ಬಾಗಲಕೋಟೆ: ನಿರಂತರ ಮಳೆಯಿಂದ ನೂರಾರು ಎಕರೆ ಬೆಳೆ ನಾಶ: ಉಕ್ಕಿ ಹರಿಯುತ್ತಿರುವ ಹಳ್ಳ; ಗದಗ-ಬಾಗಲಕೋಟೆ ರಾಜ್ಯ ಹೆದ್ದಾರಿ ಸಂಪರ್ಕ ಕಡಿತ

| Updated By: ವಿವೇಕ ಬಿರಾದಾರ

Updated on: Sep 06, 2022 | 9:49 PM

Karnataka Rain: ಬಾಗಲಕೋಟೆ ಜಿಲ್ಲೆಯಲ್ಲಿ ರಣಮಳೆಯಿಂದ ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿ ಗ್ರಾಮದ ಸುರೇಶ್ ಜೈನಾಪುರ ಎಂಬ ರೈತನ ಒಂದುವರೆ ಎಕರೆಯಲ್ಲಿ ಬೆಳೆದ ಶೇಂಗಾ ನಾಶವಾಗಿದೆ.

ಬಾಗಲಕೋಟೆ: ನಿರಂತರ ಮಳೆಯಿಂದ ನೂರಾರು ಎಕರೆ ಬೆಳೆ ನಾಶ: ಉಕ್ಕಿ ಹರಿಯುತ್ತಿರುವ ಹಳ್ಳ; ಗದಗ-ಬಾಗಲಕೋಟೆ ರಾಜ್ಯ ಹೆದ್ದಾರಿ ಸಂಪರ್ಕ ಕಡಿತ
ಬೆಳೆ ಕಳೆದುಕೊಂಡ ರೈತ
Follow us on

ಬಾಗಲಕೋಟೆ: ಬಾಗಲಕೋಟೆ (Bagalakote) ಜಿಲ್ಲೆಯಲ್ಲಿ ರಣಮಳೆಯಿಂದ ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿ ಗ್ರಾಮದ ಸುರೇಶ್ ಜೈನಾಪುರ ಎಂಬ ರೈತನ ಒಂದುವರೆ ಎಕರೆಯಲ್ಲಿ ಬೆಳೆದ ಶೇಂಗಾ ನಾಶವಾಗಿದೆ. ಶೇಂಗಾ ಹೊಲದಲ್ಲಿ ಮಳೆ ನೀರು ನಿಂತಿದ್ದು, ಇದರಿಂದ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ. ಇದರಿಂದ ಸೂಕ್ತ ಪರಿಹಾರ ನೀಡುವಂತೆ ರೈತ ಆಗ್ರಹಿಸುತ್ತಿದ್ದಾರೆ.

ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿರುವ ಹಳ್ಳ ಕೊಳ್ಳಗಳು: ಭಾರಿ ಮಳೆಯಿಂದ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ಬಳಿ ಸಾಸಿವೆ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ 4 ರಿಂದ 5 ಅಡಿಯಷ್ಟು ನೀರು ಹರಿಯುತ್ತಿದೆ. ಪರಿಣಾಮ ಬೇಲೂರು-ರೋಣ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದೆ. ಜೊತಗೆ ಗದಗ-ಬಾಗಲಕೋಟೆ ರಾಜ್ಯ ಹೆದ್ದಾರಿ ಸಂಪರ್ಕ ಕೂಡ ಕಡಿತಗೊಂಡಿದೆ. ವಾಹನ ಸಂಚಾರಕ್ಕೆ ಪೊಲೀಸ್ ಇಲಾಖೆ ನಿಷೇಧ ಹೇರಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.

ಸಿಡಿಲು ಬಡಿದು ವ್ಯಕ್ತಿ ಸಾವು: ಸಿಡಿಲು ಬಡಿದು ರೈತ ಸಣ್ಣನೀಲಪ್ಪ ಹಾದಿಮನಿ(55) ಸಾವನ್ನಪ್ಪಿರುವ ಘಟನೆ ಇಳಕಲ್ ತಾಲೂಕಿನ ದಮ್ಮೂರು ಗ್ರಾಮದಲ್ಲಿ ನಡೆದಿದೆ. ಮೃತ ರೈತ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಾಟಾಪುರದ ನಿವಾಸಿಯಾಗಿದ್ದಾನೆ. ಮೃತ ಸಣ್ಣನೀಲಪ್ಪ ಹಾದಿಮನಿ ದಮ್ಮೂರು ಗ್ರಾಮದ ಬಳಿ ಜಮೀನು ಹೊಂದಿದ್ದನು. ಇಳಕಲ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗೂಡ್ಸ್ ವಾಹನ ಚಾಲಕ ತಿಪ್ಪರಾಜು ಮೃತದೇಹ ಪತ್ತೆ

ತುಮಕೂರು:  ನಿನ್ನೆ (ಸೆ 5) ಸೇತುವೆ ಮೇಲೆ ಗೂಡ್ಸ್ ವಾಹನ ಕೊಚ್ಚಿ‌ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಸಮೀಪ ಚಾಲಕ ತಿಪ್ಪರಾಜು ಮೃತದೇಹ ಪತ್ತೆಯಾಗಿದೆ. ಚಾಲಕನ  ಮೃತದೇಹ ಒಂದು ದಿನದ ಬಳಿಕ  ಸೇತುವೆಯಿಂದ ಒಂದು ಕಿಲೋಮೀಟರ್ ದೂರದ ಬೇಲಿಯಲ್ಲಿ ಸಿಲುಕಿತ್ತು.

ಆಂಧ್ರದ ಸೋಮಂದೇಪಲ್ಲಿ ಮೂಲದ ತಿಪ್ಪರಾಜು ಅಕ್ಕಿ ಲೋಡ್ ತುಂಬಿಕೊಂಡು ನಿನ್ನೆ ಬೆಳಿಗ್ಗೆ ಬರುವ ವೇಳೆ ಸೇತುವೆಯಲ್ಲಿ ಕೊಚ್ಚಿ ಹೋಗಿದ್ದನು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರೀ ಮಳೆಯಿಂದ ಮಣ್ಣೆ ಗ್ರಾಮದ ವೆಂಕಟೇಶ್ ಎಂಬುವವರ ಮನೆ ಜಲಾವೃತ

ನೆಲಮಂಗಲ: ನಿನ್ನೆ (ಆ 5) ಸಾಯಂಕಾಲ ಸುರಿದ ಭಾರಿ ಮಳೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮದ ವೆಂಕಟೇಶ್ ಎಂಬುವವರ ಮನೆ ಜಲಾವೃತಗೊಂಡಿದೆ. ಇದರಿಂದ ಲಕ್ಷಾಂತರ ರೂಪಾಯಿ ಸಾಮಾನುಗಳು ಹಾನಿಯಾಗಿವೆ. ವೆಂಕಟೇಶ ಶಿಲ್ಪಿಯಾಗಿದ್ದು, ಶಿಲ್ಪ ಕಲೆಗೆ ಸಂಬಂಧಪಟ್ಟ ಸಾಮಾನುಗಳು ಮಳೆ ನೀರಿನಲ್ಲಿ ಮುಳುಗಿವೆ.

ಚಿಕ್ಕಬಳ್ಳಾಪುರ ಮಳೆ ಅವಾಂತರ: ನೂರಾರು ಎಕರೆಯಲ್ಲಿ ಬೆಳೆದ ಬೆಳೆಗಳು ನಾಶ

ಚಿಕ್ಕಬಳ್ಳಾಪುರ: ರಾತ್ರಿ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಫುರ ತಾಲೂಕಿನ ಕೊತ್ತನೂರು ಕೆರೆಯ ಕೋಡಿ ಹೊಡೆದಿದೆ. ಇದರಿಂದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರ ನೂರಾರು ಎಕರೆ ಬೆಳೆಗಳು ಜಲಾವೃತವಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಹೂವು, ತರಕಾರಿ ತೋಟ ಸಂಪೂರ್ಣ ನಾಶವಾಗಿವೆ. ಸ್ಥಳಕ್ಕೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಯಿಂದಾಗಿ ಶವಸಂಸ್ಕಾರಕ್ಕೂ ಪರದಾಟ: ಕಡೂರು ತಾಲೂಕಿನ ಎಸ್.ಬೊಮ್ಮನಹಳ್ಳಿಯಲ್ಲಿ ಪ್ರಮೋದ್(55) ಎಂಬುವರು ಮೃತ 2 ದಿನದ ಹಿಂದೆ ಮೃತಪಟ್ಟಿದ್ದಾರೆ. ನಿರಂತರ ಮಳೆಯಿಂದ ಸ್ಮಶಾನ ಜಲಾವೃತವಾಗಿದ್ದರಿಂದ ಅಂತ್ಯಕ್ರಿಯೆ ಮಾಡಲು ಆಗದೆ 2 ದಿನದಿಂದ ಮೃತದೇಹವನ್ನು ಮನೆಯಲ್ಲೇ ಇದೆ. ಇಂದು ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆ ಅಂತ್ಯಕ್ರಿಯೆ ಮಾಡಲು ಮನೆಯವರು ನಿರ್ಧರಿಸಿದ್ದಾರೆ.

ತುಂಬಿ ಹರಿಯುತ್ತಿರುವ ಹಳ್ಳ: ಮನೆಗಳಿಗೆ ನುಗ್ಗಿದ ನೀರು

ಧಾರವಾಡ: ನವಲಗುಂದ ತಾಲೂಕಿನ ಗ್ರಾಮದ ಬಳಿಯ ದೊಡ್ಡ ಹಳ್ಳದಲ್ಲಿ ಪ್ರವಾಹ ಉಂಟಾದ ಹಿನ್ನೆಲೆ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ನೀರಿನಿಂದ 50 ಕ್ಕೂ ಹೆಚ್ಚು ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ ಜನರು ಬೇರೆಡೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ: ತಗ್ಗುಪ್ರದೇಶದ ಮನೆಗಳು, ಗದ್ದೆಗಳಿಗೆ ನುಗ್ಗಿದ ನೀರು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸೊರಬ, ಸಾಗರ ತಾಲೂಕು ಮತ್ತು ಇನ್ನೂ ಹಲವೆಡೆ ಧಾರಾಕಾರ ಮಳೆಯಾಗಿದೆ. ಧಾರಾಕಾರ ಮಳೆಯಿಂದ ತುಮರಿಕೊಪ್ಪ ಗ್ರಾಮದಲ್ಲಿ ರಸ್ತೆ ಮೇಲೆ ಮಳೆ ನೀರು ಹರಿದಿದೆ. ಏಕಾಏಕಿ ಸುರಿದ ಭಾರಿ ಮಳೆಯಿಂದ ಜನರು ಕಂಗಾಲಾಗಿದ್ದು, ತಗ್ಗುಪ್ರದೇಶದ ಮನೆಗಳು, ಗದ್ದೆಗಳಿಗೆ ನುಗ್ಗಿದ ನೀರು ನುಗ್ಗಿದೆ. ಇಂದು ಗೋಡೆ ಕುಸಿದು ವೃದ್ಧೆ ಬಲಿಯಾಗಿದ್ದಾರೆ.

ಬೆಣ್ಣೆಹಳ್ಳ ಅಬ್ಬರಕ್ಕೆ ಮೆಣಸಗಿ ಗ್ರಾಮದ ನಿವಾಸಿಗಳು ಕಂಗಾಲು

ಗದಗ: ಗದಗ ಜಿಲ್ಲೆಯಲ್ಲಿ ಮಳೆಯಿಂದ ಬೆಣ್ಣೆಹಳ್ಳದ ಅಬ್ಬರ ಮುಂದುವರೆದಿದ್ದು, ಬೆಣ್ಣೆಹಳ್ಳ ಅಬ್ಬರಕ್ಕೆ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿವಾಸಿಗಳು ಕಂಗಾಲಾಗಿದ್ದಾರೆ. ಮೆಣಸಗಿ ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಹೊಳೆ ಆಲೂರು-ಮೆಣಸಗಿ ಗ್ರಾಮಗಳ ಮಧ್ಯೆ ಸಂಪರ್ಕ ಕಡಿತಗೊಂಡಿದೆ.

ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋದ ಆಟೋ: ಹಳ್ಳ ದಾಟುವಾಗ ನೀರಿನ ರಭಸಕ್ಕೆ ಆಟೋ  ಕೊಚ್ಚಿ ಹೋದ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಸಮೀಪ ನಡೆದಿದೆ. ಓರ್ವ ಪ್ರಯಾಣಿಕ ಸೇರಿ ಆಟೋದಲ್ಲಿದ್ದ ನಾಲ್ವರು ಪಾರಾಗಿದ್ದಾರೆ. ಆಟೋ ಚಾಲಕ ಕರಿಯಪ್ಪ, ಮಕ್ಕಳಾದ ಪ್ರವೀಣ್, ಸಾನ್ವಿ ಓರ್ವ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರಿಯಪ್ಪ ಮಕ್ಕಳನ್ನು ಗಟ್ಟಿಯಾಗಿ ಹಿಡಿದುಕೊಂಡು ಪಾರಾಗಿದ್ದಾರೆ.

ಅಥಣಿ ತಾಲೂಕಿನಾದ್ಯಂತ ಮಳೆ ಅಬ್ಬರ‌

ಬೆಳಗಾವಿ: ಅಥಣಿ ತಾಲೂಕಿನಾದ್ಯಂತ ಮಳೆ ಅಬ್ಬರ‌ ಜೋರಾಗಿದ್ದು, ಸತ್ತಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ. ಏಕಾಏಕಿ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಸಾಮಾಗ್ರಿಗಳೆಲ್ಲವೂ ನೀರು ಪಾಲಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Tue, 6 September 22