AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಂಬುಲೆನ್ಸ್ ಸುಗಮ ಸಂಚಾರ 1,800 ಕೋಟಿ ಟೆಂಡರ್ ರದ್ದು; ಮತ್ತೆ ಅಸಮಾಧಾನ ಹೊರ ಹಾಕಿದ ಹೈಕೋರ್ಟ್

1,800 ಕೋಟಿ ಟೆಂಡರ್ ಅನ್ನು ಆರೋಗ್ಯ ಸಚಿವರ ಸೂಚನೆಯಂತೆ ರದ್ದುಗೊಳಿಸಿದ ಹಿನ್ನೆಲೆಯಲ್ಲೆ ಹೈಕೋರ್ಟ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ.

ಆ್ಯಂಬುಲೆನ್ಸ್ ಸುಗಮ ಸಂಚಾರ 1,800 ಕೋಟಿ ಟೆಂಡರ್ ರದ್ದು; ಮತ್ತೆ ಅಸಮಾಧಾನ ಹೊರ ಹಾಕಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್​
ಆಯೇಷಾ ಬಾನು
|

Updated on: Jun 01, 2021 | 1:02 PM

Share

ಬೆಂಗಳೂರು: ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ರೂಪಿಸಲು ನಿಗದಿಪಡಿಸಿದ್ದ 1,800 ಕೋಟಿ ಟೆಂಡರ್ ಅನ್ನು ಆರೋಗ್ಯ ಸಚಿವರ ಸೂಚನೆಯಂತೆ ರದ್ದುಗೊಳಿಸಿದ ಹಿನ್ನೆಲೆಯಲ್ಲೆ ಹೈಕೋರ್ಟ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ.

ಯಾವುದೇ ಕಾರಣವಿಲ್ಲದೆ ಜನೋಪಯೋಗಿ ಟೆಂಡರ್ ಪ್ರಕ್ರಿಯೆ ರದ್ದು ಮಾಡಿದ್ದಕ್ಕೆ ಹೊಣೆ ಯಾರು? ಈ ಬಗ್ಗೆ ಸಾರ್ವಜನಿಕರಿಗೆ ಸರ್ಕಾರ ಉತ್ತರ ಹೇಳಬೇಕು. ಟೆಂಡರ್ ಆಗಿದ್ದರೆ ಇಷ್ಟರಲ್ಲಿ ಆ್ಯಂಬುಲೆನ್ಸ್ ಲಭ್ಯವಾಗುತ್ತಿತ್ತು. ಕೊವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನೆರವಾಗುತ್ತಿತ್ತು ಎಂದು ಸಿಜೆ ಅಭಯ್ ಶ್ರೀನಿವಾಸ್ ಒಕಾ‌ ಅಸಮಾಧಾನ ಹೊರ ಹಾಕಿದ್ದಾರೆ. ಕೋರ್ಟ್‌ನಲ್ಲಿ ಕೇಸ್ ಬಾಕಿಯಿದ್ದುದರಿಂದ ಹೊಸ ಪ್ರಕ್ರಿಯೆ ಇಲ್ಲ. ಸರ್ಕಾರದ ಕ್ರಮದ ಬಗ್ಗೆ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ಹೈಕೋರ್ಟ್‌ಗೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿದ್ದು ಜೂ.24ರೊಳಗೆ ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ಈ ಹಿಂದೆ ಏನಾಗಿತ್ತು? ಬೆಂಗಳೂರಿನ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪೋ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ತುರ್ತು ಸ್ಥಿತಿಯಲ್ಲಿ ರೋಗಿಗಳನ್ನ ಉಳಿಸೋದಕ್ಕೆ ಗೋಲ್ಡನ್‌ ಹವರ್‌ನಲ್ಲಿ ಚಿಕಿತ್ಸೆ ಅಗತ್ಯ. ಟ್ರಾಫಿಕ್‌ ಜಾಮ್‌ನಲ್ಲಿ ಆ್ಯಂಬುಲೆನ್ಸ್‌ ಸಿಲುಕಿಯೇ ಹಲವು ರೋಗಿಗಳ ಜೀವ ಹೋಗ್ತಿದೆ. ಇದನ್ನ ತಪ್ಪಿಸೋಕೆ ಕ್ರಮಕೈಗೊಳ್ಳುವಂತೆ ನಿರ್ದೇಶನ ಕೋರಿ ಭಾರತ ಪುನರುತ್ಥಾನ ಟ್ರಸ್ಟ್ ಪಿಐಎಲ್‌ ಸಲ್ಲಿಸಿತ್ತು. ಹೈಕೋರ್ಟ್‌ ನೋಟಿಸ್‌ಗೆ ಉತ್ತರಿಸಿದ್ದ ಸರ್ಕಾರ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆಂದು ಸರ್ಕಾರ 1800 ಕೋಟಿ ರೂಪಾಯಿಗಳ ಯೋಜನೆ ರೂಪಿಸಲಾಗಿದೆ ಅಂತ ತಿಳಿಸಿತ್ತು. ಇದಕ್ಕಾಗಿ ಟೆಂಡರ್‌ ಕೂಡ ಕರೆದಿರೋ ಮಾಹಿತಿಯನ್ನ ಹೈಕೋರ್ಟ್‌ಗೆ ಸಲ್ಲಿಸಿತ್ತು.

ಟೆಂಡರ್‌ ರದ್ದಾಗಿದ್ದೇಕೆ? ರೋಗಿಗಳಿಗೆ ತಕ್ಷಣ ಚಿಕಿತ್ಸೆ ಒದಗಿಸಲು ಆ್ಯಂಬುಲೆನ್ಸ್ ಸಂಖ್ಯೆ ಹೆಚ್ಚಳ. ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಆ್ಯಂಬುಲೆನ್ಸ್ ಲಭ್ಯವಾಗುವಂತೆ ಮಾಡುವುದು. ಟ್ರಾಫಿಕ್ ಸಿಗ್ನಲ್ ರಹಿತ ಆ್ಯಂಬುಲೆನ್ಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು ಯೋಜನೆಯ ಉದ್ದೇಶ. ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಹುದ್ದೆ ಡಾ. ಸುಧಾಕರ್ ಪಾಲಾದ ಕೂಡಲೇ ಯೋಜನೆಯೂ ಹಳ್ಳ ಹಿಡಿಯಿತು. ಯೋಜನೆಯಲ್ಲಿ ಲೋಪವಿರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿರುವ ಕಾರಣ ಕೊಟ್ಟು ಡಾ. ಸುಧಾಕರ್ ಟೆಂಡರ್ ರದ್ದುಪಡಿಸುವಂತೆ ಸೂಚಿಸಿದ್ದರು. ಇದರಿಂದ ಯೋಜನೆಯ ವಿಳಂಬವಾಗುವುದಾಗಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಆರೋಗ್ಯ ಸಚಿವರನ್ನು ಪ್ರತಿವಾದಿಯಾಗಿಸುವುದಾಗಿ ಎಚ್ಚರಿಸಿತ್ತು.

ಇದೀಗ ಅರ್ಜಿದಾರರು ಡಾ. ಸುಧಾಕರ್‌ ಪ್ರತಿವಾದಿಯಾಗಿಸುವಂತೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆರೋಗ್ಯ ಸಚಿವರಿಗೂ ನೋಟಿಸ್‌ ಜಾರಿಗೊಳಿಸಿದೆ. ಸೂಕ್ತ ಕಾರಣವಿಲ್ಲದೆ 1800 ಕೋಟಿ ಮೊತ್ತದ ಟೆಂಡರ್ ರದ್ದುಪಡಿಸಿದ ಹಿಂದಿನ ಉದ್ದೇಶದ ಬಗ್ಗೆ ಹೈಕೋರ್ಟ್‌ ಸಂದೇಹ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಆ್ಯಂಬುಲೆನ್ಸ್‌ಗಳ ಸುಗಮ‌ ಸಂಚಾರಕ್ಕೆ ನಿಗದಿಪಡಿಸಿದ್ದ ₹ 1800 ಕೋಟಿ ಟೆಂಡರ್ ರದ್ದು