AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕ್​ಲೈನ್ ವೆಂಕಟೇಶ್​ ನಿವಾಸಕ್ಕೆ ಮುತ್ತಿಗೆ ಹಾಕಿದ ಹೆಚ್​.ಡಿ.ಕುಮಾರಸ್ವಾಮಿ ಅಭಿಮಾನಿಗಳು: ಬ್ಯಾರಿಕೇಡ್ ತಳ್ಳಿ ಒಳನುಗ್ಗಲು ಯತ್ನ

ರಾಕ್​ಲೈನ್​ ವೆಂಕಟೇಶ್ ನಿವಾಸಕ್ಕೆ ಬೆಳ್ಳಂಬೆಳಗ್ಗೆಯೇ ಮುತ್ತಿಗೆ ಹಾಕಿರುವ ಕುಮಾರಸ್ವಾಮಿ ಹಿಂಬಾಲಕರು ರಾಕ್​ಲೈನ್ ವೆಂಕಟೇಶ್ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ರಾಕ್​ಲೈನ್ ವೆಂಕಟೇಶ್​ ನಿವಾಸಕ್ಕೆ ಮುತ್ತಿಗೆ ಹಾಕಿದ ಹೆಚ್​.ಡಿ.ಕುಮಾರಸ್ವಾಮಿ ಅಭಿಮಾನಿಗಳು: ಬ್ಯಾರಿಕೇಡ್ ತಳ್ಳಿ ಒಳನುಗ್ಗಲು ಯತ್ನ
ರಾಕ್​ಲೈನ್​ ವೆಂಕಟೇಶ್ ನಿವಾಸಕ್ಕೆ ಮುತ್ತಿಗೆ ಹಾಕಿದ ಹೆಚ್​.ಡಿ.ಕುಮಾರಸ್ವಾಮಿ ಅಭಿಮಾನಿಗಳು
TV9 Web
| Edited By: |

Updated on: Jul 10, 2021 | 8:35 AM

Share

ಬೆಂಗಳೂರು: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವಿನ ಜಟಾಪಟಿ ತಾರಕಕ್ಕೇರಿದ್ದು ಅಭಿಮಾನಿಗಳ ನಡುವೆಯೂ ಜಗಳ ಆರಂಭವಾಗಿದೆ. ಏತನ್ಮಧ್ಯೆ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸುಮಲತಾ ಆಪ್ತ, ಚಿತ್ರ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ವಿರುದ್ಧ ಹೆಚ್​ಡಿಕೆ ಅಭಿಮಾನಿಗಳು, ಜೆಡಿಎಸ್​ ಕಾರ್ಯಕರ್ತರು ಕೆಂಡಾಮಂಡಲವಾಗಿದ್ದಾರೆ. ರಾಕ್​ಲೈನ್​ ವೆಂಕಟೇಶ್ ನಿವಾಸಕ್ಕೆ ಬೆಳ್ಳಂಬೆಳಗ್ಗೆಯೇ ಮುತ್ತಿಗೆ ಹಾಕಿರುವ ಕುಮಾರಸ್ವಾಮಿ ಹಿಂಬಾಲಕರು ರಾಕ್​ಲೈನ್ ವೆಂಕಟೇಶ್ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಸುಮಲತಾ ವಿರುದ್ಧ ಮಾತನಾಡಿದ ಕುಮಾರಸ್ವಾಮಿ ಮೇಲೆ ಗಂಭೀರ ಆರೋಪ ಮಾಡಿದ್ದ ರಾಕ್​ಲೈನ್​ ವೆಂಕಟೇಶ್, ತಮ್ಮ ಮತ್ತು ಸುಮಲತಾ ಅಂಬರೀಶ್ ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದು ಹೇಳಿದ್ದರು. ಹೆಚ್​ ಡಿ ಕುಮಾರಸ್ವಾಮಿ ಅವರು ಆಡಿಯೋ ವಿಡಿಯೋ ಬಾಂಬ್ ಎಂದು ಬೆದರಿಕೆ ಹಾಕುವುದು ಹೊಸದಲ್ಲ ಎಂದಿದ್ದ ರಾಕ್‌ಲೈನ್ ವೆಂಕಟೇಶ್, ಚುನಾವಣೆ ವೇಳೆ ಚುನಾವಣಾ ಪ್ರಚಾರಕ್ಕಾಗಿ ನಾವೆಲ್ಲರೂ ಹೋಟೆಲ್‌ನಲ್ಲಿದ್ದೆವು. ಆಗ ನಾನು ಮತ್ತು ಸುಮಲತಾ ಹೋಟೆಲ್‌ಗೆ ತೆರಳುತ್ತಿದ್ದ ದೃಶ್ಯಗಳನ್ನು ಹೋಟೆಲ್‌ನ ಸಿಸಿ ಕ್ಯಾಮರಾದಿಂದ ಪಡೆದು ಆ ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು.ಅದಕ್ಕೆ ಅಶ್ಲೀಲ ಚಿತ್ರ ಸೇರಿಸಿ ದುರ್ಬಳಕೆಗೆ ಪ್ಲ್ಯಾನ್ ಮಾಡಿದ್ರು. ಅವರ ಚಾನಲ್‌ನಲ್ಲಿದ್ದ ಅಂಬರೀಶ್ ಅಭಿಮಾನಿಯೇ ಇದನ್ನು ನನಗೆ ಹೇಳಿದ್ದರು ಎಂದು ರಾಕ್‌ಲೈನ್ ವೆಂಕಟೇಶ್ ಆರೋಪಿಸಿದ್ದರು.

ಈ ವಿಚಾರದಿಂದ ಕುಪಿತರಾದ ಕುಮಾರಸ್ವಾಮಿ ಅಭಿಮಾನಿಗಳು ರಾಕ್​ಲೈನ್ ನಿವಾಸಕ್ಕೆ ಮುತ್ತಿಗೆ ಹಾಕಿ, ಕ್ಷಮೆ ಕೇಳುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಮೊದಲೇ ಮುನ್ಸೂಚನೆ ಇದ್ದ ಕಾರಣ ರಾಕ್​ಲೈನ್ ವೆಂಕಟೇಶ್ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ರಾಕ್​ಲೈನ್ ನಿವಾಸದ ಎದುರು ಒಂದು ಕೆಎಸ್​ಆರ್​ಪಿ ತುಕಡಿ ನಿಯೋಜಿಸಿ, ರಾಕ್​ಲೈನ್ ನಿವಾಸಕ್ಕೆ ತೆರಳುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದರು. ಆದರೆ, ಇದರಿಂದ ಅಕ್ಕಪಕ್ಕದ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಗಾಡಿ ಒಳಗೆ ಹೋಗುವುದಕ್ಕೂ ಬಿಡುತ್ತಿಲ್ಲ. ನಮಗೆ ತೊಂದರೆಯಾಗುತ್ತಿದೆ ಎಂದು ಕಿಡಿಕಾರಿದ್ದರು. ಪೊಲೀಸ್ ಭದ್ರತೆ ಇದ್ದರೂ ಕುಮಾರಸ್ವಾಮಿ ಅಭಿಮಾನಿಗಳು ಬ್ಯಾರಿಕೇಡ್ ತಳಿ ಒಳಗೆ ನುಗ್ಗಲು ಯತ್ನಿಸಿದ್ದಾರೆ.

ಇದನ್ನೂ ಓದಿ: ನನ್ನ- ಸುಮಲತಾ ಮಧ್ಯೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು: ಅಂಬರೀಷ್ ಕುಟುಂಬದ ಅತ್ಯಾಪ್ತ ರಾಕ್​ಲೈನ್ ವೆಂಕಟೇಶ್ 

ಸುಮಲತಾದು ಕಠೋರ ಹೃದಯ; ನಟಿ ರಮ್ಯಾಗೆ ಆದ ಸ್ಥಿತಿ ಸುಮಲತಾಗೂ ಆಗುತ್ತೆ: ಎಲ್. ಆರ್. ಶಿವರಾಮೇಗೌಡ ಭವಿಷ್ಯ