ಉಡುಪಿಯ ಹೊಸಂಗಡಿಯಲ್ಲಿದೆ ಐತಿಹಾಸಿಕ ಹಿನ್ನೆಲೆಯ ಮಹಾ ಗಣಪತಿ ದೇವಸ್ಥಾನ

| Updated By: ಸಾಧು ಶ್ರೀನಾಥ್​

Updated on: Feb 11, 2021 | 5:54 PM

ಉಡುಪಿ: ಕರಾವಳಿಯುದ್ದಕ್ಕೂ ಸಾಕಷ್ಟು ಐತಿಹಾಸಿಕ ಹಿನ್ನೆಲೆಗಳಿರುವ ದೇವಾಲಯಗಳು ಇಂದಿಗೂ ಕೂಡ ಸುಸ್ಥಿತಿಯಲ್ಲಿದ್ದು, ಇವುಗಳ ಸಾಲಿಗೆ ಸೇರುವ ಹೊಸಂಗಡಿಯ ಮೆಟ್ಕಲ್ ಗುಡ್ಡೆಯ ಮೇಲಿರುವ ದೇವಸ್ಥಾನವು ಬಹಳಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿದೆ. ನಗರ ಸಂಸ್ಥಾನದ ಕಾವಲುಕೋಟೆಯಾಗಿದ್ದ ಮೆಟ್ಕಲ್ ಗುಡ್ಡೆಯಲ್ಲಿ ಇತ್ತೀಚೆಗೆ ಜಾತ್ರಾ ಸಂಭ್ರಮ ನಡೆದಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಉಡುಪಿ ಜಿಲ್ಲೆಯಲ್ಲಿ ಇಂದಿಗೂ ಕೂಡ ಐತಿಹಾಸಿಕ ಹಿನ್ನಲೆಯುಳ್ಳ ಸ್ಥಳಗಳು ಕಾಣಸಿಗುತ್ತಿದ್ದು, ಮುಖ್ಯವಾಗಿ ಬಸ್ರೂರು, ಬಾರ್ಕೂರು ಪ್ರದೇಶವನ್ನು ಗಮನಿಸಿದರೆ ಇಂದಿಗೂ ರಾಜ ಮಹಾರಾಜರು ಆಳ್ವಿಕೆ ಮಾಡಿದ, ಅಳಿದುಳಿದ ಕುರುಹುಗಳು ಕಾಣ […]

ಉಡುಪಿಯ ಹೊಸಂಗಡಿಯಲ್ಲಿದೆ ಐತಿಹಾಸಿಕ ಹಿನ್ನೆಲೆಯ ಮಹಾ ಗಣಪತಿ ದೇವಸ್ಥಾನ
ಹೊಸಂಗಡಿ ಗಣಪತಿ ದೇವಾಲಯ
Follow us on

ಉಡುಪಿ: ಕರಾವಳಿಯುದ್ದಕ್ಕೂ ಸಾಕಷ್ಟು ಐತಿಹಾಸಿಕ ಹಿನ್ನೆಲೆಗಳಿರುವ ದೇವಾಲಯಗಳು ಇಂದಿಗೂ ಕೂಡ ಸುಸ್ಥಿತಿಯಲ್ಲಿದ್ದು, ಇವುಗಳ ಸಾಲಿಗೆ ಸೇರುವ ಹೊಸಂಗಡಿಯ ಮೆಟ್ಕಲ್ ಗುಡ್ಡೆಯ ಮೇಲಿರುವ ದೇವಸ್ಥಾನವು ಬಹಳಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿದೆ. ನಗರ ಸಂಸ್ಥಾನದ ಕಾವಲುಕೋಟೆಯಾಗಿದ್ದ ಮೆಟ್ಕಲ್ ಗುಡ್ಡೆಯಲ್ಲಿ ಇತ್ತೀಚೆಗೆ ಜಾತ್ರಾ ಸಂಭ್ರಮ ನಡೆದಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಉಡುಪಿ ಜಿಲ್ಲೆಯಲ್ಲಿ ಇಂದಿಗೂ ಕೂಡ ಐತಿಹಾಸಿಕ ಹಿನ್ನಲೆಯುಳ್ಳ ಸ್ಥಳಗಳು ಕಾಣಸಿಗುತ್ತಿದ್ದು, ಮುಖ್ಯವಾಗಿ ಬಸ್ರೂರು, ಬಾರ್ಕೂರು ಪ್ರದೇಶವನ್ನು ಗಮನಿಸಿದರೆ ಇಂದಿಗೂ ರಾಜ ಮಹಾರಾಜರು ಆಳ್ವಿಕೆ ಮಾಡಿದ, ಅಳಿದುಳಿದ ಕುರುಹುಗಳು ಕಾಣ ಸಿಗುತ್ತವೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಹು ಮುಖ್ಯ ಆಕರ್ಷಣೀಯ ಸ್ಥಳವಾಗಿರುವ ನಗರ ಕೋಟೆ ಶಿವಪ್ಪ ನಾಯಕನ ಕಥೆಯನ್ನು ಹೇಳುತ್ತದೆ. ಇದೇ ಶಿವಪ್ಪ ನಾಯಕನ ನಗರ ಸಂಸ್ಥಾನ ಪಶ್ಚಿಮ ದಿಕ್ಕಿನ ಕಾವಲು ಕೋಟೆ ಇಂದಿಗೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿಯಲ್ಲಿ ನೋಡಬಹುದಾಗಿದೆ.

ಜಿಲ್ಲೆಯ ಸಿದ್ಧಾಪುರ ಸಮೀಪದ ಈ ಹೊಸಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆಟ್ಕಲ್ ಗುಡ್ಡೆಯು ಇಂದಿಗೂ ನಗರ ಸಂಸ್ಥಾನದ ಕಾವಲು ಕೋಟೆಯ ಕಥೆ ಹೇಳುವುದರ ಜೊತೆಗೆ, ಅಲ್ಲಿ ಸ್ಥಿತನಾಗಿರುವ ಶ್ರೀ ಮಹಾಗಣಪತಿಯು ಭಕ್ತರ ಇಷ್ಟಾರ್ಥ ನೆರವೇರಿಸುವ ದೇವರಾಗಿ ಪ್ರಸಿದ್ಧಿ ಹೊಂದಿದೆ. ಇಂದಿಗೂ ದೇವಸ್ಥಾನ ಸುತ್ತಲೂ ಇರುವ ಕಾವಲು ಕೋಟೆ ಐತಿಹಾಸಿಕ ಸ್ಥಳದ ಕುರಿತು ಆಸಕ್ತಿ ಮೂಡಿಸುತ್ತದೆ.

ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯದಲ್ಲಿ ಜಾತ್ರಾ ಮಹೋತ್ಸವ

ಸಿದ್ಧಾಪುರ ಪೇಟೆಯಿಂದ ಹೊಸಂಗಡಿ ಮೂಲಕ ಸಾಗಿ ವರಾಹಿ ಜಲವಿದ್ಯುತ್ ಕೇಂದ್ರಕ್ಕೆ ತೆರಳುವ ದಾರಿಯಲ್ಲಿ ಸಾಗಿ ಬಂದರೆ ಎತ್ತರ ಗುಡ್ಡೆಯ ಮೇಲೆ ಈ ಮೆಟ್ಕಲ್ ಗುಡ್ಡೆ ಗಣಪತಿ ದೇವಸ್ಥಾನ ಕಾಣಸಿಗುತ್ತದೆ. ಸಾಕಷ್ಟು ಐತಿಹಾಸಿಕ ಹಿನ್ನಲೆ ಇದ್ದರು ಸ್ಥಳೀಯ ಜನರನ್ನು ಹೊರತುಪಡಿಸಿ ಹೊರಗಿನವರಿಗೆ ಮಾಹಿತಿ ಇಲ್ಲದ ಪ್ರದೇಶ ಸದ್ಯ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

ಜಾತ್ರೆಯಲ್ಲಿ ನೂರಾರು ಜನರು ಭಾಗಿ

ಈ ಐತಿಹಾಸಿಕ ಕ್ಷೇತ್ರ ಸದ್ಯ ಜಾತ್ರಾ ಮಹೋತ್ಸವದ ಸಡಗರದಲ್ಲಿದ್ದು, ಮೆಟ್ಕಲ್ ಗುಡ್ಡೆಯ ಮೇಲಿರುವ ಗಣಪತಿ ದೇವಸ್ಥಾನದ ದರ್ಶನ ಪಡೆಯಲು ಕಾಡು ದಾರಿಯಲ್ಲಿ ನಡೆದು ಸಾಗಬೇಕು. ಕಚ್ಚಾ ರಸ್ತೆ ವ್ಯವಸ್ಥೆ ಇದ್ದರೂ ಕೂಡ ಜೀಪ್, ಬೈಕ್‌ಗಳ ಮೂಲಕ ಮಾತ್ರ ಮೇಲೇರಿ ಬರಲು ಸಾಧ್ಯವಾಗುವ ಹಿನ್ನೆಲೆಯಲ್ಲಿ ಚಾರಣಪ್ರಿಯರಿಗೆ ಈ ಬೆಟ್ಟ ಹೊಸ ಅನುಭವವನ್ನು ನೀಡುತ್ತಿದೆ.

ಇಷ್ಟಾರ್ಥ ನೆರವೇರಿಸುವ ದೇವರಿಗೆ ವಿಶೇಷ ಪೂಜೆ

ಇದನ್ನೂ ಓದಿ: Ram Temple Construction Fund ರಾಮ ಮಂದಿರ ನಿರ್ಮಾಣ ನಿಧಿ ಅಭಿಯಾನ: RSSಗೆ ಸಾಥ್ ನೀಡಿದ ಸುಮಲತಾ

ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ ನಡೆಯುತ್ತಿದ್ದು, ಈ ಬಾರಿ ಬಹು ಸಂಖ್ಯೆಯಲ್ಲಿ ಭಕ್ತ ಗಣ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಒಟ್ಟಾರೆಯಾಗಿ ಮೆಟ್ಕಲ್ ಗುಡ್ಡೆ ಐತಿಹಾಸಿಕ ದಾಖಲೆಗಳನ್ನು ಹಿಡಿದಿಟ್ಟುಕೊಂಡಿರುವ ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತಿದ್ದು, ಇಲ್ಲಿನ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ಹಾಗೇ ಪ್ರವಾಸಿಗರನ್ನು ಸೆಳೆಯುವ ಅಭಿವೃದ್ಧಿ ಕಾರ್ಯ ನಡೆಸಿದರೆ ಉತ್ತಮ ಪ್ರವಾಸಿ ಕೇಂದ್ರವಾಗುವುದರಲ್ಲಿ ಎರಡು ಮಾತಿಲ್ಲ.