
ಹಾವೇರಿ, ಜೂ.6: ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ಗಿರಿಗೆ ಬ್ರೇಕ್ ಹಾಕಲು ಹಾಗೂ ಗೋಸಂರಕ್ಷಣೆಗೆ ಕಾನೂನಾತ್ಮಕ ಬಲ ತುಂಬಲು ‘ಹಸುವನ್ನು ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮುದಾಯದ ನೂರಾರು ಜನರು ಹಾವೇರಿ ಜಿಲ್ಲೆಯಲ್ಲಿ ಹಠಾತ್ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯ ಹಾನಗಲ್ ಪಟ್ಟಣದ ಪ್ರಮುಖ ಕೇಂದ್ರವಾದ ಎಂ.ಜೆ ಸರ್ಕಲ್ನಲ್ಲಿ ಜಮಾಯಿಸಿದ ಅಂಜುಮನ್-ಎ-ಇಸ್ಲಾಂ ಕಮಿಟಿಯ ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗದೆ, ವಿಶಿಷ್ಟವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಬಳಿಕ ಪಟ್ಟಣದ ತಹಶೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜಂಟಿ ಮನವಿ ಪತ್ರವನ್ನು ರವಾನಿಸಿದರು.
ಇಲ್ಲಿದೆ ನೋಡಿ ವಿಡಿಯೋ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮುದಾಯದ ಮುಖಂಡರು, “ದೇಶದ ಕೆಲವು ಭಾಗಗಳಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ನೈತಿಕ ಪೊಲೀಸ್ಗಿರಿ ನಡೆಸಲಾಗುತ್ತಿದೆ. ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಕೆಲವು ಉಗ್ರ ಹಿಂದುತ್ವವಾದಿ ಸಂಘಟನೆಗಳ ನಡೆ ಖಂಡನೀಯ. ಒಂದು ವೇಳೆ ಕೇಂದ್ರ ಸರ್ಕಾರವೇ ಹಸುವನ್ನು ಅಧಿಕೃತವಾಗಿ ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿದರೆ, ಗೋಸಂರಕ್ಷಣೆಗೆ ಸರ್ಕಾರದ ಮಟ್ಟದಲ್ಲೇ ಹೆಚ್ಚಿನ ಒತ್ತು ಸಿಗುತ್ತದೆ. ಜೊತೆಗೆ ಗೋವಿನ ಹೆಸರಿನಲ್ಲಿ ನಡೆಯುವ ಗಲಾಟೆಗಳು ಹಾಗೂ ರಾಜಕೀಯಕ್ಕೆ ಕಾಯಂ ತೆರೆ ಬೀಳಲಿದೆ” ಎಂದು ಹೇಳಿದ್ದಾರೆ . ಮುಸ್ಲಿಂ ಸಮುದಾಯವೇ ಮುಂಚೂಣಿಗೆ ನಿಂತು ಹಸುವಿನ ರಕ್ಷಣೆಗಾಗಿ ಧ್ವನಿ ಎತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sat, 6 June 26