ಶಾಲಾ ಶಿಕ್ಷಕನ ಪುತ್ರ ಅಪಹರಣ: ತಕ್ಷಣ ಕಾರ್ಯಾಚರಣೆಗೆ ಇಳಿದ ಕಲಬುರ್ಗಿ ಇನ್ಸ್ ಪೆಕ್ಟರ್, ಮುಂದೇನಾಯ್ತು?

| Updated By: Rakesh Nayak Manchi

Updated on: Jan 05, 2023 | 9:32 AM

ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ಸಿನಿಮಾ ಶೈಲಿಯಲ್ಲಿ ಅಪಹರಣ ಮಾಡಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸಿಂಗಂ ಸ್ಟೈಲ್​ನಲ್ಲಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿದ್ದಾರೆ.

ಶಾಲಾ ಶಿಕ್ಷಕನ ಪುತ್ರ ಅಪಹರಣ: ತಕ್ಷಣ ಕಾರ್ಯಾಚರಣೆಗೆ ಇಳಿದ ಕಲಬುರ್ಗಿ ಇನ್ಸ್ ಪೆಕ್ಟರ್, ಮುಂದೇನಾಯ್ತು?
ಬಾಲಕನ ತಂದೆ ಮತ್ತು ವಿಶ್ವವಿದ್ಯಾಲಯ ಠಾಣೆಯ ಸಿಪಿಐ ಅರುಣ್ ಮುರಗುಡಿ
Follow us on

ಕಲಬುರಗಿ: ಹೆತ್ತವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಶಾಲೆಗೆ ಹೋಗುತ್ತಿದ್ದ ಮಗನನ್ನು ಅಪಹರಣ (Kidnap) ಮಾಡಿದ್ದ ದುರುಳುರ, ಹತ್ತು ಲಕ್ಷಕ್ಕೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಪೊಲೀಸರಿಗೆ ಮಾಹಿತಿ ನೀಡಿದರೆ, ನಿಮ್ಮ ಮಗ ಜೀವಂತ ಸಿಗೋದಿಲ್ಲಾ ಅನ್ನೋ ಬೆದರಿಕೆಯನ್ನು ಕೂಡಾ ಅಪಹರಣಕಾರರು ಹಾಕಿದ್ದರು. ಆದರು ಪೊಲೀಸರ ಮೇಲೆ ವಿಶ್ವಾಸಹೊಂದಿದ್ದ ಸರ್ಕಾರಿ ಶಾಲಾ ಶಿಕ್ಷಕ, ಕಲಬುರಗಿ ನಗರದ ವಿಶ್ವವಿದ್ಯಾಲಯ ಠಾಣೆಯ ಸಿಪಿಐ ಅರುಣ್ ಮುರಗುಡಿ ಅವರಿಗೆ ಹೇಳಿದ್ದ. ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು, ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿರುವ ಗುರುನಾಥ್ ರಾಠೋಡ್ ಅನ್ನೋರು, ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೂರು ಜನ ಮಕ್ಕಳಿದ್ದು, ಹಿರಿಯ ಮಗ, ಕಲಬುರಗಿ ನಗರದ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ನಿನ್ನೆ ಮುಂಜಾನೆ ಒಂಬತ್ತು ಗಂಟೆ ಸಮಯದಲ್ಲಿ ಗುರುನಾಥ್ ಅವರ ಪುತ್ರ ಸುದರ್ಶನ, ಶಾಲೆಗೆ ಹೋಗಲು ಮನೆಯಿಂದ ಹೊರಬಂದಿದ್ದ. ಮನೆಯಿಂದ ಹೊರಬಂದು ಶಾಲಾ ಬಸ್ ಗಾಗಿ ಕಾಯುತ್ತಿದ್ದಾಗ, ಆಟೋದಲ್ಲಿ ಬಂದಿದ್ದ ದುರುಳರು, ಇಎಸ್ಐ ಆಸ್ಪತ್ರೆಯ ವಿಳಾಸ ಕೇಳೋ ನೆಪದಲ್ಲಿ ಬಾಲಕನನ್ನು ಮಾತನಾಡಿಸಿ, ಆಟೋದಲ್ಲಿ ಅಪಹರಿಸಿಕೊಂಡು ಹೋಗಿದ್ದರು.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಮಾಡುತ್ತಿದ್ದವರಿಗೆ ಯಮನಂತೆ ಎದುರಾದ ವಾಹನ, ಭೀಕರ ರಸ್ತೆ ಅಪಘಾತದಲ್ಲಿ 6 ಸಾವು

ಆಟೋದಲ್ಲಿ ಬಾಲಕನನ್ನು ಕರೆದುಕೊಂಡು ಹೋದ ದುಷ್ಕರ್ಮಿಗಳು, ಕೆಲ ಹೊತ್ತಿನ ನಂತರ, ಶಿಕ್ಷಕ ಗುರುನಾಥ್ ಅವರ ಮೊಬೈಲ್ ಗೆ ಕರೆ ಮಾಡಿ, ಹತ್ತು ಲಕ್ಷ ಹಣವನ್ನು ನೀಡಬೇಕು. ಪೊಲೀಸರಿಗೆ ಮಾಹಿತಿ ನೀಡಿದರೆ, ನಿಮ್ಮ ಮಗ ಜೀವಂತ ಉಳಿಯಲ್ಲಾ ಅಂತ ಬೆದರಿಕೆ ಹಾಕಿದ್ದರು. ಇತ್ತ ಮಗ ಶಾಲೆಯ ಬಸ್ ಹತ್ತಿಲ್ಲಾ. ಆತನನ್ನು ಯಾರೋ ಕರೆದುಕೊಂಡು ಹೋಗಿದ್ದಾರೆ ಅನ್ನೋದು ಶಿಕ್ಷಕ ಗುರುನಾಥ್ ಗೆ ಕನ್ಪರ್ಮ್ ಆಗಿತ್ತು. ಅಪಹರಣಕಾರರು ಹೇಳಿದ ಹಾಗೆ ಹತ್ತು ಲಕ್ಷ ನೀಡಬೇಕಾ, ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕಾ ಅನ್ನೋ ಬಗ್ಗೆ ಗೊಂದಲದಲ್ಲಿದ್ದ ಶಿಕ್ಷಕ ಗುರುನಾಥ್, ಕೊನೆಗೆ ಪೊಲೀಸರಿಗೆ ಮಾಹಿತಿ ನೀಡುವದೇ ಉತ್ತಮ ಅಂತ ತಿಳಿದು, ಕಲಬುರಗಿ ನಗರದಲ್ಲಿರುವ ವಿಶ್ವವಿದ್ಯಾಲಯ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದ. ಸಿಪಿಐ ಅರುಣ್ ಮುರಗುಡಿ ಅವರಿಗೆ ಕರೆ ಮಾಡಿ, ಮಗನ ಅಪಹರಣದ ಬಗ್ಗೆ ತಿಳಿಸಿದ್ದ. ಮಾಹಿತಿ ಗೊತ್ತಾಗುತ್ತಿದ್ದಂತೆ, ಪೊಲೀಸರು ಮಾಡಿದ ಮೊದಲ ಕೆಲಸ, ದೂರು ದಾಖಲಾಗಬೇಕು, ತಂದೆ ಠಾಣೆಗೆ ಬರಬೇಕು ಅಂತ ಅಲ್ಲಾ, ಬದಲಾಗಿ ಮೊದಲು ಬಾಲಕನನ್ನು ರಕ್ಷಣೆ ಮಾಡಬೇಕು ಅಂತ ತಿಳಿದು ಪೀಲ್ಡಿಗಿಳದಿದ್ದು.

ವಯವೃದ್ದನಿಗೆ ಯಾಮಾರಿಸಿ ಸಿಮ್ ಪಡೆದು, ಕಾಲ್ ಮಾಡಿದ್ದ ದುರುಳರು

ಇನ್ನು ಹತ್ತು ವರ್ಷದ ಬಾಲಕನನ್ನು ಅಪಹರಣ ಮಾಡಿದ್ದ ದುಷ್ಕರ್ಮಿಗಳು, ಶಿಕ್ಷಕ ಗುರುನಾಥ್ ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರು ಕರೆ ಮಾಡಿದ ನಂಬರ್ ಪರಿಶೀಲಿಸಿದಾಗ ಗೊತ್ತಾಗಿದ್ದು, ಅದು ವೃದ್ದನೋರ್ವನದ್ದು ಅಂತ. ಹೌದು ಕೆಲ ದಿನಗಳ ಹಿಂದೆ ಕಲಬುರಗಿ ನಗರಕ್ಕೆ ಬಂದಾಗ, ವೃದ್ದನೋರ್ವ ವ್ಯಕ್ತಿಯೋರ್ವನ ಕೈಗೆ ತನ್ನ ಬಳಿಯಿದ್ದ ಪೋನ್ ನೀಡಿ, ನಂಬರ್ ವೊಂದಕ್ಕೆ ಕರೆ ಮಾಡುವಂತೆ ಹೇಳಿದ್ದನಂತೆ. ಆದ್ರೆ ದುರುಳ, ವೃದ್ದನ ಮೊಬೈಲ್ ನಲ್ಲಿನ ಸಿಮ್ ತಗೆದುಕೊಂಡು ಮೊಬೈಲ್ ಮಾತ್ರ ನೀಡಿದ್ದನಂತೆ. ಅದೇ ಸಿಮ್ ಬಳಸಿ, ನಿನ್ನೆ ಶಿಕ್ಷಕ ಗುರುನಾಥ್ ಗೆ ಕರೆ ಮಾಡಿ ಹತ್ತು ಲಕ್ಷಕ್ಕೆ ಹಣ ಡಿಮ್ಯಾಂಡ್ ಮಾಡಿದ್ದನಂತೆ.

ಕೆಲವೇ ಗಂಟೆಯಲ್ಲಿ ಬಾಲಕನ ರಕ್ಷಣೆ ಮಾಡಿದ ಪೊಲೀಸರು

ಇನ್ನು ಸಿನಿಮಾ ಶೈಲಿಯಲ್ಲಿ ಬಾಲಕನನ್ನು ಅಪಹರಣ ನಡೆದಾಗ, ಪೊಲೀಸರು ಕೂಡಾ ಸಿನಿಮೀಯ ರೀತಿಯಲ್ಲಿಯೇ ಬಾಲಕನ ರಕ್ಷಣೆಗೆ ಮುಂದಾಗಿದ್ದರು. ಅದರಂತೆ, ಸಿವಿಲ್ ಡ್ರೆಸ್ ನಲ್ಲಿ ಖಾಸಗಿ ವಾಹನಗಳಲ್ಲಿ ಇಡೀ ಕಲಬುರಗಿ ನಗರದ ಸುತ್ತಮುತ್ತ ಗಸ್ತು ಆರಂಭಿಸಿದ್ದರು. ಮತ್ತೊಂದಡೆ ಬಾಲಕನ ತಂದೆಯ ಜೊತೆ ಸಂಪರ್ಕದಲ್ಲಿದ್ದರು. ಹಣ ತರ್ತಾಯಿದ್ದೇವೆ, ಎಲ್ಲಿಗೆ ಬರಬೇಕು ಅಂತ ಹೇಳಿದ್ದರು. ಕೊನೆಗೆ ದುರುಳರು, ಕಲಬುರಗಿ ತಾಲೂಕಿನ ಪಾಳಾ ಬಳಿಯಿರೋ ಶಾಲೆಯೊಂದರಲ್ಲಿ ಹಣ ಹಾಕಿ ಅಂತ ಹೇಳಿದ್ದರು. ಆದರೆ ಅಷ್ಟರೊಳಗಾಗಿ ಪೊಲೀಸರು ತಮ್ಮನ್ನು ಪಾಲೋ ಮಾಡ್ತಿದ್ದಾರೆ ಅನ್ನೋ ಸುದ್ದಿ ತಿಳಿದ ಅಪಹರಣಕಾರರು, ಬಾಲಕನನ್ನು ಬಿಟ್ಟು ಪರಾರಿಯಾಗಿದ್ದರು.

ಇದನ್ನೂ ಓದಿ: 4-ವರ್ಷ ಹಿಂದೆ ಚಾಕು ಹಿಡಿದು ಅಪಹರಣಕ್ಕೆ ಬಂದಿದ್ದ ಲೈಂಗಿಕ ಅಪರಾಧಿಯನ್ನು ಬಂಧಿಸಲು ಪೊಲೀಸ್​ಗೆ ನೆರವಾದ ಯುವತಿ ತನ್ನ ಸಾಹಸಗಾಥೆ ಈಗ ಹೇಳಿಕೊಂಡಿದ್ದಾಳೆ!

ಪಾಳಾ ಗ್ರಾಮದ ಹೊರವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ಬಾಲಕನನ್ನು ಬಿಟ್ಟು ದುರುಳರು ಪರಾರಿಯಾಗಿದ್ದರು. ಇತ್ತ ಬಾಲಕ ಓಡೋಡಿ ಬರ್ತಾಯಿರೋದನ್ನು ನೋಡಿದ್ದ ಕೃಷಿಕನೋರ್ವ, ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನನ್ನು ನೋಡಿ, ಶಿಕ್ಷಕ ಗುರುನಾಥ್ ಗೆ ಕರೆ ಮಾಡಿ, ತಮ್ಮ ಮಗ ಇರೋ ಬಗ್ಗೆ ಹೇಳಿದ್ದ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು, ಬಾಲಕನನ್ನು ರಕ್ಷಿಸಿ, ಹೆತ್ತವರಿಗೆ ನೀಡಿದ್ದಾರೆ. ಸಂಜೆ ನಾಲ್ಕು ಗಂಟೆಯಷ್ಟೊತ್ತಿಗೆ ಬಾಲಕ, ಹೆತ್ತವರ ಮಡಿಲು ಸೇರಿದ್ದಾನೆ.

ನಾನು ನಿಜವಾಗಿಯೂ ಪೊಲೀಸರ ಬಗ್ಗೆ ಮೊದಲು ಉತ್ತಮ ಅಭಿಪ್ರಾಯ ಹೊಂದಿರಲಿಲ್ಲಾ. ಆದರೆ ತನ್ನ ಮಗನನ್ನು ಅಪಹಪರಣ ಮಾಡಿದಾಗ ವಿಶ್ವವಿದ್ಯಾಲಯ ಠಾಣೆಯ ಸಿಪಿಐ ಅರುಣ್ ಮುರಗುಡಿ ಮತ್ತು ಇಡೀ ನಗರ ಪೊಲೀಸರ ಕಾರ್ಯನೋಡಿ, ನನ್ನ ಅಭಿಪ್ರಾಯವೇ ಬದಲಾಗಿದೆ. ಅವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಅಂತ, ಸರ್ಕಾರಿ ಶಾಲೆಯ ಶಿಕ್ಷಕ ಗುರುನಾಥ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಜೊತೆಗೆ ಧನ್ಯವಾದಗಳನ್ನು ಹೇಳಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 am, Thu, 5 January 23