ಸೈಬರ್ ವಂಚಕರಿಂದ ಸುಧಾಮೂರ್ತಿ ಗ್ರೇಟ್ ಎಸ್ಕೇಪ್: ಮಾಡಿದ್ದೇನು ಗೊತ್ತಾ?

ಸ್ಯಾಂಡಲ್ ವುಡ್ ಸ್ಟಾರ್ ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾಗೆ ಸೈಬರ್ ವಂಚಕರು ಹೌಸ್ ಅರೆಸ್ಟ್ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ ಸುಧಾಕರ್ ಪತ್ನಿ ಸಹ ಸೈಬರ್ ಅರೆಸ್ಟ್​ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜ್ಯಸಭಾ ಸದಸ್ಯೆ, ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಸೈಬರ್ ವಂಚಕರು ಕಾಟ ಕೊಟ್ಟಿದ್ದಾರೆ.

ಸೈಬರ್ ವಂಚಕರಿಂದ ಸುಧಾಮೂರ್ತಿ ಗ್ರೇಟ್ ಎಸ್ಕೇಪ್: ಮಾಡಿದ್ದೇನು ಗೊತ್ತಾ?
Sudha Murty
Updated By: Ganapathi Sharma

Updated on: Sep 23, 2025 | 9:18 AM

ಬೆಂಗಳೂರು, (ಸೆಪ್ಟೆಂಬರ್ 22): ಸೈಬರ್ ವಂಚಕರ (scammer) ಕಾಟ ಮಿತಿ ಮೀರುತ್ತಿದೆ. ದೊಡ್ಡ ರಾಜಕಾರಣಿಗಳು, ಸೆಲೆಬ್ರಿಟಿ, ಪೊಲೀಸ್ ಅಧಿಕಾರಿಗಳು ಕುಟುಂಬದವರನ್ನು ಸಹ ಯಾಮಾರಿಸಿ ಹಣ ದೋಚುತ್ತಿದ್ದಾರೆ. ಅದರಂತೆ ಇದೀಗ ಇನ್ಫೋಸಿಸ್ (Infosys) ಮುಖ್ಯಸ್ಥೆ ಹಾಗೂ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ (Sudha Murthy) ಅವರಿಗೂ ಸಹ ಸೈಬರ್ ವಂಚನೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು…ಸೈಬರ್ ವಂಚಕರು ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಅಂತ ಹೇಳಿ ಸುಧಾಮೂರ್ತಿಗೆ ಯಾಮಾರಿಸಲು ಯತ್ನಿಸಿ ವಿಫಲವಾಗಿದ್ದಾರೆ.

ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಅಂತೇಳಿ ಅಪರಿಚಿತ ವ್ಯಕ್ತಿಯೊಬ್ಬ ಸೆಪ್ಟೆಂಬರ್ 5 ರಂದು ಸುಧಾಮೂರ್ತಿ ಅವರಿಗೆ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್‌ಗೆ ಲಿಂಕ್ ಮಾಡದೆ ನೋಂದಾಯಿಸಲಾಗಿದೆ. ಹಾಗಾಗಿ ವ್ಯೆಯಕ್ತಿಕ ಮಾಹಿತಿ ನೀಡಿ ಎಂದು ಮಾಹಿತಿ ಕೇಳಿದ್ದ. ಅಲ್ಲದೇ ನಿಮ್ಮ ನಂಬರ್‌ನಿಂದ ಅಶ್ಲೀಲ ವೀಡಿಯೋ ಕಳಿಸಲಾಗುತ್ತಿದೆ. ಅದನ್ನ ನಾನು ನಿಲ್ಲಿಸಿದ್ದೇನೆ ಎಂದೆಲ್ಲ ಹೇಳಿದ್ದ. ಈ ವೇಳೆ ಅನುಮಾನಗೊಂಡ ಸುಧಾಮೂರ್ತಿ ಅವರು, ಕರೆದ ಬಂದಿದ್ದ ನಂಬರ್‌ ಅನ್ನು ಟ್ರೂಕಾಲರ್ ಮೂಲಕ ಪರಿಶೀಲಿಸಿದ್ದು, ಟ್ರೂಕಾಲರ್‌ನಲ್ಲಿ ಟೆಲಿಕಾಂ ಡೆಪಾರ್ಟ್ಮೆಂಟ್ ಎಂದು ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ಅವರು ಸೈಬರ್ ವಂಚಕರ ಟ್ರ‍್ಯಾಪ್‌ಗೆ ಒಳಗಾಗದೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ವಂಚಕನ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

ಸುಧಾಮೂರ್ತಿ ಅವರು ಯಾವುದೇ ಹಣವನ್ನು ಸೈಬರ್ ವಂಚಕರಿಗೆ ನೀಡಿಲ್ಲ. ತಮಗೆ ವಂಚನೆ ಮಾಡುತ್ತಿದ್ದಾರೆ ಎಂದು ಅರಿತುಕೊಂಡು ತಕ್ಷಣವೇ ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಸೆಪ್ಟೆಂಬರ್ 5 ರಂದು ಕರೆ ಮಾಡಿದ್ದ ವಂಚಕರು, ಸೈಬರ್ ವಂಚನೆಗೆ ಯತ್ನಿಸಿದ್ದಾರೆ. ನಿಮ್ಮ ನಂಬರ್ ಆಧಾರ್ ಗೆ ಲಿಂಕ್ ಮಾಡದೆ ನೋಂದಾಯಿಸಲಾಗಿದೆ ಎಂದು ಹೇಳಿ ವೈಯಕ್ತಿಕ ಮಾಹಿತಿ ಪಡೆಯಲು ಯತ್ನಿಸಿದ್ದ. ಜೊತೆಗೆ ನಿಮ್ಮ ನಂಬರ್ ನಿಂದ ಅಶ್ಲೀಲ ವಿಡಿಯೋ ಕಳಿಸಲಾಗುತ್ತಿದೆ. ಅದನ್ನು ನಿಲ್ಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ.ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ ಕೆ ಸುಧಾಕರ್​ ಪತ್ನಿಗೆ ಡಿಜಿಟಲ್ ಅರೆಸ್ಟ್: 14 ಲಕ್ಷ ರೂ ವಂಚನೆ

ದೂರ ಸಂಪರ್ಕ ಇಲಾಖೆ ಅಧಿಕಾರಿಗಳು, ಇಡಿ, ಸಿಬಿಐ ಸೇರಿದಂತೆ ವಿವಿಧ ಇಲಾಖೆ ಹೆಸರು ಹೇಳಿಕೊಂಡು ಸೈಬರ್ ವಂಚಕರು ಜನರ ಹಣ ದೋಚುತ್ತಿದ್ದಾರೆ. ಈ ಸೈಬರ್ ಪ್ರಕರಣಗಳು ದಿನೇ ದಿನೇ ಹೆಚ್ಚತ್ತಲೇ ಇವೆ. ದೊಡ್ಡ ಅಧಿಕಾರಿಗಳನ್ನೂ ಸಹ ಈ ಕೀಚಕರು ಬಿಟ್ಟಿಲ್ಲ. ಹೀಗಾಗಿ ಈ ರೀತಿಯ ಯಾವುದೇ ದೂರವಾಣಿ ಕರೆ ಬಂದರೆ ಎಚ್ಚರಿಯಿಂದ ಇರಿ. ಅವರು ಯಾವುದೇ ನಿಮ್ಮ ವೈಯಕ್ತಿ ವಿವರ ಕೇಳಿದ್ರೆ ನೀಡಬೇಡಿ. ಹಾಗೇ ವಂಚಕರು ಹೇಳಿದ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ.

ಒಂದು ವೇಳೆ ನೀವು ವಂಚಕರ ಮೋಹದ ಬಲೆ ಬಿದ್ದು ಹಣದ ಕಳೆದುಕೊಂಡ್ರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಬಳಿಕ ಅವರು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:57 pm, Mon, 22 September 25