ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ: ಶೃಂಗೇರಿ-ಹೊರನಾಡು ಸೇರಿದಂತೆ ಪ್ರವಾಸ ತಾಣಗಳ ರಸ್ತೆ ಸಂಚಾರ ಬಂದ್

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದೆ. ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್​ಆರ್​ ಪುರ, ಮೂಡಿಗೆರೆ ಕಳಸ ತಾಲೂಕಿನಾದ್ಯಂತ ಧಾರಾಕಾರವಾಗಿ ಕಳೆದ ಮೂರು ದಿನಗಳಿಂದ ಮಳೆ‌ ಸುರಿಯುತ್ತಿದ್ದು ಮಲೆನಾಡು ಭಾಗದ ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಂದ್ ಆಗಿದೆ.

ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ: ಶೃಂಗೇರಿ-ಹೊರನಾಡು ಸೇರಿದಂತೆ ಪ್ರವಾಸ ತಾಣಗಳ ರಸ್ತೆ ಸಂಚಾರ ಬಂದ್
ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ: ಶೃಂಗೇರಿ-ಹೊರನಾಡು ಸೇರಿದಂತೆ ಪ್ರವಾಸ ತಾಣಗಳ ರಸ್ತೆ ಸಂಚಾರ ಬಂದ್
Edited By:

Updated on: Jul 18, 2024 | 8:10 PM

ಚಿಕ್ಕಮಗಳೂರು, ಜುಲೈ 18: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಸುರಿಯುತ್ತಿರುವ ಧಾರಾಕಾರ ಮಳೆ (Rain) ಅವಾಂತರಗಳನ್ನೇ ಸೃಷ್ಟಿಸಿ ಜೀವ ಭಯವನ್ನ ಮೂಡಿಸಿದೆ. ನೋಡ ನೋಡುತ್ತಿದ್ದಂತೆ ಮನೆಗಳು ಕುಸಿದು ಬೀಳುತ್ತಿವೆ. ತುಂಗ, ಹೇಮಾವತಿ ಆರ್ಭಟಕ್ಕೆ ಜನ ಕಂಗಾಲಾಗಿದ್ದಾರೆ. ಸದ್ಯ ಮುಂದುವರೆದ ಭಾರೀ ಮಳೆ‌ ಹಿನ್ನೆಲೆ ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಂದ್​ ಆಗಿದೆ. ಸಂಪೂರ್ಣ ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ವಾಹನ ಸವಾರರಿಗೆ ಹಳುವಳ್ಳು ಮಾರ್ಗವಾಗಿ ಸಂಚಾರ ಮಾಡಲು‌ ಸೂಚನೆ ನೀಡಲಾಗಿದೆ.

ಶೃಂಗೇರಿಯಿಂದ ಹೊರನಾಡು ಮುಖ್ಯ ರಸ್ತೆ ಬಂದ್

ಕಳಸ ಪಟ್ಟಣಕ್ಕೆ ಸಂಪರ್ಕಿಸುವ ಮತ್ತೊಂದು ರಸ್ತೆಯೂ ಬಂದ್ ಆಗಿದೆ. ಬಿಳಾಲುಕೊಪ್ಪದಿಂದ ಬಸರೀಕಟ್ಟೆಗೆ ಹೋಗುವ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಂದ್ ಆಗಿದೆ. ಮಧ್ಯಾಹ್ನ ಬಳಿಕ‌ ಕಳಸ‌, ಕುದುರೆಮುಖ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನಾಳೆ ರಜೆ

ಮಲೆನಾಡು ಭಾಗದ 6 ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ನಗರ, ಅಂಬಳೆ ಹೋಬಳಿ, ಲಕ್ಯಾ ಹೋಬಳಿ ‌ಹೊರತು ಪಡಿಸಿ ಚಿಕ್ಕಮಗಳೂರು, ಮೂಡಿಗೆರೆ, ಕಳಸ,ಶೃಂಗೇರಿ, ಕೊಪ್ಪ, ಎನ್​ಆರ್​ ಪುರ ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಮುಂಜಾಗ್ರತವಾಗಿ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್​, ಸಂಧ್ಯಾವಂದನೆ ಮಂಟಪ ಮುಳುಗಡೆ

ಕ್ಷಣಕ್ಷಣಕ್ಕೂ ಅವಾಂತರಗಳನ್ನೇ ಸೃಷ್ಟಿ ಮಾಡುತ್ತಿರುವ ವರುಣಾರ್ಭಟಕ್ಕೆ ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಆರ್ಭಟಿಸುತ್ತಿದೆ. ತುಂಗಾ ನದಿ ಶೃಂಗೇರಿ ಶಾರದಾ ಮಠದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆ ಸೃಷ್ಟಿ ಮಾಡಿದರೆ ಭದ್ರಾ ನದಿ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮೇಲೆ ಹರಿಯುತ್ತಿದ್ದು ಕಳೆದ 12 ಗಂಟೆಯಿಂದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು ಕಳಸ-ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.

ಮಳೆ ಆರ್ಭಟಕ್ಕೆ ಜಿಲ್ಲೆಯಾದ್ಯಂತ 180ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದು ಮನೆ ಕಳೆದುಕೊಂಡ‌ ಜನರು ಪರದಾಡಿವಂತೆ ಮಾಡಿದೆ. ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಂತಿ ಗ್ರಾಮದಲ್ಲಿ ನೋಡ ನೋಡುತ್ತಿದ್ದಂತೆ ಗ್ರಾಮ ಪಂಚಾಯತಿಯಿಂದ ನಿರ್ಮಿಸಿ ಬಾಡಿಗೆಗೆ ನೀಡಿದ ಕಟ್ಟಡ ಕುಸಿದು ಬಿದ್ದಿದ್ದು. ಕಟ್ಟಡದ ಹಿಂಭಾಗದ ಗೋಡೆ ಕುಸಿಯುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, 15ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ

ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲು ಗ್ರಾಮದ ಮಂಜು ಶೆಟ್ಟಿ ಎಂಬುವವರ ಮನೆ ಸಂಪೂರ್ಣ ಕುಸಿದಿದ್ದು ಮನೆಯಲ್ಲಿದ್ದ ನಾಲ್ವರು ಮನೆಯಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಒಂದು ಕಡೆ ಮಳೆ ಆರ್ಭಟಿಸಿ ಅವಾಂತರ ಸೃಷ್ಟಿ ಮಾಡಿದ್ರೆ. ಮಳೆಯಿಂದ ಜಲಪಾತಗಳಿಗೆ ಜೀವ ಕಳೆ ಬಂದಿದ್ದು, ಭೋರ್ಗರೆಯುತ್ತಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಹೊನ್ನಮ್ಮನ ಹಳ್ಳ, ಝರಿ ಫಾಲ್ಸ್ ದೃಶ್ಯ ಕಾವ್ಯ ಸೃಷ್ಟಿಸಿದೆ.

ಆರ್ಭಟಿಸುತ್ತಿರುವ ಮಳೆ ಕಡಿಮೆಯಾಗುವ ಲಕ್ಷಣ ಕಾಫಿನಾಡಿನಲ್ಲಿ ಕಾಣಿಸುತ್ತಿಲ್ಲ. ಇಂದು ಮತ್ತು ನಾಳೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us