Inspiring Story: ಸಾಫ್ಟ್​ವೇರ್​ ಉದ್ಯೋಗ ಬಿಟ್ಟು ಭಾರತೀಯ ಸೇನೆ ಸೇರಿದ ಬೆಂಗಳೂರಿನ ಇಂಜಿನಿಯರ್

Bengaluru News: ಬೆಂಗಳೂರಿನ ಸತೀಶ್ ಕುಮಾರ್ ಎಂಬ ಸಾಫ್ಟ್​ವೇರ್ ಇಂಜಿನಿಯರ್ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಭಾರತೀಯ ಭೂ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇರಿದ್ದಾರೆ.

Inspiring Story: ಸಾಫ್ಟ್​ವೇರ್​ ಉದ್ಯೋಗ ಬಿಟ್ಟು ಭಾರತೀಯ ಸೇನೆ ಸೇರಿದ ಬೆಂಗಳೂರಿನ ಇಂಜಿನಿಯರ್
ಪ್ರಾತಿನಿಧಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Aug 19, 2021 | 2:41 PM

ಬೆಂಗಳೂರು: ನಮ್ಮ ಕನಸುಗಳಿಗೆ ಎಂದಿಗೂ ಸಾವಿರುವುದಿಲ್ಲ. ಬಾಲ್ಯದ ಕನಸನ್ನು ಮುದುಕರಾದ ಮೇಲೆ ಈಡೇರಿಸಿಕೊಂಡ ಅನೇಕರು ನಮ್ಮ ನಡುವೆ ಇದ್ದಾರೆ. ಆ ಕನಸಿನ ಬೆನ್ನು ಹತ್ತಿ ಹೋದರೆ ಅದನ್ನು ಈಡೇರಿಸಲು ವಯಸ್ಸು ಮುಖ್ಯವೇ ಅಲ್ಲ. ಬೆಂಗಳೂರಿನ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ವ್ಯಕ್ತಿಯೊಬ್ಬರು ಎಲ್ಲರಂತೆ ಬೆಳಗ್ಗೆಯಿಂದ ಸಂಜೆಯವರೆಗೂ ಕೆಲಸ ಮಾಡಿಕೊಂಡು ಇದ್ದರು. ಆದರೆ, ಅವರಿಗೆ ಬಾಲ್ಯದಲ್ಲೇ ಸೈನಿಕನಾಗಬೇಕು ಎಂಬ ಕನಸಿತ್ತು. ಕೆಲವು ಅನಿವಾರ್ಯತೆಗಳಿಂದ ಸಾಫ್ಟ್​ವೇರ್ ಉದ್ಯೋಗಿಯಾಗಿ ಸೇರಿದ ಆತ ತನ್ನ 39ನೇ ವಯಸ್ಸಿನಲ್ಲಿ ಸಾಫ್ಟ್​ವೇರ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ಭಾರತೀಯ ಸೇನೆಗೆ ಸೇರಿದ್ದಾರೆ.

ಸಾಮಾನ್ಯವಾಗಿ 30 ವರ್ಷವಾಗುತ್ತಿದ್ದಂತೆ ಜೀವನದಲ್ಲಿ ಸೆಟಲ್ ಆಗಬೇಕೆಂದು ಬಯಸುತ್ತಾರೆ. ಆದರೆ, ಬೆಂಗಳೂರಿನ ಈ ಟೆಕ್ಕಿ ತಮ್ಮ 39ನೇ ವಯಸ್ಸಿನಲ್ಲಿ ಭಾರತೀಯ ಸೇನೆಯನ್ನು ಸೇರಿದ್ದಾರೆ. ಬೆಂಗಳೂರಿನ ಸತೀಶ್ ಕುಮಾರ್ ಎಂಬ ಸಾಫ್ಟ್​ವೇರ್ ಇಂಜಿನಿಯರ್ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಭಾರತೀಯ ಭೂ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇರಿದ್ದಾರೆ. ಈ ಮೂಲಕ ಸೇನೆಗೆ ಸೇರಬೇಕೆಂದು ಬಯಸುವ ಎಷ್ಟೋ ಜನರಿಗೆ ಅವರು ಮಾದರಿಯಾಗಿದ್ದಾರೆ.

ನಾನು ಸಂದರ್ಶನಕ್ಕೆ ಹೋದಾಗ ಅಲ್ಲಿಗೆ ಬಂದಿದ್ದವರೆಲ್ಲರೂ 30 ವರ್ಷದೊಳಗಿನವರಾಗಿದ್ದರು. ಆದರೆ, ಆಗ ನನಗೆ 37 ವರ್ಷವಾಗಿತ್ತು. ಆ ಟೀಂನಲ್ಲಿದ್ದ ಅತಿ ಹಿರಿಯ ನಾನೇ ಆಗಿದ್ದೆ. ಎಲ್ಲರೂ ಕಿರಿಯರೇ ಇರುವಾಗ ನಾನು ಆಯ್ಕೆ ಆಗುತ್ತೇನಾ, ಇಲ್ಲವಾ ಎಂಬ ಅನುಮಾನ ನನಗೆ ಉಂಟಾಗಿತ್ತು. ನನ್ನ ವಯಸ್ಸಿನ ಒಂದೇ ಕಾರಣಕ್ಕೆ ನಾನು ಭಾರತೀಯ ಸೇನೆಗೆ ಸೇರುವ ಅರ್ಹತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿತ್ತು. ಅವರು ನನ್ನನ್ನು ತಿರಸ್ಕರಿಸಬಹುದು ಎಂದು ನಾನು ಭಾವಿಸಿದ್ದೆ ಎಂದು ಸತೀಶ್ ಕುಮಾರ್ ಲಿಂಕ್ಡನ್​ನ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಭಾರತೀಯ ಸೇನೆಯ ಅರ್ಹತಾ ಪರೀಕ್ಷೆಯಲ್ಲಿ 2 ಪೇಪರ್​ಗಳಿದ್ದವು. ಎರಡಕ್ಕೂ 2 ಗಂಟೆಗಳ ಕಾಲ ಸಮಯಾವಕಾಶ ನೀಡಲಾಗಿತ್ತು. ಪರೀಕ್ಷೆಯಲ್ಲಿ ಗಣಿತ, ಸಾಮಾನ್ಯ ಜ್ಞಾನ, ಇಂಗ್ಲಿಷ್ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಬಳಿಕ ಮೇಜರ್ ಜನರಲ್ ಅವರನ್ನೊಳಗೊಂಡ ಟೀಂನವರು ಸಂದರ್ಶನ ಆಯೋಜಿಸಿದ್ದರು. ಅವರ ಜೊತೆ ಮನಶ್ಯಾಸ್ತ್ರಜ್ಞರು, ಇಬ್ಬರು ಲೆಫ್ಟಿನೆಂಟ್ ಕೊಲ್ ರ್ಯಾಂಕಿನ ಅಧಿಕಾರಿಗಳಿದ್ದರು ಎಂದು ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

2021ರ ಏಪ್ರಿಲ್​ನಲ್ಲಿ ನನಗೆ ಕೊನೆಗೂ ಲೆಟರ್ ಬಂದಿತು. ನಾನು ಆಯ್ಕೆಯಾಗಿರುವುದನ್ನು ಆ ಲೆಟರ್​ನಲ್ಲಿ ಖಚಿತಪಡಿಸಲಾಗಿತ್ತು. ಹೀಗಾಗಿ, ನಾನು ನನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದೆ. ನನ್ನನ್ನು 118 ಇನ್​ಫೆಂಟ್ರಿ ಬೆಟಾಲಿಯನ್​ಗೆ ನೇಮಕ ಮಾಡಲಾಗಿದೆ ಎಂದು ಸತೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Indian Army Recruitment 2021: ಎಂಜಿನಿಯರಿಂಗ್​ ಪದವೀಧರರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ; ಆನ್​​ಲೈನ್​ ಮೂಲಕ ಅರ್ಜಿ ಆಹ್ವಾನ

NDA Exam: ಲಿಂಗ ತಾರತಮ್ಯಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ; ಈ ಬಾರಿ ಮಹಿಳೆಯರಿಗೂ ಎನ್​ಡಿಎ ಪರೀಕ್ಷೆ ಬರೆಯಲು ಅವಕಾಶ

(Inspiring Story: Bengaluru Software Engineer Joins Indian Army At Age of 39)