ಹಾವೇರಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿ? ವೈದ್ಯರ ನಿರ್ಲಕ್ಷ್ಯ ಎಂದು ಕುಟುಂಬಸ್ಥರ ಕಿಡಿ

|

Updated on: Jun 27, 2024 | 9:22 AM

ಹಾನಗಲ್​ ತಾಲೂಕಿನ ನರೇಗಲ್ಲ ಗ್ರಾಮದ ಗೌಸಿಯಾ ಎಂಬ ಮಹಿಳೆ ಹಾವೇರಿ ನಗರದ ಮಲ್ಲಾಡದ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಗೆ ಡೆಂಗ್ಯೂ ಇದ್ದದ್ದು ದೃಢಪಟ್ಟಿತ್ತು. ಆದರೆ ಮಹಿಳೆ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಆರೋಪ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿ? ವೈದ್ಯರ ನಿರ್ಲಕ್ಷ್ಯ ಎಂದು ಕುಟುಂಬಸ್ಥರ ಕಿಡಿ
ಸಾಂದರ್ಭಿಕ ಚಿತ್ರ
Follow us on

ಹಾವೇರಿ, ಜೂನ್.27: ಹಾವೇರಿ ಜಿಲ್ಲೆಯಲ್ಲಿ ಡೆಂಗ್ಯೂ (Dengue) ಜ್ವರಕ್ಕೆ ಮೊದಲ ಬಲಿಯಾಗಿದೆ?. ಮಹಾಮಾರಿ ಡೆಂಗ್ಯೂಗೆ 30 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹಾನಗಲ್​ ತಾಲೂಕಿನ ನರೇಗಲ್ಲ ಗ್ರಾಮದ ಗೌಸಿಯಾ ಎಂಬ ಮಹಿಳೆ ಹಾವೇರಿ ನಗರದ ಮಲ್ಲಾಡದ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಸಾವಿಗೂ ಮುನ್ನ ನಗರದ ಪಂಡಿತ್ ಆಸ್ಪತ್ರೆಯಲ್ಲಿ ಮಹಿಳೆಗೆ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಗೌಸಿಯಾಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿತ್ತು.

ಗೌಸಿಯಾ ಕಳೆದ ಎರಡು ದಿನದಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಕುಟುಂಬಸ್ಥರು ಮಹಿಳೆಯನ್ನು ಪಂಡಿತ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದರು. ತಪಾಸಣೆ ನಡೆಸಿದ ವೈದ್ಯರು ಮಹಿಳೆಗೆ ಡೆಂಗ್ಯೂ ಇರುವುದಾಗಿ ದೃಢ ಪಡಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಲ್ಲಾಡದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದಾರೆ. ಆದರೆ ಡೆಂಗ್ಯೂನಿಂದಲೇ ಸಾವು ಸಂಭವಿಸಿದೆ ಎಂದು ವೈದ್ಯರು ಇನ್ನೂ ಕೂಡ ದೃಢಪಡಿಸಿಲ್ಲ.

ಇದನ್ನೂ ಓದಿ: ಕರ್ನಾಟಕದಲ್ಲಿ ಡೆಂಗ್ಯೂ ಶೇ 60 ರಷ್ಟು ಏರಿಕೆ!

ಇನ್ನು ಮತ್ತೊಂದೆಡೆ ಗೌಸಿಯಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಗೌಸಿಯಾ ಸಂಬಂಧಿಕರು ಆರೋಪ ಮಾಡಿದ್ದಾರೆ. ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರ ಹಾಕಿದ್ದಾರೆ.

ಮಾಡಿದ ತಪ್ಪು ಮುಚ್ವಿಹಾಕಲು ಐವತ್ತು ಸಾವಿರ ಹಣ ನೀಡಲು ವೈದ್ಯ ಮುಂದಾಗಿದ್ದ ಎಂಬ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು ಮಲ್ಲಾಡದ ಆಸ್ಪತ್ರೆಯ ವೈದ್ಯ ನೀಡಿದ ಹಣವನ್ನು ವಾಪಸ್ ನೀಡುತ್ತೇವೆ. ನಿನಗೆ ಒಂದು ಲಕ್ಷ ಹಣ ನೀಡುತ್ತೇವೆ, ನಮ್ಮ ಮಗಳ ಜೀವ ಕೊಡು ಎಂದು ಮೃತ ಗೌಸಿಯಾ ಸಂಬಂಧಿಕರು ಕಿಡಿಕಾರಿದ್ದಾರೆ. ರಾತ್ರಿ ಎರಡು ಗಂಟೆವರೆಗೂ ಆಸ್ಪತ್ರೆಯ ಮುಂದೆ ಜನರು ಜಮಾಯಿಸಿದ್ದರು. ಆಸ್ಪತ್ರೆಯ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ