Karnataka Breaking News: ಮುಂದಿನ ವರ್ಷದಲ್ಲಿ ಲೋಕಸಭೆ ಚುನಾವಣೆ (Lok Sabha Elections-2024) ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಆರಂಭಗೊಂಡಿವೆ. ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಶುರುವಾಗಿದೆ. ಹಾಸನದಲ್ಲಿ ಹಾಸನಾಂಬೆ (Hasanamba Temple) ಸಾರ್ವಜನಿಕ ದರ್ಶನೊತ್ಸವ ಇಂದಿನಿಂದ ಆರಂಭಗೊಂಡಿದ್ದು, ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ದರ್ಶನಕ್ಕೆ ಅವಕಾಶ ಇದೆ. ಇಂದು ಶುಕ್ರವಾರ ಹಿನ್ನೆಲೆಯಲ್ಲಿ ಮೊದಲ ಪೂಜೆಗೆ ಶಾಸಕ ರೇವಣ್ಣ ಅವರು ಆಗಮಿಸಿದ್ದಾರೆ. ಮಾಜಿ ಪ್ರದಾನಿ ದೇವೇಗೌಡ ಅವರೂ ದೇಗುಲಕ್ಕೆ ಆಗಮಿಸಲಿದ್ದಾರೆ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಹಿಂಸೆ ಕೊಟ್ಟರು. ಮೂರುವರೆ ವರ್ಷಗಳ ಆಡಳಿತದ ಪರಿಸ್ಥಿತಿ ಕೆಟ್ಟದಾಗಿತ್ತು. ಹಲಾಲ್, ಹಿಜಾಬ್ ವಿಚಾರ ತೆಗೆದು ಹಿಂಸೆ ಕೊಟ್ಟರು. 2014ರ ಬಳಿಕ ದೇಶದಲ್ಲಿ ಪರಿಸ್ಥಿತಿ ಬದಲಾಗಿದೆ. ಹಿಂದೂ, ಮುಸ್ಲಿಮರಲ್ಲಿ ಒಡಕು ಸೃಷ್ಟಿ ಮಾಡಲಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲೂ ಎನ್ಡಿಎ ಗೆಲ್ಲಲಿದೆ. ವಿಧಾನಸಭೆಯಲ್ಲಿ ಕಳೆದುಕೊಂಡಿದನ್ನು ಬಡ್ಡಿಸಮೇತ ಪಡೆದುಕೊಳ್ಳಲಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ನಮಗೆ ಅನೀರಿಕ್ಷಿತ ಹಿನ್ನಡೆಯಾಗಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅಸಾಧ್ಯ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
135 ಶಾಸಕರನ್ನು ಇಟ್ಟುಕೊಂಡು ಹೀಗೆ ಹೇಳುವ ದುಸ್ಥಿತಿ ಬರಬಾರದಿತ್ತು. ಬಹಿರಂಗ ಹೇಳಿಕೆ ನೀಡದಂತೆ ಶಾಸಕರಿಗೆ ‘ಕೈ’ ಹೈಕಮಾಂಡ್ ಹೇಳಿದೆ. 3 ದಿನಗಳ ಹಿಂದೆ ಸುರ್ಜೇವಾಲ, ವೇಣುಗೋಪಾಲ್ ಸೂಚಿಸಿದ್ದಾರೆ. ಆದರೆ ಸ್ವತಃ ಮುಖ್ಯಮಂತ್ರಿಗಳೇ ಬಹಿರಂಗವಾಗಿ ಹೇಳಿಕೆ ಕೊಟ್ಟರು ಎಂದು ಬಿಜೆಪಿಯ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇಡೀ ದೇಶದಲ್ಲಿ ಯಾವುದೇ ವ್ಯಕ್ತಿಗೆ ಕೇಳಿದರೂ ಮೋದಿ ಅಂದ್ರೆ ಗೊತ್ತು. ಭಾರತದ ಪ್ರಧಾನಿ ಯಾರೆಂದು ವಿಶ್ವದ ಯಾರನ್ನೇ ಕೇಳಿದರೂ ಹೇಳುತ್ತಾರೆ. ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ನಮ್ಮ ನಾಯಕ ಮೋದಿ ಅಂತಾ. ದೇಶದ ಯಾವ ಹಳ್ಳಿಯಲ್ಲಿ ನಿಮ್ಮ ರಾಹುಲ್ ಗಾಂಧಿ ಹೆಸರೇಳುತ್ತಾರೆ ಎಂದು ಪ್ರಿಯಾಂಕ್ ಖರ್ಗೆಗೆ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಜಾತಿಗಣತಿ ವರದಿ ಇನ್ನೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿಲ್ಲ. ಜಾತಿಗಣತಿ ವರದಿ ಸಲ್ಲಿಸಿದರೆ ಪರಿಶೀಲಿಸಿ ನಿರ್ಧರಿಸುತ್ತೇವೆ ಎಂದು ಗದಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುರುಘಾಶ್ರೀ ವಿರುದ್ಧ ಷಡ್ಯಂತ್ರ ನಡೆಸಿದ ಆರೋಪದ ಕೇಸ್ ರದ್ದಾಗಿದೆ. ಹೈಕೋರ್ಟ್ ನಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಿದೆ ಎಂದು ಮುರುಘಾಮಠದ ಮಾಜಿ ಆಡಳಿತಾಧಿಕಾರಿ S.K.ಬಸವರಾಜನ್ ಹೇಳಿದ್ದಾರೆ. ಸಂತ್ರಸ್ತರ ಪರ ನಿಂತವರ ವಿರುದ್ಧ ಸುಳ್ಳು ಕೇಸ್ ದಾಖಲಾಗಬಾರದು. ಸಂತ್ರಸ್ತರ ಪರ ನಿಂತಿದ್ದಕ್ಕೆ ನಮ್ಮ ವಿರುದ್ಧ ಕೇಸ್ ದಾಖಲಿಸಿದ್ದರು ಎಂದಿದ್ದಾರೆ.
ಆಂತರಿಕ ಒಳಜಗಳದಿಂದ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಹೇಳಿದ್ದಾರೆ. ಕಾಂಗ್ರೆಸ್ನಲ್ಲಿ ಈಗ ಮೂರು ಗುಂಪುಗಳಿವೆ. ತಮ್ಮ ಬೀದಿ ಜಗಳ ಮರೆಮಾಚಲು ಸುಳ್ಳು ಆರೋಪ ಮಾಡ್ತಿದ್ದಾರೆ. ರಾಜ್ಯದಲ್ಲಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ ರಾಜಕಾರಣ ಬಿಟ್ಟರೂ ಸ್ವಾಭಿಮಾನ, ಸಿದ್ದಾಂತ ಬಿಡಲ್ಲ. ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟು ಹರಸಿದ್ದಾರೆ. ಮಂಡ್ಯ ಬಿಟ್ಟು ನಾನು ಬೇರೆ ಕಡೆ ಹೋಗಲ್ಲ ಎಂದು ಕಡ್ಡಿ ಮುರಿದಂತೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಉಚಿತ ಯೋಜನೆಗಳ ಜಾರಿಯಿಂದ ಅನುದಾನ ಕೊರತೆಯಾಗಿದೆ. ಅನುದಾನ ಕೊರತೆ ಬಗ್ಗೆ ಕಾಂಗ್ರೆಸ್ ಶಾಸಕರೇ ನಮ್ಮ ಬಳಿ ಹೇಳ್ತಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಸಮಯದಲ್ಲೂ ಹೇಳಿದ್ವಿ ಎಂದು ಸಂಸದೆ ಸುಮಲತಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಎಸ್ವೈ ಮೊದಲು ಅವರ ಪಕ್ಷದ ಸ್ಥಿತಿ ತಿಳಿದು ಮಾತಾಡಲಿ. ಈವರೆಗೂ ವಿರೋಧ ಪಕ್ಷ ನಾಯಕನನ್ನು ಮಾಡಲು ಆಗಿಲ್ಲ. ಅಂದ್ರೆ ಬಿಜೆಪಿಯಲ್ಲಿ ಎಷ್ಟು ಕಚ್ಚಾಟ ಇರಬಹುದು ಲೆಕ್ಕ ಹಾಕಿ ಎಂದು ಕಂಕನವಾಡಿ ಗ್ರಾಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಆರಂಭವಾಗಿದೆ. ನಿಯಂತ್ರಣ ಸಮಿತಿ ಆದೇಶವನ್ನು ಪ್ರಾಧಿಕಾರ ಪರಿಶೀಲಿಸುತ್ತಿದೆ. ನಿತ್ಯ 2600 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ಆದೇಶ ನೀಡಿದೆ. ನ.15ರವರೆಗೆ ನೀರು ಹರಿಸುವಂತೆ ಸಮಿತಿ ಆದೇಶ ನೀಡಿದೆ. CWRC ಆದೇಶಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ. ನೀರು ಬಿಡಲು ಸಾಧ್ಯವೇ ಇಲ್ಲವೆಂದು ಕರ್ನಾಟಕ ವಾದಿಸಿದೆ.
ತುಮಕೂರು: ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗಲಿ ಎಂಬ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಕೆಎನ್ ರಾಜಣ್ಣ, ನನ್ನ ಜೀವಮಾನದಲ್ಲಿ ಏನು ಹೇಳಿದ್ದೇನೋ ಅದ್ಯಾವುದು ಸುಳ್ಳಾಗಿಲ್ಲ. ನಾನು ಹೇಳಿದ ಯಾವ ವಿಚಾರವೂ ಅಸತ್ಯವಾಗಿಲ್ಲ. ಡಾ.ಪರಮೇಶ್ವರ್ ಸಿಎಂ ಆಗ್ತಾರೆ ಅನ್ನೋ ವಿಚಾರವೂ ಅಸತ್ಯವಾಗಲ್ಲ. ಸಿದ್ದರಾಮಯ್ಯ ಯಾವಾಗ ಬಿಡುತ್ತಾರೋ ಆಗ ಪರಮೇಶ್ವರ್ ಸಿಎಂ ಆಗುತ್ತಾರೆ ಎಂದರು. ಈ ಅವಧಿಯಲ್ಲೇ ಪರಮೇಶ್ವರ್ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೌದು ಸಿಎಂ ಆಗುತ್ತಾರೆ ಎಂದರು. ನಾನು ಸಚಿವನಾಗಿರೋದೆ ಸಾಕು, ನನಗೆ ಡಿಸಿಎಂ ಹುದ್ದೆ ಬೇಡ ಎಂದರು.
ಬಾಗಲಕೋಟೆ: ದಲಿತ ಮುಖ್ಯಮಂತ್ರಿ ಬಗ್ಗೆ ಡಾ.ಜಿ.ಪರಮೇಶ್ವರ್ ಒಲವು ವಿಚಾರವಾಗಿ ಮಾತನಾಡಿದ ಸಚಿವ ಆರ್ಬಿ ತಿಮ್ಮಾಪುರ, ಯಾಕೆ ನಾನು ಸಿಎಂ ಆಗಬಾರದಾ ಎಂದು ಪ್ರಶ್ನಿಸಿ್ರು. ನನಗೆ ಸಿಎಂ ಆಗುವ ಆಸೆ ಇರಲ್ವಾ, ನನಗೆ ಆದರೆ ಬೇಡ ಅಂತೀರಾ? ಸಿಎಂ ಆಗಲು ನಿಮಗೂ, ನಮಗೂ ಆಸೆ ಇದೆ ಎಂದರು. ಕಂಕನವಾಡಿ ಗ್ರಾಮದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ: ಕಂಕನವಾಡಿ ಗ್ರಾಮದ ರೈತರು ಕಟ್ಟಿಸಿದ ಸೇತುವೆಯನ್ನು ಸಚಿವ ತಿಮ್ಮಾಪುರ ಉದ್ಘಾಟಿಸಿದರು. ಕೃಷ್ಣಾ ನದಿಗೆ ಬ್ಯಾರಲ್ಗಳ ಮೂಲಕ ತೇಲು ಸೇತುವೆ ನಿರ್ಮಾಣ ಮಾಡಿದ್ದರು. ರೈತರು ಒಟ್ಟುಗೂಡಿ ಒಂದುವರೆ ತಿಂಗಳ ಕಾಲ ಶ್ರಮಿಸಿ ಕಟ್ಟಿಸಿದ ಸೇತುವೆ ಇದಾಗಿದೆ. ಬಳಿಕ ಮಾತನಾಡಿದ ಸಚಿವರು, ಎಲ್ಲ ರೈತರು ಸೇರಿ ಇಂತಹ ಅದ್ಭುತ ಕೆಲಸ ಮಾಡಿದಾರೆ. ಅವರಿಗೆ ಎಷ್ಟೇ ಅಭಿನಂದನೆ ಹೇಳಿದರು ಕಡಿಮೆ. ರೈತರು ನಮ್ಮ ಸರಕಾರ ಕಣ್ಣು ತೆರೆಸುವ ಕೆಲಸ ಮಾಡಿದಾರೆ. ಆದಷ್ಟು ಶೀಘ್ರದಲ್ಲೇ ಶಾಸ್ವತ ಸೇತುವೆ ಮಾಡಲು ನಾವು ಪ್ರಯತ್ನ ಮಾಡುತ್ತೇವೆ. ಇದೆಲ್ಲ ಗಮನಿಸಿ ನಾವು ಪೂರಕವಾಗಿ ರೈತರ ಜೊತೆ ನಿಲ್ಲುತ್ತೇವೆ ಎಂದರು.
ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಬಸವನಗದ್ದೆಯ ಪ್ರಸನ್ನ ಎಂಬುವರ ಮನೆಯಲ್ಲಿ 18 ಜಿಂಕೆ ಕೊಂಬು ಪತ್ತೆ ಪ್ರಕರಣ ಸಂಬಂಧ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಡು ಕೋಣದ ಕೊಂಬು, ಶ್ರೀಗಂಧ ಸಂಗ್ರಹಣೆ ಮಾಡಿದವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೆ, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ದರ್ಪ ತೋರಿದ ಆರಗ ಜ್ಞಾನೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಡಿಎಫ್ಓಗೆ ದೂರು ಸಲ್ಲಿಸಿದರು.
ಕಾಂತರಾಜ್ ವರದಿಯನ್ನು ತೆಗೆದುಕೊಂಡು ಹೋಗಿ ಬೆಂಕಿಗೆ ಹಾಕಿ ಸುಡಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಸದಸ್ಯ ಕಾರ್ಯದರ್ಶಿ ಸಹಿಯೇ ಇಲ್ಲದ ಕಾಂತರಾಜ್ ರಿಪೋರ್ಟ್ ಅನ್ನು ತೆಗೆದುಕೊಂಡು ಹೋಗಿ ಬೆಂಕಿಗೆ ಹಾಕಿ ಸುಡಬೇಕು. ಕಾಂತರಾಜ್ ವರದಿ ವೈಜ್ಞಾನಿಕವೇ ಅಲ್ಲ. ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ನಾಮಕಾವಸ್ಥೆ ಸಿದ್ಧತೆ ಮಾಡುತ್ತಿದ್ದಾರೆ. ಕಾಂತರಾಜ್ ರಿಪೋರ್ಟ್ ಬಗ್ಗೆ ಇಬ್ಬರು ಈಗ ಬಡಿದಾಡುತ್ತಿದ್ದಾರೆ. ನಾನೇ ಹಿಂದುಳಿದ ವರ್ಗಗಳ ಚಾಂಪಿಯನ್ ಅಂತಾ ಪ್ರೊಜೆಕ್ಟ್ ಮಾಡಿಕೊಳ್ಳಲು ಸಿದ್ದರಾಮಯ್ಯ ಕಾಂತರಾಜ್ ರಿಪೋರ್ಟ್ ಬಗ್ಗೆ ಎಂಟು ವರ್ಷಗಳಿಂದ ಮತ್ತೆ ಮತ್ತೆ ಹೇಳಿದರು. ನಾಳೆ ಬಾ ಅನ್ನೋದು ಸಿದ್ದರಾಮಯ್ಯನವರ ಘೋಷಣೆಯಾಗಿದೆ. ಹಿಂದುಳಿದ ವರ್ಗ, ದಲಿತರ ಉದ್ಧಾರ ಅವರ ಉದ್ದೇಶ ಅಲ್ಲ. ವರದಿ ಬಿಡುಗಡೆ ಮಾಡಿದರೆ ಕೋರ್ಟ್ನಲ್ಲಿ ಒಂದೇ ದಿನದಲ್ಲಿ ಬಿದ್ದು ಹೋಗುತ್ತದೆ. ಸಿಎಂ ಒಂದು ಅಭಿಪ್ರಾಯ, ಡಿಸಿಎಂ ಒಂದು ಅಭಿಪ್ರಾಯ ಹೊಂದಿದ್ದಾರೆ. ಒಂದೇ ಸರ್ಕಾರದಲ್ಲಿ ಎರಡು ಅಭಿಪ್ರಾಯ ಇರುವುದರಿಂದ ಅವರಿಗೆ ಮುಂದುವರಿಯಲು ಅಧಿಕಾರವಿಲ್ಲ. ಕಾಂತರಾಜ್ ರಿಪೋರ್ಟ್ ಬಗ್ಗೆ ಮೊದಲು ಸರ್ಕಾರ ತೀರ್ಮಾನ ಮಾಡಲಿ. ನಂತರ ವಿಪಕ್ಷವಾಗಿ ಬಿಜೆಪಿ ತನ್ನ ಅಭಿಪ್ರಾಯ ಹೇಳುತ್ತದೆ. ಜಾತಿ ಗಣತಿ ವರದಿ ಬಗ್ಗೆ ಬಿಜೆಪಿ ಅಭಿಪ್ರಾಯ ಕೇಳಲು ಅಲ್ಲಿಯ ತನಕ ಸರ್ಕಾರವೇ ಇರಲ್ಲ. ವ್ಯವಸ್ಥಿತವಾಗಿ ಇಡೀ ದೇಶಕ್ಕೆ ಅನ್ವಯವಾಗುವಂತೆ ರಿಸರ್ವೇಷನ್ ಬಗ್ಗೆ ಬಿಜೆಪಿ ಒಂದು ಸ್ಪಷ್ಟ ನಿಲುವು ತಳೆಯಲಿದೆ ಎಂದರು.
ಕಾಂಗ್ರೆಸ್ನಲ್ಲಿ ನಾಯಿ, ನರಿಗಳಂತೆ ಕಚ್ಚಾಡುತ್ತಿದ್ದಾರೆಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಯಡಿಯೂರಪ್ಪನವರು ನಾಯಿ-ನರಿಗಳಿಗೆ ಅವಮಾನ ಮಾಡಬಾರದಿತ್ತು. ಯಡಿಯೂರಪ್ಪ ನಮ್ಮ ನಾಯಕರು. ಯಾವಾಗಲೂ ರೈತರ ಬಗ್ಗೆ ಮಾತಾಡಿಕೊಂಡು ಬಂದವರು. ಅಲ್ಲಿನ ಕಚ್ಚಾಟ ನೋಡಿ ಬೇಸತ್ತು ಹಾಗೆ ಹೇಳಿದ್ದಾರೆ. ಆದರೆ ಯಡಿಯೂರಪ್ಪನವರು ಹಾಗೆ ಹೇಳಬಾರದಿತ್ತು. ಯಡಿಯೂರಪ್ಪನವರ ಮನೆ ಮುಂದೆ ಅಂತೂ ನಾಯಿ ನರಿಗಳಿಗೆ ಮಾಂಸ ಹಾಕಲ್ಲ. ಅವು ಇನ್ನು ಬೇರೆ ಯಾವ ಮನೆ ಹುಡುಕಿಕೊಂಡು ಹೋಗುತ್ತವೋ. ಯಡಿಯೂರಪ್ಪನವರು ನಮಗೆ ಹೀಗೆ ಅವಮಾನ ಮಾಡಿದ್ರಲ್ಲಾ ಅಂತಾ ನಾಯಿ-ನರಿಗಳು ಅವರ ಮನೆ ಮಂದೆ ಧರಣಿ ಮಾಡಿದರೂ ಮಾಡಬಹುದೇನೋ ಎಂದು ವ್ಯಂಗ್ಯವಾಡಿದರು.
ಮೈಸೂರು ಜಿ.ಪಂ ಕಚೇರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದೆ. ಸಭೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಪ್ರಿಯಾಂಕ್ ಖರ್ಗೆ ಅವರನ್ನು ಹೂಗುಚ್ಛ ನೀಡಿ ಸ್ವಾಗತ ಕೋರಿದರು.
ಮಂಡ್ಯ: ಎಂಪಿ ಚುನಾವಣೆ ಸಂಬಂಧ ನಾನು ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ. ಸರಿಯಾದ ಸಮಯ ಸಂದರ್ಭ ನೋಡಿ, ಎಲ್ಲವೂ ಅಂತಿಮವಾದಾಗ ಹೇಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಈಗ ನಾನು ಚುನಾವಣೆ ಸಂಬಂಧ ನಾನು ಮಾತಾಡಲ್ಲ. ಮಂಡ್ಯದಲ್ಲಿ ಚುನಾವಣೆ ನಿಲ್ಲಲ್ಲ, ನಿಲ್ಲುತ್ತೇನೆ ಎಂಬುದರ ಬಗೆಗೆ ಈಗಾಗಲೇ ಹಲವು ಬಾರಿ ಮಾತಾಡಿದ್ದೇನೆ. ಬಿಜೆಪಿ-ಜೆಡಿಎಎಸ್ ಮೈತ್ರಿಯಾದರೂ ಸೀಟು ಹಂಚಿಕೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಅಂತಿಮವಾಗದೆ ನಾನು ಮಾತಾಡುವುದು ಸರಿಯಲ್ಲ. ಮಂಡ್ಯದ ಜನ ನನ್ನ ಜೊತೆಗೆ ಇದ್ದಾರೆ. ಅಂಬರೀಶ್ ಅಭಿಮಾನಿಗಳು, ನನ್ನ ಫಾಲೋವರ್ಸ್ಗಳು ನನ್ನ ಜೊತೆ ಇದ್ದಾರೆ. ನಾನು ಯಾರ ಬಳಿಯೂ ಹೋಗಿ ಟಿಕೆಟ್ ಕೇಳಿಲ್ಲ. ಈಗಲೂ ಅಷ್ಟೇ ಯಾರನ್ನೂ ಕೇಳಲ್ಲ. ನಾನು ಎಂಪಿ ಸ್ಥಾನ ಇಲ್ಲದೇ ಇರುವಾಗಲೇ ಪಕ್ಷಗಳ ಆಫರ್ ನಾನು ಸ್ವೀಕರಿಸಿಲ್ಲ. ಸದ್ಯ ಎಂಪಿ ಆಗಿದ್ದೀನಿ. ನಾನ್ಯಾಕೆ ಕ್ಷೇತ್ರ ಬಿಟ್ಟುಕೊಡಲಿ? ರಾಜಕಾರಣಕ್ಕಾಗಿ ಇಲ್ಲಿಗೆ ಬಂದಿಲ್ಲ. ಮಂಡ್ಯದ ಜನರಿಗಾಗಿ ಇಲ್ಲಿಗೆ ಬಂದಿರುವುದು ಎಂದರು.
ಹಾಸನ ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಮಾಜಿ ಪ್ರದಾನಿ ಹೆಚ್ಡಿ ದೇವೇಗೌಡ, ಹಾಸನಾಂಬೆ ತಾಯಿ ದರ್ಶನಕ್ಕೆ ಪ್ರತೀವರ್ಷ ಕುಟುಂಬ ಸಮೇತ ಬರುತ್ತೇನೆ. ದೇವಿ ವರ್ಷಕ್ಕೆ ಒಮ್ಮೆ ದರ್ಶನ ನೀಡುತ್ತಾರೆ. ದೇವಿಯ ಗರ್ಭಗುಡಿಯೊಳಗೆ ಹಚ್ಚಿಟ್ಟ ದೀಪ ವರ್ಷ ಆದರು ಆರೋದಿಲ್ಲ. ಒಂದು ವರ್ಷ ಆನಂದವಾಗಿ ಉರಿಯುತ್ತೆ. ಇದು ಇತಿಹಾಸ. ಉತ್ತರದಲ್ಲಿ ವೈಷ್ಣವಿ ಇದೇ ಸ್ವರೂಪದ ದೇವರು. ಜಿಲ್ಲೆಯ ಅದಿಕಾರಿ ವರ್ಗ ಹಾಸನಾಂಬೆ ಉತ್ಸವವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಿಂದೆಂದೂ ಇಷ್ಟೊಂದು ವಿಜೃಂಭಣೆಯ ದೀಪಾಲಂಕಾರ ನಾನು ನೋಡಿರಲಿಲ್ಲ. ಎಲ್ಲೆಲ್ಲೂ ವಿದ್ಯುತ್ ದೀಪಾಲಂಕಾರ ಸೊಗಸಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಎಲ್ಲರ ಸಹಕಾರದಿಂದ ಉತ್ತಮವಾಗಿ ಆಯೋಜನೆ ಮಾಡಿದ್ದಾರೆ. ಅರೋಗ್ಯ ಕೊಡು ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ. ಮುಂದಿನಬಾರಿ ಆ ತಾಯಿ ದರ್ಶನಕ್ಕೆ ನಡೆದುಕೊಂಡು ಬರುವ ಶಕ್ತಿ ಕೊಡಬಹುದು ಎಂದರು.
ಸಿಎಂ ಆಗಿ ಐದು ವರ್ಷ ಮುಂದುವರಿಯುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಶಾಸಕ ಎನ್ಹೆಚ್ ಕೋನರೆಡ್ಡಿ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅಂತಾ ನಾವು ಹೇಳಿದ್ದೇವೆ. ಇದರ ಬಗ್ಗೆ ಯಾವುದೇ ಚರ್ಚೆ ಬೇಡ. ಮುಖ್ಯಮಂತ್ರಿ ಮತ್ತು ಡಿಸಿಎಂ ಕುದುರೆ ರೀತಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಇಲ್ಲದವರು ಮಾತಾಡ್ತಾರೆ, ಬಿಜೆಪಿಯವರ ಹಗಲುಗನಸು ಕಾಣುತ್ತಿದ್ದಾರೆ, ಮುಖ್ಯಮಂತ್ರಿ ಬದಲಾವಣೆ ನಮ್ಮ ಹೈಕಮಾಂಡ್ಗೆ ಬಿಟ್ಟ ವಿಚಾರ. ಆಪರೇಷನ್ ಕಮಲ ಬಿಜೆಪಿ ಹುಟ್ಟು ಗುಣ, ಕೆಲವರು ಮಾತಾಡ್ತಾರೆ. ಏನೂ ಇಲ್ಲದ ಮನೆಗೆ ಯಾರಾದರೂ ಹೋಗುತ್ತಾರೆ ಎಂದು ಪ್ರಶ್ನಿಸಿದರು.
ಬೆಂಗಳೂರು: ಜಾತಿಗಣತಿ ವಿರೋಧಿಸಿ ಒಕ್ಕಲಿಗ ನಾಯಕರು, ಮುಖಂಡರ ಸಭೆ ವಿಚಾರವಾಗಿ ಮಾತಬಾಡಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ನಿರ್ಮಲಾನಂದನಾಥ ಶ್ರೀಗಳು ಸಮಾಜದ ಅಭಿಪ್ರಾಯ ತಿಳಿಸಿದ್ದಾರೆ. ಕಾಂತರಾಜ್ ಸಮಿತಿ ವರದಿ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ವರದಿ ಸರ್ಕಾರದ ಮುಂದೆ ಬಂದಿಲ್ಲ, ಸರ್ಕಾರ ಸಹ ಸಮ್ಮತಿಸಿಲ್ಲ. ಸಮುದಾಯದ ಅಭಿಪ್ರಾಯವನ್ನು ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಕಾಂತರಾಜ್ ಸಮಿತಿ ವರದಿ ರಾಜಕೀಯ ವಸ್ತುವಲ್ಲ ಎಂದರು.
ಮೈಸೂರು: ಸಿಎಂ ಆಗಿ ಮುಂದುವರಿಯುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಅವರದ್ದು ವೈಯಕ್ತಿಕ ಅಭಿಪ್ರಾಯ. ಯಾರು ಮುಂದುವರಿಯಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಅಂದರೆ ನಾನೂ ಸಿದ್ಧ. ಅಧಿಕಾರ ಹಂಚಿಕೆ ಬಗ್ಗೆ ದೆಹಲಿಯಲ್ಲಿ ನಾಲ್ವರು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ. ಎಲ್ಲರಿಗೂ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ, ಇದರಲ್ಲಿ ತಪ್ಪಿಲ್ಲ ಎಂದರು.
ಬೆಳಗಾವಿ: ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆ ಮಾಡಿದ್ದ ನಾಡದ್ರೋಹಿ ಎಂಇಎಸ್ ಪುಂಡರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಂಇಎಸ್ನ ಮಾಲೋಜಿರಾವ್ ಅಷ್ಟೇಕರ್, ಮನೋಹರ ಕಿಣೇಕರ್, ರಂಜಿತ್ ಚವ್ಹಾಣ್, ಸರಿತಾ ಪಾಟೀಲ್, ಸಾರಿಕಾ ಪಾಟೀಲ್, ಅಂಕುಶ ಕೇಸರಕರ್ ಸೇರಿದಂತೆ 18 ಜನರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಚಾರ ಕಾರ್ಯಕ್ರಮ ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆಯಲ್ಲಿ ಕಾಂಗ್ರೆಸ್ ಚಿಹ್ನೆ ಬಳಕೆ ಮಾಡಲಾಗಿದೆ. ಸಿಎಂ, ಡಿಸಿಎಂ ಫೋಟೋ ಜೊತೆಗೆ ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಕೆ ಮಾಡಲಾಗಿದೆ. ನಿನ್ನೆ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ರಥಯಾತ್ರೆಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಪ್ರಚಾರಕ್ಕಾಗಿ ಜ್ಯೋತಿ ರಥಯಾತ್ರೆ ನಡೆಸಲಾಗುತ್ತಿದೆ.
ಹುಬ್ಬಳ್ಳಿಗೆ ಕಾಂಗ್ರೆಸ್ ನಾಯಕರ ದಂಡು ಬಂದರೂ ಸ್ಥಳೀಯ ನಾಯಕರು ಗೈರಾಗಿದ್ದಾರೆ. ಹುಬ್ಬಳ್ಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಮುನಿಯಪ್ಪ, ಸ್ಪೀಕರ್ ಯು.ಟಿ ಖಾದರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೇರಿ ಹಲವರು ಆಗಮಿಸಿದ್ದಾರೆ. ಆದರೂ ಸ್ಥಳೀಯ ನಾಯಕರ ಗೈರು ಅನುಮಾನ ಮೂಡಿಸಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಸಂತೋಷ್ ಲಾಡ್, ಶಾಸಕ ಅಬ್ಬಯ್ಯ ಗೈರಾಗಿದ್ದಾರೆ.
ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಿಜೆಪಿಗೆ ವಿಪಕ್ಷ ನಾಯಕರನ್ನೇ ಆಯ್ಕೆ ಮಾಡಲು ಆಗುತ್ತಿಲ್ಲ. ಸರ್ಕಾರ ರಚನೆಯಾಗಿ 5 ತಿಂಗಳಾದ್ರೂ ವಿಪಕ್ಷ ನಾಯಕನಿಲ್ಲ. 3-4 ತಿಂಗಳಲ್ಲಿ ಲೋಕಸಭಾ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧವಾಗಲಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ. ವೀಕ್ಷಕರು ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ. ಎಲ್ಲರೂ ಈಗಾಗಲೇ ಅಭ್ಯರ್ಥಿಗಳ ವರದಿ ಸಿದ್ಧ ಮಾಡಿಕೊಂಡಿದ್ದಾರೆ. ವೀಕ್ಷಕರು ಇನ್ನೂ ವರದಿಯನ್ನು ಕೊಟ್ಟಿಲ್ಲ. ನಮ್ಮ ವರಿಷ್ಠರು ಕೂಡ ಕೆಲವು ಸಲಹೆ ನೀಡಿದ್ದಾರೆ ಎಂದರು.
Published On - 8:33 am, Fri, 3 November 23