AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Haveri ಕೆಡಿಪಿ ಸಭೆ: ಎಲ್ಲದರಲ್ಲೂ ಹಾವೇರಿ ಹಿಂದುಳಿದಿರುವುದು ಯಾಕೆ? ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜುಲೈ 25) ಹಾವೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಿದರು. ಈ ವೇಳೆ ಎಲ್ಲಾ ವಿಚಾರಗಳಲ್ಲೂ ಜಿಲ್ಲೆ ಹಿಂದುಳಿದಿರುವುದರ ಬಗ್ಗೆ ಜಿಲ್ಲಾಧಿಕಾರಿಯವರನ್ನು ಏಕವಚನದಲ್ಲೇ ಸಿಎಂ ಪ್ರಶ್ನಿಸಿದರು.

Haveri ಕೆಡಿಪಿ ಸಭೆ: ಎಲ್ಲದರಲ್ಲೂ ಹಾವೇರಿ ಹಿಂದುಳಿದಿರುವುದು ಯಾಕೆ? ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಹಾವೇರಿ ಜಿಲ್ಲೆಯ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:Jul 25, 2023 | 5:49 PM

Share

ಹಾವೇರಿ, ಜುಲೈ 25: ಮಾನವ ಅಭಿವೃದ್ಧ ಸೂಚ್ಯಂಕ, ಉದ್ಯೋಗ ಸೃಷ್ಟಿ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಹಾವೇರಿ ಜಿಲ್ಲೆ ಹಿಂದುಳಿರುವ ಬಗ್ಗೆ ಇಂದು (ಜುಲೈ 25) ಕೆಡಿಪಿ ಸಭೆಯಲ್ಲಿ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜಿಲ್ಲಾಧಿಕಾರಿ ರಘುನಂದನ್​​ ಮೂರ್ತಿ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

ಎಲ್ಲಾ ವಿಚಾರಗಳಲ್ಲೂ ಹಾವೇರಿ ಜಿಲ್ಲೆ ಹಿಂದುಳಿದಿದೆ. ಇದಕ್ಕೆ ಕಾರಣ ಏನು? ನೀನು ಎಷ್ಟು ದಿನದಿಂದ ಇದಿಯಾ ಎಂದು ಜಿಲ್ಲಾಧಿಕಾರಿಯವರನ್ನು ಸಿಎಂ ಪ್ರಶ್ನಿಸಿದರು. ಇದಕ್ಕೆ, ಜಿಲ್ಲೆಗೆ ಬಂದು ಎಂಟು ತಿಂಗಳಾಗಿವೆ ಎಂದು ಡಿಸಿ ಹೇಳಿದ್ದಾರೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಾವೇರಿ ಹಿಂದಿದೆ, ಉದ್ಯೋಗ ಸೃಷ್ಟಿಯಲ್ಲಿ ಹಾವೇರಿ ಜಿಲ್ಲೆ 27 ನೇ ಸ್ಥಾನ, ಉದ್ಯೋಗ ಸೃಷ್ಟಿ ಮಾಡಲು ಏನ್ ಮಾಡುತ್ತೀಯಾ ಎಂದು ಸಿದ್ದರಾಮಯ್ಯ ಅವರು ಏಕವಚನದಲ್ಲೇ ಪ್ರಶ್ನಿಸಿದರು.

ಸಿದ್ದರಾಮಯ್ಯ ಮಾತಿಗೆ ಸಂಪೂರ್ಣ ಮಾಹಿತಿ ನೀಡಲು ಜಿಲ್ಲಾಧಿಕಾರಿ ಪರದಾಡಿದರು. ಈ ವೇಳೆ, ಕಥೆ ಎಲ್ಲ ಬೇಡ ನೀನು ಬಂದಾಗಿನಿಂದ ಎಷ್ಟ ಅಭಿವೃದ್ಧಿ ಆಗಿದೆ ಹೇಳು? ಉದ್ಯೋಗ ಸೃಷ್ಟಿಯಲ್ಲಿ ನೀವೂ ಕಂಪ್ಲೀಟ್ ಆಗಿ ಹಿಂದಿದ್ದೀರಿ. ಶಿಕ್ಷಣದಲ್ಲಿಯೂ ಹಿಂದುಳಿದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆ ನೋಂದಣಿ ಬಗ್ಗೆ ಸಿದ್ದರಾಮಯ್ಯ ಅವರು ಡಿಸಿಯಿಂದ ಮಾಹಿತಿ ಪಡೆದರು. ಹಾವೇರಿ ಜಿಲ್ಲೆಯಲ್ಲಿ ಒಟ್ಟು 4 ಲಕ್ಷ ಫಲಾನುಭವಿಗಳು ಇದ್ದಾರೆ. ಈವೆರೆಗೆ 1.30 ಲಕ್ಷ ಫಲಾನುಭವಿಗಳ ನೋಂದಣಿ ಆಗಿದೆ. ಇನ್ನೂ 3.70 ಲಕ್ಷ ಫಲಾನುಭವಿಗಳ ನೋಂದಣಿ ಆಗಬೇಕಿದೆ. ಮಳೆ ಪ್ರಮಾಣ ಹೆಚ್ಚು ಇರುವುದರಿಂದ ನೋಂದಣಿ ಕಡಿಮೆ ಆಗಿದೆ ಎಂದು ರಘುನಂದನ್ ಮಾಹಿತಿ ನೀಡಿದರು.

ಇದನ್ನೂ ಓದಿ: ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯಗೆ 20 ಶಾಸಕರು ದೂರು ಕೊಟ್ಟಿದ್ದಾರೆ: ಎನ್ ರವಿಕುಮಾರ್

ಮಾಹಿತಿ ಕಲೆಹಾಕಿದ ನಂತರ ಮಾತನಾಡಿದ ಸಿಎಂ, ಉಚಿತವಾಗಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಆಗಬೇಕು. ನೋಂದಣಿ ಮಾಡಲು ಯಾರೂ ಕೂಡ ಹಣ ಪಡೆಯಬಾರದು. ಹಣ ಪಡೆಯುವ ಬಗ್ಗೆ ಮಾಹಿತಿ ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆಗಸ್ಟ್​ 5 ರಂದು ಗೃಹಜ್ಯೋತಿ ಯೋಜನೆಯನ್ನು ಕಲಬುರಗಿಯಲ್ಲಿ ಉದ್ಘಾಟನೆ ಮಾಡುತ್ತಿದ್ದೇವೆ. ಅಷ್ಟರಲ್ಲಿ ಗೃಹಜ್ಯೋತಿ ನೋಂದಣಿ ಪ್ರಕ್ರಿಯೆ ಮುಕ್ತಾಯ ಮಾಡಬೇಕು ಎಂದರು.

ಆರೋಗ್ಯ ಇಲಾಖೆಯ ಮುಖ್ಯ ಇಂಜಿನಿಯರ್ ಮಂಜಪ್ಪಗೆ ಸಿಎಂ ತರಾಟೆ

ಮಳೆಯಿಂದ ಹಾವೇರಿ ಜಿಲ್ಲಾಸ್ಪತ್ರೆ ಕಟ್ಟಡ ಸೋರುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆಯ ಮುಖ್ಯ ಇಂಜಿನಿಯರ್ ಮಂಜಪ್ಪ ಅವರನ್ನು ಕೆಡಿಪಿ ಸಭೆಯಲ್ಲಿ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡರು. ಮಾರ್ಚ್, ಏಪ್ರಿಲ್​, ಮೇ ತಿಂಗಳಲ್ಲಿ ಯಾಕೆ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ? ಎಷ್ಟು ವರ್ಷದಿಂದ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೀರಿ? ಹಾವೇರಿ ಜಿಲ್ಲಾ ಆಸ್ಪತ್ರೆ ಕಟ್ಟಡ ಸೋರುತ್ತಿದೆ ನೋಡಿದ್ದೀರಾ? ನಿಮ್ಮ ಮನೆಯವರೇ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಏನ್ ಮಾಡುತ್ತಿದ್ದೀರಿ? ನಿಮ್ಮ ಇಲಾಖೆಯ ಮಂಜುನಾಥ್​ನನ್ನು ಸಸ್ಪೆಂಡ್ ಮಾಡಿದ್ದೀನಿ. ಸಮಸ್ಯೆ ಬಗೆಹರಿಸದಿದ್ದರೆ ನಿನ್ನನ್ನೂ ಸಹ ಸಸ್ಪೆಂಡ್ ಮಾಡುತ್ತೇನೆ ಎಂದು ಸಿಎಂ ಎಚ್ಚರಿಸಿದಾಗ, ತಪ್ಪಾಗಿದೆ ಸರ್ ಎಂದು ಮಂಜಪ್ಪ ತಪ್ಪೊಪ್ಪಿಕೊಂಡರು.

ಮೆಡಿಕಲ್ ಕಾಲೇಜು ನಿರ್ಮಾಣದ ವೆಚ್ಚದ ಬಗ್ಗೆ ಸಿಎಂ ಪ್ರಶ್ನೆ

ಹಾವೇರಿ ಮೆಡಿಕಲ್ ಕಾಲೇಜು ನಿರ್ಮಾಣದ ಅಂದಾಜು ವೆಚ್ಚ 365 ಕೋಟಿ. ಈಗ 499 ಕೋಟಿ ರೂಪಾಯಿ ಹೇಗೆ ಆಯ್ತು? 136 ಕೋಟಿ ಹೆಚ್ಚಳ ಆಗಿದ್ಯಾಕೆ? ಅದರ ಜವಾಬ್ದಾರಿ ಯಾರು? ಸಂಪುಟ ಅನುಮೋದನೆ ಆಗಿದ್ಯಾ? ಸಂಪುಟದ ಅನುಮೋದನೆ ಪಡೆಯದೆ ಹೇಗೆ 136 ಕೋಟಿ ಬಿಡುಗಡೆ ಆಗಿದೆ. ಅದನ್ನ ನೀವು ಹೇಗೆ ತೆಗೆದುಕೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಅಕ್ರಮ ವಿಚಾರಗಳನ್ನು ಎಸ್​ಐಟಿಗೆ ಕೊಟ್ಟಿದ್ದೇವೆ. ಸಿಕ್ಕಿಹಾಕಿಕೊಂಡರೆ ನೀವೇ ಸಿಕ್ಕಿಹಾಕಿಕೊಳ್ಳುವುದು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ, ನಾವು ಅಕ್ರಮ ಮಾಡಿಲ್ಲ ಸರ್ ಎಂದು ಮುಖ್ಯ ಇಂಜಮಿಯರ್ ಮಂಜಪ್ಪ ಹೇಳಿದರು. ಹಾವೇರಿ, ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ನಾಲ್ಕು ಮೆಡಿಕಲ್ ಕಾಲೇಜು ನಿರ್ಮಾಣದಲ್ಲಿನ ಅಕ್ರಮದ ಬಗ್ಗೆ ಎಸ್​​ಐಟಿಗೆ ಕೊಟ್ಟಿದ್ದೇವೆ. ತನಿಖೆ ಮಾಡುತ್ತೇವೆ, ಅಕ್ರಮ ಆಗಿದ್ದರೆ ಕ್ರಮ ತಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Tue, 25 July 23