ಬೆಂಗಳೂರು: ಜಾತ್ಯತೀತ ಜನತಾದಳ (ಜೆಡಿಎಸ್) (JDS) ಹಮ್ಮಿಕೊಂಡಿದ್ದ ಜನತಾ ಜಲಧಾರೆ (Janata Jaladhare) ಸಮಾವೇಶ ಸಮಾರೋಪ ಸಮಾವೇಶದಲ್ಲಿ, 5 ಲಕ್ಷ ಜನರಿಗೆ ಊಟೋಪಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ (14 ಮೇ) ನಡೆಯುವ ಸಮಾವೇಶಕ್ಕೆ ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಸಮಾವೇಶದಲ್ಲಿ ಒಟ್ಟು 5 ಲಕ್ಷ ಜನರಿಗೆ ಅಡುಗೆ ವ್ಯವಸ್ಥೆ ಮಾಡಿಸಲಾಗಿದೆ. 3000 ಬಾಣಸಿಗರು ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ. ಇನ್ನು ಊಟ ಬಡಿಸಲು 2000 ಸಾವಿರ ಸಿಬ್ಬಂದಿ ಇದ್ದಾರೆ.
ಅಡುಗೆ ಬಡಿಸುವ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಸಜ್ಜುಗೊಳಿಸಿದ್ದು, ಬೆಳಗ್ಗೆ 10 ಗಂಟೆಯಿಂದಲೇ ಜನರಿಗೆ ಫಲಾವ್ ಮತ್ತು ಜಿಲೇಬಿಯನ್ನು ನೀಡಲಾಗುತ್ತಿದೆ. ಸಂಜೆ 4 ಗಂಟೆಗೆ ಉಪ್ಪಿಟ್ಟು – ಕೇಸರಿಬಾತ್ ಕೊಡಲಾಗುವುದು. ಜತೆಯಲ್ಲಿ ಮಜ್ಜಿಗೆಯನ್ನು ನೀಡಲಾಗುವುದು. ಸಮಾವೇಶದ ಅಡುಗೆ ನೇತೃತ್ವವನ್ನು ಸತೀಶ್ ಅವರ ನೇತೃತ್ವದ ಎ.ಎಸ್. ಕೇಟರಿಂಗ್ ವಹಿಸಿಕೊಂಡಿದ್ದು, ಬೃಹತ್ ಪ್ರಮಾಣದಲ್ಲಿ ಆಗುತ್ತಿರುವ ಅಡುಗೆ ತಯಾರಿ ಕೆಲಸವನ್ನು ಕುದ್ದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪರಿಶೀಲಿಸಿದ್ದಾರೆ.
ಸಮಾವೇಶದ ಸ್ಥಳದಲ್ಲಿ ಅಡುಗೆ ತಯಾರಿಸುವ ಕಾಯಕವೇ ಎಲ್ಲರ ಗಮನವನ್ನು ಸೆಳೆದಿದ್ದು, ಸಮಾವೇಶದ ಬಗ್ಗೆ ಭಾರೀ ನಿರೀಕ್ಷೆ ಸೃಷ್ಟಿ ಮಾಡಿದೆ.
ಕಳೆದ ತಿಂಗಳು ಎಪ್ರೀಲ್ 16ರಂದು ಹನುಮ ಜಯಂತಿ ದಿನದಂದು ಜನತಾ ಜಲಧಾರೆ ಪ್ರಾರಂಭವಾಗಿದೆ. ಈ ಜನತಾ ಜಲಧಾರೆ ಸಮಾರೋಪ ಸಮಾವೇಶದಲ್ಲಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಗಂಗಾ ಮಾತೆಯ ಸಾಕ್ಷಿಯಾಗಿ ಸಂಕಲ್ಪ ಮಾಡಲಾಗುವುದು. ಸಮಾವೇಶವು ನೆಲಮಂಗಲ ಸಮೀಪದ ಬಾವಿಕೆರೆ ಬಳಿಯ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಸಮಾವೇಶದಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೆಗೌಡ (HD Devegouda), ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ್, ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ (HD Kumarswamy) ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಮುಖಂಡರು, ಮುಂದಿನ ವಿಧಾನಸಭೆ ಚುನಾವಣೆಯ ಅಭ್ರ್ಥಿಗಳ ಭಾಗಿಯಾಗಲಿದ್ದಾರೆ.
ಸಮಾವೇಶದ ವಿಶೇಷತೆ
ಜನತಾ ಜಲಧಾರೆ ಸಮಾರೋಪ ಸಮಾವೇಶದಲ್ಲಿ ಗಂಗಾ ಪೂಜೆ ಮತ್ತು ಗಂಗಾ ಆರತಿ ನೆರವೇರಲಿದೆ. ಸಮಾವೇಶದಲ್ಲಿ ಗಂಗಾ ಪೂಜೆ ಮತ್ತು ಗಂಗಾ ಆರತಿ ಸಂಜೆ 6:30 ಕ್ಕೆ ನಡೆಯಲಿದೆ. ಈ ಸಂಬಂಧ ವಾರಣಾಸಿಯಿಂದ 20 ಪಂಡಿತರ ವಿಶೇಷ ತಂಡ ವಾರಣಾಸಿಯಿಂದ ಬರುತ್ತಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ