
ಕಲಬುರಗಿ, ಜುಲೈ 23: ಕಲಬುರಗಿ (kalaburagi) ನಗರದ ಆಳಂದ ಚೆಕ್ ಪೋಸ್ಟ್ ಬಳಿಕಯ ಸಿದ್ದರಾಮೇಶ್ವರ ಕಾಲೋನಿ ನಿವಾಸಿಗಳು (Residents) ಸದ್ಯ ಆತಂಕದಲ್ಲಿ ಇದ್ದಾರೆ. ಏಕೆಂದರೆ ಸಿಜೆಎಂ ಕೋರ್ಟ್ ಆದೇಶ ಹಿನ್ನೆಲೆ ಸರ್ವೆ ನಂಬರ್ 36 ಮತ್ತು 95ರಲ್ಲಿನ ಮನೆ ಮತ್ತು ಕಟ್ಟಡಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಇದು ಕಾಲೋನಿ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ಸಿದ್ದರಾಮೇಶ್ವರ ಕಾಲೋನಿಯಲ್ಲಿ ನಿವಾಸಿಗಳು ನೋಟರಿ ಮೇಲೆ ಸೈಟ್ ಖರೀದಿ ಮಾಡಿ ಮನೆ ಕಟ್ಟಿಕೊಂಡು ಸುಮಾರು 30ರಿಂದ 40 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಮೂಲ ಜಮೀನುದಾರರ ಬಳಿ ನೋಟರಿ ಅಗ್ರಿಮೆಂಟ್ ಮೇಲೆ ನಿವಾಸಿಗಳು ಸೈಟ್ ಖರೀದಿ ಮಾಡಿದ್ದಾರೆ.
ಇದೇ ಜಮೀನಿನಲ್ಲಿ ಸದ್ಯ 300ಕ್ಕೂ ಅಧಿಕ ಮನೆಗಳು ಮತ್ತು ಕಟ್ಟಡಗಳು ನಿರ್ಮಾಣ ಆಗಿವೆ. ಆದರೆ ಇದೀಗ ಪಹಣಿ ಆಧಾರದ ಮೇಲೆ ಒಟ್ಟು 13 ಎಕರೆ ಜಮೀನು ತನ್ನದೆಂದು ಜಮೀನು ಮಾಲೀಕ ಮಹ್ಮದ್ ಸಲೀಮುದ್ದಿನ್ ಜಮೀನು ಕಬ್ಜಾಗಾಗಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಕಟ್ಟಡಗಳ ತೆರವಿಗೆ ಆದೇಶ ನೀಡಿದೆ.
ಇದೀಗ ಕೋರ್ಟ್ ಆದೇಶದಂತೆ ಪೊಲೀಸ್ ಬಂದೋಬಸ್ತ್ನೊಂದಿಗೆ ಅಧಿಕಾರಿಗಳು ಮನೆ ಮತ್ತು ಕಟ್ಟಡಗಳ ತೆರವಿಗೆ ಮುಂದಾಗಿದ್ದರು. ಈ ವೇಳೆ ಮುಖ್ಯ ರಸ್ತೆ ಬಂದ್ ಮಾಡಿದ ನೂರಾರು ನಿವಾಸಿಗಳು ಮನೆ, ಕಟ್ಟಡಗಳ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರಾಣ ಹೋದರೂ ಮನೆಗಳ, ಕಟ್ಟಡಗಳ ತೆರವು ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದರು.
ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಮತ್ತೆ ಮತ್ತೆ ಪರಾರಿಯಾಗ್ತಿದ್ದಾರೆ ಕೈದಿಗಳು! ಕಲಬುರಗಿ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್
ಈ ವೇಳೆ ಸರ್ವೆ ಅಧಿಕಾರಿಗಳ ಜೊತೆ ನಿವಾಸಿಗಳ ಮಾತಿನ ಚಕಮಕಿ ಉಂಟಾಗಿದೆ. ತೀವ್ರ ವಿರೋಧ ಹಿನ್ನಲೆ ಮನೆ ಮತ್ತು ಕಟ್ಟಡಗಳ ತೆರವು ಮಾಡದೇ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.