ್ದು, ಅದು ಕೂಡ ರೈತರದ್ದು ನಮ್ಮದೇನು ತಕರಾರಿಲ್ಲ. ಆದರೆ ನಮ್ಮನ್ನು ಹಿಂದಕ್ಕೆ ಹಾಕಿ, ಅದನ್ನು ಮುಂದೆ ಮಾಡುತ್ತಿರೋದು ಸರ್ಕಾರದ ಕ್ರಮ‌ ಸರಿಯಿಲ್ಲ. ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು ಎಂದು ಹೇಳಿದರು.

ನಮ್ಮ ರೈತರು ಬೆಲೆ ಏರಿಕೆ ನಡುವೆ ಹಾಲು ಉತ್ಪಾದನೆ ಮಾಡುತ್ತಾರೆ ಅವರಿಗೆ ಸರ್ಕಾರ ಏನೂ ಸಹಾಯ ಮಾಡಿಲ್ಲ. ನಮ್ಮ ಹಾಲನ್ನೇ ಮಾರಾಟ ಮಾಡಲು ಅಗುತ್ತಿಲ್ಲ. ಹಾಗಾಗಿ ನಾವೇ ಪ್ರೊತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಬೇಕು. ಹಾಲಿನ ಉತ್ಪನ್ನಗಳಾದ ಮೈಸೂರು ಪಾಕ್, ಪೆಡಾ, ಬಿಸ್ಕೆಟ್ ,ಚಾಕಲೇಟ್​​ನ್ನು ಪಕ್ಷದ ಅಧ್ಯಕ್ಷನಾಗಿ ಖರೀದಿ ಮಾಡಿದ್ದೇನೆ. ನಮ್ಮ ರೈತರನ್ನು ಉಳಿಸಿಕೊಳ್ಳಬೇಕು, ನಮ್ಮ ನಂದಿನಿಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಂದಿನಿ ಹಾಲಿಗೆ ಪ್ರಚಾರಕರಾಗಿದ್ದವರು ದಿವಂಗತ ನಟ ಡಾ ರಾಜ್​ಕುಮಾರ್. ಬಳಿಕ ದಿವಂಗತ ನಟ ಪುನೀತ್ ರಾಜಕುಮಾರ ಅವರು ಆಗಿದ್ದರು. ಸರ್ಕಾರ ರಾಜ್​ಕುಮಾರ್ ಪುನೀತ್ ರಾಜ್​ಕುಮಾರ್  ಅವರನ್ನು ಕೆಎಂಎಫ್​ನ ರಾಯಭಾರಿ ಮಾಡಿದ್ದರು. ರಾಜ್​ಕುಮಾರ್  ಅವರು ಇಂದು ಇಲ್ಲದೆ ಇಲ್ಲದಿರಬಹುದು, ಪುನೀತ್ ರಾಜ್​ಕುಮಾರ್ ಇಲ್ಲದಿರಬಹುದು, ಆದರೆ ಅವರು ರಾಜ್ಯಕ್ಕೆ ಮಾಡಿದ ಸೇವೆ ಏನು ಎಂದು ಎಲ್ಲರಿಗೆ ಗೊತ್ತಿದೆ. ರೈತರು ಬದುಕಬೇಕು ಅಂತಾ ರಾಯಭಾರಿ ಆಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ನೀವು ಮುಖ್ಯಮಂತ್ರಿಯಾಗಿ ಇನ್ಮೊಂದು ತಿಂಗಳು ಇರುತ್ತಿರೋ, ಒಂದುವರೆ ತಿಂಗಳು ಇರುತ್ತಿರೋ ಗೊತ್ತಿಲ್ಲ. ನಿಮ್ಮದು ಮುಗೀತು, ಯಾಕೆ ನಮ್ಮ ರೈತರಿಗೆ ಅವಮಾನ ಮಾಡುತ್ತೀದ್ದೀರಿ? ಅದಕ್ಕೆ ನಾನು ಪ್ರತಿಭಟನೆ ಮಾಡಲು ಬಂದಿಲ್ಲ. ನಾನು ಬೆಳಿಗ್ಗೆ ಹಾಲು ತಗೊಬೇಕಿತ್ತು, ಹಾಲು ತೆಗೆದುಕೊಂಡಿದ್ದೀನಿ, ಬಿಸ್ಕೆಟ್ ತೆಗೆದುಕೊಂಡಿದ್ದೀನಿ ಅಷ್ಟೇ.  ರೈತರು ತ್ಯಾಗಮಾಡಿ ಕಡಿಮೆ ದರದಲ್ಲಿ ಲಾಸ್ ಆದರು ಹಾಲು ಹಾಕುತ್ತಿದ್ದಾರೆ. ಕೆಎಂಎಫ್ ನಷ್ಟದಲ್ಲಿದೆ. ಮಾಜಿ ಸಚಿವ ಹೆಚ್​ ಡಿ ರೇವಣ್ಣ ಅವರು ಕೆಎಂಎಫ್​ ಅಧ್ಯಕ್ಷರಾಗಿದ್ದರು ಎಂದು ಹೇಳಿದರು.

ಇದನ್ನೂ ಓದಿ: Amul vs Nandini: ಬೆಂಗಳೂರಿಗೆ ಅಮುಲ್, ವಿವಾದ ಹಾಗೂ ವಾಸ್ತವ; ಸಮಗ್ರ ಮಾಹಿತಿ ಇಲ್ಲಿದೆ

ಕರ್ನಾಟಕಕ್ಕೆ ಅಮುಲ್​ ಪ್ರವೇಶ

ಭಾರತದ ಹಾಲಿನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಅಮುಲ್ ಇದೀಗ ಕರ್ನಾಟಕ ಮಾರುಕಟ್ಟೆ ಪ್ರವೇಶಿಸಿದೆ. ಗುಜರಾತ್ ಕೋಆಪರೇಟಿವ್ ಹಾಲು ಮಾರಾಟ ಮಹಾಮಂಡಳ ನಡೆಸುತ್ತಿರುವ ಅಮುಲ್ ಕೆಲವು ದಿನಗಳ ಹಿಂದೆ ಕರ್ನಾಟಕ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ಘೋಷಿಸಿತ್ತು. “ಹಾಲು ಮತ್ತು ಮೊಸರಿನಿಂದ ತಾಜಾತನದ ಹೊಸ ಅಲೆ ಬೆಂಗಳೂರಿಗೆ ಬರುತ್ತಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬರಲಿದೆ” ಅಂತ ಏಪ್ರಿಲ್ 5ರಂದು ಅಮುಲ್ ಟ್ವೀಟ್ ಮಾಡಿತ್ತು.

ಕರ್ನಾಟಕ ಹಾಲು ಒಕ್ಕೂಟ (KMF)

ಕೆಎಂಎಫ್ ಸಂಸ್ಥೆಯು ಹಾಲು, ಮೊಸರು, ತುಪ್ಪ, ಐಸ್ ಕ್ರೀಮ್, ಬೆಣ್ಣೆ ಕೆಲವು ಸಿಹಿತಿಂಡಿಗಳಾದ ಕಾಜು, ಮೈಸೂರ್ ಪಾಕ್, ಪೇಡ ಹೀಗೆ ಹಲವಾರು ಪದಾರ್ಥಗಳನ್ನು ತಯಾರಿಸುತ್ತದೆ. ಕೆಎಂಎಫ್ ಸಂಸ್ಥೆ 1974ರಲ್ಲಿ ಸ್ಥಾಪನೆಯಾಗಿದ್ದು, ದಕ್ಷಿಣ ಭಾರತದಲ್ಲಿ ಅಗ್ರ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿವೆ. ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ 15,043ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಎಂಎಫ್ 26.38 ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ.

ಇದಲ್ಲದೆ ಕೆಎಂಎಫ್ ಅಡಿಯಲ್ಲಿ ಒಟ್ಟು 17, 014 ನೋಂದಾಯಿತ ಸಂಘಗಳಿವೆ. 15, 043 ಸಂಘಗಳು ಸಕ್ರಿಯವಾಗಿವೆ. ಪುತಿದಿನ ಸುಮಾರು 81.66 ಲಕ್ಷದಷ್ಟು ಲೀ ಸರಾಸರಿ ಹಾಲು ಶೇಖರಣೆಯಾಗುತ್ತದೆ ಮತ್ತು 37.17 ಲೀ ಹಾಲು ಮಾರಾಟವಾಗುತ್ತದೆ. 5.92 ಲೀ ಮೊಸರು ಮಾರಾಟವಾಗುತ್ತದೆ. ಕೆಎಂಎಫ್‌ನ ವಾರ್ಷಿಕ ವಹಿವಾಟು 19, 784 ಕೋಟಿ ರೂಪಾಯಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 am, Mon, 10 April 23