ಬಸವರಾಜ ಬೊಮ್ಮಾಯಿ ಇಂದು ದೆಹಲಿಯಲ್ಲಿದ್ದಾರೆ. ಅವರು ಹೋಗಿದ್ದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯ ನ್ಯಾಯಮೂರ್ತಿಗಳ ಸಭೆಗೆ ಆದರೂ, ಇತ್ತ ರಾಜ್ಯದ ರಾಜಕೀಯ ವಲಯದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿಯಾಗಿದ್ದಾರೆ. ಹಾಗೇ, ಇಂದು ಅವರು ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಕೂಡ ಭೇಟಿಯಾಗಲಿದ್ದಾರೆ. ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಯಾವಾಗ ಎಂಬ ಬಗ್ಗೆ ಪದೇಪದೆ ಚರ್ಚೆಯಾಗುತ್ತಿದೆ. ಆದರೆ ಬಸವರಾಜ ಬೊಮ್ಮಾಯಿ ಸದ್ಯಕ್ಕಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಏಪ್ರಿಲ್ 5ರಂದೂ ಬಸವರಾಜಬೊಮ್ಮಾಯಿ ದೆಹಲಿಗೆ ಹೋಗಿದ್ದರು. ಆಗಲೂ ಸಹ ಸಂಪುಟ ವಿಸ್ತರಣೆ ಮಾತುಗಳು ಮುನ್ನಲೆಗೆ ಬಂದಿದ್ದವು.
ಬಿಜೆಪಿ ಸರ್ಕಾರ ರಚಿಸಿದಾಗ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳಂತೂ ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೇಳಿಬರುತ್ತಿರುವುದು ಬಸನಗೌಡ ಪಾಟೀಲ್ ಯತ್ನಾಳ್, ಎಂಪಿ ರೇಣುಕಾಚಾರ್ಯ, ದತ್ತಾತ್ರೇಯ ಪಾಟೀಲ್ ರೇವುರ್, ಪಿ.ರಾಜೀವ್, ಎಸ್.ಎ.ರಾಮದಾಸ್, ಪೂರ್ಣಿಮಾ, ಬಿ.ವೈ.ವಿಜಯೇಂದ್ರ, ತಿಪ್ಪಾರೆಡ್ಡಿ ಮತ್ತು ರಾಜೂಗೌಡರದ್ದು. ಮತ್ತೊಮ್ಮೆ ಸಚಿವ ಸ್ಥಾನಕ್ಕೆ ಏರಲು ರಮೇಶ್ ಜಾರಕಿಹೊಳಿ ಕೂಡ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇತ್ತೀಚೆಗಷ್ಟೇ (ಏಪ್ರಿಲ್ 18) ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದರು. ಪಕ್ಷದ ಕಾರ್ಯಕಾರಿ ಸಭೆಗೆ ಆಗಮಿಸಿದ್ದ ಅವರು, ಹಂಪಿಗೂ ಭೇಟಿ ಕೊಟ್ಟಿದ್ದರು. ಆ ಸಮಯದಲ್ಲಿ ಕೂಡ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಗರಿಗೆದರಿತ್ತು. ಅವರು ಬಸವರಾಜ ಬೊಮ್ಮಾಯಿಯವರ ಜತೆ ಈ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ಎಲ್ಲ ವರದಿಗಳನ್ನೂ ನಿರಾಕರಿಸುತ್ತಲೇ ಬಂದಿದ್ದಾರೆ.
‘ಕೆಜಿಎಫ್ 2’ ಎದುರು 3ನೇ ವಾರವೂ ಮಂಕಾದ ಸ್ಟಾರ್ ಸಿನಿಮಾಗಳು; ಇನ್ನೂ ನಿಂತಿಲ್ಲ ರಾಕಿ ಭಾಯ್ ಹವಾ