ಹಾವೇರಿಯಲ್ಲಿ ಚಿನ್ನ ನಿಕ್ಷೇಪಗಳು ಪತ್ತೆ: ಬಂಗಾರದಂತ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು

ಹಾವೇರಿ ಜಿಲ್ಲೆಯ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗುವ ಕುರಿತು ಚರ್ಚೆ ಜೋರಾಗಿದೆ. 2015ರ ಸಂಶೋಧನೆಯಲ್ಲಿ ಚಿನ್ನದ ನಿಕ್ಷೇಪಗಳು ಪತ್ತೆಯಾಗಿದ್ದವು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಗಣಿಗಾರಿಕೆ ಶುರುವಾಗುವ ಸಾಧ್ಯತೆ ಇದೆ. ಇದರಿಂದ ಭೂಮಿ ಕಳೆದುಕೊಳ್ಳುವ ಭೀತಿ, ನೀರು ಕಲುಷಿತವಾಗುವ ಆತಂಕದಿಂದ ರೈತರು ಆಕ್ರೋಶಗೊಂಡಿದ್ದಾರೆ.

ಹಾವೇರಿಯಲ್ಲಿ ಚಿನ್ನ ನಿಕ್ಷೇಪಗಳು ಪತ್ತೆ: ಬಂಗಾರದಂತ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು
ಚಿನ್ನ ನಿಕ್ಷೇಪಗಳು ಪತ್ತೆ
Image Credit source: tv9 kannada

Updated on: Jun 19, 2026 | 7:56 PM

ಹಾವೇರಿ, ಜೂನ್​​ 19: ಹಾವೇರಿ (haveri) ಸಮೀಪದ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ (gold mining) ಶುರುವಾಗಲಿದೆ ಎಂಬ ವಿಚಾರ ಸದ್ಯ ಚರ್ಚೆಗೆ ಗ್ರಾಸವಾಗಿದೆ. 2015ರಲ್ಲಿ ನಡೆದ ಸಂಶೋಧನೆಯಲ್ಲಿ ಚಿನ್ನ ನಿಕ್ಷೇಪಗಳು ಇರುವುದು ಪತ್ತೆಯಾಗಿತ್ತು. ಹೀಗಾಗಿ ಇದೀಗ ಚಿನ್ನದ ಗಣಿಗಾರಿಕೆ ಪ್ರಾರಂಭಗಲಿದೆ ಎನ್ನಲಾಗುತ್ತಿದೆ. ಈ ಕುರಿತಾಗಿ ಅನ್ನದಾತರಿಗೆ ಆತಂಕ ಹೆಚ್ಚಿದ್ದು, ಭೂಮಿ ಕೊಟ್ಟು ಏನು ಮಾಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • 2015ರಲ್ಲಿ ನಡೆದಿದ್ದ ಸಂಶೋಧನೆಯಲ್ಲಿ ಚಿನ್ನ ನಿಕ್ಷೇಪಗಳು ಪತ್ತೆ
  • ಗಣಜೂರಿನಲ್ಲಿ ಜೋರಾದ ಚಿನ್ನದ ಗಣಿಗಾರಿಕೆ ಶುರುವಾಗುತ್ತೆ ಎಂಬ ಚರ್ಚೆ
  • ಅನ್ನದಾತರಿಗೆ ಹೆಚ್ಚಿದ ಆತಂಕ

2015ರಲ್ಲೇ ಚಿನ್ನ ನಿಕ್ಷೇಪಗಳು ಪತ್ತೆ

ಹಾವೇರಿ ತಾಲೂಕಿನ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ‌ಪ್ರಾರಂಭವಾಗುತ್ತದೆ ಎಂಬ ಚರ್ಚೆ ಶುರುವಾಗಿದೆ. 2015ರಲ್ಲಿ ಸಂಶೋಧನಾ ಮಾಡಿ ಚಿನ್ನ ಇರುವುದು ಖಚಿತಪಡಿಸಲಾಗಿದೆ. ಚಿನ್ನದ ಗಣಿಗಾರಿಕೆಗೆ ಪೂರಕವಾದ ವಾತಾವರಣವಿದ್ದ ಗ್ರಾಮದ ಮೇಲೆ 2015ರಲ್ಲಿ ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿಯ ಕಣ್ಣುಬಿದ್ದಿತ್ತು. ಪ್ರಾಥಮಿಕ ಪರವಾನಗಿ ಮೂಲಕ ಸಂಶೋಧನೆ ಆರಂಭಿಸಿತ್ತು. ಡೆಕ್ಕನ್ ಎಕ್ಸ್‌ಪ್ಲೋರೇಶನ್ ಸರ್ವೀಸಸ್ ಹೆಸರಿನಲ್ಲಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ಕಲ್ಲಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಕಲ್ಲುಗಳಲ್ಲಿ ಯಥೇಚ್ಚವಾಗಿ ಚಿನ್ನದ ಅಂಶವಿರುವುದು ಸಾಬೀತಾಗಿತ್ತು.

ಇದನ್ನೂ ಓದಿ: ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ನಡೆಯಿತು ಶೋಧಕಾರ್ಯ

ಸಂಶೋಧನೆಗಾಗಿ ಕಂಪನಿಯು ಕೋಟ್ಯಂತರ ರೂ ಖರ್ಚು ಮಾಡಿತ್ತು. ರೈತರ ಜಮೀನು ಲೀಜ್ ಹಾಕಿಕೊಂಡು 7 ರಿಂದ 8 ವರ್ಷ ಸಂಶೋಧನೆ ಮಾಡಲಾಗಿತ್ತು. ಅಲ್ಲದೇ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದರು. ಈಗ ಮತ್ತೆ ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗ್ರೀನ್ ಸಿಂಗಲ್ ಕೊಟ್ಟಿದೆ. ಹೀಗಾಗಿ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಶುರುವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ಸದ್ಯದಲ್ಲೇ ಗಣಿಗಾರಿಕೆ ಪ್ರಕ್ರಿಯೆ ಆರಂಭ ಸಾಧ್ಯತೆ

ರಾಯಚೂರಿನ ಹಟ್ಟಿ ಹಾಗೂ ಕೆಜಿಎಫ್‌ ಗಣಿಗಿಂತಲೂ ಹೆಚ್ಚಿನ ಚಿನ್ನ ಗಣಜೂರಿನಲ್ಲಿದೆ ಎನ್ನಲಾಗುತ್ತಿದೆ. ಖಾತ್ರಿಯಾಗುತ್ತಿದ್ದಂತೆ, ಪೂರ್ಣ ಪ್ರಮಾಣದ ಗಣಿಗಾರಿಕೆಗೆ ಅರ್ಜಿ ಸಲ್ಲಿಸಿತ್ತು. ಕೆಲ ಕಾನೂನುಗಳಿಂದ ಅರ್ಜಿ ತಿರಸ್ಕಾರವಾಗಿತ್ತು. ಈಗ ಮಹಾರಾಷ್ಟ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ, ಗಣಜೂರು ಗಣಿಗಾರಿಕೆ ಯೋಜನೆ ಆರಂಭಕ್ಕೆ ಪೂರಕವಾಗಿರುವ ಅಂಶ ಹೊಂದಿರುವ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ಗಣಿಗಾರಿಕೆ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳಿವೆ.

ಜಮೀನು ಕೊಟ್ಟು ಎಲ್ಲಿಗೆ ಹೋಗಬೇಕು: ರೈತರು ಆಕ್ರೋಶ

ಸುಮಾರು 400 ಎಕರೆ ಪ್ರದೇಶ ಗುರುತಿಸಲಾಗಿದೆ. 70ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಹೇರಳವಾಗಿ ಚಿನ್ನದ ನಿಕ್ಷೇಪ ಇದೆ ಎನ್ನಲಾಗಿದೆ. ಕಂಪನಿ ರೈತರೊಂದಿಗೆ ಸಭೆ ಮಾಡಬೇಕು. ನಮಗೆ ಇರುವುದು ಒಂದೆರೆಡು ಎಕರೆ ಜಮೀನು. ನಾವು ಜಮೀನು ಕೊಟ್ಟು ಎಲ್ಲಿಗೆ ಹೋಗಬೇಕು. ಹೀಗಾಗಿ ಮತ್ತೆ ರೈತರಿಗೆ ಕಿರುಕುಳ ಪ್ರಾರಂಭವಾಗಿದೆ ಎಂದು ರೈತ ಸುರೇಶ ಚಲವಾದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹೆಲಿಕಾಪ್ಟರ್ ಮೂಲಕ ಚಿನ್ನ ನಿಕ್ಷೇಪ ಹುಡುಕಾಟ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಸಿ

ಒಟ್ಟಿನಲ್ಲಿ ಗಣಜೂರಿಗೆ ಇತಿಹಾಸ ಪ್ರಸಿದ್ಧ ಹೆಸರು ಚಿನ್ನದೂರು ಎನ್ನಲಾಗಿದೆ. ಈ ಹಿಂದೆಯೇ ಚಿನ್ನದ ನಿಕ್ಷೇಪಗಳು ಇವೆ ಎನ್ನಲಾಗಿದೆ. ಡೆಕ್ಕನ್ ಮೈನಿಂಗ್ ಕಂಪನಿ ಚಿನ್ನದ ಗಣಿಗಾರಿಕೆಗೆ ತುದಿಗಾಲಿನಲ್ಲಿ ನಿಂತಿದೆ. ರೈತರು ಮುಂದಿನ ದಿನಗಳಲ್ಲಿ ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us