ಸಾಲದ ಹೊರೆಗೆ ರೈತ ಆತ್ಮಹತ್ಯೆ: ಬ್ಯಾಂಕ್ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದ ರೈತರು, ಕುಟುಂಬಸ್ಥರನ್ನು ವಶಕ್ಕೆ ಪಡೆದ ಪೊಲೀಸ್

ಓಟಿಎಸ್ ಸೌಲಭ್ಯವಿಲ್ಲದೆ ಸಾಲ ಮರುಪಾವತಿ ಮಾಡಲಾಗದೆ ರೈತ ಆತ್ಮಹತ್ಯೆ. ರಾತ್ರೋ ರಾತ್ರಿ ಕುಟುಂಬಸ್ಥರು, ರೈತರು ಧರಣಿ ನಡೆಸಿದ್ದು ಮೃತನ ಕುಟುಂಬಸ್ಥರು ಸೇರಿ ಇಪ್ಪತ್ತೈದಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಲದ ಹೊರೆಗೆ ರೈತ ಆತ್ಮಹತ್ಯೆ: ಬ್ಯಾಂಕ್ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದ ರೈತರು, ಕುಟುಂಬಸ್ಥರನ್ನು ವಶಕ್ಕೆ ಪಡೆದ ಪೊಲೀಸ್
ಪ್ರತಿಭಟನೆ ನಡೆಸುತ್ತಿದ್ದ ರೈತರು, ಕುಟುಂಬಸ್ಥರನ್ನು ವಶಕ್ಕೆ ಪಡೆದ ಪೊಲೀಸರು
Edited By:

Updated on: Jul 29, 2022 | 10:40 PM

ಹಾವೇರಿ: ಓಟಿಎಸ್ ಸೌಲಭ್ಯವಿಲ್ಲದೆ ಸಾಲ ಮರುಪಾವತಿ ಮಾಡಲಾಗದೆ ರೈತ ಆತ್ಮಹತ್ಯೆ(Farmer Suicide) ಮಾಡಿಕೊಂಡ ಘಟನೆ ರಾಣೆಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುದ್ದಪ್ಪನವರ(30) ಆತ್ಮಹತ್ಯೆ ಮಾಡಿಕೊಂಡ ರೈತ. ಇನ್ನು ಮಾಕನೂರು ಗ್ರಾಮದ ಬ್ಯಾಂಕಿನ ಮುಂದೆ ಮೃತದೇಹವಿಟ್ಟು ರೈತರು ಪ್ರತಿಭಟನೆ ನಡೆಸಿದ್ದು ಗ್ರಾಮಸ್ಥರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರು, ರೈತರು ಹಾಗೂ ಮೃತನ ಕುಟುಂಬದವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರ ಮೇಲೂ ಎಸ್ಪಿ ಹನುಮಂತರಾಯ ಸಿಡಿಮಿಡಿಗೊಂಡಿದ್ದಾರೆ. ಕ್ಯಾಮರಾಕ್ಕೆ ಕೈ ಹಿಡಿದು ಮಾಧ್ಯಮದವರ ಮೇಲೆ ಸಿಡಿಮಿಡಿಗೊಂಡಿದ್ದಾರೆ.

ಘಟನೆ ಹಿನ್ನೆಲೆ

ಮೂರು ಎಕರೆ ಹತ್ತು ಗುಂಟೆ ಜಮೀನು ಹೊಂದಿದ್ದ ಮೃತ ರೈತ ಮುದ್ದಪ್ಪನವರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಮಾಕನೂರು ಗ್ರಾಮದ ಯೂನಿಯನ್ ಬ್ಯಾಂಕ್ ಸೇರಿದಂತೆ ವಿವಿಧೆಡೆ ಬ್ಯಾಂಕ್ ಮತ್ತು ಕೈಸಾಲ ಮಾಡಿಕೊಂಡಿದ್ದರು. ಸುಮಾರು ವರ್ಷಗಳ ಹಿಂದೆ ಆರು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು. ಒನ್ ಟೈಂ ಸೆಟ್ಲಮೆಂಟ್ ಯೋಜನೆ ಲಾಭ ಸಿಗದೆ ಸಾಲದ ಮೊತ್ತ ಬೆಟ್ಟದಂತೆ ಬೆಳೆದಿದೆ. ಹೀಗಾಗಿ ಚಿಂತೆಗೀಡಾಗಿದ್ದಾರೆ. ಇದರಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಗತಿ ನಮಗೆ ಬರೋದು ಬೇಡ ಎಂದು ರೈತರೆಲ್ಲ ಯೋಚಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ರೈತನ ಮೃತದೇಹ ಮಾಕನೂರು ಗ್ರಾಮದ ಬ್ಯಾಂಕಿನ ಮುಂದಿಟ್ಟು ಪ್ರತಿಭಟನೆ ಮಾಡಲು ರೈತರು ಸಿದ್ಧತೆ ನಡೆಸಿದ್ದರು. ಆದ್ರೆ ಬೆಳಿಗ್ಗೆಯೇ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾ‌ಂತರಿಸಲು ಪೊಲೀಸರು ಸತಾಯಿಸಿದ್ದಾರೆ. ಮೃತನ ಕುಟುಂಬಸ್ಥರು ಮೃತದೇಹಕ್ಕಾಗಿ ಕಾದು ಕುಳಿತಿದ್ದರು. ಆದ್ರೆ ಪೊಲೀಸರು ರೈತರ ದಾರಿ ತಪ್ಪಿಸಿ ಬೇರೆ ಮಾರ್ಗದ ಮೂಲಕ ಮೃತದೇಹವನ್ನು ನೇರವಾಗಿ ಮನೆಗೆ ತಂದಿದ್ದಾರೆ. ಆಗ ರಾತ್ರೋ ರಾತ್ರಿ ಕುಟುಂಬಸ್ಥರು, ರೈತರು ಧರಣಿ ನಡೆಸಿದ್ದು ಮೃತನ ಕುಟುಂಬಸ್ಥರು ಸೇರಿ ಇಪ್ಪತ್ತೈದಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಮೃತನ ತಾಯಿ, ಸಹೋದರಿ ಹಾಗೂ ಬೆರಳೆಣಿಕೆಯಷ್ಟು ಸಂಬಂಧಿಕರು ಮೃತದೇಹವನ್ನು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗಿದ್ದಾರೆ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 10:37 pm, Fri, 29 July 22